ಜೈಶ್ ಸಂಘಟನೆಯ ಮತ್ತೊಬ್ಬ ಉಗ್ರನ ನಿಗೂಢ ಸಾವು! ಪಾಕಿಸ್ತಾನದಲ್ಲಿ ನಡೆದದ್ದೇನು? ಯಾರೀ ಭಯೋತ್ಪಾದಕ

Published : Mar 31, 2026, 01:53 PM IST
Tahir Mohammed

ಸಾರಾಂಶ

ಪಾಕಿಸ್ತಾನದಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಪಾಕಿಸ್ತಾನದಲ್ಲಿ ಸರಣಿ ಉಗ್ರರ ಹತ್ಯೆಗಳ ಮುಂದುವರೆದ ಭಾಗವಾಗಿ ಈ ಘಟನೆ ನಡೆದಿದ್ದು, ಈತನೂ ತನ್ನ ಸಹೋದರನಂತೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ.

ಉಗ್ರರಿಗೆ ಆಶ್ರಯ ನೀಡಿರುವ ಪಾಕಿಸ್ತಾನದಲ್ಲಿಯೇ ಇದಾಗಲೇ ಕೆಲವು ಉಗ್ರರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿನ ಭಯೋತ್ಪಾದಕರು ವಿಚಿತ್ರ ರೀತಿಯಲ್ಲಿ ಸಾವನ್ನಪ್ಪುತ್ತಿದ್ದು, ಅದರ ಮುಂದುವರೆದ ಭಾಗವಾಗಿ ಇದೀಗ ಪಾಕ್​ನಲ್ಲಿ ಮತ್ತೋರ್ವ ಉಗ್ರ ಹತನಾಗಿದ್ದಾನೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್ -ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ನಿಗೂಢವಾಗಿ ಸತ್ತು ಹೋಗಿದ್ದಾನೆ. ಸಾವಿನ ಕಾರಣ ಸ್ಪಷ್ಟವಾಗಿಲ್ಲ. ಪಾಕಿಸ್ತಾನದಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಹಲವಾರು ಜನರನ್ನು ಕೊಲ್ಲಲಾಗಿದೆ. ಅನೇಕ ಭಯೋತ್ಪಾದಕರು ನಿಗೂಢವಾಗಿ ಸತ್ತಿದ್ದಾರೆ ಎನ್ನುವ ಕಾರಣಕ್ಕೆ, ತಾಹಿರ್ ಸಾವಿನ ಬಗ್ಗೆಯೂ ಬೇರೆ ಬೇರೆಯ ರೀತಿಯ ಸುದ್ದಿಗಳು ಬರುತ್ತಿವೆಯಾದರೂ ಈ ಬಗ್ಗೆ ಸ್ಪಷ್ಟ ಪುರಾವೆ ಯಾವುದೂ ಸದ್ಯಕ್ಕೆ ಸಿಕ್ಕಿಲ್ಲ.

ಇದಾಗಲೇ ಈತನ ಅಂತ್ಯಕ್ರಿಯೆಯೂ ನಡೆದಿದೆ ಎನ್ನುವ ಸುದ್ದಿ ಬಂದಿದೆ. ಬಹಾವಲ್ಪುರದ ಜಾಮಿಯಾ ಮಸೀದಿ ಉಸ್ಮಾನ್ ವಾಲಿ ಬಳಿ ತಾರಿಕ್​ನನ್ನು ಸಮಾಧಿ ಮಾಡಲಾಗಿದೆ ಎಂದು ಸಂಘಟನೆಯ ಅಧಿಕೃತ ಚಾನೆಲ್ ಮೂಲಕ ದೃಢಪಡಿಸಲಾಗಿದೆ. ಜೈಷ್​ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಈತನ ಹಿಸ್ಟರಿ ಕೂಡ ಅಷ್ಟೇ ಭಯಾನಕವೂ ಆಗಿದೆ. ಈತ ಜೈಶ್ -ಎ-ಮೊಹಮ್ಮದ್ ಮುಖ್ಯಸ್ಥನಾಗಿದ್ದ ತನ್ನ ಸಹೋದರ ಮಸೂದ್ ಅಜರ್ ಜೊತೆ ನಿಕಟ ಸಂಬಂಧ ಹೊಂದಿದ್ದ, ಈತನೂ ಆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.

ಏನು ಇವನ ಹಿನ್ನೆಲೆ?

ಜೈಶ್-ಎ-ಮೊಹಮ್ಮದ್ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಭಯೋತ್ಪಾದಕ ಸಂಘಟನೆಯಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಪಟ್ಟಿ ಮಾಡಲಾದ ಮಸೂದ್ ಅಜರ್, 2001 ರ ಸಂಸತ್ತಿನ ದಾಳಿ, 2008 ರ ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಬಹು ಭಯೋತ್ಪಾದಕ ದಾಳಿಗಳ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿದ್ದಾನೆ. ಇದರ ಮುಖ್ಯಸ್ಥ ಅನ್ವರ್ ಮಸೂದ್ ಅಜರ್​ಗೆ ಇರುವ ಐದು ಸಹೋದರರ ಪೈಕಿ ಈತ ಒಬ್ಬ. ಜೈಶ್-ಎ-ಮೊಹಮ್ಮದ್ ನ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂಬ ಮಾಹಿತಿಗಳು ಇವೆ.

ಆಪರೇಷನ್‌ ಸಿಂದೂರ್​ ಅಡಿಯಲ್ಲಿ

ಭಾರತೀಯ ಪಡೆಗಳು ಪಾಕಿಸ್ತಾನದೊಳಗಿನ ಜೈಶ್‌ ನೆಲೆಗಳ ಮೇಲೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ಅಜರ್‌ನ ಹಲವಾರು ನಿಕಟ ಸಂಬಂಧಿಗಳು ಸಾವನ್ನಪ್ಪಿದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಜೈಶ್‌ ಮೊದಲ ಬಾರಿಗೆ ಈ ನಷ್ಟಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಆಪರೇಷನ್‌ ಸಿಂದೂರ್​ ಅಡಿಯಲ್ಲಿ ಬಹಾವಲ್‌ಪುರದ ಮೇಲೆ ಭಾರತ ನಡೆಸಿದ ದಾಳಿಯ ಸಮಯದಲ್ಲಿ ಅಜರ್‌ನ ಕುಟುಂಬದ ಸದಸ್ಯರು ಕೊಲ್ಲಲ್ಪಟ್ಟರು ಎಂದು ಸಂಘಟನೆಯ ಹಿರಿಯ ಕಮಾಂಡರ್‌ ಒಪ್ಪಿಕೊಂಡಿದ್ದರು. ಕೊಲ್ಲಲ್ಪಟ್ಟವರಲ್ಲಿ ಅವರ ಸಹೋದರಿ, ಸೋದರಳಿಯ ಮತ್ತು ಇತರ ಕುಟುಂಬ ಸದಸ್ಯರು ಸೇರಿದ್ದಾರೆ. ಮಸೂದ್ ಎಂದು ಹೇಳಲಾದ ಕೆಲವು ಆಡಿಯೊ ರೆಕಾರ್ಡಿಂಗ್‌ಗಳು ಸಹ ಸಾವನ್ನು ದೃಢಪಡಿಸಿವೆ. ಮಸೂದ್ ಅಜರ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಪಟ್ಟಿಯಲ್ಲಿದ್ದ. ಮಸೂದ್ ಬಹಳ ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವನ ಇರುವಿಕೆ ಮತ್ತು ಆರೋಗ್ಯದ ಬಗ್ಗೆ ವದಂತಿಗಳು ಹರಡಿವೆ. ಆದಾಗ್ಯೂ, ಮಸೂದ್ ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಹರಡುತ್ತಲೇ ಇದ್ದಾನೆ ಎಂಬ ವರದಿಗಳು ಕೂಡ ಇವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2021ರಲ್ಲಿ 3.2 ಲಕ್ಷ ವೇತನಕ್ಕೆ TCSಗೆ ಕೆಲಸಕ್ಕೆ ಸೇರಿದ ಯುವಕನಿಗೆ ಈಗ ಗೂಗಲ್‌ನಲ್ಲಿ 80 ಲಕ್ಷದ ಉದ್ಯೋಗ
Azad Bharath: ರೂಪಾ ಅಯ್ಯರ್ ನಿರ್ದೇಶಿಸಿರುವ ಚಿತ್ರ ನಾಳೆ ಸಂಸತ್ತಲ್ಲಿ ಪ್ರದರ್ಶನ! ಪ್ರತಿಯೊಬ್ಬ ಭಾರತೀಯ ಯಾಕೆ ಈ ಸಿನಿಮಾ ನೋಡಲೇಬೇಕು ಗೊತ್ತಾ?