
ನವದೆಹಲಿ (ಜು.26): ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ದೇಶದ ಸೇನಾ ಬತ್ತಳಿಕೆಯನ್ನು ಬಲಪಡಿಸುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ)ಯ ಕಾರ್ಯಕ್ಕೆ ಇದೀಗ ಮತ್ತೊಂದು ಮಹತ್ವದ ಗೆಲುವು ಸಿಕ್ಕಿದೆ. ಡ್ರೋನ್ ಮೂಲಕ ಹಾರಿಸಬಲ್ಲ ಸ್ವದೇಶಿ ನಿರ್ಮಿತ ನಿಖರ ಗುರಿ ನಿರ್ದೇಶಿತ ಕ್ಷಿಪಣಿ(ಯುಎಲ್ಪಿಜಿಎಂ-ವಿ3)ಯ ಪರೀಕ್ಷಾರ್ಥ ಪ್ರಯೋಗದಲ್ಲಿ ಡಿಆರ್ಡಿಒ ಶುಕ್ರವಾರ ಯಶಸ್ಸು ಕಂಡಿದೆ.
ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಓಪನ್ ಏರಿಯಾ ರೇಂಜ್(ಎನ್ಒಎಆರ್)ನಲ್ಲಿ ಈ ಪ್ರಯೋಗ ನಡೆಸಲಾಗಿದ್ದು, ಈ ಮೂಲಕ ದೇಶದ ಸೇನಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲಬಂದಂತಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೊಂಡಿದ್ದಾರೆ. ಆಪರೇಷನ್ ಸಿಂದೂರದ ವೇಳೆ ಭಾರತ ಮೇಲಿನ ದಾಳಿಗೆ ಪಾಕಿಸ್ತಾನವು ದೊಡ್ಡಪ್ರಮಾಣದಲ್ಲಿ ಡ್ರೋನ್ಗಳನ್ನು ನಿಯೋಜಿಸಿದ್ದರಿಂದ ಎಚ್ಚೆತ್ತುಕೊಂಡ ಸರ್ಕಾರವು ಈ ರೀತಿಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸೇನೆಯ ಬತ್ತಳಿಕೆಗೆ ಸೇರಿಸಲು ಮುಂದಾಗಿದೆ.
ಮಾಧ್ಯಮ ವರದಿಗಳ ಪ್ರಕಾರ ಯುಎಲ್ಪಿಜಿಎಂ ಕ್ಷಿಪಣಿ ಕಾರ್ಯಕ್ರಮದ ಮೂಲಕ ಮೂರು ಆವೃತ್ತಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲ ಆವೃತ್ತಿಯು ಮಾದರಿ ಕ್ಷಿಪಣಿಯಾಗಿದ್ದು, ಈ ಮೂರು ಆವೃತ್ತಿಗಳನ್ನು ವಿಭಿನ್ನ ಯುದ್ಧ ಸನ್ನಿವೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಯುಎಲ್ಪಿಜಿಎಂ-ವಿ3 ಅತ್ಯಾಧುನಿಕ ಕ್ಷಿಪಣಿಯಾಗಿದ್ದು, ಉನ್ನತಮಟ್ಟದ ನಿಖರ ಗುರಿ ನಿರ್ದೇಶನದ ದಾಳಿಗಾಗಿ ವಿನ್ಯಾಸ ಮಾಡಲಾಗಿದೆ.
ಏನಿದು ಯುಎಲ್ಪಿಜಿಎಂ?: ಯುಎಲ್ಪಿಜಿಎಂ-ವಿ3 ಅನ್ನು ಡಿಆರ್ಡಿಒದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೆಟರಿ(ಟಿಬಿಆರ್ಎಲ್) ಅಭಿವೃದ್ಧಿಪಡಿಸಿದೆ. ಹಲವು ಸಿಡಿತಲೆಗಳನ್ನು ಹೊಂದಿರುವ ಈ ಕಡಿಮೆ ತೂಕದ ಕ್ಷಿಪಣಿಯನ್ನು ಯುದ್ಧದ ಸಂದರ್ಭದಲ್ಲಿ ಸುಲಭವಾಗಿ ಸಾಗಿಸಬಹುದಾಗಿದೆ. ಇದು ಸಂಪೂರ್ಣ ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದ್ದು, ಇದರಲ್ಲಿರುವ ಗುರಿ ನಿರ್ದೇಶನ ವ್ಯವಸ್ಥೆಗಳು, ಪ್ರೊಪಲ್ಷನ್ ಮತ್ತು ಸಿಡಿತಲೆ ವ್ಯವಸ್ಥೆ ಸೇರಿ ಕ್ಷಿಪಣಿಯನ್ನು ವಿನ್ಯಾಸ ಮತ್ತು ಉತ್ಪಾದನೆ ಎಲ್ಲವೂ ಭಾರತದಲ್ಲೇ ನಿರ್ಮಿಸಲಾಗಿದೆ.
ಈ ಕ್ಷಿಪಣಿ ಅಭಿವೃದ್ಧಿ ಹಿಂದಿನ ಉದ್ದೇಶವೇನು?: ಯುಎಲ್ಪಿಜಿಎಂ-ವಿ3 ಕ್ಷಿಪಣಿಯನ್ನು ಆಧುನಿಕ ಟ್ಯಾಂಕ್ಗಳು, ಯುದ್ಧವಾಹನಗಳು ಮತ್ತು ಬಂಕರ್ಗಳನ್ನು ನಾಶ ಮಾಡುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ. ಗುಡ್ಡಗಾಡುಗಳಲ್ಲಿ ನಡೆಯುವ ಕದನದ ವೇಳೆ ಇವು ಶತ್ರುಗಳ ಸಂಹಾರಕ್ಕೆ ನೆರವು ನೀಡುತ್ತವೆ. ಲಡಾಕ್ನಂಥ ಕಡಿದಾದ ಗಡಿಯಲ್ಲಿ ಈ ಕ್ಷಿಪಣಿಗಳಿಂದ ಸೇನೆಗೆ ಹೆಚ್ಚಿನ ಅನುಕೂಲ ಆಗಲಿದೆ.
ಈ ಕ್ಷಿಪಣಿ ವಿಶೇಷ ಏನು?
- ಇದು ಲೇಸರ್ ನಿರ್ದೇಶಿತ ಇನ್ಫ್ರಾರೆಡ್ ಇಮೇಜಿಂಗ್ ತಂತ್ರಜ್ಞಾನ ಹೊಂದಿರುವ ಈ ಕ್ಷಿಪಣಿ ಹಗಲು ಮತ್ತು ರಾತ್ರಿಯಲ್ಲೂ ನಿಖರವಾಗಿ ನಿಗದಿತ ಗುರಿ ಭೇದಿಸುವ ಸಾಮರ್ಥ್ಯ ಹೊಂದಿದೆ.
- ಆಕಾಶದಿಂದ ನೆಲಕ್ಕೆ ಹಾರುವ ಈ ಕ್ಷಿಪಣಿ ತೂಕ 12.5 ಕೆಜಿ. ಹಗಲು ಹೊತ್ತಲ್ಲಿ ಸುಮಾರು 4 ಕಿ.ಮೀ, ರಾತ್ರಿ ಹೊತ್ತಲ್ಲಿ 2.5 ಕಿ.ಮೀ. ದೂರದ ಗುರಿ ಭೇದಿಸುವ ಸಾಮರ್ಥ್ಯ ಹೊಂದಿದೆ.
- ಹಲವು ಸಿಡಿತಲೆಗಳನ್ನು ಹೊಂದಿರುವ ಈ ಕ್ಷಿಪಣಿ ಚಲಿಸುತ್ತಿರುವ ಗುರಿಗಳ ಮೇಲೂ ದಾಳಿ ನಡೆಸಬಲ್ಲುದು. ಒಮ್ಮೆ ಹಾರಿಸಿದರೆ ಮರೆತುಬಿಡಬಹುದಾದ ಶ್ರೇಣಿಯ ಕ್ಷಿಪಣಿ ಇದಾಗಿದ್ದು, ತನಗೆ ತೋರಿಸಿದ ಗುರಿಯನ್ನು ಭೇದಿಸದೆ ಬಿಡಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ