ಮಹಾರಾಷ್ಟ್ರ ಸಂಪುಟ ವಿಸ್ತರಣೆ , ನಾಳೆ 11 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ!

By Suvarna NewsFirst Published Aug 8, 2022, 4:23 PM IST
Highlights

ನಾಳೆ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಒಂದು ತಿಂಗಳ ಬಳಿಕ ಸಂಪುಟ ವಿಸ್ತರಣೆಗೆ ಸಮಯ ಕೂಡಿ ಬಂದಿದೆ. ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಗೃಹ ಖಾತೆ ಸಿಗುವ ಸಾಧ್ಯತೆ ಇದೆ.

ಮುಂಬೈ(ಆ.08):  ಅಧಿಕಾರದ ಚುಕ್ಕಾಣಿ ಹಿಡಿದು ತಿಂಗಳು ಕಳೆದರೂ ಮಹಾರಾಷ್ಟ್ರ ಸಚಿವ ಸಂಪುಟದಲ್ಲಿ ಸಿಎಂ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತ್ರ ಇದ್ದಾರೆ. ಕಳೆದ ಕೆಲ ದಿನಗಳಿಂದ ಸಂಪುಟ ವಿಸ್ತರಣೆ ಮಾತು ಕೇಳಿಬಂದಿತ್ತು. ಇದೀಗ ಸಂಪುಟ ವಿಸ್ತರಣೆ ದಿನಾಂಕ ಫಿಕ್ಸ್ ಆಗಿದೆ. ನಾಳೆ ಮಹಾರಾಷ್ಟ್ರ ಸಂಪುಟ ವಿಸ್ತರಣೆಯಾಗಲಿದೆ. ದೇವೇಂದ್ರ ಫಡ್ನವಿಸ್‌ಗೆ ಗೃಹ ಖಾತೆ ಸಿಗುವ ಸಾಧ್ಯತೆ ಇದೆ. ಏಕನಾಥ್ ಶಿಂಧೆ ಬಣದಲ್ಲಿರುವ ಬಹುತೇಕ ಶಾಸಕರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತಿದೆ. ಉಪಮುಖ್ಯಮಂತ್ರಿ ಫಡ್ನವೀಸ್‌ ಸಚಿವರ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಅನಾರೋಗ್ಯ ಕಾರಣದಿಂದ ದೆಹಲಿಗೆ ಪ್ರಯಾಣ ಕೈಗೊಂಡಿಲ್ಲ. ಅಲ್ಲದೇ ವೈದ್ಯರು ವಿಶ್ರಾಂತಿಗೆ ಸೂಚಿಸಿರುವುದರಿಂದ ಎಲ್ಲಾ ಕಾರ್ಯಕ್ರಮಗಳನ್ನು ಶಿಂಧೆ ರದ್ದು ಮಾಡಿದ್ದಾರೆ.

ಜೂ.30ರಂದು ಅಧಿಕಾರ ಸ್ವೀಕರಿಸಿದ ಶಿವಸೇನೆಯ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹಾಗೂ ಬಿಜೆಪಿಯ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮಾತ್ರ ಸದ್ಯ ದ್ವಿಸದಸ್ಯ ಸಚಿವ ಸಂಪುಟದಲ್ಲಿದ್ದಾರೆ.  ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ವಿರುದ್ಧ ಬಂಡೆದ್ದು ಏಕನಾಥ್‌ ಶಿಂಧೆ ಬಣವನ್ನು ಸೇರಿರುವ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸುಪ್ರೀಂಕೋರ್ಚ್‌ನಲ್ಲಿ ಉದ್ಧವ್‌ ಬಣ ದಾವೆ ಹೂಡಿದೆ. ಹೀಗಾಗಿ ಬಂಡಾಯ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಮುಂದೆ ಸಮಸ್ಯೆಯಾಗಬಹುದು ಎಂಬ ಉದ್ದೇಶದಿಂದ ಸಂಪುಟ ವಿಸ್ತರಣೆ ವಿಳಂಬ ಮಾಡಲಾಗುತ್ತಿತ್ತು. ಇದು ಎನ್‌ಸಿಪಿ ಸೇರಿದಂತೆ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಆ.15ರೊಳಗೆ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಕುರಿತು ಭಾನುವಾರ ಪ್ರಶ್ನಿಸಿದಾಗ, ‘ನೀವು ಊಹೆ ಮಾಡುವುದಕ್ಕೂ ಮೊದಲೇ ಸಂಪುಟ ವಿಸ್ತರಣೆಯಾಗಲಿದೆ’ ಎಂದು ಫಡ್ನವೀಸ್‌ ಹೇಳಿದರು.

ರಸ್ತೆ ಗುಂಡಿ ಮುಚ್ಚಲು ಜಿಯೊಪಾಲಿಮರ್, ಮುಂಬೈಗೆ ಏಕನಾಥ್ ಶಿಂಧೆ ಹೊಸ ಸ್ಪರ್ಶ

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖ್ಯಸ್ಥ ರಾಜ್‌ ಠಾಕ್ರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಏಕನಾಥ ಶಿಂಧೆ ಸರ್ಕಾರದಲ್ಲಿ ಎಂಎನ್‌ಎಸ್‌ ಪಕ್ಷದವರಿಗೂ ಒಂದು ಸಚಿವ ಸ್ಥಾನ ನೀಡುವ ಬಗ್ಗೆ ಆಫರ್‌ ನೀಡಲಾಗಿದೆ ಎನ್ನಲಾಗಿದೆ. ಒಂದು ವೇಳೆ ಪ್ರಸ್ತಾಪವನ್ನು ರಾಜ್‌ಠಾಕ್ರೆ ಒಪ್ಪಿದರೆ, ಅದು ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಲಿದೆ. ರಾಜ್‌, ಒಪ್ಪಿದರೆ ಅವರ ಮಗ ಅಮಿತ್‌ ಠಾಕ್ರೆಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ. ಆದರೆ ಈ ಹೇಳಿಕೆಗಳನ್ನು ರಾಜ್‌ ಠಾಕ್ರೆ ತಳ್ಳಿಹಾಕಿದ್ದು, ಸಚಿವ ಸಂಪುಟದ ಕುರಿತಾಗಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯಿಂದ 25 ಸಚಿವರು ನೇಮಕವಾಗಲಿದ್ದಾರೆ. ಶಿಂಧೆ ನೇತೃತ್ವದ ಶಿವಸೇನೆಯಲ್ಲಿರುವ 13 ಮಂದಿಗೆ ಸಚಿವ ಸಂಪುಟದಲ್ಲಿ ಸ್ಥಾನದಲ್ಲಿ ಸ್ಥಾನ ದೊರೆಯಲಿದೆ. ಕೆಲವು ಪಕ್ಷೇತರರು ಹಾಗೂ ಇತರರಿಗೂ ಸಚಿವಪಟ್ಟಲಭಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ. ರಾಜ್ಯ ಸಂಪುಟದಲ್ಲಿ ಗರಿಷ್ಠ 43 ಸಚಿವರು ಇರಲು ಅವಕಾಶವಿದೆ.

 

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಘೋಷಿಸಿದ ಸಿಎಂ ಶಿಂಧೆ, ಮಹಾರಾಷ್ಟ್ರದಲ್ಲಿ ಇಂಧನ ಅಗ್ಗ!

click me!