ಡೀಸೆಲ್ ಖಾಲಿಯಾಗಿ ಮಾರ್ಗ ಮಧ್ಯೆ ನಿಂತ ಆಂಬುಲೆನ್ಸ್‌: ರಸ್ತೆ ಬದಿ ಮಗುವಿಗೆ ಜನ್ಮ ನೀಡಿದ ತಾಯಿ

By Anusha KbFirst Published Oct 30, 2022, 12:28 PM IST
Highlights

ನಡುರಸ್ತೆಯಲ್ಲಿ ಆಂಬುಲೆನ್ಸ್ ಕೈ ಕೊಟ್ಟು ಗರ್ಭಿಣಿ ಮಹಿಳೆ ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಪನ್ನಾ: ದೇಶ ಅಭಿವೃದ್ಧಿಯ ಜೊತೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ ದೇಶದ ಹಲವೆಡೆ ಆರೋಗ್ಯ ವ್ಯವಸ್ಥೆ ಮಾತ್ರ ನಿಕೃಷ್ಟ ಸ್ಥಿತಿಯಲ್ಲಿದೆ. ಸಂಚಾರ ವ್ಯವಸ್ಥೆ ಸರಿ ಇರುವ ಜಾಗದಲ್ಲಿ ಆಂಬುಲೆನ್ಸ್ ಇರುವುದಿಲ್ಲ. ಆಂಬುಲೆನ್ಸ್ ಇದ್ದಲ್ಲಿ ರಸ್ತೆ ಇರುವುದಿಲ್ಲ. ಆಂಬುಲೆನ್ಸ್ ಇದ್ದರೂ ಅದರ ನಿರ್ವಹಣೆ ಇರುವುದಿಲ್ಲ. ಪರಿಣಾಮ ನಡುರಸ್ತೆಯಲ್ಲಿ ಕೈಕೊಟ್ಟು ಸಂಕಷ್ಟಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗೆ ನಡುರಸ್ತೆಯಲ್ಲಿ ಆಂಬುಲೆನ್ಸ್ ಕೈ ಕೊಟ್ಟು ಸಂಕಷ್ಟ ಸ್ಥಿತಿ ನಿರ್ಮಾಣವಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಗರ್ಭಿಣಿಯೋರ್ವರನ್ನು ಹೆರಿಗೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸೊಂದು ಮಾರ್ಗ ಮಧ್ಯೆಯೇ ಡೀಸೆಲ್ ಖಾಲಿಯಾಗಿ ನಿಂತ ಪರಿಣಾಮ ಮಹಿಳೆ ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ನಡೆದಿದೆ. ಪನ್ನಾ(Panna District) ಜಿಲ್ಲೆಯ ಶಹ್ನಾಗರ್‌ನ (Shahnagar) ಬಾನುಲಿ (Banauli) ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆಂಬುಲೆನ್ಸ್‌ನಲ್ಲಿದ್ದ ಆರೋಗ್ಯ ಕಾರ್ಯಕರ್ತರು ಮಹಿಳೆ ಮಗುವನ್ನು ಹೆರಲು ಸಹಾಯ ಮಾಡಿದ್ದಾರೆ. ಕಲ್ಲು ಮಣ್ಣುಗಳಿಂದ ಕೂಡಿದ ರಸ್ತೆಯಲ್ಲಿ ಬಟ್ಟೆ ಹಾಸಿ ಗರ್ಭಿಣಿ ಮಗು ಹೆರಲು ನೆರವಾಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಆಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media)  ವೈರಲ್ ಆಗಿದ್ದು, ಘಟನೆ ಹಾಗೂ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

A woman had to deliver her baby on the roadside after the ambulance taking her to the nearest town hospital ran out of diesel, in Panna! pic.twitter.com/alWbRr5mEu

— Anurag Dwary (@Anurag_Dwary)

ಬುಡಕಟ್ಟು (Tribal Community) ಸಮುದಾಯಕ್ಕೆ ಸೇರಿದ ರೇಷ್ಮಾ ಎಂಬ ಮಹಿಳೆಯನ್ನು 108 ಆಂಬುಲೆನ್ಸ್‌ನಲ್ಲಿ(Ambulance) ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ಅವಾಂತರ ಸಂಭವಿಸಿದೆ. ಸರ್ಕಾರಿ ಯೋಜನೆಯ ಭಾಗವಾಗಿ ಈ ಆಂಬುಲೆನ್ಸ್‌ ಒಪ್ಪಂದದ ಮೇಲೆ ಶಾಹನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ದೇಶದ ಕೆಲ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆ ಎಷ್ಟೊಂದು ಕೆಟ್ಟ ಸ್ಥಿತಿಯಲ್ಲಿ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 

ಆಂಬುಲೆನ್ಸ್‌ ಇಲ್ಲದೆ 2 ವರ್ಷದ ಮಗುವಿನ ಶವ ಹೊತ್ತೊಯ್ದ 10 ವರ್ಷದ ಸಹೋದರ

ಕೆಲ ದಿನಗಳ ಹಿಂದೆ ಆಂಬುಲೆನ್ಸ್ ಸಿಗದ ಹಿನ್ನೆಲೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಜೆಸಿಬಿಯಲ್ಲಿ (JCB) ಆಸ್ಪತ್ರೆಗೆ ಸೇರಿಸಿದ ಘಟನೆ ಮಧ್ಯಪ್ರದೇಶದ ಕಾಂತಿ ಜಿಲ್ಲೆಯಲ್ಲಿ ನಡೆದಿತ್ತು. ಈ ಘಟನೆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಜೆಸಿಬಿ ಮಾಲೀಕ ಅಪಘಾತ ಸಂತ್ರಸ್ಥನನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಬೇರೆ ಊರಿನಿಂದ ಆಂಬುಲೆನ್ಸ್‌ ಬರಬೇಕಾಗಿದ್ದರಿಂದ ಹೆಚ್ಚು ಸಮಯ ಹಿಡಿಯುತ್ತದೆ ಎಂಬ ಕಾರಣಕ್ಕೆ ಜೆಸಿಬಿಯಲ್ಲೇ ಕರೆದೊಯ್ಯುವ ನಿರ್ಧಾರ ಮಾಡಿದ್ದಾರೆ. 

ಆಂಬುಲೆನ್ಸ್‌ಗಾಗಿ ತಮ್ಮನ ಶವದೊಂದಿಗೆ ಗಂಟೆಗಟ್ಟಲೇ ರಸ್ತೆ ಬದಿ ಕುಳಿತ 8 ವರ್ಷದ ಬಾಲಕ

ಸ್ಥಳೀಯ ಜನಪದ್‌ ಪಂಚಾಯತ್‌ನ ಸದಸ್ಯ ಮತ್ತು ಜೆಸಿಬಿಯ ಮಾಲೀಕ ಪುಷ್ಪೇಂದ್ರ ವಿಶ್ವಕರ್ಮ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ಜೊತೆ ಮಾತನಾಡಿದ್ದು, 'ಅಪಘಾತಕ್ಕೊಳಗಾದ ವ್ಯಕ್ತಿಯ ಕಾಲು ಮುರಿದಿತ್ತು. ಆಂಬುಲೆನ್ಸ್‌ ಸೇವೆ ಲಭ್ಯವಾಗಲಿಲ್ಲ. ಮೂರ್ನಾಲ್ಕು ಆಟೋ ಚಾಲಕರು ಸಹಾಯ ಮಾಡಲು ಹಿಂದೇಟು ಹಾಕಿದರು. ಸರಿಯಾದ ಸಮಯಕ್ಕೆ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ನನ್ನ ಜೆಸಿಬಿಯಲ್ಲದೇ ಬೇರಾವ ಸವಲತ್ತೂ ಇರಲಿಲ್ಲ. ಅದಕ್ಕಾಗಿಯೇ ಜೆಸಿಬಿಯಲ್ಲಿ ಮಲಗಿಸಿಕೊಂಡು ಕರೆದೊಯ್ದೆ' ಎಂದು ಹೇಳಿದ್ದರು. 

click me!