
ನವದೆಹಲಿ: ಸುಧಾರಣೆ, ಸಾಧನೆ, ಬದಲಾವಣೆಯು ಭಾರತದ ಆಡಳಿತ ಮಾದರಿಯ ಬಲಿಷ್ಠ ಸ್ತಂಭಗಳಾಗಿವೆ. ಇದು ಇಡೀ ವಿಶ್ವಕ್ಕೇ ಮಾದರಿಯಾಗಿ ಹೊರಹೊಮ್ಮಿದೆ. ಪ್ರಧಾನಿ ಮೋದಿ ಸರ್ಕಾರದ ಮೂರನೇ ಅವಧಿಯು ಈ ಹಿಂದಿನ ಆಡಳಿತಕ್ಕಿಂತ ವೇಗವಾಗಿ ಕೆಲಸ ಮಾಡುತ್ತಿದ್ದು, ತ್ವರಿತಗತಿಯಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಶುಕ್ರವಾರ ಆರಂಭವಾದ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಭಾಷಣ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ನೀತಿ ನಿಷ್ಕ್ರಿಯತೆಗೆ ಅಂತ್ಯ ಹಾಡಲು ಕ್ರಮಕೈಗೊಂಡಿದೆ ಎಂದ ರಾಷ್ಟ್ರಪತಿ, ಯುವಕರು, ರೈತರು, ಮಹಿಳೆಯರು, ಉದ್ಯೋಗಸೃಷ್ಟಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜಾರಿಮಾಡುತ್ತಿರುವ ಕ್ರಮಗಳ ಪಟ್ಟಿ ಮಾಡಿದರು.
ಇದನ್ನೂ ಓದಿ: ರಾಷ್ಟ್ರಪತಿಯನ್ನೇ ಬಡಪಾಯಿ ಮಹಿಳೆ ಎಂದ ಸೋನಿಯಾ ಗಾಂಧಿ: ಬುಡಕಟ್ಟು ಜನರಿಗೆ ಅಪಮಾನ ಎಂದ ಮೋದಿ
ಮೋದಿ ಸರ್ಕಾರದ ಮೂರನೇ ಅವಧಿಯು ಈ ಹಿಂದಿನ ಆಡಳಿತಕ್ಕಿಂತ ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡುತ್ತಿದೆ. ವಕ್ಫ್ ಬೋರ್ಡ್, ಒಂದು ದೇಶ ಒಂದು ಚುನಾವಣೆಯಂಥ ದೊಡ್ಡ ನಿರ್ಧಾರಗಳನ್ನು ಸರ್ಕಾರ ಶೀಘ್ರವಾಗಿ ತೆಗೆದುಕೊಂಡಿದೆ. ಸಮಾಜದ ಪ್ರತಿವರ್ಗಕ್ಕೂ ಗುಣಮಟ್ಟದ ಮತ್ತು ಅಗ್ಗದ ಆರೋಗ್ಯ ಸೇವೆಗೆ ಸರ್ಕಾರ ಇಂಬು ನೀಡುತ್ತಿದೆ. ಎಲ್ಲಾ ನಾಗರಿಕರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ 1.75 ಲಕ್ಷ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ಪೀಡಿತರ ರೋಗಿಗಳ ಹಿನ್ನೆಲೆಯಲ್ಲಿ ಕ್ಯಾನ್ಸರ್ಗೆ ಸಂಬಂಧಿಸಿದ ಹಲವು ಔಷಧಗಳ ಮೇಲಿನ ಆಮದು ಸುಂಕವನ್ನು ತೆಗೆದುಹಾಕಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ಸರ್ಕಾರವು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ 6 ಲಕ್ಷ ಕೋಟಿ ಮಂದಿಗೆ ಆರೋಗ್ಯ ಇನ್ಶೂರೆನ್ಸ್ ಒದಗಿಸಲು ನಿರ್ಧರಿಸಿದೆ. ಯುವಕರ ಶಿಕ್ಷಣ ಮತ್ತು ಉದ್ಯೋಗಾವಕಾಶ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು. ದೇಶದಲ್ಲಿ 25 ಕೋಟಿ ಜನರನ್ನು ತೀವ್ರ ಬಡತನದಿಂದ ಮೋದಿ ಸರ್ಕಾರ ಮೇಲೆತ್ತಿದೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಮೂಲಕ ಹೆಚ್ಚುವರಿಯಾಗಿ 3 ಕೋಟಿ ಕುಟುಂಬಗಳಿಗೆ ಮನೆ ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮುಗೆ 'ಪೂರ್ ಲೇಡಿ' ಎಂದ ಸೋನಿಯಾ, ಖಂಡಿಸಿದ ರಾಷ್ಟ್ರಪತಿ ಭವನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ