
ಕೋಲ್ಕತಾ: ಕಳೆದ ವಾರ ಕೋಲ್ಕತಾದಲ್ಲಿ ಹತರಾದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಅನಾರ್ ಅವರ ಸಾವಿಗೆ ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ನಡೆಯುತ್ತಿದ್ದ 80 ಕೋಟಿ ರು. ಮೌಲ್ಯದ ಚಿನ್ನಕಳ್ಳಸಾಗಣೆ ಹಗರಣ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ಅನ್ವರುಲ್ ಹಾಗೂ ಅವರ ಸ್ನೇಹಿತ ಶಹೀನ್ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿದ್ದರು. ಕೆಲ ತಿಂಗಳ ಹಿಂದೆ ಇದರಲ್ಲಿ ಹೆಚ್ಚಿನ ಪಾಲು ಬೇಕೆಂದು ಶಹೀನ್ ಕೇಳಿದ್ದ. ಆದರೆ ಇದಕ್ಕೆ ಅನ್ವರುಲ್ ಒಪ್ಪಿರಲಿಲ್ಲ. ಇದರ ಜೊತೆಗೆ ಅನ್ವರುಲ್ ಇಡೀ ದಂದೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ. ಇದರ ಒಟ್ಟು ಮೌಲ್ಯ 80 ಕೋಟಿ ರು.ನಷ್ಟಿತ್ತು. ಈ ಕಾರಣವಾಗಿ ಇವರಿಬ್ಬರ ನಡುವೆ ವೈಮನಸ್ಯ ಉಂಟಾಗಿತ್ತು. ಇದರ ಪರಿಣಾಮ ಅನ್ವರುಲ್ ಹತ್ಯೆಗೆ ಶಹೀನ್ 5 ಕೋಟಿ ರು. ಸುಪಾರಿ ಕೊಟ್ಟಿದ್ದ ಎಂದು ಬಾಂಗ್ಲಾದೇಶ ಗುಪ್ತಚರ ಸಂಸ್ಥೆ ಹೇಳಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಹನಿಟ್ರ್ಯಾಪ್ಗೆ ಬಲಿಯಾದ್ರಾ ಭಾರತದಲ್ಲಿ ಹತ್ಯೆಯಾದ ಬಾಂಗ್ಲಾದೇಶದ ಸಂಸದ
ಮೇ 13 ರಂದು ನಾಪತ್ತೆಯಾಗಿದ್ದ ಸಂಸದ ಅನ್ವರುಲ್ ಮೇ 22 ರಂದು ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಾಂಗ್ಲಾದೇಶ ಪ್ರಜೆಗಳನ್ನೇ ಬಂಧಿಸಲಾಗಿತ್ತು. ಜೊತೆಗೆ ತನಿಖೆಗಿಳಿದ ಸಿಐಡಿ ಪೊಲೀಸರಿಗೆ ಕೋಲ್ಕತ್ತಾದ ನ್ಯೂ ಟೌನ್ ಫ್ಲಾಟ್ನಲ್ಲಿ ರಕ್ತದ ಕಲೆಗಳು ಹಾಗೂ ಹಲವು ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿದ್ದವು. ವರದಿಗಳ ಪ್ರಕಾರ ಬಾಂಗ್ಲಾದೇಶದ ಸಂಸದ ಅನ್ವರುಲ್ ವೈದ್ಯಕೀಯ ಚಿಕಿತ್ಸೆಗಾಗಿ ಮೇ 12ರಂದು ಭಾರತಕ್ಕೆ ಆಗಮಿಸಿದ್ದರು. ಆದರೆ ಆಗಮಿಸಿದ ಎರಡೇ ದಿನಕ್ಕೆ ಅವರು ನಾಪತ್ತೆಯಾಗಿದ್ದರು.
ಇದಾದ ನಂತರ ಕೋಲ್ಕತ್ತಾ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದರು. ಮೇ 13ರಂದು ಅವರು ಕೊನೆಯದಾಗಿ ಸ್ನೇಹಿತರ ಜೊತೆ ಬಿಧನ್ನಗರದ ಮನೆಯಲ್ಲಿ ಕಾಣಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಧನ್ನಗರದಲ್ಲಿ ವಾಸವಾಗಿರುವ ಸಂಸದರ ಕುಟುಂಬ ಸ್ನೇಹಿತರೊಬ್ಬರು ಪ್ರತಿಕ್ರಿಯಿಸಿದ್ದು, ಸಂಸದ ಅನ್ವರುಲ್ ದೆಹಲಿಗೆ ಹೋಗುವುದಾಗಿ ಹೇಳಿದ್ದರು. ಆದರೆ ಮೇ 13ರಿಂದ ಅವರು ನೋಡುವುದಕ್ಕೆ ಸಿಕ್ಕಿರಲಿಲ್ಲ ಎಂದು ಹೇಳಿದ್ದರು. ಅನ್ವರುಲ್ ಅವರು ಬಾಂಗ್ಲಾದೇಶದಲ್ಲಿ ಅಧಿಕಾರದಲ್ಲಿರುವ ಶೇಕ್ ಹಸೀನಾ ಅವರ ಬಾಂಗ್ಲಾದೇಶ್ ಅವಾಮಿ ಲೀಗ್ನ ಸದಸ್ಯರಾಗಿದ್ದರು.
ಬಾಂಗ್ಲಾ ಅಕ್ರಮ ವಲಸಿಗರಿಂದಲೇ ಭಾರತದಲ್ಲಿ ಬಾಂಗ್ಲಾದೇಶದ ಸಂಸದನ ಕೊಲೆ: ಸಿಐಡಿ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು
ಆದರೆ ಅವರನ್ನು ಭೀಕರವಾಗಿ ಹತ್ಯೆಗೈದ ದುಷ್ಕರ್ಮಿಗಳು ಅವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕೋಲ್ಕತ್ತಾ ನಗರದ ವಿವಿಧೆಡೆ ಎಸೆದಿದ್ದರು ಎಂಬುದು ತನಿಖೆಯಿಂದ ಬಯಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ