
ಡೆಹ್ರಾಡೂನ್: ಖುಷಿ ಖುಷಿಯಾಗಿ ಹಸೆಮಣೆ ಏರಿ ಹೊಸ ಜೀವನದೊಂದಿಗೆ ಗಂಡನ ಮನೆ ಸೇರಬೇಕಾದ ಹುಡುಗಿಯೊಬ್ಬಳು ತನ್ನ ಮೆಹಂದಿ ದಿನವೇ ಡಾನ್ಸ್ ಮಾಡುವ ವೇಳೆಯೇ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಡೆಹ್ರಾಡೂನ್ನ ರೆಸಾರ್ಟೊಂದರಲ್ಲಿ ನಡೆದಿದೆ. ಘಟನೆಯಿಂದಾಗಿ ಮಗಳ ಮದುವೆಯ ಸಂಭ್ರಮದಲ್ಲಿದ್ದ ಪೋಷಕರು ಆಘಾತಕ್ಕೀಡಾಗಿದ್ದಾರೆ. ಹೀಗೆ ಡಾನ್ಸ್ ಮಾಡುತ್ತಲೇ ತನ್ನ ಮದುವೆ ದಿನವೇ ಇಹಲೋಕ ತ್ಯಜಿಸಿದ ಯುವತಿಯನ್ನು 28 ವರ್ಷದ ಶ್ರೇಯಾ ಜೈನ್ ಎಂದು ಗುರುತಿಸಲಾಗಿದೆ. ದೆಹಲಿ ಮೂಲದ ಶ್ರೇಯಾ ಜೈನ್ ಅವರ ಕುಟುಂಬ ಡಿಸ್ಟಿನೇಷನ್ ವೆಡ್ಡಿಂಗ್ಗಾಗಿ ಡೆಹ್ರಾಡೂನ್ನ ರೆಸಾರ್ಟೊಂದನ್ನು ಬುಕ್ ಮಾಡಿತ್ತು. ಆದರೆ ಈಗ ಮದುವೆ ದಿನವೇ ಮಗಳು ಸಾವನ್ನಪ್ಪಿದ್ದು, ಕುಟುಂಬದವರನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ.
ದೆಹಲಿ ನಿವಾಸಿ ಶ್ರೇಯಾ ಹಾಗೂ ಅವರ ಕುಟುಂಬ ಮದುವೆಯ ಸಂಭ್ರಮಾಚರಣೆ ಮಾಡಲು ದೂರದ ಡೆಹ್ರಾಡೂನ್ನ ನಾಕುಚಿಯಾತಲ್ನ ಐಷಾರಾಮಿ ರೆಸಾರ್ಟೊಂದನ್ನು ಬುಕ್ ಮಾಡಿದ್ದರು. ಆದರೆ ಮೆಹಂದಿ ದಿನ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಆಕೆ ಇಹಲೋಕ ತ್ಯಜಿಸಿದ್ದಾಳೆ. ಕುಸಿದ ಬಿದ್ದ ಆಕೆಗೆ ಕೂಡಲೇ ವೈದ್ಯಕೀಯ ನೆರವು ನೀಡಿದರು ಆಸ್ಪತ್ರೆಯಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾಳೆ ಎಂದು ಘೋಷಣೆ ಮಾಡಿದ್ದಾರೆ. ಹಠಾತ್ ಎದುರಾದ ಈ ಸಾವಿನಿಂದ ಕುಟುಂಬದವರು ಆಘಾತಕ್ಕೀಡಾಗಿದ್ದು, ಆಕೆಯ ಅಂತ್ಯಕ್ರಿಯೆಯನ್ನು ದೆಹಲಿ ಬದಲು ನೈನಿತಲ್ ಸಮೀಪದ ಕತ್ಗೊಡಮ್ನಲ್ಲೇ ಮಾಡಿ ಮುಗಿಸಿದ್ದಾರೆ.
ಮಗಳ ಮದುವೆ ಮರುದಿನವೇ ತಂದೆ ಹಠಾತ್ ಸಾವು: ಕೊರೋನಾ ಶಂಕೆ
ಮುದ್ದಿನ ಮಗಳ ಹೆಸರಲ್ಲಿ ಕ್ಲಿನಿಕ್ ತೆರೆದಿದ್ದ ಅಪ್ಪ
ಮೃತ ಮದುಮಗಳು ಶ್ರೇಯಾ ಅವರ ತಂದೆ ಡಾ. ಸಂಜಯ್ ಜೈನ್ ಮಕ್ಕಳ ತಜ್ಞರಾಗಿದ್ದು, ಅವರು ದೆಹಲಿಯ ದ್ವಾರಕಾದಲ್ಲಿ 'ಶ್ರೇಯಾ ಸ್ಪೆಶಾಲಿಸ್ಟ್ ಪಾಲಿ ಕ್ಲಿನಿಕ್'ನ್ನು ನಡೆಸುತ್ತಿದ್ದು, ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಲು ಪ್ಲಾನ್ ಮಾಡಿದ್ದರು. ವರ ಹಾಗೂ ಆತನ ಮನೆಯವರು ಉತ್ತರ ಪ್ರದೇಶದ ಲಕ್ನೋದವರಾಗಿದ್ದು, ಹುಡುಗ ಲಕ್ನೋದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ನನ್ನ ಮಗಳು ಬಿಟೆಕ್ ಮುಗಿಸಿ ಎಂಬಿಎ ಮಾಡಿದ್ದಳು, ತನ್ನ ಮದುವೆಯ ಬಗ್ಗೆ ಬಹಳ ಖುಷಿಯಾಗಿದ್ದಳು ಎಂದು ಮಗಳನ್ನು ಕಳೆದುಕೊಂಡ ಸಂಜಯ್ ಜೈನ್ ಅಳಲು ತೋಡಿಕೊಂಡಿದ್ದಾರೆ.
Watch: ಬ್ಯಾಡ್ಮಿಂಟನ್ ಆಡುವಾಗಲೇ ಹಾರ್ಟ್ಅಟ್ಯಾಕ್, ಕೋರ್ಟ್ನಲ್ಲಿಯೇ ಸಿಪಿಆರ್ ಕೊಟ್ರೂ ಪ್ರಯೋಜನವಾಗ್ಲಿಲ್ಲ!
ಘಟನೆಗೆ ಸಂಬಂಧಿಸಿದಂತೆ ಭೀಮ್ತಲ್ನ ಎಸ್ಹೆಚ್ಒ ಇನ್ಸ್ಪೆಕ್ಟರ್ ಜಗದೀಪ್ ನೇಗಿ ಪ್ರತಿಕ್ರಿಯಿಸಿದ್ದು, ಸಂಜಯ್ ಜೈನ್ ಅವರು ತಮ್ಮ ಮಗಳ ಮದುವೆಗಾಗಿ ಕುಮಾನ್ ಮಂಡಲ ವಿಕಾಸ ನಿಗಮದ ಪರಿಚಯ್ ಹೆಸರಿನ ರೆಸಾರ್ಟ್ ಅನ್ನು ಬುಕ್ ಮಾಡಿದ್ದರು. ಭಾನುವಾರ ಮದುವೆ ನಿಗದಿಯಾಗಿದ್ದಾರೆ, ಶನಿವಾರ ಸಂಜೆ ಮೆಹಂದಿ ಕಾರ್ಯಕ್ರಮವಿತ್ತು. ಆದರೆ ಆ ದಿನವೇ ಸಂಭ್ರಮದಲ್ಲಿ ಡಾನ್ಸ್ ಮಾಡುವ ವೇಳೆ ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ಇವರ ಕುಟುಂಬದವರು ಹೆಚ್ಚಿನ ಕಾನೂನು ಪ್ರಕ್ರಿಯೆ ಮಾಡದೇ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಅದರಂತೆ ಅವರು ಅಲ್ಲೇ ಶವಸಂಸ್ಕಾರ ನಡೆಸಿದ್ದಾರೆ ಎಂದು ಹೇಳಿದರು.
ಬದುಕಿನ ಕೊನೆ ನೃತ್ಯ ಮುಗಿಸಿ ಹೊರಟ ವಧು
ಒಟ್ಟಿನಲ್ಲಿ ಹೊಸ ಬದುಕಿನ ಕನಸು ಕಾಣುತ್ತಾ ಹಸೆಮಣೆ ಹೊಸ್ತಿಲಲ್ಲಿದ್ದ ಯುವತಿ ಹಠಾತ್ ಆಗಿ ಸಾವನ್ನಪ್ಪಿದ್ದು ವಿಧಿ ವಿಪರ್ಯಾಸವೇ ಸರಿ.
ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತದಿಂದ ಯುವಕ ಸಾವು, ವೀಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ