
ಕರೆಂಟ್ ಬಿಲ್ ಪಾವತಿಸಿಲ್ಲ ಅಂತ ಮನೆಯ ಪವರ್ ಕಟ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೋರ್ವ ಟ್ರಾನ್ಸ್ಫಾರ್ಮರ್ನಿಂದಲೇ ಫ್ಯೂಸ್ ತೆಗೆದು ಇಡೀ ಏರಿಯಾಗೆ ಕರೆಂಟ್ ಇಲ್ಲದಂತೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.
ಹೌದು ಕರೆಂಟ್ ಬಿಲ್ ಪಾವತಿಸಿಲ್ಲ ಎಂದು ಕೇರಳದ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ಮನೆಯೊಂದಕ್ಕೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಇದರಿಂದ ಸಿಟ್ಟಿಗೆದ್ದ ಯುವಕ ಆ ಪ್ರದೇಶದ ಸುಮಾರು 7 ಟ್ರಾನ್ಸ್ಫಾರ್ಮರ್ಗಳಿಂದಲೇ ಫ್ಯೂಸ್ ತೆಗೆದು ಇಡೀ ಊರನ್ನೇ ಕತ್ತಲಿನಲ್ಲಿ ಇಟ್ಟಂತಹ ಘಟನೆ ನಡೆದಿದೆ. ಕೇರಳದ ಕಾಸರಗೋಡಿನಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಸಂಜೆ 6.45ರ ಸುಮಾರಿಗೆ ಘಟನೆ ನಡೆದಿದೆ. ಯುವಕನ ಕೃತ್ಯದಿಂದಾಗಿ ಇಡೀ ಕಾಸರಗೋಡು ನಗರದ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕತ್ತಲೆ ಆವರಿಸಿದೆ.
ಸುತ್ತಮುತ್ತಲ ಪ್ರದೇಶದ 7 ಟ್ರಾನ್ಸ್ಫಾರ್ಮರ್ಗಳ ಫ್ಯೂಸ್ ತೆಗೆದ ಯುವಕ
ಘಟನೆಯ ಬಳಿಕ ಸ್ಥಳೀಯ ವಿದ್ಯುತ್ ಪ್ರಸರಣ ನಿಗಮಕ್ಕೆ ಹಲವು ದೂರುಗಳು ಬಂದಿವೆ. ಆದರೆ ನಾವು ಲೈನ್ಗಳನ್ನು ತಪಾಸಣೆ ಮಾಡಿದಾಗ ಯಾವುದೇ ಲೈನ್ಗಳಲ್ಲಿ ಸಮಸ್ಯೆ ಕಾಣಲಿಲ್ಲ, ನಂತರ ಟ್ರಾನ್ಸ್ಫಾರ್ಮರ್ಗಳ ತಪಾಸಣೆ ನಡೆಸಿದಾಗ ಅಲ್ಲಿ ಟ್ರಾನ್ಸ್ಫಾರ್ಮರ್ಗಳಿಂದ ಫ್ಯೂಸ್ ತೆಗೆದಿರುವುದು ಬೆಳಕಿಗೆ ಬಂದಿದೆ. ನಂತರ ಆ ಪ್ರದೇಶದಲ್ಲಿ ಹುಡುಕಟ ನಡೆಸಿದ್ದಾಗ ಟ್ರಾನ್ಸ್ಫಾರ್ಮರ್ಗಳ ಕೆಳಗೆಯೇ ಫ್ಯೂಸ್ಗಳು ಬಿದ್ದಿರುವುದು ಕಂಡು ಬಂದಿದೆ. ಅವುಗಳಲ್ಲಿ ಕೆಲವು ಫ್ಯೂಸ್ಗಳು ಹಾನಿಗೊಳಗಾಗಿದ್ದವು. ನಂತರ ಬೇರೆ ಫ್ಯೂಸ್ಗಳನ್ನು ಬಳಸಿ ರಾತ್ರಿ 8 ಗಂಟೆ ಸುಮಾರಿಗೆ ಕರೆಂಟ್ ಸಮಸ್ಯೆಯನ್ನು ಸರಿಪಡಿಸಿದೆವು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ ಸುತ್ತಮುತ್ತಲಿನ ಜನರಲ್ಲಿ ಕೇಳಿದಾಗ ವ್ಯಕ್ತಿಯೋರ್ವ ಟ್ರಾನ್ಸ್ಫಾರ್ಮರ್ನಿಂದ ಫ್ಯೂಸ್ ತೆಗೆದಿರುವುದನ್ನು ನೋಡಿದ್ದಾಗಿ ಹೇಳಿದ್ದಾರೆ. ಇದಾದ ನಂತರ ಅನುಮಾನದ ಮೇರೆಗೆ ನೆಲ್ಲಿಕುಳಿ ಪ್ರದೇಶದ ವ್ಯಕ್ತಿಯನ್ನು ಕರೆದು ವಿಚಾರಣೆಗೊಳಪಡಿಸಿದಾಗ ಆತನೇ ಕೃತ್ಯವೆಸಗಿರುವುದು ತಿಳಿದು ಬಂದಿದೆ.
ಇದೇ ವ್ಯಕ್ತಿ ಇದಕ್ಕೂ ಮೊದಲು ಸೆಕ್ಷನ್ ಕಚೇರಿಗೆ ಬಂದು ಜಗಳ ಮಾಡಿದ್ದ, ಕರೆಂಟ್ ಬಿಲ್ ಪಾವತಿಸದ ಹಿನ್ನೆಲೆ ಆತನ ಮನೆಯ ಪವರ್ ಕಟ್ ಮಾಡಿದ್ದಾಗ ಘಟನೆ ನಡೆದಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದರು. ನಂತರ ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.
ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಯುವಕ
ಪೊಲೀಸರ ಪ್ರಕಾರ ಈ ಕೃತ್ಯವೆಸಗಿದ ಯುವಕ ಮಾನಸಿಕ ಸಮಸ್ಯೆಯನ್ನು ಹೊಂದಿದ್ದಾನೆ. ಅವನು ತನ್ನ ವಯಸ್ಸಾದ ತಂದೆಯ ಜೊತೆ ವಾಸ ಮಾಡ್ತಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕೇರಳ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ದೂರು ನೀಡಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಹಲವು ಟ್ರಾನ್ಸ್ಫರ್ಮರ್ಗಳ ಫ್ಯೂಸ್ ತೆಗೆದಿದ್ದರಿಂದ ಅವುಗಳ ಸರಿ ಮಾಡುವುದಕ್ಕೆ ಬಹಳ ಸಮಯ ಹಿಡಿದಿದ್ದರಿಂದ ಘಟನೆ ನಡೆದಂದು ದೂರು ದಾಖಲು ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: 8 ಲಕ್ಷದ ಕಾರಲ್ಲಿ ಬಂದು 8 ರೂಪಾಯಿಯ ನ್ಯೂಸ್ ಪೇಪರ್ ಕದ್ದೊಯ್ದ ಕಳ್ಳ: ಸಿಸಿಟಿವಿ ವೀಡಿಯೋ ವೈರಲ್
ಇದನ್ನೂ ಓದಿ: 2 ತಿಂಗಳಿಂದ ಕಾಲೇಜು ಫೀಸು ಕಟ್ಟಿಲ್ಲ ಎಂದ ಕರೀಷ್ಮಾ ಕಪೂರ್ ಪುತ್ರಿಗೆ ದೆಹಲಿ ಕೋರ್ಟ್ ಹೇಳಿದ್ದೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ