
ಸರ್ಕಾರಿ ಶಾಲೆಗಳ ಸ್ಥಿತಿ ಬಗ್ಗೆ ಮಾಧ್ಯಮಗಳ ವರದಿಗಾರರು ಸುದ್ದಿ ಮಾಡೋದನ್ನು ನೀವು ನೋಡಿರ್ತೀರಾ, ಅಥವಾ ಪತ್ರಿಕೆಗಳಲ್ಲಿ ಓದಿರ್ತೀರಾ.. ಆದರೀಗ, ಸಾಮಾಜಿಕ ಜಾಲತಾಣಗಳ ಯುಗ. ಇಲ್ಲಿ ಯಾರು ಬೇಕಾದರೂ ವರದಿಗಾರರಾಗಬೋದು. ಅದೇ ರೀತಿ, ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುವ ಇತ್ತೀಚಿನ ವಿಡಿಯೋವೊಂದನ್ನು ನೀವು ನೋಡಬೇಕು.. ಇಲ್ಲಿ ಬಾಲಕನೇ ವರದಿಗಾರನಾಗಿದ್ದಾನೆ. ಸರ್ಕಾರಿ ಶಾಲೆಯ ದುಸ್ಥಿತಿ ಬಗ್ಗೆ ವರದಿ ಮಾಡಿದ್ದಾನೆ.
12 ವರ್ಷದ ಬಾಲಕ ಪತ್ರಕರ್ತನ ಪಾತ್ರ ಮಾಡಿರುವ ಎರಡು ವಿಡಿಯೋ ಕ್ಲಿಪ್ಗಳು ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದೆ. ಈ ಬಾಲಕನ ಹೆಸರು ಸರ್ಫರಾಜ್ ಖಾನ್ ಎಂದು ತಿಳಿದುಬಂದಿದ್ದು, ಈತ ಜಾರ್ಖಂಡ್ನ ಗೊಡ್ಡ ಜಿಲ್ಲೆಯ ಮಹಾಗಾಮಾ ಬ್ಲಾಕ್ನ ಭೀಖಿಯಾಛಕ್ ಗ್ರಾಮದ ಬಾಲಕನಾಗಿದ್ದಾನೆ. ಆತನ ಗ್ರಾಮದ ಬಳಿಯಿರುವ ಸರ್ಕಾರಿ ಶಾಲೆಯ ಸ್ಥಿತಿಯ ಬಗ್ಗೆ ಸ್ವತ: ವರದಿ ಮಾಡಿದ್ದಾನೆ.
ಕಡ್ಡಿ ಹಾಗೂ ಕೂಲ್ ಡ್ರಿಂಕ್ಸ್ನ ಖಾಲಿ ಬಾಟಲಿಯನ್ನು ಮೈಕ್ನಂತೆ ಮಾಡಿಕೊಂಡಿದ್ದು, ವರದಿಗಾರನಂತೆ ತನ್ನ ಕ್ಲಾಸ್ಮೇಟ್ಗಳಿಗೆ ಪ್ರಶ್ನೆ ಕೇಳಿದ್ದಾನೆ, ಹಾಗೂ, ವಿಡಿಯೋವನ್ನು ರೆಕಾರ್ಡ್ ಮಾಡಲು ಸಹ ಗೆಳೆಯರನ್ನು ಬಳಸಿಕೊಂಡಿದ್ದಾನೆ. ಈ ಬಾಲಕನಿಗೆ ವರದಿಗಾರಿಕೆ ಬಗ್ಗೆ ಇರುವ ಉತ್ಸಾಹ, ಆತನ ಧ್ವನಿ ಹಲವರ ಹುಬ್ಬೇರಿಸುತ್ತದೆ. ಈ ಹಿನ್ನೆಲೆ ಹಲವು ಮಾಧ್ಯಮಗಳ ವರದಿಗಾರರೇ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ಬಾಲಕನ ಎರಡು ವಿಡಿಯೋಗಳು ವೈರಲ್ ಆಗಿದ್ದು, ಮೊದಲನೆಯ ವಿಡಿಯೋದಲ್ಲಿ ಸರ್ಫರಾಜ್ ಖಾನ್ ಕ್ಲಾಸ್ರೂಂ, ಟಾಯ್ಲೆಟ್ಗಳು, ಹ್ಯಾಂಡ್ ಪಂಪ್ ಹಾಗೂ ಭೀಖಿಯಾಛಕ್ ಗ್ರಾಮದ ಉತ್ಕ್ರಮಿತ್ ಪ್ರಾಥಮಿಕ ಶಾಲೆಯ ಸುತ್ತಮುತ್ತಲಿನ ಗಲೀಜನ್ನು ಸಹ ತೋರಿಸಿದ್ದಾನೆ. ಅಲ್ಲದೆ, ತನ್ನ ಶಾಲೆಯ ಇತರ ವಿದ್ಯಾರ್ಥಿಗಳಿಗೂ ಪ್ರಶ್ನೆಗಳನ್ನೂ ಕೇಳಿದ್ದಾನೆ. ‘’ನೀನು ಯಾಕೆ ಪ್ರತಿನಿತ್ಯ ಶಾಲೆಗೆ ಬರೋದಿಲ್ಲ’’ ಎಂದು ವಿದ್ಯಾರ್ಥಿಯೊಬ್ಬನನ್ನು ಕೇಳಿದ್ದು, ಇದಕ್ಕೆ ಉತ್ತರಿಸಿದ ಆತ ತನ್ನ ಶಾಲೆಯ ಟಾಯ್ಲೆಟ್ಗಳು ಹಾಗೂ ಕುಡಿಯುವ ನೀರಿನ ತೊಂದರೆಯನ್ನು ತೋರಿಸುತ್ತಾ, ತಾನು ಶಾಲೆಗೆ ಗೈರಾಗುವುದಕ್ಕೆ ಕಾರಣಗಳನ್ನು ನೀಡಿದ್ದಾನೆ.
ಇನ್ನು, ಮತ್ತೊಂದು ವಿಡಿಯೋದಲ್ಲಿ ಶಾಲೆಯ ತರಗತಿಯ ಬಗ್ಗೆ ಮತ್ತಷ್ಟು ಒಳನೋಟಗಳನ್ನು ನೋಡಬಹುದು. ಶಾಲೆಯ ಕೊಠಡಿಗಳು ಗಲೀಜಿನಿಂದ ಕೂಡಿದ್ದು, ಕ್ಲಾಸ್ರೂಂನಲ್ಲಿ ಬೇಕಿಲ್ಲದ ವಸ್ತುಗಳನ್ನೆಲ್ಲ ಇಡಲಾಗಿದೆ. ತಮ್ಮ ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಫರಾಜ್ ಖಾನ್ ಮನವಿ ಮಾಡಿಕೊಂಡಿದ್ದಾನೆ. ಹಾಗೂ, ಸರ್ಕಾರದಿಂದ ಬರುತ್ತಿರುವ ಶಿಕ್ಷಣ ಫಂಡ್ ಅನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದೂ ದೂರಿದ್ದಾನೆ. ವಾಟರ್ ಟ್ಯಾಂಕ್ ಹಾಗೂ ಹ್ಯಾಂಡ್ ಪಂಪ್ ಅನ್ನು ರಿಪೇರಿ ಮಾಡಲು ಸಹ ಬಾಲಕ ಮನವಿ ಮಾಡಿಕೊಂಡಿದ್ದಾನೆ. ವಿಡಿಯೋ ಕೊನೆಯಲ್ಲಿ ಶಾಲಾ ಶಿಕ್ಷಕರು ಸಹ ಸರಿಯಾದ ಟೈಂಗೆ ಬರುವುದಿಲ್ಲ ಎಂದು ದೂರಿದ್ದಾನೆ. ‘’ಈಗ ಸಮಯ ಮಧ್ಯಾಹನ್ 12:45 ಆಗಿದೆ ಆದರೂ, ಇಲ್ಲಿ ಯಾವುದೇ ಶಿಕ್ಷಕರು ಇಲ್ಲ’’ ಎಂದು ಸರ್ಫರಾಜ್ ಖಾನ್ ಹೇಳಿಕೊಂಡಿದ್ದಾನೆ.
ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆದ ಬಳಿಕ, ಟ್ವಿಟ್ಟರ್ನಲ್ಲಿ ಸಾವಿರಾರು ಜನ ಇದನ್ನು ನೋಡಿದ್ದಾರೆ. ಹಲವು ಬಳಕೆದಾರರು ‘ಯುವ ಪತ್ರಕರ್ತ’ ನ ದಿಟ್ಟತನವನ್ನು ಹೊಗಳಿದ್ದರೆ, ಹಲವರು ಆಶ್ಚರ್ಯಚಕಿತರಾಗಿದ್ದಾರೆ. ಅಲ್ಲದೆ, ಹಳ್ಳಿಗಳ ಶಾಲೆಗಳ ದುಸ್ಥಿತಿಗಳ ಬಗ್ಗೆ ಹಲವರು ಕಾಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ದಿಟ್ಟತನದ ವರದಿಗಾರಿಕೆಯ ಮೂಲಕ ಆಡಳಿತ ಸರ್ಕಾರಕ್ಕೆ ಬಾಲಕ ಕಪಾಳ ಮೋಕ್ಷ ಮಾಡಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ, ಹಲವರು ವಿಡಿಯೋವನ್ನು ಮೆಚ್ಚಿಕೊಂಡಿದ್ದು, ಬಾಲಕನ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿ ಹಲವರು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ