
ನವದೆಹಲಿ: ನಿನ್ನೆ ಅಗ್ನೇಯ ದೆಹಲಿಯ ಅಮರ್ ಕಾಲೋನಿಯಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮನೆಯ ಮಾಜಿ ಕೆಲಸಗಾರ 19 ವರ್ಷದ ರಾಹುಲ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಮತ್ತಷ್ಟು ಪಾತಕ ಕೃತ್ಯಗಳನ್ನು ಎಸಗಿರುವುದು ಬೆಳಕಿಗೆ ಬಂದಿದೆ.
ನಿನ್ನೆ ಅಗ್ನೇಯ ದೆಹಲಿಯಲ್ಲಿರುವ ಹಿರಿಯ ಐಆರ್ಎಸ್ ಅಧಿಕಾರಿಯ ಮನೆಯಲ್ಲೇ ಅಧಿಕಾರಿಯ 22 ವರ್ಷದ ಪುತ್ರಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಕೊಲೆಯಾದ ಯುವತಿ ಎಂಜಿನಿಯರಿಂಗ್ ಪದವಿಧರೆಯಾಗಿದ್ದು, ಯುಪಿಎಸ್ಸಿ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದಳು. ಪ್ರಾಥಮಿಕ ತನಿಖೆಗಳಿಂದ ಆಕೆಯನ್ನು ಹತ್ಯೆ ಮಾಡುವುದಕ್ಕೂ ಮೊದಲು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಳಿಕ ಮೊಬೈಲ್ ಚಾರ್ಜರ್ನಿಂದ ಕತ್ತು ಬಿಗಿದು ಆಕೆಯನ್ನು ಸಾಯಿಸಿರುವುದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಐಆರ್ಎಸ್ ಅಧಿಕಾರಿ ಮನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ, ತಿಂಗಳ ಹಿಂದಷ್ಟೇ ಕೆಲಸದಿಂದ ಉಚ್ಚಾಟಿಸಲ್ಪಟ್ಟಿದ್ದ ಆರೋಪಿ ರಾಹುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಾಜಸ್ಥಾನದ ಆಲ್ವಾರ ನಿವಾಸಿಯಾಗಿದ್ದು, ದ್ವಾರಕಾ ಸಮೀಪದ ಹೊಟೇಲೊಂದರಲ್ಲಿ ಈತ ತಂಗಿದ್ದ. ಇತರ ಕೆಲಸಗಾರರ ಬಳಿ ಹಣ ಕೇಳಿ ಮತ್ತೆ ವಾಪಸ್ ಕೊಡದೇ ಇದ್ದ ಕಾರಣಕ್ಕೆ ಈತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆದರೆ ಈ ಕೊಲೆ ಪ್ರಕರಣ ಬೆಳಕಿಗೆ ಬಂದ ನಂತರ ಈತನ ಚಲನವಲನಗಳ ಮೇಲೆ ಕಣ್ಣಿಟ್ಟ ಪೊಲೀಸರು ಸ್ಥಳೀಯ ಹೊಟೇಲೊಂದರಲ್ಲಿ ಈತನನ್ನು ಬಂಧಿಸಿದ್ದಾರೆ.
ನಂತರ ಆತನ ವಿಚಾರಣೆ ವೇಳೆ ಆರೋಪಿಯ ಮತ್ತಷ್ಟು ಪಾತಕ ಕೃತ್ಯಗಳು ಬೆಳಕಿಗೆ ಬಂದಿವೆ. ಪೊಲೀಸರ ಪ್ರಕಾರ ಆರೋಪಿ ದೆಹಲಿಯಲ್ಲಿ ಯುವತಿಯನ್ನು ಕೊಲೆ ಮಾಡುವುದಕ್ಕೂ ಕೆಲ ಗಂಟೆಗಳ ಮೊದಲು ತನ್ನ ಊರಿನಲ್ಲಿಯೂ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ. ಈತನ ಕೃತ್ಯವನ್ನು ಆ ಸಂತ್ರಸ್ತ ಮಹಿಳೆ ಅಲ್ವಾರದಲ್ಲಿತನ್ನ ಕುಟುಂಬದವರಿಗೆ ತಿಳಿಸಿದ್ದರು. ಆರೋಪಿ ರಾಹುಲ್ ಸಂತ್ರಸ್ತ ಮಹಿಳೆಯ ಗಂಡನ ಸ್ನೇಹಿತನಾಗಿದ್ದ. ಅವರು ಆಗಾಗ ಜೊತೆಯಾಗಿ ಲುಡೋ ಗೇಮ್ ಆಡುತ್ತಿದ್ದರು. ಆರೋಪಿಯ ಕುಟುಂಬವು ಈ ಹಿಂದೆ ಸಂತ್ರಸ್ತೆಯ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು ಹೀಗಾಗಿ ಎರಡು ಕುಟುಂಬಗಳ ಮಧ್ಯೆ ಸಂಪರ್ಕವಿತ್ತು.
ಇದನ್ನೂ ಓದಿ: ಜಲ್ಲಿಕಲ್ಲು ಸಾಗಿಸುತ್ತಿದ್ದ ಟ್ರಕ್ ಬ್ರೇಕ್ ಫೇಲ್ ಆಗಿ ಬೊಲೆರೋಗೆ ಡಿಕ್ಕಿ: 11 ಜನರ ದಾರುಣ ಸಾವು
ಅಲ್ವಾರದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ನಂತರ ಆರೋಪಿ ದೆಹಲಿಗೆ ಬಂದಿದ್ದ, ನಂತರ ಐಆರ್ಎಸ್ ಅಧಿಕಾರಿ ಕೊಲೆ ಮಾಡಿದ್ದ. ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆತನನ್ನು ಕೆಲಸದಿಂದ ವಜಾಗೊಳಿಸಿದ ನಂತರದ ಅಸಮಾಧಾನವು ಈ ಕೃತ್ಯಕ್ಕೆ ಕಾರಣವಾಗಿರಬಹುದೇ ಎಂಬ ಬಗ್ಗೆ ಅಧಿಕಾರಿಗಳು ಪ್ರಸ್ತುತ ಪರಿಶೀಲಿಸುತ್ತಿದ್ದಾರೆ.
ದೆಹಲಿಯಲ್ಲಿ ನಡೆದ ಕೊಲೆಗೆ ಕಾರಣವೇನೆಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಜಂಟಿ ಪೊಲೀಸ್ ಆಯುಕ್ತ ವಿಜಯ್ ಕುಮಾರ್, ಈ ಘಟನೆಯ ಹಿಂದಿನ ಉದ್ದೇಶವೇನೆಂದು ನೀವು ಕೇಳುತ್ತಿದ್ದರೆ, ಆತ ನಿನ್ನೆ ಅಲ್ವಾರ್ನಲ್ಲಿ ಮತ್ತೊಂದು ಅಪರಾಧ ಮಾಡಿದ್ದಾರೆ. ಇದೇ ರೀತಿಯ ಅಪರಾಧ ಮಾಡಿದ್ದಾರೆ. ಅವರು ಈ ರೀತಿಯ ಕ್ರಿಮಿನಲ್ ಮನಸ್ಥಿತಿಯನ್ನು ಹೊಂದಿರುವ ಸಾಧ್ಯತೆಯಿದೆ. ಇದು ವಿಚಾರಣೆಯ ಮೂಲಕ ಮತ್ತಷ್ಟು ದೃಢಪಡುತ್ತದೆ ಎಂದು ಹೇಳಿದರು. ಕೆಲಸದಿಂದ ತೆಗೆದು ಹಾಕಿರುವುದು ಕೂಡ ಘಟನೆಗೆ ಕಾರಣವಾಗಿರಬಹುದು. ಆದರೆ ವಿಚಾರಣೆ ನಂತರವೇ ಎಲ್ಲಾ ವಿಚಾರಗಳು ಬೆಳಕಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 80 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆಯಾಜ್ನನ್ನು ಬೀದಿಯಲ್ಲಿ ಮೆರವಣಿಗೆ ಮಾಡಿದ ಮಹಾ ಪೊಲೀಸರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ