
ನವದೆಹಲಿ (ಜೂ.04): ದೇಶದ ಕೃಷಿ ಚಟುವಟಿಕೆಗಳ ಜೀವನಾಡಿಯಾಗಿರುವ ನೈಋುತ್ಯ ಮುಂಗಾರು ಮಾರುತಗಳು ಎರಡು ದಿನ ತಡವಾಗಿ ಗುರುವಾರ ಕೇರಳವನ್ನು ಪ್ರವೇಶಿಸಿವೆ.
ಅದರೊಂದಿಗೆ ದೇಶದಲ್ಲಿ ನಾಲ್ಕು ತಿಂಗಳ ಮಳೆಗಾಲ ಅಧಿಕೃತವಾಗಿ ಆರಂಭಗೊಂಡಂತಾಗಿದೆ. ಮುಂಗಾರು ಮಾರುತಗಳು ಇನ್ನೆರಡು ದಿನಗಳಲ್ಲಿ ತಮಿಳುನಾಡು, ಪುದುಚೇರಿ, ಕರ್ನಾಟಕ, ಆಂಧ್ರಪ್ರದೇಶವನ್ನು ಪ್ರವೇಶಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಸಾಮಾನ್ಯವಾಗಿ ನೈಋುತ್ಯ ಮುಂಗಾರು ಜೂ.1ಕ್ಕೆ ಕೇರಳ ಪ್ರವೇಶಿಸುತ್ತದೆ. ಆದರೆ ಕಳೆದ ಆರು ವರ್ಷಗಳಲ್ಲಿ ಮೂರು ಬಾರಿ ತಡವಾಗಿದೆ. ಈ ವರ್ಷವೂ ಎರಡು ದಿನ ತಡವಾಗಿ ಜೂ.3ಕ್ಕೆ ಪ್ರವೇಶಿಸಿದೆ. ಈ ವರ್ಷ ದಕ್ಷಿಣ ಭಾರತದಲ್ಲಿ ವಾಡಿಕೆಯಂತೆ ಸಾಮಾನ್ಯ ಮಳೆಯಾಗಲಿದೆ, ಆದರೆ ಒಟ್ಟಾರೆ ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೃಷಿ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ಅವಲಂಬಿಸಿರುವ ದೇಶದ ಆರ್ಥಿಕತೆಗೆ ಉತ್ತಮ ಮುಂಗಾರು ಬಹಳ ಮುಖ್ಯವಾಗಿದೆ.
ಈ ವರ್ಷವೂ ಸಾಮಾನ್ಯ ಮುಂಗಾರು: ಸ್ಕೈಮೆಟ್! ..
ಮುಂಗಾರು ಆಗಮನ ಮಾಪನಕ್ಕೆ ಇರುವ 14 ಮಳೆ ಮಾಪನಾ ಕೇಂದ್ರಗಳ ವ್ಯಾಪ್ತಿಯ ಶೇ.60ಕ್ಕಿಂತ ಹೆಚ್ಚಿನ ಪ್ರದೇಶಗಳಲ್ಲಿ ಕಳೆದ 2 ದಿನಗಳ ಅವಧಿಯಲ್ಲಿ 2.5 ಮಿ.ಮೀಗಿಂತ ಹೆಚ್ಚು ಮಳೆಯಾಗಿದೆ. ಜೊತೆಗೆ ರಾಜ್ಯದ ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಇದು ಮುಂಗಾರು ಆಗಮನ ಸ್ಪಷ್ಟಸುಳಿವು ಎಂದು ಹವಾಮಾನ ಇಲಾಖೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ