ಪಾಕ್‌ಗೆ ಪೋಲಾಗುತ್ತಿದ್ದ ಸಿಂಧೂ ನದಿ ನೀರನ್ನು ಲಡಾಕ್‌ಗೆ ಬಳಸಿಕೊಂಡ ಮೋದಿ ಸರ್ಕಾರ, ಕೃಷಿ ಕ್ರಾಂತಿಗೆ ಸಾಕ್ಷಿಯಾಯ್ತು ಭಾರತ

Published : Aug 22, 2026, 09:48 AM IST
IWT

ಸಾರಾಂಶ

ಸಿಂಧೂ ಜಲ ಒಪ್ಪಂದದಡಿ ಪಾಕಿಸ್ತಾನಕ್ಕೆ ವ್ಯರ್ಥವಾಗಿ ಹರಿಯುತ್ತಿದ್ದ ಹಿಮನದಿ ನೀರನ್ನು ಲಡಾಖ್ ಆಡಳಿತ ಯಶಸ್ವಿಯಾಗಿ ಸದ್ಬಳಕೆ ಮಾಡಿಕೊಂಡಿದೆ. ಈ ಯೋಜನೆಯಿಂದಾಗಿ 'ಇಗೂ-ಫೇ' ಕಾಲುವೆಗೆ ಜೀವಕಳೆ ಬಂದಿದ್ದು, ಸಾವಿರಾರು ಎಕರೆ ಬಂಜರು ಭೂಮಿ ಹಸಿರಾಗುವ ನಿರೀಕ್ಷೆಯಲ್ಲಿದೆ.

ನವದೆಹಲಿ (ಆ.22): ಸಿಂಧೂ ಜಲ ಒಪ್ಪಂದವು (IWT) ಭಾರತಕ್ಕೆ ಎಷ್ಟು ಹಾನಿಕಾರಕವಾಗಿತ್ತು ಎಂಬುದಕ್ಕೆ ಈಗ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ ಸಾಕ್ಷಿ ಒದಗಿಸಿದೆ. ಸಿಂಧು ನದಿಯಲ್ಲಿ ಈವರೆಗೆ ವ್ಯರ್ಥವಾಗಿ ಪಾಕಿಸ್ತಾನದತ್ತ ಹರಿದುಹೋಗುತ್ತಿದ್ದ ಹಿಮನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಲಡಾಖ್ ಆಡಳಿತವು ತನ್ನ ಚಿತ್ರಣವನ್ನೇ ಬದಲಾಯಿಸಿಕೊಂಡಿದೆ. ಪಕ್ಷಭೇದ ಮರೆತು ಈ ಮಹತ್ಕಾರ್ಯವನ್ನು ಕೊಂಡಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಲಡಾಖ್ ಆಡಳಿತಕ್ಕೆ ಮುಕ್ತಕಂಠದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸಿಂಧೂ ಜಲ ಒಪ್ಪಂದದ ರದ್ದತಿ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಪಾಕಿಸ್ತಾನದಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ವಿರುದ್ಧ ಕೂಗಾಟ ನಡೆಸುತ್ತಿರುವ ಪಾಕಿಸ್ತಾನಕ್ಕೆ, ಈ ಒಪ್ಪಂದವು ಇಷ್ಟು ವರ್ಷಗಳ ಕಾಲ ಹೇಗೆ ಏಕಪಕ್ಷೀಯವಾಗಿ ಲಾಭ ತಂದುಕೊಡುತ್ತಿತ್ತು ಎಂಬುದನ್ನು ಭಾರತ ಈಗ ಜಗತ್ತಿಗೆ ತೋರಿಸಿಕೊಟ್ಟಿದೆ. ತನ್ನ ಸ್ವಂತ ಭೂಮಿ ಮತ್ತು ಜನರ ಹಿತಾಸಕ್ತಿಯನ್ನು ಬಲಿ ಕೊಟ್ಟು, ಶತ್ರು ರಾಷ್ಟ್ರಕ್ಕಾಗಿ ಭಾರತವು ಬರೋಬ್ಬರಿ 65 ವರ್ಷಗಳ ಕಾಲ ತನ್ನ ನೈಸರ್ಗಿಕ ಜಲಸಂಪನ್ಮೂಲವನ್ನು ಹರಿಯಲು ಬಿಟ್ಟಿತ್ತು. ಆದರೆ, ಕೇವಲ ಒಂದು ವರ್ಷದ ಅವಧಿಯಲ್ಲಿ ಲಡಾಖ್‌ನಲ್ಲಿ ಅದ್ಭುತ ಬದಲಾವಣೆ ಸೃಷ್ಟಿಯಾಗಿದ್ದು, ಸಿಂಧು ನದಿಗೆ ಹರಿದು ಪೋಲಾಗುತ್ತಿದ್ದ ನೀರಿನಿಂದಲೇ ಅಲ್ಲಿನ ರೈತರು ತಮ್ಮ ಜಮೀನುಗಳಿಗೆ ನೀರುಣಿಸುತ್ತಿದ್ದಾರೆ.

ಹಿಮನದಿ ನೀರು ಸದ್ಬಳಕೆ: ಲಡಾಖ್‌ನ ಭಾಗ್ಯೋದಯ

ಲಡಾಖ್‌ಗೆ ತಲುಪುತ್ತಿದ್ದ ಹಿಮನದಿಯ ನೀರಿನ ಪೈಕಿ ದಿನನಿತ್ಯ ಸುಮಾರು 9 ಕೋಟಿ ಲೀಟರ್‌ನಷ್ಟು ನೀರು ಸಿಂಧೂ ನದಿಯನ್ನು ಸೇರಿ ವ್ಯರ್ಥವಾಗಿ ಪಾಕಿಸ್ತಾನದತ್ತ ಹರಿದುಹೋಗುತ್ತಿತ್ತು. ಪಾಕಿಸ್ತಾನ ಎಂದಿಗೂ ಸಿಂಧು ನದಿಯ ನೀರನ್ನು ದಕ್ಷತೆಯಿಂದ ಬಳಸಿಕೊಳ್ಳದೆ ಪೋಲು ಮಾಡಿತ್ತು. ಆದರೆ, ಸಿಂಧು ಜಲ ಒಪ್ಪಂದ ಸ್ಥಗಿತಗೊಂಡ ಬಳಿಕ ಲಡಾಖ್ ಆಡಳಿತವು ದಿಟ್ಟ ಹೆಜ್ಜೆ ಇಟ್ಟು ಪರಿಸ್ಥಿತಿಯನ್ನು ಬದಲಾಯಿಸಿದೆ. ಪರಿಣಾಮವಾಗಿ, ಸಿಂಧು ನದಿಗೆ ಹರಿದು ವ್ಯರ್ಥವಾಗುತ್ತಿದ್ದ ಹಿಮನದಿಯ ನೀರು ಈಗ ದಿನಕ್ಕೆ ಕೇವಲ 50 ಲಕ್ಷ ಲೀಟರ್‌ಗೆ ಕುಸಿದಿದೆ.

ಜಲಸಂಕಟ ಮೆಟ್ಟಿ ನಿಂತ ಲಡಾಖ್ ಸಾಧನೆ

ಲಡಾಖ್‌ನ ಉಪರಾಜ್ಯಪಾಲ (ಎಲ್‌ಜಿ) ವಿನಯ್ ಕುಮಾರ್ ಸಕ್ಸೇನಾ ಅವರು 2026ರ ಆಗಸ್ಟ್‌ನಲ್ಲಿ ಈ ಭಾಗಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು. ಆಂಗ್ಲ ಪತ್ರಿಕೆ 'ದಿ ಎಕನಾಮಿಕ್ ಟೈಮ್ಸ್' ವರದಿ ಪ್ರಕಾರ, ಆಗಸ್ಟ್ 16ರಂದು ಕೈಗೊಂಡ ಪ್ರವಾಸದ ವೇಳೆ ಚುಚೋಟ್ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಕ್ಸೇನಾ, ಸ್ಟೋಕ್ ಗ್ಲೇಷಿಯರ್‌ನ ಸುಮಾರು 2 ಕೋಟಿ ಲೀಟರ್ ನೀರನ್ನು ಆ ಒಣಗಿದ ಗ್ರಾಮದ ಕಾಲುವೆಗೆ ತಿರುಗಿಸುವಲ್ಲಿ ಲಡಾಖ್ ಆಡಳಿತ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಕೃಷಿಯ ಸ್ಥಿರತೆ ಹಾಗೂ ಜಲಸಂಕಟದಿಂದ ಮುಕ್ತಿ ಪಡೆಯುವ ನಿಟ್ಟಿನಲ್ಲಿ ಇದೊಂದು ಬೃಹತ್ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ.

ಲಡಾಖ್ ಆಡಳಿತಕ್ಕೆ ಶಶಿ ತರೂರ್ ಮೆಚ್ಚುಗೆ

ಕೃಷಿ ಮತ್ತು ರೈತರ ಹಿತದೃಷ್ಟಿಯಿಂದ ಕೈಗೊಂಡ ಈ ಬೃಹತ್ ಕಾರ್ಯವನ್ನು ಸಂಸದೀಯ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಹಾಗೂ ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಮುಕ್ತವಾಗಿ ಪ್ರಶಂಸಿದ್ದಾರೆ. ರಾಜಕೀಯವನ್ನು ಬದಿಗಿಟ್ಟು ಎಲ್‌ಜಿ ವಿನಯ್ ಕುಮಾರ್ ಸಕ್ಸೇನಾ ಅವರ 'ಎಕ್ಸ್' (ಟ್ವಿಟರ್) ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ತರೂರ್, 'ಸಾಧಿಸಿದ್ದೀರಿ, ಶಹಬಾಸ್!' ಎಂದು ಅಭಿನಂದಿಸಿದ್ದಾರೆ.

"ಲಡಾಖ್ ಉಪರಾಜ್ಯಪಾಲರೇ, ಅತ್ಯುತ್ತಮ ಕೆಲಸ! ಇತ್ತೀಚೆಗೆ ನನ್ನ ನೇತೃತ್ವದ ಸಂಸದೀಯ ಸಮಿತಿಯು ಲಡಾಖ್‌ಗೆ ಭೇಟಿ ನೀಡಿದ್ದಾಗ ನಮಗೆ ಲಭಿಸಿದ ಮಾಹಿತಿಯಂತೆ, ಈ ಯೋಜನೆ ಪರಿಸರ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಕ್ಷೇತ್ರದಲ್ಲಿ ಇಡೀ ದೇಶಕ್ಕೇ ಮಾದರಿಯಾಗುವ ಸಾಮರ್ಥ್ಯ ಹೊಂದಿದೆ. ಹೀಗೆಯೇ ಮುಂದುವರಿಯಿರಿ" ಎಂದು ಶಶಿ ತರೂರ್ ಶ್ಲಾಘಿಸಿದ್ದಾರೆ.

ಬಂಜರು ಭೂಮಿಗೆ ಜೀವಕಳೆ ತಂದ ಸಿಂಧು ನೀರು

ಶಶಿ ತರೂರ್ ನೇತೃತ್ವದ ಸಂಸದೀಯ ನಿಯೋಗವು ಇತ್ತೀಚೆಗಷ್ಟೇ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

  • ಲಡಾಖ್ ಆಡಳಿತವು ಸ್ಟೋಕ್ ನಾಲಾದಿಂದ ಎರಡು ಡೈವರ್ಷನ್‌ಗಳನ್ನು (ನೀರು ತಿರುಗಿಸುವ ವ್ಯವಸ್ಥೆ) ಯಶಸ್ವಿಯಾಗಿ ನಿರ್ಮಿಸುವ ಮೂಲಕ ಈ ಮೈಲಿಗಲ್ಲು ಸಾಧಿಸಿದೆ.
  • ಇದರಿಂದಾಗಿ, ಸ್ಟೋಕ್ ಕಾಂಗ್ರಿ ಗ್ಲೇಷಿಯರ್‌ನಿಂದ ಸಿಂಧೂ ನದಿಯ ಮೂಲಕ ಪಾಕಿಸ್ತಾನದ ತಗ್ಗು ಪ್ರದೇಶಗಳಿಗೆ ಹರಿದು ಪೋಲಾಗುತ್ತಿದ್ದ 9 ಕೋಟಿ ಲೀಟರ್ ನೀರನ್ನು ಇದೀಗ 'ಇಗೂ-ಫೇ' ನೀರಾವರಿ ಕಾಲುವೆಗೆ ಯಶಸ್ವಿಯಾಗಿ ತಿರುಗಿಸಲಾಗಿದೆ.
  • ವಿಶೇಷವೆಂದರೆ, ಈ ಯೋಜನೆಗೆ ಯಾವುದೇ ದೊಡ್ಡ ಪ್ರಮಾಣದ ಬಂಡವಾಳ ವೆಚ್ಚವಾಗಿಲ್ಲ. ಕೇವಲ ಸರಳ ಹಾಗೂ ಸಾಂಪ್ರದಾಯಿಕ ಮಣ್ಣಿನ ಕಾಮಗಾರಿಯ ಮೂಲಕವೇ ಜಗತ್ತಿಗೆ ಮಾದರಿಯಾಗುವಂತಹ ದೊಡ್ಡ ಬದಲಾವಣೆಯನ್ನು ತರಲಾಗಿದೆ.
  • ಸದ್ಯ ಸ್ಟೋಕ್ ನಾಲಾದಲ್ಲಿ ಹರಿಯುವ 36 ಕ್ಯೂಸೆಕ್ ನೀರಿನ ಪೈಕಿ 25 ಕ್ಯೂಸೆಕ್ ನೀರು ಕಾಲುವೆಗೆ ಹರಿಯುತ್ತಿದ್ದು, ಕಾಲುವೆಯ ನೀರಿನ ಸರಬರಾಜು ಸಾಮರ್ಥ್ಯ 50 ಕ್ಯೂಸೆಕ್‌ನಿಂದ 75 ಕ್ಯೂಸೆಕ್‌ಗೆ ಹೆಚ್ಚಾಗಿದೆ.
  • ಈವರೆಗೆ ನದಿಯಲ್ಲಿ ಹರಿದು ಪಾಕಿಸ್ತಾನಕ್ಕೆ ಸೇರಿ ಪೋಲಾಗುತ್ತಿದ್ದ ನೀರು, ಇಂದಿನಿಂದ 12 ಗ್ರಾಮಗಳ ಜನರ ಜೀವನದ ಜೀವಧಾತುವಾಗಿ ಮಾರ್ಪಟ್ಟಿದೆ. ಅಲ್ಲದೆ, ದಶಕಗಳಿಂದ ಪಾಳುಬಿದ್ದಿದ್ದ 1,000 ಎಕರೆಗೂ ಅಧಿಕ ಬಂಜರು ಭೂಮಿ ಶೀಘ್ರದಲ್ಲೇ ಹಸಿರಿನಿಂದ ಕಂಗೊಳಿಸಲಿದೆ.

ಸಿಂಧು ಜಲ ಒಪ್ಪಂದದ ಪರಿಣಾಮವಾಗಿ ಕಳೆದ ಹಲವು ದಶಕಗಳಿಂದ ಕೇವಲ ಒಣ ನಾಲೆಯಂತಿದ್ದ 43 ಕಿಲೋಮೀಟರ್ ಉದ್ದದ 'ಇಗೂ-ಫೇ' ನೀರಾವರಿ ಕಾಲುವೆಯಲ್ಲಿ ಈಗ ಜೀವಜಲ ಮೊಳಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಆರ್ಥಿಕ ಸ್ಥಿತಿ ಆಧರಿಸಿ ಮೀಸಲಾತಿ ನೀಡಿ..' ಜಾತಿ ಆಧರಿತ ರಿಸರ್ವೇಷನ್‌ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ
ಶಾಲೆ ತಪಾಸಣೆಗೆ ಬಂದ ಜಿರಳೆ ಕಾರ್ಯಕರ್ತರನ್ನು ಅಟ್ಟಾಡಿಸಿ ಓಡಿಸಿದ ಸ್ಥಳೀಯರು!