
ಕಾಸರಗೋಡು (ಏ.9): ಕೇರಳದ ಉದುಮಾದಲ್ಲಿ ಮತದಾನದ ವೇಳೆ ಗಂಭೀರ ಎನ್ನಬಹುದಾದ ಚುನಾವಣಾ ನಿಯಮ ಉಲ್ಲಂಘನೆ ಬೆಳಕಿಗೆ ಬಂದಿದೆ. ಕ್ಯಾಮೆರಾ ಅಳವಡಿಸಲಾದ ವಿಶಿಷ್ಟ ಕನ್ನಡಕವನ್ನು ಧರಿಸಿ ಮತದಾನ ಕೇಂದ್ರಕ್ಕೆ ಬಂದ ಯುಡಿಎಫ್ (UDF) ಮುಖ್ಯ ಚುನಾವಣಾ ಏಜೆಂಟ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಯು ಎಲ್ಡಿಎಫ್ (LDF) ಕಾರ್ಯಕರ್ತರ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದು, ಸ್ಥಳೀಯವಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಉದುಮಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಕೆ. ನೀಲಕಂಠನ್ ಅವರ ಮುಖ್ಯ ಚುನಾವಣಾ ಏಜೆಂಟ್ ಆಗಿರುವ ಬಿ.ಎಂ. ಜಮಾಲ್ ಎಂಬುವವರು ಕ್ಯಾಮೆರಾ ಹೊಂದಿರುವ ಕನ್ನಡಕವನ್ನು ಧರಿಸಿ ಬೂತ್ಗೆ ಆಗಮಿಸಿದ್ದರು. ಬೇಕಲ ಇಸ್ಲಾಮಿಯಾ ಎಎಲ್ಪಿ ಶಾಲೆಯ 165ನೇ ಸಂಖ್ಯೆಯ ಮತದಾನ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಜಮಾಲ್ ಧರಿಸಿದ್ದ ಕನ್ನಡಕದಲ್ಲಿ ಸಣ್ಣ ಕ್ಯಾಮೆರಾ ಇರುವುದನ್ನು ಗಮನಿಸಿದ ಎಲ್ಡಿಎಫ್ ಕಾರ್ಯಕರ್ತರು ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪ್ರಿಸೈಡಿಂಗ್ ಆಫೀಸರ್ ಮತ್ತು ಪೊಲೀಸರು ಜಮಾಲ್ ಅವರ ಕನ್ನಡಕವನ್ನು ವಶಪಡಿಸಿಕೊಂಡರು. ಈ ಬಗ್ಗೆ ಸ್ಪಷ್ಟನೆ ನೀಡಿದ ಜಮಾಲ್, "ಇದು ನಾನು ಸಾಮಾನ್ಯವಾಗಿ ಬಳಸುವ ಕನ್ನಡಕ. ಇದರಲ್ಲಿ ಕ್ಯಾಮೆರಾ ಇರುವುದು ನನ್ನ ಗಮನಕ್ಕೆ ಬಂದಿರಲಿಲ್ಲ" ಎಂದು ವಿಚಿತ್ರವಾಗಿ ಸಮರ್ಥಿಸಿಕೊಂಡಿದ್ದಾರೆ.
ಬೂತ್ನಲ್ಲಿ ಸ್ವಲ್ಪ ಸಮಯದವರೆಗೆ ಸಂಘರ್ಷದ ವಾತಾವರಣ ಉಂಟಾಗಿತ್ತಾದರೂ, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಮತದಾನದ ಕೇಂದ್ರದೊಳಗೆ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಕ್ಯಾಮೆರಾಗಳನ್ನು ಕೊಂಡೊಯ್ಯುವುದು ಚುನಾವಣಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ, ಪೊಲೀಸರು ಕನ್ನಡಕವನ್ನು ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ವರದಿ ನೀಡಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ