Gandhi Jayanti ಗಾಂಧಿ ಎಂಬ ಮಹಾಕಾವ್ಯ

By Kannadaprabha NewsFirst Published Oct 2, 2022, 11:52 AM IST
Highlights

ಗಾಂಧೀಜಿಯವರು ಕೇವಲ ರಾಷ್ಟ್ರನಿರ್ಮಾಪಕರಾಗಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅವರು ರಾಷ್ಟ್ರೀಯ ಭಾವೈಕ್ಯದ ಸಂಕೇತವಾಗಿದ್ದರು. ನಿರ್ಲಕ್ಷ್ಯ, ತಾತ್ಸಾರಗಳಿಗೆ ಪಾತ್ರವಾಗಿದ್ದ ಭಾರತೀಯ ಭಾಷೆಗಳಿಗೆ ಶಕ್ತಿಯನ್ನೂ, ಆತ್ಮ ಪ್ರತ್ಯಯವನ್ನೂ ತಂದು ಕೊಟ್ಟವರು ಗಾಂಧೀಜಿ ಎಂಬುದನ್ನು ನಾವು ಮರೆಯುವಂತಿಲ್ಲ. ರಾಷ್ಟ್ರದ ರಾಜಕೀಯ ಹಾಗೂ ಅರ್ಥಶಾಸ್ತ್ರಗಳ ಮೇಲೆ ಗಾಂಧೀಜಿಯವರ ಪ್ರಭಾವ ಗಾಢ.

ಸುಮ ಚಂದ್ರಶೇಖರ್‌

ಮಹಾತ್ಮಗಾಂಧೀಜಿ ಬದುಕೇ ಒಂದು ಮಹಾಕಾವ್ಯ. ಅವರ ಬದುಕಿನ ರೀತಿ ನೀತಿ ಕಲಾತ್ಮಕವಾದುದು. ನೇರ ನಡೆ, ನುಡಿ, ಸರಳತೆ, ಸಜ್ಜನಿಕೆ, ಸಮಷ್ಠಿ ಪ್ರಜ್ಞೆ ಹಾಗೂ ಖಚಿತತೆಗಳು ಅವರ ಬರವಣಿಗೆಯ ಮುಖ್ಯ ಲಕ್ಷಣಗಳು. ಭಾರತೀಯ ಸಾಹಿತ್ಯದಲ್ಲಿ ಗಾಂಧೀಜಿಯವರ ಸ್ಥಾನ ಪ್ರಮುಖವಾದುದು. ಗಾಂಧೀಜಿಯವರ ವ್ಯಕ್ತಿತ್ವ, ಸಾಧನೆ ಸಿದ್ಧಿಗಳ ಬಗ್ಗೆ ಪ್ರಕಟವಾಗಿರುವಷ್ಟುಸಾಹಿತ್ಯ ಜಗತ್ತಿನ ಬೇರಾವ ವ್ಯಕ್ತಿಯ ಕುರಿತು ಪ್ರಕಟವಾಗಿಲ್ಲವೆನಿಸುತ್ತದೆ. ಬುದ್ಧ, ಬಸವ, ವಿವೇಕಾನಂದರಂತೆಯೇ ಕೀರ್ತಿಯನ್ನು ಲೋಕಾದಾದ್ಯಂತ ಹರಡಿದ ಮಹಾನ್‌ ವ್ಯಕ್ತಿತ್ವವುಳ್ಳವರು ಗಾಂಧೀಜಿ. ಈ ಮಹಾನುಭಾವರು ಜನ್ಮವೆತ್ತಿದ ಪುಣ್ಯಭೂಮಿ ನಮ್ಮದು. ಇವರೆಲ್ಲರ ಗುರಿ ಒಂದೇ ಆಗಿದ್ದರೂ ಮಾರ್ಗ ಮಾತ್ರ ಭಿನ್ನವಾದುದು. ಇವರ ಜೀವನ ಸಂದೇಶ ಲೋಕಕ್ಕೆ ಎಲ್ಲ ಕಾಲದಲ್ಲಿಯೂ ಸ್ಫೂರ್ತಿದಾಯಕವಾಗಿದೆ. ಸಾಹಿತ್ಯಾಭಿಮಾನಿಗಳಿಗೆ, ಚಿಂತಕರಿಗೆ, ವಿಮರ್ಶಕರಿಗೆ ಗಾಂಧೀಜಿಯವರ ಬದುಕೊಂದು ಸ್ಫೂರ್ತಿಯ ಸೆಲೆ.

ಗಾಂಧೀಜಿಯವರು ಕೇವಲ ರಾಷ್ಟ್ರನಿರ್ಮಾಪಕರಾಗಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅವರು ರಾಷ್ಟ್ರೀಯ ಭಾವೈಕ್ಯದ ಸಂಕೇತವಾಗಿದ್ದರು. ನಿರ್ಲಕ್ಷ್ಯ, ತಾತ್ಸಾರಗಳಿಗೆ ಪಾತ್ರವಾಗಿದ್ದ ಭಾರತೀಯ ಭಾಷೆಗಳಿಗೆ ಶಕ್ತಿಯನ್ನೂ, ಆತ್ಮ ಪ್ರತ್ಯಯವನ್ನೂ ತಂದು ಕೊಟ್ಟವರು ಗಾಂಧೀಜಿ ಎಂಬುದನ್ನು ನಾವು ಮರೆಯುವಂತಿಲ್ಲ. ರಾಷ್ಟ್ರದ ರಾಜಕೀಯ ಹಾಗೂ ಅರ್ಥಶಾಸ್ತ್ರಗಳ ಮೇಲೆ ಗಾಂಧೀಜಿಯವರ ಪ್ರಭಾವ ಗಾಢ. ಇವರು ನೇರವಾಗಿ ತಾವು ಬರೆಯುವುದರ ಮೂಲಕವಾಗಿಯಲ್ಲದೆ ತಮ್ಮ ಕ್ರಿಯಾಶೀಲತೆ, ಉದ್ದೇಶ, ಆದರ್ಶಗಳ ಮೂಲಕವಾಗಿಯೂ ಆಧುನಿಕ ಭಾರತೀಯ ಸಾಹಿತ್ಯದಲ್ಲಿ ಒಂದು ಹೊಸ ಅಧ್ಯಾಯವನ್ನು ಸೃಷ್ಟಿಸಿದರು.

Gandhi Jayanti 2022: ಲೈಫ್‌ನಲ್ಲಿ ಅಳವಡಿಸಿಕೊಳ್ಳಬೇಕಾದ ಗಾಂಧೀಜಿಯವರ ಮಾತುಗಳು

ಅಂತ್ಯೋದಯ, ಸರ್ವೋದಯ ಎಂಬ ಮಂತ್ರದ ಮೂಲಕ ಜನ ಕಲ್ಯಾಣದ ಕನಸನ್ನು ಬಯಸಿದವರು ಗಾಂಧಿ, ಆದ್ದರಿಂದಲೇ ರಾಷ್ಟ್ರಕವಿ ಕುವೆಂಪು ಗಾಂಧೀಜಿಯವರನು ಸಭ್ಯತಾದೇವತೆ ಮತ್ತು ಪ್ರಚ್ಛನ್ನ ಕಲ್ಕಿ ಎಂದು ಪ್ರಶಂಸಿಸಿದ್ದಾರೆ. ಜಗತ್ತಿನ ಮಹಾಮಾನವತಾವಾದಿಗಳಾದ ಬುದ್ಧ, ಬಸವ, ಗೋಪಾಲಕೃಷ್ಣ ಗೋಖಲೆ, ಸ್ವಾಮಿ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್‌, ಕುವೆಂಪು ಮುಂತಾದ ಮಹಾನುಭಾವರ ಸಾಲಿನಲ್ಲಿ ಗಾಂಧೀಜಿಯವರ ಬದುಕು ಬರಹಗಳು ಇಡೀ ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ, ಗೊಂದಲಗಳಿಗೆ ಮಾರ್ಗೋಪಾಯವನ್ನು ನೀಡಬಲ್ಲವು. ಸತ್ಯ, ಪ್ರೇಮ, ಅಹಿಂಸೆಗಳ ಮೂಲಕ ಎಂಥ ದುಷ್ಟಶಕ್ತಿಯನ್ನಾದರೂ ದಮನಗೊಳಿಸಬಹುದೆಂಬುದಕ್ಕೆ ಇವರ ಬದುಕೇ ಒಂದು ನಿದರ್ಶನ ದೇಶ ಸೇವೆಯೇ ಈಶ ಸೇವೆ ಎಂದು ನಂಬಿದ್ದ ಇವರು, ದೇಶದ ಜನ ಸುಖವಾಗಿ ಬಾಳಲೆಂದು, ತಮ್ಮ ಪ್ರಾಣವನ್ನು ಪಣವೊಡ್ಡಿ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರಾಷ್ಟ್ರಪಿತ. ಇವರು ನಡೆದ ದಾರಿ ಶ್ರಮರಹಿತವಾದದ್ದು. ಅಧಿಕಾರ ವಿಕೇಂದ್ರೀಕರಣ, ಗ್ರಾಮ ಸ್ವರಾಜ್ಯ, ಯಾಂತ್ರೀಕರಣರಹಿತ ಅರ್ಥನೀತಿ, ಭಾರತೀಯತ್ವ ನಿಷ್ಠೆ ಇವುಗಳು ಗಾಂಧೀಜಿಯವರ ಮೂಲಮಂತ್ರವಾಗಿದ್ದವು. ಜಗತ್ತಿನಲ್ಲಿ ಹಿಂಸಾತ್ಮಕವಾದ ಯಾವ ಸಾಧನೆಯೂ ಶಾಶ್ವತವಾದುದಲ್ಲವೆಂಬುದು ಗಾಂಧೀಜಿಯವರ ವಾದವಾಗಿತು.

Gandhi Jayanti 2022: ಜಗತ್ತಿಗೇ ಶಕ್ತಿ ತುಂಬಿದ ಗಾಂಧಿ ಆದರ್ಶಗಳು: ಸಚಿವ ಅಶ್ವತ್ಥ್‌

ರಘುಪತಿ ರಾಘವ ರಾಜಾರಾಮ್‌ ಪತಿತ ಪಾವನ ಸೀತಾರಾಮ್‌ ಎಂಬ ಈ ಸಾಮರಸ್ಯದ ಮೂಲ ಮಂತ್ರವನ್ನು ತಾವು ಮೈಗೂಡಿಸಿಕೊಂಡು ಬೇರೆಯವರಿಗೂ ಬೋಧಿಸಿದ ರಾಷ್ಟ್ರಪಿತನ ಸಮತಾಭಾವದ, ಐಕ್ಯಮತದ ವಿಚಾರಗಳು ವಿವೇಚನಾರಹಿತ ಇಂದಿನ ದಿನಗಳಲ್ಲಿ ಗಾಂಧೀಜಿಯವರ ಚಿಂತನೆಗಳು ವಿಶ್ವಕ್ಕೆ ಬೇಕಾದ ಅನಘ್ರ್ಯ ರತ್ನಗಳಾಗಿವೆ. ಸ್ವದೇಶಿ ಪ್ರೇಮಿ ವ್ಯಕ್ತಿಗಳನ್ನು ಮಾತ್ರವಲ್ಲದೆ ವಸ್ತುಗಳನ್ನು ಸಹ ಅತ್ಯಂತ ಪ್ರೀತಿಯಿಂದ ಅಪ್ಪಿಕೊಳ್ಳುವಂತಹ ಗಾಂಧೀಜಿಯವರಂತಹ ವ್ಯಕ್ತಿಯನ್ನು ಹುಟ್ಟುಹಾಕಿದ ಅಮರ ಭೂಮಿ ನಮ್ಮದು. ಒಳ್ಳೆಯ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಬಯಕೆಯುಳ್ಳವರು. ಗಾಂಧೀಜಿಯವರ ಬದುಕು, ಬರಹಗಳನ್ನು ರೂಢಿಸಿಕೊಂಡರೆ ಅದಕ್ಕಿಂತ ಮತ್ತೊಂದು ಆದರ್ಶ ಜೀವನ ಇರಲಾರದು.

click me!