2 ರಾಜ್ಯಕ್ಕೆ ತಟ್ಟೆ ತುಂಬಾ ಜಿಲೇಬಿ, ಪಕೋಡಾ, ಉಳಿದ ರಾಜ್ಯಗಳಿಗೆ ಖಾಲಿ ತಟ್ಟೆ: ಖರ್ಗೆ

By Kannadaprabha NewsFirst Published Jul 25, 2024, 7:49 AM IST
Highlights

ಚೀನಾದಿಂದ ವಿದೇಶಿ ಹೂಡಿಕೆ ಬರಬೇಕು ಎನ್ನುವ ಮೂಲಕ ಗಲ್ವಾನ್ ಸಂಘರ್ಷದಲ್ಲಿ ಹತರಾದ 20 ಯೋಧರಿಗೆ ಅಗೌರವ ತೋರಿಸಲಾಗಿದೆ. ಇಂದು ನಿರುದ್ಯೋಗ ದರ ಶೇ.9.2ರಷ್ಟಿದೆ. ಹಣದುಬ್ಬರ ಹೆಚ್ಚಾಗಿ ಪರಿವಾರಗಳ ಉಳಿತಾಯವೂ ಕಡಿಮೆಯಾಗಿದೆ.

ನವದೆಹಲಿ: ‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕಕ್ಕೆ ಹೆಚ್ಚು ಯೋಜನೆ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ನಮ್ಮ ರಾಜ್ಯಕ್ಕೆ ಏನೂ ಸಿಕ್ಕಿಲ್ಲ’ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕರೂ ಆಗಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಛೇಡಿಸಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರು ರಾಜ್ಯಸಭೆಗೆ ಕರ್ನಾಟಕದಿಂದಲೇ ಆಯ್ಕೆಯಾಗಿ ಹೋಗಿರುವ ಹಿನ್ನೆಲೆಯಲ್ಲಿ ಖರ್ಗೆ ಬುಧವಾರ ರಾಜ್ಯಸಭೆ ಕಲಾಪದ ಸಂದರ್ಭದಲ್ಲಿ ಈ ರೀತಿ ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ, ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಮಾತ್ರ ಬಜೆಟ್‌ನಲ್ಲಿ ಹೆಚ್ಚು ಕೊಡುಗೆ ನೀಡಿರುವುದನ್ನು ಟೀಕಿಸಿದ ಅವರು, 2 ರಾಜ್ಯಗಳಿಗೆ ಮಾತ್ರ ತಟ್ಟೆ ತುಂಬಾ ಪಕೋಡಾ ಹಾಗೂ ಜಿಲೇಬಿಯನ್ನು ಕೊಡಲಾಗಿದೆ. ಉಳಿದ ರಾಜ್ಯಗಳಿಗೆ ಖಾಲಿ ತಟ್ಟೆ ನೀಡಲಾಗಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್‌, ಹರ್ಯಾಣ, ರಾಜಸ್ಥಾನ, ಛತ್ತೀಸ್‌ಗಢಕ್ಕೆ ಏನೂ ಸಿಕ್ಕಿಲ್ಲ. ಕೆಲವೇ ವ್ಯಕ್ತಿಗಳನ್ನು ಓಲೈಸಲು ಹಾಗೂ ಕುರ್ಚಿ ಉಳಿಸಿಕೊಳ್ಳಲು ಬಜೆಟ್‌ ಮಂಡಿಸಲಾಗಿದೆ. ಇದೊಂದು ತಾರತಮ್ಯದ ಬಜೆಟ್‌. ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದು ಹೇಳಿದರು.

Latest Videos

ಈ ವೇಳೆ ನಿರ್ಮಲಾ ಅವರು ಮಾತನಾಡಲು ಬಿಡಿ ಎಂದು ರಾಜ್ಯಸಭೆ ಸಭಾಪತಿಯಾಗಿರುವ ಜಗದೀಪ್‌ ಧನಕರ್‌ ಹೇಳಿದ್ದಕ್ಕೆ ಕಟಕಿಯಾಡಿದ ಖರ್ಗೆ ಅವರು, ನಾನು ಮಾತನಾಡಿ ಮುಗಿಸುತ್ತೇನೆ. ಮಾತಾಜಿ ಅವರು ಮಾತನಾಡುವುದರಲ್ಲಿ ನಿಷ್ಣಾತರು. ಅದು ನನಗೆ ಗೊತ್ತಿದೆ ಎಂದು ತಿಳಿಸಿದರು. 

'ನಿಮಿ'ಗೆ ಹಾಡು ಡಾನ್ಸ್ ಮಾತ್ರ ಬರುತ್ತೆ: ವಿತ್ತ ಸಚಿವರ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಆಕ್ಷೇಪಾರ್ಹ ಹೇಳಿಕೆ

ಸಂಸತ್ತಿನ ಒಳಗೆ, ಹೊರಗೆ ಧರಣಿ । ಕಲಾಪಕ್ಕೆ ಅಡ್ಡಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ ಮಂಡನೆ ಮಾಡಿದ ಕೇಂದ್ರದ ಬಜೆಟ್‌ ವಿರುದ್ಧ ಪ್ರತಿಪಕ್ಷಗಳ ಕೂಟವಾದ ‘ಇಂಡಿಯಾ’ ಆಕ್ರೋಶ ಮುಂದುವರಿಸಿದ್ದು, ಬುಧವಾರ ಸಂಸತ್ತಿನ ಹೊರಗೆ ಹಾಗೂ ಒಳಗೆ ಪ್ರತಿಭಟನೆ ನಡೆಸಿವೆ. ಬಜೆಟ್‌ನಲ್ಲಿ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಮಾತ್ರ ಒತ್ತು ನೀಡಿ, ಉಳಿದ ರಾಜ್ಯಗಳಿಗೆ ತಾರತಮ್ಯ ಮಾಡಲಾಗಿದೆ. ಈ ಬಗ್ಗೆ ಕಲಾಪ ಬದಿಗೊತ್ತಿ ಚರ್ಚೆ ನಡೆಸಬೇಕು ಎಂಬ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಎರಡೂ ಕಲಾಪಗಳಿಂದ ಸಭಾತ್ಯಾಗ ಮಾಡಿ ತಮ್ಮ ಸಿಟ್ಟು ಹೊರಹಾಕಿದೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ಸೇರಿದ ಇಂಡಿಯಾ ಕೂಟದ ಪಕ್ಷಗಳ ನಾಯಕರು ಬಜೆಟ್‌ನಲ್ಲಿ ತಾರತಮ್ಯವಾಗಿದ್ದು, ಈ ಬಗ್ಗೆ ಪ್ರತಿಭಟನೆ ನಡೆಸಬೇಕು ಎಂಬ ತೀರ್ಮಾನವನ್ನು ಕೈಗೊಂಡರು. ಬಳಿಕ ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ಖರ್ಗೆ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಕ್ಷ, ಡಿಎಂಕೆ ಹಾಗೂ ಎಡರಂಗದ ನಾಯಕರು ಪ್ರತಿಭಟನೆ ಮಾಡಿದರು.

ಈ ವೇಳೆ ಮಾತನಾಡಿದ ಖರ್ಗೆ ಅವರು, ಕೇಂದ್ರದ ಬಜೆಟ್‌ ಜನವಿರೋಧಿಯಾಗಿದೆ. ಯಾರೊಬ್ಬರಿಗೂ ನ್ಯಾಯ ಸಿಕ್ಕಿಲ್ಲ. ಇದೊಂದು ವಂಚಕ ಬಜೆಟ್‌ ಎಂದು ಆಕ್ರೋಶ ಹೊರಹಾಕಿದರು. ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಆಂಧ್ರ ಹಾಗೂ ಬಿಹಾರಕ್ಕೆ ಅನುದಾನ ನೀಡುವುದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಇತರೆ ರಾಜ್ಯಗಳಿಗೂ ನ್ಯಾಯ ಸಿಗಬೇಕು. ಹೀಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಈ ವೇಳೆ ‘ನಮಗೆ ಇಂಡಿಯಾ ಬಜೆಟ್‌ ಬೇಕು, ಎನ್‌ಡಿಎ ಬಜೆಟ್‌ ಅಲ್ಲ’, ‘ಇಂಡಿಯಾ ಬಜೆಟ್‌ಗೆ ಎನ್‌ಡಿಎ ವಂಚನೆ ಮಾಡಿದೆ’ ಎಂಬ ಭಿತ್ತಿಪತ್ರಗಳನ್ನು ಹಿಡಿದು ಸಂಸದರು ಪ್ರತಿಭಟನೆ ನಡೆಸಿದರು.

ದೇಶದಲ್ಲಿ ಉದ್ಯೋಗ ಹೆಚ್ಚಳಕ್ಕೆ ನಿರ್ಮಲಾ ಸೀತಾರಾಮನ್ ಮೂರು ಹೊಸ ಸ್ಕೀಂ ಘೋಷಣೆ

ಯೋಧರಿಗೆ ಕೇಂದ್ರದಿಂದ ಅಗೌರವ

ಕಳೆದ ಹತ್ತು ವರ್ಷಗಳಲ್ಲಿ ನಿಮ್ಮ ಸರ್ಕಾರ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಹತ್ತಿಕ್ಕಿದೆ. ಸರ್ಕಾರ ಬಿಡುಗಡೆಗೊಳಿಸಿದ ಆರ್ಥಿಕ ಸಮೀಕ್ಷೆ ಮೋದಿ ಸರ್ಕಾರದ ಹುಳುಕುಗಳನ್ನು ಮುಚ್ಚಿಹಾಕಿ ಕೇವಲ ಒಳ್ಳೆಯ ಅಂಶಗಳನ್ನು ಆಯ್ದುಕೊಂಡಿದೆ. ಚೀನಾದಿಂದ ವಿದೇಶಿ ಹೂಡಿಕೆ ಬರಬೇಕು ಎನ್ನುವ ಮೂಲಕ ಗಲ್ವಾನ್ ಸಂಘರ್ಷದಲ್ಲಿ ಹತರಾದ 20 ಯೋಧರಿಗೆ ಅಗೌರವ ತೋರಿಸಲಾಗಿದೆ. ಇಂದು ನಿರುದ್ಯೋಗ ದರ ಶೇ.9.2ರಷ್ಟಿದೆ. ಹಣದುಬ್ಬರ ಹೆಚ್ಚಾಗಿ ಪರಿವಾರಗಳ ಉಳಿತಾಯವೂ ಕಡಿಮೆಯಾಗಿದೆ. ರೈತ ಮಸೂದೆಯನ್ನು ಹಿಂದಿನ ಬಾಗಿಲಿನಿಂದ ಜಾರಿಗೊಳಿಸಲು ಹೊಂಚು ಹಾಕಲಾಗುತ್ತಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಮಂಗಳವಾರ ಹೇಳಿಕೆ ನೀಡಿದ್ದರು. 

click me!