
ಆಯೋಧ್ಯೆ(ಜ.15) ಭಗವಾನ್ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಒಂದು ವಾರ ಮಾತ್ರ ಬಾಕಿ ಇದೆ. ಇತ್ತ ರಾಮ ಮಂದಿರ ವಿಚಾರದಲ್ಲಿ ರಾಜಕೀಯವು ಜೋರಾಗಿದೆ. ರಾಮ ಮಂದಿರದ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದ ಕಾಂಗ್ರೆಸ್ ಇದೀಗ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಕಡೆ ಬೊಟ್ಟು ಮಾಡುತ್ತಿದೆ. ರಾಜಕೀಯ, ವಾದ ವಿವಾದದ ನಡುವೆ ಆಯೋಧ್ಯೆ ರಾಮ ಮಂದಿರಕ್ಕೆ ಕೆಲ ಕಾಂಗ್ರೆಸ್ ನಾಯಕರು ಭೇಟಿ ನೀಡಿದ್ದಾರೆ. ಈ ವೇಳೆ ಆಯೋಧ್ಯೆ ರಾಮ ಮಂದಿರ ಆವರಣದಲ್ಲಿ ಕಾಂಗ್ರೆಸ್ ಧ್ವಜ ಹಿಡಿದು ಮೆರವಣಿಗೆ ಪ್ರಯತ್ನ ಮಾಡಿದ್ದಾರೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಧಾರ್ಮಿಕ ಸ್ಥಳದ ಆವರಣದಲ್ಲಿ ರಾಜಕೀಯ ಧ್ವಜ ಮೆರೆಸುವ ಪ್ರಯತ್ನ ಬೇಡ ಎಂದು ಆಕ್ರೋಶಗೊಂಡ ಕೆಲವರು ಕಾಂಗ್ರೆಸ್ ಧ್ವಜ ಕಿತ್ತೆಸೆದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರಾದ ದೀಪೇಂದ್ರ ಹೂಡ, ಅಜಯ್ ರೈ, ಕಾಂಗ್ರೆಸ್ ಮಹಿಳಾ ಮೋರ್ಚಾ ನಾಯಕಿ ರೇಣು ರೈ ಸೇರಿದಂತೆ ಹಲವು ನಾಯಕರು ಇಂದು ಆಯೋಧ್ಯೆಗೆ ಭೇಟಿ ನೀಡಿದ್ದಾರೆ. ಸರಯು ನದಿಯಲ್ಲಿ ಮಿಂದು ಶ್ರೀರಾಮಲಲ್ಲಾ ದರ್ಶನ ಪಡೆಯಲು ತೆರಳಿದ್ದಾರೆ. ಕಾಂಗ್ರೆಸ್ ನಾಯಕರ ಜೊತೆಗೆ ಬೆಂಬಲಿಗರು, ಜಿಲ್ಲಾ ನಾಯಕರು ತೆರಳಿದ್ದಾರೆ. ಈ ವೇಳೆ ಮಹಿಳಾ ಮೋರ್ಚಾ ನಾಯಕಿ ಹಾಗೂ ಇತರ ಕಾಂಗ್ರೆಸ್ ನಾಯಕರು ಪವಿತ್ರ ಧಾರ್ಮಿಕ ಸ್ಥಳವಾದ ರಾಮ ಮಂದಿರ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಾರಾಡಿಸಿದ್ದಾರೆ. ಈ ಧ್ವಜ ಹಿಡಿದು ರಾಮ ದರ್ಶನಕ್ಕೆ ತೆರಳುವ ಪ್ರಯತ್ನ ಮಾಡಿದ್ದಾರೆ.
ಭವ್ಯ ರಾಮಮಂದಿರಕ್ಕೆ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮನ ಮೂರ್ತಿ ಅಧಿಕೃತ ಆಯ್ಕೆ!
ಪವಿತ್ರ ಧಾರ್ಮಿಕ ಆವರಣದಲ್ಲಿ ರಾಜಕೀಯ ಧ್ವಜ ಯಾಕೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆಕ್ರೋಗೊಂಡ ಕೆಲವರು ಕಾಂಗ್ರೆಸ್ ಧ್ವಜ ಕಿತ್ತೆಸೆದಿದ್ದಾರೆ. ಜೈಶ್ರೀರಾಮ್ ಘೋಷಣೆ ಕೂಗುತ್ತಾ ಕಾಂಗ್ರೆಸ್ ಧ್ವಜ ಕಿತ್ತೆಸೆದಿದ್ದಾರೆ. ರಾಮ ಮಂದಿರ ಆವರಣದಲ್ಲಿ ರಾಜಕೀಯ ಬೇಡ ಎಂದು ಆಕ್ರೋಶಿತರ ಗುಂಪು ಎಚ್ಚರಿಕೆ ನೀಡಿದೆ.
ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದಂತೆ ಪೊಲೀಸರು ನಿಯಂತ್ರಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಪೊಲೀಸರು ರಕ್ಷಣೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ರೇಣು ರೈ, ಶ್ರೀರಾಮ ಮಂದಿರ ಎಲ್ಲರಿಗೂ ಸೇರಿದ್ದು. ಇದು ಯಾರ ಒಬ್ಬರ ಆಸ್ತಿ, ಪಕ್ಷಕ್ಕೆ ಸೇರಿದ್ದಲ್ಲ. ಕಾಂಗ್ರೆಸ್ ಧ್ವಜ ಕಿತ್ತೆಸೆದ ಘಟನೆ ಹೀನ ಕೃತ್ಯ ಎಂದು ರೇಣು ರೈ ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ತಿರಸ್ಕರಿಸಿದ್ದಾರೆ. ಇದು ಉತ್ತರ ಪ್ರದೇಶದಲ್ಲಿರುವ ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಿಸಿದೆ. ಹೀಗಾಗಿ ಪ್ರಾಣಪ್ರತಿಷ್ಠೆಗೂ ಮೊದಲು ಶ್ರೀರಾಮ ದರ್ಶನ ಪಡೆದು ಕಾಂಗ್ರೆಸ್ ರಾಮ ಮಂದಿರ ಹಾಗೂ ರಾಮ ಭಕ್ತರ ಪರವಾಗಿದೆ ಎಂದು ಸಂದೇಶ ಸಾರಲು ಯತ್ನಿಸಿದೆ. ಆದರೆ ಕಾಂಗ್ರೆಸ್ ಧ್ವಜ ತನ್ನ ಎಲ್ಲಾ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ.
ಜ.23ರಿಂದ ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತ, ಆಯೋಧ್ಯೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಸುದ್ದಿಗೋಷ್ಠಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ