
ಪಾಟ್ನಾ (ಫೆ.28) ಕಾಡಿನಿಂದ ಚಿರತೆ ನಾಡಿಗೆ ಬರುವುದು ಮಾತ್ರವಲ್ಲ, ನಗರ ಪಟ್ಟಣಗಳಲ್ಲೂ ಕಾಣಿಸಿಕೊಳ್ಳುತ್ತಿರುವುದು ಹೊಸದೇನಲ್ಲ. ಚಿರತೆ ಕಾಣಿಸಿಕೊಂಡ ಬೆನ್ನಲ್ಲೇ ಆತಂಕ ಹೆಚ್ಚಾಗುತ್ತದೆ. ಜನರು ಮನೆಯಿಂದ ಹೊರಬರಲು ಭಯಪಡುತ್ತಾರೆ. ಹೊರಬಂದರೂ ಎಲ್ಲಿ ಚಿರತೆ ದಾಳಿ ಮಾಡಲಿದೆ ಅನ್ನೋ ಭಯ ಆವರಿಸುತ್ತೆ. ಆದರೆ ಇಲ್ಲೊಬ್ಬ ರೈತ ತನ್ನ ಹೊಲಕ್ಕೆ ಬಂದ ಚಿರತೆ ಜೊತೆ ಪಕ್ಕದಲ್ಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಇದು ಕೇವಲ ಸೆಲ್ಫಿಯಲ್ಲ. ಒಂದು ರೀತಿ ಸಾಕು ನಾಯಿ ಜೊತೆ ಸೆಲ್ಫಿ ಕ್ಲಿಕ್ಕಿಸುವ ರೀತಿಯಲ್ಲಿ ಚಿರತೆ ಜೊತೆ ಪೋಟೋ ತೆಗೆದಿದ್ದಾನೆ. ಈ ಘಟನೆ ಬಿಹಾರದಲ್ಲಿ ನಡೆದಿದೆ.
ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಸೂರ್ಯನ ಬೆಳಕು ಇನ್ನು ಸರಿಯಾಗಿ ಬಿದ್ದಿಲ್ಲ. ಎಲ್ಲೆಡೆ ಮುಂಜು ತುಂಬಿಕೊಂಡಿದೆ. ರೈತ ಬೆಳಗ್ಗೆ ಹೊಲಕ್ಕೆ ತೆರಳಿದ್ದಾನೆ. ಹೊಲದಲ್ಲಿನ ಕೆಲಸಕ್ಕಾಗಿ ಕೆಲ ರೈತರು ಹಾಜರಾಗಿದ್ದಾರೆ. ಇನ್ನು ಕೆಲಸ ಆರಂಭಗೊಂಡಿಲ್ಲ. ಆಗಷ್ಟೇ ಹೊಲಕ್ಕೆ ಬಂದಿದ್ದಾರೆ ಅಷ್ಟೆ. ಅಚಾನಕ್ಕಾಗಿ ಚಿರತೆಯೊಂದು ಹೊಲಕ್ಕೆ ನುಗ್ಗಿ ಬಂದಿದೆ. ಚಿರತೆ ಕಂಡ ಕೆಲ ರೈತರು ಮಾರುದ್ದ ದೂರ ಸರಿದಿದ್ದಾರೆ.
ಚಿರತೆ ಹಾರಿ ಬಂದರೂ ಒಬ್ಬ ರೈತ ಮಾತ್ರ ಎದೆಗಂದಿಲ್ಲ. ಧೈರ್ಯವಾಗಿ ಹೊಲದಲ್ಲೇ ನಿಂತಿದ್ದಾನೆ. ಚಿರತೆ ಕೆಲ ಮೀಟರ್ ದೂರದಲ್ಲಿ ನಿಂತಿದೆ. ಸ್ಥಳದಿಂದ ಕಾಲ್ಕೀಳುವ ಬದಲು ರೈತ ನೇರವಾಗಿ ಚಿರತೆ ಬಳಿ ತೆರಳಿದ್ದಾನೆ. ಇತ್ತ ಚಿರತೆ ಕೂಡ ಸೈಲೆಂಟ್ ಆಗಿದೆ. ನಾಯಿ ರೀತಿ ಹೊಲದಲ್ಲಿ ಕುಳಿತಿದೆ. ಇತ್ತ ರೈತ ಚಿರತೆ ಪಕ್ಕದಲ್ಲಿ ನಿಂತು ಫೋನ್ ತೆಗೆದು ಸೆಲ್ಫಿ ಕ್ಲಿಕ್ಕಿಸಿದ್ದಾನೆ. ಈತನ ಕಸರತ್ತನ್ನು ಚಿರತೆ ಕೂಡ ಅಚ್ಚರಿಯಿಂದ ನೋಡಿದೆ. ಇಲ್ಲೀವೆಗೆ ಚಿರತೆ ಆಗಮಿಸುತ್ತಿದ್ದಂತೆ ಇತರ ಪ್ರಾಣಿಗಳು, ಮಾನವರು ಓಡುತ್ತಾರೆ. ಅಥವಾ ದೊಡ್ಡ ಶಬ್ದದ ಮೂಲಕ ಚಿರತೆ ಓಡಿಸುವ ಪ್ರಯತ್ನ ಮಾಡುತ್ತಾರೆ. ಆಧರೆ ಈತನ ನಡೆ ಕಂಡು ಚಿರತೆ ಕೂಡ ಒಂದು ಕ್ಷಣ ದಂಗಾಗಿರುವ ಸಾಧ್ಯತೆ ಇದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಈತನ ಮೊಬೈಲ್ ತೆಗೆಯುವಾಗ ಚಿರತೆ ಒಂದು ಕ್ಷಣ ಬೆಚ್ಚಿದೆ. ಬಳಿಕ ಸುಮ್ಮನಾಗಿದೆ. ಚಿರತೆ ಅಕ್ಷರಶಃ ನಾಯಿ ರೀತಿಯಲ್ಲಿ ಕುಳಿತುಕೊಂಡಿದೆ. ವನ್ಯ ಪ್ರಾಣಿಗಳ ಜೊತೆ ಈ ರೀತಿಯ ನಡೆ ಉತ್ತಮವಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅದು ನಾಯಿ ಅಲ್ಲ ಚಿರತೆ ಕಣೋ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ