
ಶಿಲ್ಲಾಂಗ್: ವಿಧಾನಸಭೆ ಕಲಾಪಗಳಲ್ಲಿ ಬೇರೆ ಬೇರೆ ಪಕ್ಷದ ಶಾಸಕರು ಸರ್ಕಾರದ ಸದಸ್ಯರಾದ ಸಚಿವರುಗಳನ್ನು ಮುಖ್ಯಮಂತ್ರಿಗಳನ್ನು ಸದನದಲ್ಲಿ ಹಲವು ವಿಚಾರಗಳ ಬಗ್ಗೆ ಪ್ರಶ್ನೆ ಮಾಡುವುದು ಸಾಮಾನ್ಯ. ಆದರೆ ಮೇಘಾಲಯದ ವಿಧಾನಸಭೆ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಯ್ತು. ಇಲ್ಲಿ ಸಿಎಂ ಪತ್ನಿಯೇ ಸಿಎಂಗೆ ಸದನಲದಲ್ಲಿ ಪ್ರಶ್ನೆ ಕೇಳಿದರು. ಹೌದು ಮೇಘಾಲಯ ಸಿಎಂ ಕಾನ್ರಾಡ್ ಕೆ ಸಂಗ್ಮಾ ಅವರ ಪತ್ನಿ ಮೆಹ್ತಾಬ್ ಚಾಂಡಿ ಎ ಸಂಗ್ಮಾ ಅವರು ಕೂಡ ಎಂಎಲ್ಎ ಆಗಿದ್ದು, ಅವರು ತಮ್ಮ ಪತಿಯ ಬಳಿ ರಾಜ್ಯದಲ್ಲಿ ನಿಲ್ಲಿಸಲ್ಪಟ್ಟ ಜಾನುವಾರುಗಳ ಸಾಕಾಣೆ ತರಬೇತಿ ಶಿಕ್ಷಣ ಯೋಜನೆಯ ಬಗ್ಗೆ ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ನಿಂತು ಹೋಗಿರುವ ಈ ಯೋಜನೆಗೆ ಶೀಘ್ರದಲ್ಲೇ ವೇಗ ನೀಡಲಾಗುವುದು ಎಂದು ಹೇಳಿದರು.
ಗ್ಯಾಂಬೆಗ್ರೆ ಶಾಸಕರಾಗಿರುವ ಸಿಎಂ ಪತ್ನಿ ಮೆಹ್ತಾಬ್ ಚಾಂಡಿ ಎ ಸಂಗ್ಮಾ ಅವರು ಇದೇ ವೇಳೆ, 2022 ರಲ್ಲಿ ಮೊದಲು ಸಚಿವ ಸಂಪುಟ ಪ್ರಸ್ತಾಪಿಸಿದ ಪಶುವೈದ್ಯಕೀಯ ಕಾಲೇಜು, ಎರಡು ಮೀನುಗಾರಿಕೆ ಕಾಲೇಜುಗಳು ಮತ್ತು ಡೈರಿ ಕಾಲೇಜಿನ ಪ್ರಗತಿಯ ಬಗ್ಗೆ ಸ್ಪಷ್ಟತೆ ಕೋರಿದರು ಮತ್ತು ರಾಜ್ಯಾದ್ಯಂತ ಪಶುವೈದ್ಯಕೀಯ ತರಬೇತಿ ಕೇಂದ್ರಗಳಲ್ಲಿ ಮಾನವಶಕ್ತಿಯ ಕೊರತೆ ಇರುವುದನ್ನು ಹೇಳಿದರು. ವಿಧಾನಸಭೆಯ ಕಲಾಪಗಳಲ್ಲಿ ಪತಿ-ಪತ್ನಿ (ಕಾನ್ರಾಡ್ ಕೆ ಸಂಗ್ಮಾ ಮತ್ತು ಮೆಹ್ತಾಬ್ ಚಾಂಡಿ ಎ ಸಂಗ್ಮಾ) ಶಾಸಕ ಜೋಡಿ ನೀತಿ ವಿಷಯಗಳ ಕುರಿತು ಆರೋಗ್ಯಕರ ಚರ್ಚೆಯಲ್ಲಿ ತೊಡಗಿದ್ದ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೈರಲ್ ಆಯ್ತು.
ಇದನ್ನೂ ಓದಿ: ಜೆನ್ ಜಿ ಉದ್ಯೋಗಿಗಳ ಜೊತೆ ಈ ಆಟ ಎಲ್ಲಾ ನಡೆಯಲ್ಲ: ವಿಮಾನ ಏರುವಾಗ ರಜೆ ಕ್ಯಾನ್ಸಲ್ ಎಂದ ಬಾಸ್: ಯುವತಿ ಮಾಡಿದ್ದೇನು?
ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಜಾನುವಾರು ವಲಯವನ್ನು ಬಲಪಡಿಸಲು ಸಂಸ್ಥೆಗಳು ಯೋಜಿಸಿವೆ ಎಂದು ಹೇಳಿದರು. ರಾಜ್ಯದ ಹೆಚ್ಚಿನ ಜನರು ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡಿರುವುದನ್ನು ಗಮನದಲ್ಲಿಟ್ಟುಕೊಂಡು, ತುರ್ತು ಅಗತ್ಯದಿಂದಾಗಿ ನಾವು ನಿರ್ಧರಿಸಿದ ಮೂರು ಕಾಲೇಜುಗಳು ಇವು ಎಂದು ಅವರು ಹೇಳಿದರು. ಪಶು ವೈದ್ಯಕೀಯ ಕಾಲೇಜುಗಳಲ್ಲಿ ಸಿಬ್ಬಂದಿ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಇದು ಖಂಡಿತವಾಗಿಯೂ ಕಳವಳಕಾರಿ ವಿಷಯ. ಮಾನವಶಕ್ತಿಯ ಕೊರತೆಯನ್ನು ಆದಷ್ಟು ಬೇಗ ತುಂಬಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಆದ್ಯತೆಯಾಗಿ ಪರಿಗಣಿಸಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: ಕೆಲ ತಿಂಗಳ ಅಂತರದಲ್ಲಿ ಹೃದಯಾಘಾತಕ್ಕೆ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಕುಟುಂಬ: ಸಾವಿನಲ್ಲೂ ಅಣ್ಣನ ಹಾದಿ ಹಿಡಿದ ತಂಗಿ
ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್) ಸಿದ್ಧಪಡಿಸುವಲ್ಲಿನ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಸಂಗ್ಮಾ, ಭೂಮಿ ಗುರುತಿಸುವಿಕೆ ಮತ್ತು ಯೋಜನಾ ಮಾನವಶಕ್ತಿಯ ಅವಶ್ಯಕತೆಗಳಿಂದಾಗಿ ಪ್ರಕ್ರಿಯೆಯು ಸಮಯ ತೆಗೆದುಕೊಂಡಿತು ಎಂದು ಹೇಳಿದರು. ಪ್ರಸ್ತಾವಿತ ಪಶುವೈದ್ಯಕೀಯ ಕಾಲೇಜಿಗಾಗಿ ರಿ-ಭೋಯ್ನ ಕಿರ್ಡೆಮ್ಕುಲೈನಲ್ಲಿ ಸುಮಾರು 800 ಎಕರೆಗಳನ್ನು ಗುರುತಿಸಲಾಗಿದೆ, ಇದಕ್ಕೆ ಸುಮಾರು 334 ಕೋಟಿ ರೂ. ವೆಚ್ಚವಾಗಲಿದೆ ಮತ್ತು 19 ಇಲಾಖೆಗಳನ್ನು ಒಳಗೊಂಡಿದೆ. ಹಣಕಾಸಿನ ಅವಶ್ಯಕತೆ ಸಾಕಷ್ಟು ಹೆಚ್ಚಿರುವುದರಿಂದ ನಮಗೆ ಕಳವಳಗಳಿವೆ ಎಂದು ಅವರು ಹೇಳಿದರು, ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ