
ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಹಿನ್ನೆಲೆ ಬಂಧನಕ್ಕೊಳಗಾಗಿರುವ ತಮಿಳುನಾಡು ಮಾಜಿ ಉಪಮುಖ್ಯಮಂತ್ರಿ, ಮಾಜಿ ಸಚಿವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಕುರಿತಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮಹಿಳೆಯ ವಿರುದ್ಧ ಅವಮಾನಕಾರ ಹೇಳಿಕೆ ನೀಡಿದ್ದ ಹಿನ್ನೆಲೆ ಉದಯನಿಧಿ ವಿರುದ್ಧ ಹಲವು ಸೆಕ್ಶನ್ಗಳಡಿ ದೂರು ದಾಖಲಿಸಲಾಗಿತ್ತು. ಈ ದೂರಿನನ್ವಯ ಇಂದು ಪೊಲೀಸರು ಬಂದಿಸಿ ವಿಚಾರಣೆಗೆ ಕರೆದೊಯ್ದಿದ್ದರು.
ಉದಯನಿಧಿ ಆಕ್ಷೇಪಾರ್ಯ ಹೇಳಿಕೆ ಸಂಬಂಧ ವಿಚಾರಣೆ ಆಲಿಸಿದ ಮದ್ರಾಸ್ ಹೈಕೋರ್ಟ್ ವಿಚಾರಣೆ ಪೂರ್ಣಗೊಂಡ ನಂತರ ಅವರನ್ನು ಬಿಡುಗಡೆ ಮಾಡಬೇಕು ಎಂದು ಸೂಚಿಸಿತು. ಪಬ್ಲಿಕ್ ಪ್ರಾಸಿಕ್ಯೂಟರ್ ಒದಗಿಸಿದ ಮಾಹಿತಿ ಆಧಾರದ ಮೇಲೆ ನ್ಯಾಯಾಲಯ ಈ ನಿರ್ಧಾರ ಮಾಡಿದೆ. ವಿಚಾರಣೆಯ ಸಮಯದಲ್ಲಿ, ಪಬ್ಲಿಕ್ ಪ್ರಾಸಿಕ್ಯೂಟರ್ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸುವ ಉದ್ದೇಶವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಾಲಯವು ಉದಯನಿಧಿ ಸ್ಟಾಲಿನ್ ಅವರು ತನಿಖೆಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವಂತೆ ಸೂಚಿಸಿದೆ. ತಮಿಳುನಾಡು ಸರ್ಕಾರದ ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಅವರು, 'ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವುದಿಲ್ಲ' ಎಂದು ನ್ಯಾಯಾಲಯಕ್ಕೆ ತಿಳಿಸಿದ ನಂತರ ಅವರ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿತು.
ಸರ್ಕಾರದ ಪರ ವಾದ ಮಂಡಿಸಿದ ವಿಜಯ್ ನಾರಾಯಣ್, ಆಕ್ಷೇಪಾರ್ಹ ಸಂಬಂಧ 'ಉದಯನಿಧಿ ಸ್ಟಾಲಿನ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ವಿಚಾರಣೆ ಮುಗಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಉದ್ದೇಶ ನಮಗಿಲ್ಲ. ವಿಚಾರಣೆ ಬಳಿಕ ಪೊಲೀಸ್ ಠಾಣೆಯಲ್ಲೇ ಜಾಮೀನು (Station Bail) ನೀಡಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಇದಲ್ಲದೆ ಮಹಿಳೆಯ ಗುರಿಯಾಗಿಸಿ ಹೇಳಿಕೆ ನೀಡಿರುವುದರ ಹಿನ್ನೆಲೆ ಮಹಿಳೆಯ ಹಿತದೃಷ್ಟಿಯಿಂದ ಬಂಧಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ತಾಂಜಾವೂರು(ಪೂರ್ವ) ಪೊಲೀಸರು ಚೆನ್ನೈ ನೀಲಂಕರೈಯಲ್ಲಿರುವ ಉದಯನಿಧಿ ಸ್ಟಾಲಿನ್ ನಿವಾಸಕ್ಕೆ ತೆರಳಿ ಅವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಅಲ್ಲಿಂದ ವಿಚಾರಣೆಗಾಗಿ ತಂಜಾವೂರಿಗೆ ಕರೆದೊಯ್ದಿದ್ದರು. ಕಾವೇರಿ ಹೋರಾಟದ ವೇಳೆ ಉದಯನಿಧಿ ಭಾಷಣ ಮಾಡುವಾಗ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಪ್ರಕರಣ ದಾಖಲಿಸಲಾಗಿತ್ತು.
ಉದಯನಿಧಿ ಸ್ಟಾಲಿನ್ ವಿರುದ್ಧ ದಾಖಲಾದ ಪ್ರಕರಣಗಳು
ಉದಯನಿಧಿ ಸ್ಟಾಲಿನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ಗಳಾದ 61, 79, 192, 196, 296(ಬಿ), 351(2), 352, ತಮಿಳುನಾಡು ಮಹಿಳೆಯರ ಕಿರುಕುಳ ತಡೆ ಕಾಯ್ದೆಯ ಸೆಕ್ಷನ್ 4 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉದಯನಿಧಿ ಸ್ಟಾಲಿನ್, 'ನಟಿ ತ್ರಿಷಾ ವಿರುದ್ಧತಾವು ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ಭಾಷಣದ ವಿಡಿಯೊವನ್ನು 'ಕಟ್, ಕಾಪಿ, ಪೇಸ್ಟ್' ಮಾಡಿ ಸುಳ್ಳು ಕತೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.
ನಾನು ಹೇಳದ ಮಾತನ್ನು ಹೇಳಿದಂತೆ ತೋರಿಸಲು ಎಡಿಟೆಡ್ ವಿಡಿಯೊಗಳನ್ನು ಬಳಸಿದ್ದಾರೆ. ಇಂತಹ ಕ್ರಮಗಳಿಂದ ನಾನು ಹೆದರುವ ವ್ಯಕ್ತಿಯಲ್ಲ. ಕಾನೂನು ಹೋರಾಟದ ಮೂಲಕ ಇದನ್ನು ಎದುರಿಸುತ್ತೇನೆ. ತಮ್ಮ ವಿರುದ್ಧದ ಪೊಲೀಸ್ ಕ್ರಮವನ್ನು ಹಾಸ್ಯಾಸ್ಪದ ಎಂದು ಟೀಕಿಸಿದರು.
ಕಾವೇರಿ ಹೋರಾಟದ ವೇಳೆ ಉದಯನಿಧಿ ಸ್ಟಾಲಿನ್ ಭಾಷಣ ಮಾಡುವಾಗ, ಕೆಲವರು 'ತ್ರಿಷಾ, ತ್ರಿಷಾ' ಕೂಗಲಾರಂಭಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ, 'ನೀರು ಬೇರೆ ಎಲ್ಲಿಗೆ ತಲುಪುತ್ತದೋ ಗೊತ್ತಿಲ್ಲ, ಆದರೆ ಅಲ್ಲಿ ಮಾತ್ರ ತಲುಪಬೇಕು' ಎಂದು ಹೇಳಿದ್ದರು. ಬಳಿಕ ಅವರು ತಾವು ಉಲ್ಲೇಖಿಸಿದ್ದು ಕಾವೇರಿ ನೀರಿನ ಬಗ್ಗೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಅವರ ಹೇಳಿಕೆ ವ್ಯಾಪಕವಾಗಿ ವೈರಲ್ ಆಯ್ತು. ನಟಿ ತ್ರಿಷಾ ಅವರನ್ನು ಉದ್ದೇಶಿಸಿ, ಅವಮಾನಿಸಲೆಂದೇ ಆ ಹೇಳಿಕೆ ನೀಡಿದ್ದಾರೆ ಎಂದು ತಮಿಳಗ ವೆಟ್ರಿ ಕಳಗಂ (TVK) ಮಹಿಳಾ ಘಟಕ ತಂಜಾವೂರು ಪೊಲೀಸರಿಗೆ ದೂರು ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ