CWRC Meeting: ಭಾರಿ ಮಳೆಗೆ ತಮಿಳುನಾಡು ಕೊಚ್ಚಿ ಹೋದ್ರೂ ಪರವಾಗಿಲ್ಲ, ನಮಗೆ 14 ಟಿಎಂಸಿ ಕಾವೇರಿ ನೀರು ಬೇಕು!

By Sathish Kumar KHFirst Published Dec 19, 2023, 3:25 PM IST
Highlights

ತಮಿಳುನಾಡು ಭಾರಿ ಮಳೆಯಿಂದ ಕೊಚ್ಚಿಕೊಂಡು ಹೋಗುತ್ತಿದ್ದರೂ ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ಕರ್ನಾಟಕದ ಕಾವೇರಿ ನದಿಯಿಂದ 14 ಟಿಎಂಸಿ ನೀರು ಬಿಡಬೇಕು ಎಂದು ತಮಿಳುನಾಡು ಆಗ್ರಹಿಸಿದೆ.

ನವದೆಹಲಿ (ಡಿ.19): ತಮಿಳುನಾಡಿನಲ್ಲಿ ಕಳೆದ 15 ದಿನಗಳಿಂದಲೂ ಈಶಾನ್ಯ ಮಾನ್ಸೂನ್ ಮಾರುತದಿಂದ ಭಾರಿ ಮಳೆಯಾಗುತ್ತಿದೆ. ಕಳೆದೆರಡು ದಿನಗಳಿಂದ ಪ್ರವಾಹವೇ ಸೃಷ್ಟಿಯಾಗಿದೆ. ಹೀಗಿದ್ದರೂ, ಸುಪ್ರೀಂ ಕೋರ್ಟ್‌ ಆದೇಶದಂತೆ ಕರ್ನಾಟಕದಿಂದ ತಮಿಳುನಾಡಿಗೆ ಬಾಕಿ 7 ಟಿಎಂಸಿ ಸೇರಿದಂತೆ ಒಟ್ಟಾರೆ 14 ಟಿಎಂಸಿ ಕಾವೇರಿ ನೀರನ್ನು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ಆಗ್ರಹ ಮಾಡಿದೆ.

ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆ ರಚನೆ ಮಾಡಲಾಗಿರುವ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ವತಿಯಿಂದ ಮಂಗಳವಾರ ಎರಡೂ ರಾಜ್ಯಗಳ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಲಾಗಿದೆ. ಈ ವೇಳೆ ತಮಿಳುನಾಡು ತಮಗೆ ಕರ್ನಾಟಕದಿಂದ 14 ಟಿಎಂಸಿ ನೀರು ಬಿಡಬೇಕು ಎಂದು ಆಗ್ರಹಿಸಿದೆ. ಆದರೆ, ಈಗ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ವಿವಿಧ ಪ್ರದೇಶಗಳು ಪ್ರವಾಹ ಪೀಡಿತವಾಗಿವೆ. ಆದರೂ ತಮಿಳುನಾಡಿಗೆ ಕಾವೇರಿ ನೀರು ಬಿಡಲೇಬೇಕು ಎಂದು ಆಗ್ರಹಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಮಳೆಗೆ ತಮಿಳುನಾಡು ತತ್ತರ: 4 ಜಿಲ್ಲೆಗಳಲ್ಲಿ ಭಾರಿ ಅನಾಹುತ; ಹಲವು ಪ್ರದೇಶ ಪೂರ್ಣ ಜಲಾವೃತ

  • CWRC ಮುಂದೆ ಕರ್ನಾಟಕದ ವಾದ ಮಂಡನೆ: 
  • 1) 18.12.2023 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು ಶೇ.52.84 ಇರುತ್ತದೆ.
  • 2) ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ಈಶಾನ್ಯ ಮಾನ್ಸೂನ್ ಋತುವಿನಲ್ಲಿ ಸಮತೋಲನ ಮಳೆಯನ್ನು ನಿರೀಕ್ಷಿಸಬಹುದು. ಆದ್ದರಿಂದ ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಮಣ್ಣಿನ ತೇವಾಂಶವನ್ನು ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶವು ಹೊಂದಿರುತ್ತದೆ.
  • 3) ತಮಿಳುನಾಡಿನ ಕುರುವಾಯಿ ಬೆಳೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಟಾವಾಗಿದ್ದು, ಸಾಂಬಾ ಬೆಳೆ ಡಿಸೆಂಬರ್ ಮೊದಲನೇ ವಾರದ ಅಂತ್ಯದ ವೇಳೆಗೆ ಕಟಾವಾಗಿರುವುದರಿಂದ ಈ ಬೆಳೆಗಳಿಗೆ ನೀರಿನ ಅಗತ್ಯವಿಲ್ಲ.
  • 4) ಮೆಟ್ಟೂರು ಮತ್ತು ಭವಾನಿ ಸಾಗರ ಜಲಾಶಯಗಳು 50.367 ಟಿಎಂಸಿ ಗಮನಾರ್ಹ ಸಂಗ್ರಹವನ್ನು ಹೊಂದಿದೆ. ಇದು ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಾಗಿರುತ್ತದೆ.
  • 5) ಕರ್ನಾಟಕದ 4 ಜಲಾಶಯಗಳಿಗೆ ಒಳಹರಿವು ಸ್ಥಗಿತಗೊಂಡಿದ್ದು ಯಾವುದೇ ಹರಿವಿನ ನಿರೀಕ್ಷೆಯಿಲ್ಲ ಮತ್ತು ಕರ್ನಾಟಕವು ಪ್ರಸ್ತುತ ಬೆಳದಿರುವ ಬೆಳೆಗಳ ಅವಶ್ಯಕತೆ, ಕುಡಿಯುವ ನೀರಿನ ಅಗತ್ಯತೆ ಮತ್ತು ಕೈಗಾರಿಕಾ ಅಗತ್ಯಗಳನ್ನು ಈ ಸಂಗ್ರಹಣೆಯಿಂದ ನಿರ್ವಹಿಸಲು ಬದ್ಧವಾಗಿದೆ.
  • 6) ಅನಿಯಂತ್ರಿತ ಜಲಾನಯನ ಪ್ರದೇಶದಿಂದ ಉಂಟಾಗುವ ಕೊಡುಗೆಯನ್ನು ಹೊರತುಪಡಿಸಿ ಬಿಳಿಗುಂಡ್ಲು ತಲುಪಲು ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ.
  • 7) ಕರ್ನಾಟಕದ ಜಲಾಶಯದಿಂದ ಯಾವುದೇ ನೀರು ಬಿಡುಗಡೆಗೆ ನಿರ್ದೇಶನವನ್ನು ನೀಡದಂತೆ ಸಮಿತಿಯನ್ನು ಕೋರಲಾಯಿತು.

ತಮಿಳುನಾಡಲ್ಲಿ ಭಾರಿ ಮಳೆ: ಹಲವು ರೈಲುಗಳು ಸ್ಥಗಿತ; ರೈಲ್ವೆ ನಿಲ್ದಾಣದಲ್ಲೇ ಸಿಲುಕಿದ ನೂರಾರು ಪ್ರಯಾಣಿಕರು

CWRC ಶಿಫಾರಸು: ಎರೆಡೂ ರಾಜ್ಯಗಳ ವಾದವನ್ನು ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು ಡಿಸೆಂಬರ್ 2023ರ ಬಾಕಿ ಅವಧಿಗೆ ಹಾಗೂ ಜನವರಿ 2024ರ ಪೂರ್ಣ ಅವಧಿಗೆ ಕರ್ನಾಟಕವು ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ CWDTಯ ಆದೇಶದ ಪ್ರಕಾರ ನಿಗದಿತ ಪ್ರಮಾಣದ ನಿರಿನ ಹರಿವನ್ನು ಖಚಿತಪಡಿಸಿಕೊಳ್ಳಬೇಕೆಂದು (ಅಂದರೆ ಡಿಸೆಂಬರ್ 2023ರ ಬಾಕಿ ಅವಧಿಗೆ ಪ್ರತಿ ದಿನ 3128 ಕ್ಯೂಸೆಕ್ಸ್ ಮತ್ತು ಜನವರಿ 2024ರ ಪೂರ್ಣ ಅವಧಿಗೆ ಪ್ರತಿ ದಿನ 1030 ಕ್ಯೂಸೆಕ್ಸ್ ನೀರು ಹರಿವನ್ನು ಖಚಿತಪಡಿಸಿಕೊಳ್ಳಬೇಕು) CWRC ಯು ಶಿಫಾರಸು ಮಾಡಿದೆ.

click me!