Joshimath Sinking: 12 ದಿನಗಳಲ್ಲಿ 5.4 ಸೆಂಟಿಮೀಟರ್‌ ಕುಸಿದ ಜೋಶಿಮಠ, ಇಸ್ರೋ ಸ್ಯಾಟಲೈಟ್‌ ಇಮೇಜ್‌!

By Santosh NaikFirst Published Jan 13, 2023, 10:56 AM IST
Highlights

ಡಿಸೆಂಬರ್ 2020 ಮತ್ತು ಜನವರಿ 2023 ರ ನಡುವೆ 12 ದಿನಗಳಲ್ಲಿ ಜೋಶಿಮಠದ ಕುಸಿತದ ವಲಯವು 5.4 ಸೆಂ.ಮೀ ಕುಸಿದಿದ್ದರೆ, ಏಪ್ರಿಲ್ ಮತ್ತು ನವೆಂಬರ್ 2022 ರ ನಡುವೆ ಏಳು ತಿಂಗಳಲ್ಲಿ 9 ಸೆಂ.ಮೀ. ಕುಸಿದಿದೆ ಎಂದು ಇಸ್ರೋ ಸ್ಯಾಟಲೈಟ್ ಇಮೇಜ್‌ ಖಚಿತ ಪಡಿಸಿದೆ.

ನವದೆಹಲಿ (ಜ.13): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಜೋಶಿಮಠದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ, ಉತ್ತರಾಖಂಡದ ಪಟ್ಟಣವು ಭೂಮಿಯ ಕುಸಿತದಿಂದಾಗಿ ಕ್ರಮೇಣ ಮುಳುಗುತ್ತಿದೆ ಮತ್ತು 12 ದಿನಗಳಲ್ಲಿ ಅಂದರೆ 2022ರ ಡಿಸೆಂಬರ್‌ 27 ರಿಂದ 2023ರ ಜನವರಿ 8ರವರೆಗಿನ ಅವಧಿಯಲ್ಲಿ ಈ ವಲಯದಲ್ಲಿ 5.4 ಸೆಂಟಿಮೀಟರ್‌ ಕ್ಷಿಪ್ರ ಕುಸಿತವನ್ನು ದಾಖಲು ಮಾಡಲಾಗಿದೆ ಎಂದು ಇಸ್ರೋ ಬಹಿರಂಗಪಡಿಸಿದೆ. 12 ದಿನಗಳ ಮುಳುಗುವಿಕೆಯ ಪ್ರಮಾಣವು ಏಪ್ರಿಲ್ 2022 ಮತ್ತು ನವೆಂಬರ್ 2022 ರ ನಡುವೆ ಇದ್ದಷ್ಟೇ ಕ್ಷಿಪ್ರವಾಗಿದೆ. ಈ ಅವಧಿಯಲ್ಲಿ ಜೋಶಿಮಠವು 9 ಸೆಂಟಿಮೀಟರ್‌ ಕುಸಿದಿದೆ. ಕಳೆದ ವಾರ ಡಿಸೆಂಬರ್ ಮತ್ತು ಜನವರಿ ಮೊದಲ ವಾರದ ನಡುವೆ ಕ್ಷಿಪ್ರ ಕುಸಿತದ ಘಟನೆಯನ್ನು ಪ್ರಚೋದಿಸಲಾಗಿದೆ ಎಂದು ಎನ್‌ಎಸ್‌ಆರ್‌ಸಿ ಹೇಳಿದೆ.  ಸೇನಾ ಹೆಲಿಪ್ಯಾಡ್ ಮತ್ತು ನರಸಿಂಗ್ ಮಂದಿರ ಸೇರಿದಂತೆ ಕೇಂದ್ರ ಜೋಶಿಮಠದಲ್ಲಿ ಸಬ್ಸಿಡೆನ್ಸ್ ಝೋನ್ ಇದೆ ಎಂದು ಉಪಗ್ರಹ ಚಿತ್ರಗಳು ಬಹಿರಂಗಪಡಿಸಿವೆ. 2,180 ಮೀಟರ್ ಎತ್ತರದಲ್ಲಿ ಜೋಶಿಮಠ-ಔಲಿ ರಸ್ತೆಯ ಬಳಿ ಮುಳುಗುವಿಕೆಯ ಸೆಂಟರ್‌ ಪಾಯಿಂಟ್‌ ಆಗಿದೆ.

ಕೆಲವೇ ದಿನಗಳಲ್ಲಿ ನೂರಾರು ಮನೆಗಳು ಬಿರುಕು ಬಿಟ್ಟ ನಂತರ ಜೋಶಿಮಠವನ್ನು ಚಮೋಲಿ ಜಿಲ್ಲಾಡಳಿತವು ಭೂ-ಅಪಘಾತ ವಲಯವೆಂದು ಘೋಷಿಸಿದೆ ಮತ್ತು ಅವರ ನಿವಾಸಗಳು ಅಪಾಯಕಾರಿ ಎಂದು ಗುರುತಿಸಲ್ಪಟ್ಟಿದ್ದರಿಂದ ಕುಟುಂಬಗಳನ್ನು ಸ್ಥಳಾಂತರಿಸಬೇಕಾಯಿತು. ಸರ್ಕಾರವು 1.5 ಲಕ್ಷ ರೂಪಾಯಿಯ ಮಧ್ಯಂತರ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿದೆ ಮತ್ತು ಪುನರ್ವಸತಿ ಪ್ಯಾಕೇಜ್‌ನಲ್ಲಿ ಕುರಿತಾಗಿ ಕೆಲಸ ಮಾಡುತ್ತಿದೆ. ಎರಡು ಹೋಟೆಲ್‌ಗಳ ನೆಲಸಮವು ಗುರುವಾರ ಪ್ರಾರಂಭವಾಯಿತು ಆದರೆ ಕೆಟ್ಟ ಹವಾಮಾನದ ಕಾರಣ ಮತ್ತೆ ಸ್ಥಗಿತಗೊಂಡಿತು. ಸ್ಥಳೀಯರು ಮತ್ತು ನಿವಾಸಿಗಳ ಪ್ರತಿಭಟನೆಯಿಂದಾಗಿ ಯಾಂತ್ರಿಕವಾಗಿ ಉರುಳಿಸುವಿಕೆಯು ಕೆಲವು ದಿನಗಳವರೆಗೆ ಸ್ಥಗಿತಗೊಂಡಿತ್ತು.

ಹೋಟೆಲ್ ಮಲಾರಿ ಇನ್ ಮತ್ತು ಮೌಂಟ್ ವ್ಯೂ ಹೋಟೆಲ್‌ಗಳನ್ನು ಮಾತ್ರ ನೆಲಸಮಗೊಳಿಸಲಾಗುವುದು ಏಕೆಂದರೆ ಅವುಗಳ ಅಸ್ತಿತ್ವವು ಸುತ್ತಮುತ್ತಲಿನ ಕಟ್ಟಡಗಳಿಗೆ ಅಪಾಯಕಾರಿಯಾಗಿದೆ, ಇನ್ನುಳಿದ ಯಾವುದೇ ಮನೆಗಳನ್ನು ಸದ್ಯಕ್ಕೆ ಕೆಡವುವುದಿಲ್ಲ ಎಂದು ಆಡಳಿತವು ಭರವಸೆ ನೀಡಿದೆ. ಜೋಶಿಮಠದ ಮುಳುಗಡೆಯನ್ನು ವಿಶ್ಲೇಷಿಸಲು ಹಲವಾರು ತಜ್ಞರ ತಂಡಗಳನ್ನು ನಿಯೋಜಿಸಲಾಗಿದೆ, ಆದರೆ ಎನ್‌ಟಿಪಿಸಿ ಹೈಡ್ರೋ ಪ್ರಾಜೆಕ್ಸ್‌ ಯೋಜನೆಗೆ ಸುರಂಗ ಕಾಮಗಾರಿಯನ್ನು ತಜ್ಞರು ದೂಷಿಸುತ್ತಿದ್ದಾರೆ. ಆದಾಗ್ಯೂ, ಎನ್‌ಟಿಪಿಸಿ ಹೇಳಿಕೆಯನ್ನು ನೀಡಿದ್ದು, ತಮ್ಮ ಸುರಂಗವು ಜೋಶಿಮಠದ ಅಡಿಯಲ್ಲಿ ಹಾದುಹೋಗುತ್ತಿಲ್ಲ ಎಂದು ಹೇಳಿಕೊಂಡಿದೆ.

ಮುಳುಗುತ್ತಿರುವ ವಲಯ ಎಂದು ಘೋಷಣೆಯಾದ ಉತ್ತರಾಖಂಡ್‌ನ ಜೋಶಿಮಠ: 60ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

ಜೋಶಿಮಠದಲ್ಲಿ ಸೇನೆಗೆ ಸೇರಿದ 28 ಕಟ್ಟಡಗಳಿಗೆ ಹಾನಿ: ಭೂಕುಸಿತಕ್ಕೆ ಒಳಗಾಗಿರುವ ಉತ್ತರಾಖಂಡದ ಜೋಶಿಮಠದಲ್ಲಿ ಸೇನೆಗೆ ಸೇರಿದ 25ರಿಂದ 28 ಕಟ್ಟಡಗಳಲ್ಲೂ ಬಿರುಕು ಬಿಟ್ಟಿದೆ. ಹೀಗಾಗಿ ಕೆಲವು ಪ್ರದೇಶಗಳಿಂದ ಸೇನೆ ತನ್ನ ತುಕಡಿಗಳನ್ನು ಸ್ಥಳಾಂತರ ಮಾಡಿದೆ. ಸ್ಥಳೀಯ ಆಡಳಿತ ಸೈನಿಕರಿಗೆ ಬೇಕಾದ ವಸತಿ ಸೌಲಭ್ಯ ಒದಗಿಸಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಭರವಸೆ ನೀಡಿದ್ದಾರೆ. ಈ ನಡುವೆ ‘ಜೋಶಿಮಠದಲ್ಲಿ ಸೇನೆಗೆ ಸೇರಿದ 25ರಿಂದ 28 ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಹಾಗಾಗಿ ಸೈನಿಕರನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಅಗತ್ಯ ಬಿದ್ದರೆ ಸೈನಿಕರನ್ನು ಶಾಶ್ವತವಾಗಿ ಔಲಿಗೆ ಸ್ಥಳಾಂತರ ಮಾಡಲಾಗುತ್ತದೆ. ಹಾನಿಗೊಳಗಾಗಿದ್ದ ಜೋಶಿಮಠ ಮತ್ತು ಮಾನ್‌ ನಡುವಿನ ರಸ್ತೆಯನ್ನು ಸರಿಪಡಿಸಲಾಗಿದೆ. ಆದರೆ ಹೆಲಾಂಗ್‌ ಬೈಪಾಸ್‌ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ’ ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಮನೋಜ್‌ ಪಾಂಡೆ ಹೇಳಿದ್ದಾರೆ.

ಕುಸೀತಿದೆ ಉತ್ತರದ ಶೃಂಗೇರಿ ‘ಜೋಶಿಮಠ’: 600 ಕುಟುಂಬ ಸ್ಥಳಾಂತರ

ಮಾರುಕಟ್ಟೆಬೆಲೆಯ ಪರಿಹಾರ: ಭೂಕುಸಿತದಿಂದಾಗಿ ಜೋಶಿಮಠದಲ್ಲಿ ಮನೆಗಳನ್ನು ತೊರೆಯುತ್ತಿರುವ ಜನರಿಗೆ ಮಾರುಕಟ್ಟೆದರದಲ್ಲಿ ಪರಿಹಾರವನ್ನು ಒದಗಿಸಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಗುರುವಾರ ಭರವಸೆ ನೀಡಿದ್ದಾರೆ. ಈ ಕುರಿತಾಗಿ ನಿರ್ಧಾರ ಕೈಗೊಳ್ಳಲು ಚಮೋಲಿ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ ನೇತೃತ್ವದಲ್ಲಿ 19 ಜನರ ಸಮಿತಿ ರಚಿಸಲಾಗಿದೆ. ಅಲ್ಲದೇ ಈ ಸಮಿತಿಯ ಮೂಲಕವೇ ಮನೆ ಕಳೆದುಕೊಂಡ ಕುಟುಂಬಗಳಿಗೆ 1.5 ಲಕ್ಷ ರು. ಮಧ್ಯಂತರ ಪರಿಹಾರ ಒದಗಿಸಲಾಗುತ್ತಿದೆ.

click me!