ಜನತಾ ಕರ್ಫ್ಯೂ: ಪಕ್ಷಾತೀತ ಬೆಂಬಲ, ಬಂದ್‌ನಲ್ಲಿ ಒಂದಾದ ಭಾರತ!

By Suvarna NewsFirst Published Mar 23, 2020, 8:56 AM IST
Highlights

ಭಾರತ ನಿನಗಿದೋ ಕರವಂದನೆ| ಮೋದಿ ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ಜನತೆಯಿಂದ ಅಭೂತಪೂರ್ವ ಸ್ಪಂದನೆ | ಇಡೀ ದೇಶದ ಚಟುವಟಿಗೆ 14 ತಾಸು ಸ್ತಬ್ಧ| ಸಂಜೆ ಚಪ್ಪಾಳೆ, ಘಟಾನಾದದ ಮೂಲಕ ಕೊರೋನಾ ವಿರುದ್ಧದ ‘ಯೋಧ’ರಿಗೆ ಗೌರವ

ನವದೆಹಲಿ(ಮಾ.23): ಭಾನುವಾರ ಕೊರೋನಾ ವೈರಸ್‌ ವಿರುದ್ಧ ಸಮರ ಸಾರಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಜನತಾ ಕಫä್ರ್ಯ’ಗೆ ಅಭೂತಪೂರ್ವವಾಗಿ ಜನರು ಸ್ಪಂದಿಸಿದ್ದು, ವೈರಾಣು ವಿರುದ್ಧದ ಯುದ್ಧಕ್ಕೆ ಶ್ರೀಕಾರ ಹಾಕಿದ್ದಾರೆ.

ಬೆಳಗ್ಗೆ 7 ಗಂಟೆಯಿಂದಲೇ ದೇಶದ ಪ್ರಮುಖ ನಗರಗಳು, ಸಣ್ಣಪುಟ್ಟಪಟ್ಟಣಗಳು, ಗ್ರಾಮಗಳು ತಮ್ಮ ಚಟುವಟಿಕೆ ಸ್ಥಗಿತಗೊಳಿಸಿದವು. ಜನರು ಮನೆಯಿಂದ ಹೊರಗೆ ಬರಲಿಲ್ಲ. ಅಂಗಡಿ-ಮುಂಗಟ್ಟುಗಳು ತೆರೆಯಲಿಲ್ಲ. ವ್ಯಾಪಾರ-ವಹಿವಾಟು, ಎಲ್ಲ ಚಟುವಟಿಕೆಗಳು ಸ್ತಬ್ಧವಾದವು. ಈ ಮೂಲಕ ವಾತಾವರಣದಲ್ಲಿ ಇರುವ ವೈರಾಣು ಯಾರಿಗೂ ತಾಗದೇ ಅದು ವಾತಾವರಣದಲ್ಲೇ ನಶಿಸಿ ಹೋಗಬೇಕು ಎಂಬ ವೈದ್ಯಕೀಯ ಉದ್ದೇಶಕ್ಕೆ ಜನರು ಅತೀವ ಸ್ಪಂದನೆ ವ್ಯಕ್ತಪಡಿಸಿದರು. ರಾತ್ರಿ 9ಕ್ಕೆ ಕಫä್ರ್ಯ ಅಂತ್ಯಗೊಂಡಿತು.

ಮೋದಿ ಅವರ ಕರೆಯ ಅನುಸಾರ, ವೈರಾಣು ವಿರುದ್ಧ ಸಮರ ಸಾರಿರುವ ವೈದ್ಯರು, ದಾದಿಯರು, ವಿಜ್ಞಾನಿಗಳು, ಸಂಶೋಧಕರು, ಪೌರಕಾರ್ಮಿಕರು, ಮಾಧ್ಯಮದವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಜನರು ತಮ್ಮ ಮನೆಯ ಬಾಗಿಲು ಹಾಗೂ ಬಾಲ್ಕನಿಗೆ ಬಂದು ಚಪ್ಪಾಳೆ ತಟ್ಟಿದರು. ಜಾಗಟೆ-ಘಟಾನಾದ ಮೊಳಗಿಸಿದರು. ತಟ್ಟೆಗಳನ್ನೂ ಬಾರಿಸಿದರು. ಇದರೊಂದಿಗೆ ವೈರಾಣುವಿನ ವಿರುದ್ಧ ಹೋರಾಡುವವರಿಗೆ ನಮ್ಮ ಸಾಥ್‌ ಇದೆ ಎಂಬ ಸಂದೇಶವನ್ನು ಅವರು ರವಾನಿಸಿದರು.

ವಿಶೇಷವಾಗಿ ಪಕ್ಷಾತೀತವಾಗಿ ಜನರು ಪ್ರಧಾನಿ ಕರೆಗೆ ಸ್ಪಂದಿಸಿದರು. ವಿಪಕ್ಷ ನಾಯಕರಾದ ಶರದ್‌ ಪವಾರ್‌, ಜೈವೀರ್‌ ಶೇರ್‌ಗಿಲ್‌ ಸೇರಿದಂತೆ ಅನೇಕರು ಸಂಜೆ ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟಿಮೋದಿ ಮನವಿಗೆ ಓಗೊಟ್ಟರು. ಸೆಬೆಬ್ರಿಟಿಗಳು, ನಟ-ನಟಿಯರು ಕೂಡ ಚಪ್ಪಾಳೆ ತಟ್ಟಿಬೆಂಬಲ ಸೂಚಿಸಿದರು.

ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೋರಾಟಕ್ಕೆ ಅಭೂತಪೂರ್ವ ರೀತಿಯಲ್ಲಿ ಸ್ಪಂದಿಸಿದ ಜನರಿಗೆ ಧನ್ಯವಾದ ಸಮರ್ಪಿಸಿ, ‘ಇದು ಹೋರಾಟದ ಅಂತ್ಯವಲ್ಲ. ಆರಂಭ. ವಿಜಯದ ಆರಂಭ ಕೂಡ. ಜನತೆ ಇನ್ನೂ ಹೋರಾಟ ಮುಂದುವರಿಸಬೇಕು’ ಎಂದು ಕರೆ ನೀಡಿದರು.

click me!