ಆತ್ಮಾಹುತಿ ದಾಳಿಕೋರರ ಸಜ್ಜುಗೊಳಿಸುತ್ತಿದ್ದ ಅಮೃತ್‌ಪಾಲ್‌: ಗುರುದ್ವಾರಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹ

By Kannadaprabha NewsFirst Published Mar 20, 2023, 9:41 AM IST
Highlights

'ಭಿಂದ್ರನ್‌ವಾಲೆ 2.0 ಎಂದೇ ಕುಖ್ಯಾತಿ ಪಡೆದಿರುವ ಪಂಜಾಬ್‌ನ ಖಲಿಸ್ತಾನಿ ತೀವ್ರವಾದಿ ಅಮೃತ್‌ಪಾಲ್‌ ಸಿಂಗ್‌, ಆತ್ಮಾಹುತಿ ದಾಳಿ ಪಡೆಯೊಂದನ್ನು ಸಜ್ಜುಗೊಳಿಸುತ್ತಿದ್ದ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಚಂಡೀಗಢ: 'ಭಿಂದ್ರನ್‌ವಾಲೆ 2.0 ಎಂದೇ ಕುಖ್ಯಾತಿ ಪಡೆದಿರುವ ಪಂಜಾಬ್‌ನ ಖಲಿಸ್ತಾನಿ ತೀವ್ರವಾದಿ ಅಮೃತ್‌ಪಾಲ್‌ ಸಿಂಗ್‌, ಆತ್ಮಾಹುತಿ ದಾಳಿ ಪಡೆಯೊಂದನ್ನು ಸಜ್ಜುಗೊಳಿಸುತ್ತಿದ್ದ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ವಿವಿಧ ಮೂಲಗಳನ್ನು ಉಲ್ಲೇಖಿಸಿ ಗುಪ್ತಚರ ಇಲಾಖೆಗಳು ಸಿದ್ಧಪಡಿಸಿರುವ ರಹಸ್ಯ ವರದಿ ಅನ್ವಯ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸೂಚನೆ ಅನ್ವಯ ಯುವಕರನ್ನು ಪ್ರತ್ಯೇಕ ಖಲಿಸ್ತಾನ ದೇಶ ರಚನೆ ಹೆಸರಲ್ಲಿ ತಲೆ ಕೆಡಿಸುತ್ತಿದ್ದ ಅಮೃತ್‌, ಅವರನ್ನು ಆತ್ಮಾಹುತಿ ದಾಳಿಗೆ ಸಜ್ಜು ಮಾಡುತ್ತಿದ್ದ. ಜೊತೆಗೆ ಮಾದಕ ವಸ್ತು ನಿಗ್ರಹ ಕೇಂದ್ರ ಮತ್ತು ಗುರುದ್ವಾರಗಳಲ್ಲಿ ಬಳಸಿಕೊಂಡು ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹ ಮಾಡುತ್ತಿದ್ದ ಎಂಬುದು ಪತ್ತೆಯಾಗಿದೆ. ಇತ್ತೀಚೆಗೆ ಅಮೃತಸರ ಸೇರಿ ಹಲವೆಡೆ ನಡೆಸಿದ ದಾಳಿಯಲ್ಲಿ ಈ ವಿಷಯಗಳಿಗೆ ಪೂರಕವಾದ ಅಂಶಗಳು ಮತ್ತು ಶಸ್ತ್ರಾಸ್ತ್ರ ಪತ್ತೆಯಾಗಿದೆ.

ಪರಾರಿಯಾದ ಖಲಿಸ್ತಾನಿ ನಾಯಕ ಅಮೃತ್‌ಪಾಲ್‌ ಸಿಂಗ್: ಪಂಜಾಬ್‌ ಹೈ ಅಲರ್ಟ್‌..!

ಈ ನಡುವೆ ಶನಿವಾರ ಪೊಲೀಸರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದ ಅಮೃತ್‌ಪಾಲ್‌ (Amritpal) ಇನ್ನೂ ಸಿಕ್ಕಿಲ್ಲ. ಆತನ ಪತ್ತೆಗೆ ಭಾನುವಾರವೂ ಪಂಜಾಬ್‌ ಪೊಲೀಸರು (Punjab Police) ತೀವ್ರ ಯತ್ನ ಮುಂದುವರಿಸಿದ್ದಾರೆ. ಮತ್ತೊಂದೆಡೆ ಆತನನ್ನು ದೇಶಭ್ರಷ್ಟ (ಪರಾರಿ ಆದವ) ಎಂದು ಪೊಲೀಸರು ಘೋಷಿಸಿದ್ದಾರೆ. ಇನ್ನು ಅಮೃತ್‌ಪಾಲ್‌ನ 4 ಸಹಚರರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಅಸ್ಸಾಂನ (Assam) ದಿಬ್ರುಗಢ (Dibrugarh)ಜೈಲಿನಲ್ಲಿ ಬಂಧಿಸಿ ಇರಿಸಿದ್ದಾರೆ. ಇನ್ನೊಂದು ಕಡೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ಪಂಜಾಬ್‌ ಸರ್ಕಾರ ವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪಂಜಾಬ್‌ನಲ್ಲಿ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರುವ ಕಾರಣ ವದಂತಿ ನಿಗ್ರಹಕ್ಕೆ ಮೊಬೈಲ್‌ ಇಂಟರ್ನೆಟ್‌ ಅನ್ನು 2ನೇ ದಿನವಾದ ಭಾನುವಾರವೂ ಸ್ತಬ್ಧಗೊಳಿಸಲಾಗಿತ್ತು. ಪಾಲ್‌ನ ತವರೂರು ಅಮೃತಸರದ ಜಲ್ಲುಪುರದಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ. ಈತ ವಾರಿಸ್‌ ಪಂಜಾಬ್‌ ದಿ ಸಂಘಟನೆ ನಡೆಸುತ್ತಿದ್ದ. 

ಗನ್‌, ಖಡ್ಗ, ಆಯುಧ ಹಿಡಿದು ಖಲಿಸ್ತಾನಿ ಬೆಂಬಲಿಗರ ದಾಂಧಲೆ: ಅಮೃತಸರದಲ್ಲಿ ಠಾಣೆ ಮೇಲೆ ದಾಳಿ

ವಾಹನ ವಶ: ಈ ನಡುವೆ, ಪಾಲ್‌ನ 1 ಎಸ್‌ಯುವಿ ಸೇರಿದಂತೆ 2 ವಾಹನಗಳನ್ನು ಭಾನುವಾರ ವಶಪಡಿಸಿಕೊಳ್ಳಲಾಗಿದೆ. ಇವನ್ನು ಆತ ಜಲಂಧರ್‌ ಸನಿಹದ ಸಲೇಮಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿ ಆಗಿದ್ದ. ಇದರಲ್ಲಿ 9 ದೇಶಿ ನಿರ್ಮಿತ ಗನ್‌, 7 ರೈಫಲ್‌, 373 ಸಜೀವ ಮದ್ದುಗುಂಡು ವಶಪಡಿಸಿಕೊಳ್ಳಲಾಗಿದೆ. ಪಾಲ್‌ ಪಾಕ್‌ ಏಜೆಂಟ್‌ನಂತೆ ಪಂಜಾಬಲ್ಲಿ ಕೆಲಸ ಮಾಡಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ.

click me!