
ಭೋಪಾಲ್ (ಮೇ.16): ತನ್ನ ಪುಟ್ಟ ಮಗುವನ್ನು ಉಳಿಸಿಕೊಳ್ಳುವ ಹತಾಶ ಪ್ರಯತ್ನದ ಭಾಗವಾಗಿ ಕಾರ್ಮಿಕನೊಬ್ಬ ತನ್ನ ಒಂದು ವರ್ಷದ ಮಗುವನ್ನು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭಾಗವಹಿಸಿದ್ದ ಸಾರ್ವಜನಿಕ ಸಮಾರಂಭದ ವೇದಿಕೆಯ ಮೇಲೆ ಎಸೆದಿದ್ದಾರೆ. ಮಧ್ಯಪ್ರದೇಶದ ಸಾಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ, ಮಗುವಿನ ಜೀವವನ್ನು ಉಳಿಸುವ ಕೊನೆಯ ಪ್ರಯತ್ನವಾಗಿ ದಂಪತಿಗಳು 1 ವರ್ಷದ ಹಸುಗೂಸನ್ನು ವೇದಿಕೆಯ ಮೇಲೆ ಎಸೆದಿದ್ದಾರೆ. ಇದರ ಬೆನ್ನಲ್ಲಿಯೇ ಇಡೀ ಸಮಾರಂಭದಲ್ಲಿ ಕೊಂಚ ಗಲಿಬಿಲಿಯ ಕ್ಷಣ ನಿರ್ಮಾಣವಾಗಿತ್ತು. ವೃತ್ತಿಯಲ್ಲಿ ಕಾರ್ಮಿಕನಾಗಿರುವ ಮುಖೇಶ್ ಪಟೇಲ್, ತನ್ನ ಅಸಹಾಯಕತೆ ಸಿಎಂ ಗಮನಕ್ಕೆ ತರುವ ಇರಾದೆಯಲ್ಲಿದ್ದರು. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಟೇಲ್ ಅವರ ಈ ಕ್ರಮ ಸಾಕಷ್ಟು ಸಂಚಲನ ಮೂಡಿಸಿದ್ದು, ಸಿಎಂ ಚೌಹಾಣ್ ಅವರ ಗಮನವನ್ನೂ ಸೆಳೆದಿತ್ತು. ಜನರ ಗುಂಪಿನ ನಡುವೆಒಂದು ವರ್ಷದ ಮಗು ವೇದಿಕೆಯಿಂದ ಒಂದು ಅಡಿ ದೂರದಲ್ಲಿ ಬಿದ್ದಿದ್ದರು, ಕೂಡಲೇ ಕಾರ್ಯಕ್ರಮದಲ್ಲಿದ್ದ ಭದ್ರತಾ ಸಿಬ್ಬಂದಿ ಆ ಮಗುವನ್ನು ಎತ್ತಿಕೊಂಡು, ಅದನ್ನು ತಾಯಿಗೆ ಒಪ್ಪಿಸಿದ್ದಾರೆ. ಆದರೆ, ಇದನ್ನು ಗಮನಿಸಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮುಖೇಶ್ ಪಟೇಲ್ ಅವರ ಸಮಸ್ಯೆಯನ್ನು ತಕ್ಷಣವೇ ಆಲಿಸಿದ್ದಾರೆ.
ಸಿಎಂ ಸೂಚನೆಯ ಮೇಲೆ ಮುಖೇಶ್ ಪಟೇಲ್ ಅವರ ಬಳಿ ಬಂದ ಅಧಿಕಾರಿಗಳು ಕೃತ್ಯಕ್ಕೆ ಕಾರಣವೇನು ಎಂದು ಕೇಳಿದ್ದಾರೆ. ನನ್ನ ಮಗನಿಗೆ ಹೃದಯಲ್ಲಿ ರಂಧ್ರವಿದೆ ಎಂದು ಹೇಳಿದ್ದಾರೆ. ಈತನಿಗೆ ತುರ್ತಾಗಿ ಚಿಕಿತ್ಸೆ ನೀಡಬೇಕಿದೆ. ಶಸ್ತ್ರಚಿಕಿತ್ಸೆ ಆಗಬೇಕಿದೆ. ಆದರೆ. ಅಷ್ಟೆಲ್ಲಾ ಹಣ ನನ್ನ ಬಳಿ ಇಲ್ಲ ಎಂದು ತಿಳಿಸಿದ್ದರು. ತಕ್ಷಣವೇ ಈ ಮಾಹಿತಿಯನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತಲುಪಿಸಲಾಗಿತ್ತು. ಈ ವೇಳೆ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯವನ್ನೂ ಮಾಡೋದಾಗಿ ಅವರು ಭರವಸೆ ನೀಡಿದ್ದಾರೆ.
ಅಲ್ಲಯೇ ಇದ್ದ ಜಿಲ್ಲಾಧಿಕಾರಿ ದೀಪಕ್ ಆರ್ಯ ಅವರಿಗೆ ಸೂಚನೆ ನೀಡಿದ ಸಿಎಂ, ಮುಖೇಶ್ ಪಟೇಲ್ ಅವರ ಕೇಸ್ಅನ್ನು ಮುಖ್ಯಮಂತ್ರಿ ಕಚೇರಿಗೆ ಕಳಿಸುವಂತೆ ತಿಳಿಸಿದ್ದಾರೆ. ಮುಖೇಶ್ ಪಟೇಲ್ ಸಾಗರದ ಕೆಸ್ಲಿ ತಹಸಿಲ್ನ ಸಹಜ್ಪುರ ಗ್ರಾಮದ ನಿವಾಸಿಯಾಗಿದ್ದಾರೆ. ಅವರು ತಮ್ಮ ಪತ್ನಿ ನೇಹಾ ಮತ್ತು ಅವರ ಒಂದು ವರ್ಷದ ಮಗನೊಂದಿಗೆ ವಾಸಿಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮುಖೇಶ್, 3 ತಿಂಗಳ ಮಗುವಿದ್ದಾಗ ವೈದ್ಯರು ತಮ್ಮ ಮಗನ ಹೃದಯದಲ್ಲಿ ರಂಧ್ರವನ್ನು ಪತ್ತೆ ಮಾಡಿದ್ದಾರೆ. ವೆಚ್ಚ ಭರಿಸಲು ಸಾಧ್ಯವಾಗದಿದ್ದರೂ ಮಗನ ಚಿಕಿತ್ಸೆಗಾಗಿ ಇಲ್ಲಿಯವರೆಗೆ 4 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
"ನಮ್ಮ ಮಗುವಿಗೆ ಈಗ ಒಂದು ವರ್ಷ, ವೈದ್ಯರು ನಮಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಹೇಳಿದ್ದಾರೆ. ಇದಕ್ಕಾಗಿ ಮತ್ತೆ 3.50 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟು ದೊಡ್ಡ ಮೊತ್ತವನ್ನು ನೀಡಲು ನಮಗೆ ಸಾಧ್ಯವಿಲ್ಲ. ನಮ್ಮ ಮಗುವಿಗೆ ಚಿಕಿತ್ಸೆ ನೀಡಬೇಕೆಂದು ನಾವು ಬಯಸುತ್ತೇವೆ. ಆದರೆ ಯಾರೂ ನಮಗೆ ಸಹಾಯ ಮಾಡುತ್ತಿಲ್ಲ," ಎಂದು ಮುಖೇಶ್ ಹೇಳಿದರು, ಸಿಎಂ ಚೌಹಾಣ್ ಅವರಿಂದ ಸಹಾಯವನ್ನು ಪಡೆಯುವ ಭರವಸೆಯಲ್ಲಿ ನಾನು ಇಲ್ಲಿಗೆ ಬಂದಿದ್ದೆ ಎಂದು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 1.11 ಕೋಟಿ ದಾನ ಮಾಡಿದ್ದ ಸಾಧು ಅಪಘಾತದದಲ್ಲಿ ನಿಧನ!
"ಆದರೆ ನಮಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಅವಕಾಶ ಸಹ ನೀಡಲಿಲ್ಲ, ಅವರನ್ನು ತಲುಪಲು ಪೊಲೀಸರು ನಮಗೆ ಸಹಾಯ ಮಾಡಲಿಲ್ಲ, ಆದರೆ ನನ್ನ ಮಾತು ಕೇಳಬೇಕು, ಆದ್ದರಿಂದ ನಾನು ನನ್ನ ಮಗುವನ್ನು ವೇದಿಕೆಯ ಮೇಲೆ ಎಸೆದಿದ್ದೆ. ಈಗ ಅಧಿಕಾರಿಗಳು ವಿಷಯದ ಬಗ್ಗೆ ಗಮನ ಹರಿಸಿದ್ದಾರೆ. ಮತ್ತು ನಾಳೆ ಸಿಎಂ ಅವರನ್ನು ಭೇಟಿಯಾಗಲು ಸೂಚಿಸಿದ್ದಾರೆ' ಎಂದು ಮುಖೇಶ್ ಹೇಳಿದ್ದಾರೆ. ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಸೋಲನ್ನು ಎದುರಿಸಿದ ಒಂದು ದಿನದ ನಂತರ ಚೌಹಾಣ್ ಅವರು ರಾಜ್ಯದಲ್ಲಿ ಕುಶಾವಾಹ ಮತ್ತು ಜಾಟ್ ಸಮುದಾಯಗಳ ಸಭೆಯನ್ನು ಉದ್ದೇಶಿಸಿ ದೊಡ್ಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಭೋಪಾಲ್-ದೆಹಲಿ ನಡುವೆ ದೇಶದ 11ನೇ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಮೋದಿ ಚಾಲನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ