
ಲಕ್ನೋ: ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಹಾಥಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಿಯಕರ ಜೊತೆ ಸಿಕ್ಕಿಬಿದ್ದ ಮಹಿಳೆಯನ್ನು ಆಕೆಯ ಮೂರು ಅಪ್ರಾಪ್ತ ಮಕ್ಕಳ ಮುಂದೆಯೇ ಮರಕ್ಕೆ ಕಟ್ಟಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ತಾಲಿಬಾನಿ ಮಾದರಿಯಲ್ಲಿ ಶಿಕ್ಷೆ ನೀಡಿದ್ದಾರೆ. ಮಹಿಳೆಯ ಮುಖಕ್ಕೆ ಕಪ್ಪು ಮಸಿ ಬಳೆದು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ವಿಷಯ ತಿಳಿದು ಪೊಲೀಸರು ಆಗಮಿಸುತ್ತಿದ್ದಂತೆ ಗ್ರಾಮಸ್ಥರೆಲ್ಲಾ ಸ್ಥಳದಿಂದ ಪಲಾಯನಗೊಂಡಿದ್ದಾರೆ.
ವರದಿಗಳ ಪ್ರಕಾರ ಮಹಿಳೆಯ ಪತಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಉಳಿದುಕೊಂಡಿದ್ದಾನೆ. ರಜಾ ದಿನಗಳಲ್ಲಿ ಮಾತ್ರ ಗ್ರಾಮಕ್ಕೆ ಬಂದು ಹೋಗುತ್ತಿದ್ದನು. ಪತಿ ದೂರವಿರುವ ಕಾರಣ ಸಂಬಂಧಿಯಾಗಿರುವ ಲವಕುಶ್ ಹೆಸರಿನ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಯುವಕನ ಜೊತೆಯಲ್ಲಿಯೇ ಮುಂದಿನ ಜೀವನ ನಡೆಸಲು ಮಹಿಳೆ ನಿರ್ಧರಿಸಿದ್ದಳು. ಈ ವಿಷಯ ಪತಿಯ ಕುಟುಂಬಸ್ಥರಿಗೆ ತಿಳಿಯುತ್ತಿದ್ದಂತೆ ಮನೆಯಲ್ಲಿ ಜಗಳ ನಡೆದಿತ್ತು. ಮಹಿಳೆ ಹಾಗೂ ಕುಟುಂಬಸ್ಥರ ನಡುವೆ ವಾದ-ವಿವಾದವೂ ನಡೆದಿತ್ತು. ಮಹಿಳೆಯ ನಿರ್ಧಾರನ್ನು ಕುಟುಂಬಸ್ಥರೆಲ್ಲರೂ ವಿರೋಧಿಸಿದ್ದರು.
ಮದ್ವೆಯಾಗಿ ಒಂದೂವರೆ ವರ್ಷ, ಜೊತೆಯಲ್ಲಿದಿದ್ದು 8 ದಿನ.. ಸಂಬಂಧ ಬೆಳೆಸದ IRS ಅಧಿಕಾರಿ ಗಂಡನ ವಿರುದ್ಧ ಪತ್ನಿ ದೂರು
ಮಹಿಳೆಯನ್ನು ಬಿಟ್ಟು ಪ್ರಿಯಕರ ಪಲಾಯನ
ಈ ಘಟನೆ ಜುಲೈ 28ರಂದು ನಡೆದಿದೆ. ಪ್ರೇಮಿಯ ಜೊತೆ ಸಿಕ್ಕಿಬಿದ್ದಾಗ ಗ್ರಾಮಸ್ಥರು ಪಂಚಾಯ್ತಿ ಕರೆದಿದ್ದರು. ಪಂಚಾಯ್ತಿ ವೇಳೆ ಮಹಿಳೆಯನ್ನು ಆಕೆಯ ಮಕ್ಕಳ ಮುಂದೆಯೇ ಕಟ್ಟಿ ಹಾಕಲಾಗಿತ್ತು. ಈ ಸಮಯದಲ್ಲಿ ಮಹಿಳೆಯ ಪ್ರಿಯಕರ ಲವಕುಶ್ ಅಲ್ಲಿಂದ ಕಾಲ್ಕಿತ್ತಿದ್ದನು. ಯುವಕ ಅಮ್ಮನಿಗೆ ಹೊಸ ಸೀರೆ ತಂದಿದ್ದನು. ಅಮ್ಮ ಆ ಸೀರೆ ಧರಿಸಿ ನಮ್ಮೆಲ್ಲರನ್ನು ಮನೆಯಲ್ಲಿ ಬಿಟ್ಟು ಯುವಕನ ಜೊತೆ ಹೋದಳು ಎಂದು ಮಹಿಳೆಯ ಹಿರಿಯ ಮಗ ಹೇಳಿದ್ದಾನೆ. ಓಡಿ ಹೋಗಿದ್ದ ಮಹಿಳೆಯನ್ನು ಪ್ರಿಯಕರನ ಜೊತೆಯಲ್ಲಿದ್ದಾಗಲೇ ಗ್ರಾಮಸ್ಥರು ಹಿಡಿದು ಕರೆತಂದಿದ್ದರು. ಯುವಕ ಪರಾರಿಯಾಗಲು ಯಶಸ್ವಿಯಾಗಿದ್ದನು. ಮಕ್ಕಳು ಸಹ ಅಮ್ಮನ ಅಕ್ರಮ ಸಂಬಂಧದ ಬಗ್ಗೆ ದುಃಖಿತರಾಗಿದ್ದು, ಏನು ಮಾತನಾಡದೇ ಮೌನರಾಗಿದ್ದಾರೆ.
20 ಜನರ ವಿರುದ್ಧ ಪ್ರಕರಣ ದಾಖಲು
ಗ್ರಾಮದ ಮುಖಂಡರು ಹಾಗೂ ಪಂಚಾಯ್ತಿ ಸದಸ್ಯರು ಮಹಿಳೆ ಮೇಲೆ ಹಲ್ಲೆ ನಡೆಸುತ್ತಿರುವ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಹೋದಾಗ ಎಲ್ಲರೂ ಅಲ್ಲಿಂದ ಓಡಿ ಹೋಗಿದ್ದಾರೆ. ಮಹಿಳೆಯರನ್ನು ರಕ್ಷಿಸಿದ ಪೊಲೀಸರು, ಆಕೆಯ ಹೇಳಿಕೆಯನ್ನಾಧರಿಸಿ 20 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಪೊಲೀಸರು 15 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಇನ್ನುಳಿದರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಈ ಘಟನೆ ಬಳಿಕ ಗ್ರಾಮದ ಪುರುಷರು ಬಂಧನದ ಭಯದಿಂದ ಊರು ತೊರೆದಿದ್ದಾರೆ. ಕೆಲ ಕುಟುಂಬಗಳು ಮನೆಗೆ ಬೀಗ ಹಾಕಿ ರಹಸ್ಯ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ