'ರಫೇಲ್ ಕುರಿತು ಸುಳ್ಸುದ್ದಿ ಹಬ್ಬಿಸಿದ ರಾಹುಲ್ ದೇಶದ ಕ್ಷಮೆ ಯಾಚಿಸ್ಬೇಕು'

By Web DeskFirst Published Nov 14, 2019, 5:10 PM IST
Highlights

'ಚೌಕೀದಾರ್‌ ಚೋರ್‌ ಹೈ' ಎಂದು ಟೀಕಿಸಿದ್ದ ರಾಹುಲ್ ಗಾಂಧಿ| ಕ್ಷಮೆ ಸ್ವೀಕರಿಸಿ ಪ್ರಕರಣ ಕೈಬಿಟ್ಟ ಸುಪ್ರೀಂ ಕೋರ್ಟ್| ಸುಪ್ರೀಂ ತೀರ್ಪಿನ ಬೆನ್ನಲ್ಲೇ ಮೌನ ಮುರಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್| ಸುಳ್ಸುದ್ದಿ ಹಬ್ಬಿಸಿದ ರಾಹುಲ್ ಗಾಂಧಿ ದೇಶದ ಕ್ಷಮೆ ಯಾಚಿಸಲೇಬೇಕು

ನವದೆಹಲಿ[ನ.14]: ರಫೇಲ್ ಡೀಲ್ ವಿಷಯದಲ್ಲಿ ಮೋದಿ ಟೀಕಿಸಿ 'ಚೌಕೀದಾರ್‌ ಚೋರ್‌ ಹೈ' ಎಂದಿದ್ದ ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್ ಕ್ಷಮೆ ಸ್ವೀಕರಿಸಿ ಪ್ರಕರಣ ಕೈಬಿಟ್ಟಿದೆ. ಇದರ ಬೆನ್ನಲ್ಲೇ ಮೌನ ಮುರಿದಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದು, ಅವರು ಇಡೀ ದೇಶದ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಸುಪ್ರೀಂ ತೀರ್ಪಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರವಿಶಂಕರ್ ಪ್ರಸಾದ್ 'ರಫೇಲ್ ಯುದ್ಧವಿಮಾನ ಖರೀದಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸುಳ್ಸುದ್ದಿ ಹಬ್ಬಿಸಿದೆ. ಹೀಗಾಗಿ ರಾಹುಲ್ ಗಾಂಧಿ ಇಡೀ ದೇಶದ ಕ್ಷಮೆ ಯಾಚಿಸಬೇಕು. ಸುಪ್ರೀಂ ನೀಡಿರುವ ತೀರ್ಪು ಸತ್ಯಕ್ಕೆ ಸಂದ ಜಯ ಎಂದಿದ್ದಾರೆ.

ರಫೇಲ್ ಹಗರಣದ ಅರ್ಜಿ ವಜಾ: ಮೋದಿಗೆ ಕ್ಲೀನ್ ಚಿಟ್, ರಾಹುಲ್‌ಗೆ ಮುಖಭಂಗ!

ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದ ಬಿಜೆಪಿ ನಾಯಕ 'ಭ್ರಷ್ಟಾಚಾರದಿಂದ ಕಳಂಕಿತ, ದೇಶದ ಭದ್ರತೆ ವಿಚಾರದಲ್ಲಿ ಆಟವಾಡಿದವರು, ತಮ್ಮ ಪ್ರಾಯೋಜಿತ ರಾಜಕೀಯ ಕಾರ್ಯಕ್ರಮವನ್ನು  ನ್ಯಾಯದ ಮನವಿಯಾಗಿ ಸುಪ್ರೀಂನಲ್ಲಿ ಪ್ರಸ್ತುತಪಡಿಸುತ್ತಿದ್ದರು. ಆದರೀಗ ರಫೇಲ್ ಒಪ್ಪಂದದ ಇಡೀ ಪ್ರಕ್ರಿಯೆಯನ್ನು ಪರಿಶೀಲಿಸಿರುವ ಸುಪ್ರೀಂ ಇಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂದು ತಿಳಿಸಿದೆ. ಖರೀದಿ ವೆಚ್ಚವನ್ನೂ ಪರಿಶೀಲಿಸಿರುವ ಸುಪ್ರೀಂ ಸರಿಯಾಗಿದೆ ಎಂದು ತಿಳಿಸಿದೆ. ಆದ್ರೆ ರಾಹುಲ್ ಗಾಂಧಿ ತಮ್ಮ ಆರೋಪದಲ್ಲಿ ಪ್ರಾನ್ಸ್ ನ ಮಾಜಿ ಹಾಗೂ ಹಾಲಿ ಪ್ರಧಾನ ಮಂತ್ರಿಯನ್ನೂ ದೂಷಿಸಿದ್ದಾರೆ' ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ರವಿಶಂಕರ್ ಪ್ರಸಾದ್ 'ಸುಪ್ರೀಂ ಕೋರ್ಟ್ ನಲ್ಲಿ ಸೋತರೂ ಲೋಕಸಭಾ ಚುನಾವಣೆಯಲ್ಲಿ ಈ ಪ್ರಕರಣವನ್ನು ಕಾಂಗ್ರೆಸ್ ತನ್ನ ಪ್ರಮುಖ ಅಜೆಂಡಾವನ್ನಾಗಿಸಿತು. ಸುಪ್ರೀಂ ಕೋರ್ಟ್ ನಮ್ಮ ಪ್ರಾಮಾಣಿಕ ಪ್ರಧಾನಿಯನ್ನು 'ಚೋರ್' ಎಂದು ತಿಳಿಸಿರುವುದಾಗಿ ಆರೋಪಿಸಿದರು. ಸುಳ್ಸುದ್ದಿ ಹಬ್ಬಿಸಿದ ಕಾಂಗ್ರೆಸ್ ಪ್ರಧಾನಿ ವಿರುದ್ಧ ಅಭಿಯಾನ ನಡೆಸಿತು. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾಣ ಹರಾಜು ಮಾಡಲು ಯತ್ನಿಸಿತು' ಎಂದು ಕಿಡಿ ಕಾರಿದ್ದಾರೆ.

ಶಬರಿಮಲೆ ಸುಪ್ರೀಂ ಆದೇಶ: ಕೇರಳದಲ್ಲಿ ಮತ್ತೆ ಅದೇ ಆವೇಶ!

ರಾಹುಲ್ ಗಾಂಧಿ ದೇಶದ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ 'ರಾಹುಲ್ ಗಾಂಧಿ ಇಂದು ಇಡೀ ದೇಶದ ಕ್ಷಮೆ ಯಾಚಿಸಬೇಕು. ಸುಪ್ರೀಂ ಕೋರ್ಟ್ ಇಂದು ಮಾನಹಾನಿ ಪ್ರಕರಣ ಸಂಬಂಧ ಕ್ಷಮೆ ಯಾಚಿಸಿರುವುದರಿಂದ ಅವರನ್ನು ಬಿಟ್ಟಿದ್ದಾರೆ. ಕೋರ್ಟ್ ನಿಂದ ಮುಕ್ತಿ ಪಡೆಯುವ ಸಲುವಾಗಿ ರಾಹುಲ್ ಗಾಂಧಿ ಕ್ಷಮೆ ಯಾಚಿಸಿದ್ದಾರಷ್ಟೇ. ಆದರೆ ದೇಶದ ಜನರನ್ನು ಎದುರಿಸಲು ನೀವು ಕ್ಷಮೆ ಯಾಚಿಸಲು ಸಿದ್ಧರಿದ್ದೀರಾ?' ಎಂದೂ ಸವಾಲೆಸೆದಿದ್ದಾರೆ. 'ರಾಹುಲ್ ಗಾಂಧಿ ಬೆಂಬಲಕ್ಕೆ ಅವರ ಹಿಂದೆ ನಿಂತಿದ್ದ ಶಕ್ತಿ ಯಾವುದು ಎಂದು ಇಡೀ ದೇಶವೇ ತಿಳಿಯಲಿಚ್ಛಿಸುತ್ತಿದೆ' ಎಂದಿದ್ದಾರೆ.

 ನವೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!