
ರೈಲ್ವೆ ಪ್ರಯಾಣಿಕನೋರ್ವನಿಗೆ ಪ್ಲಾಟ್ಫಾರ್ಮ್ನಲ್ಲಿ ಸಮೋಸಾ ಮಾರ್ತಿದ್ದವನೋರ್ವ ಹಲ್ಲೆಗೆ ಮುಂದಾಗಿದ್ದಲ್ಲದೇ ಆತನ ಸುಲಿಗೆ ನಡೆಸಿದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೈಲ್ವೆಯ ಕೆಟರಿಂಗ್ಸ್ ಗುತ್ತಿಗೆ ಪಡೆಯುವವರ ಈ ಆಹಾರ ಮಾಫಿಯಾದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಧ್ಯಪ್ರದೇಶ ಜಬಲ್ಪುರ ರೈಲು ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆ ರೈಲಿನಿಂದ ಇಳಿದ ಯುವಕನೋರ್ವ ಸಮೋಸಾ ಖರೀದಿಸಲು ಪ್ಲಾಟ್ಫಾರ್ಮ್ಗೆ ಬಂದಿದ್ದಾನೆ. ಆದರೆ ಕೆಲ ನಿಮಿಷದಲ್ಲಿ ರೈಲು ಹೊರಡಲು ಆರಂಭಿಸಿದೆ. ಹೀಗಾಗಿ ರೈಲು ಮಿಸ್ ಆಗುವ ಭಯದಿಂದ ಆತ ಸಮೋಸಾ ಬೇಡ ಎಂದು ಸೀದಾ ಹೋಗಿ ರೈಲು ಹಿಡಿಯಲು ಮುಂದಾಗಿದ್ದಾನೆ. ಈ ವೇಳೆ ಸಮೋಸಾ ಮಾರ್ತಿದ್ದವ ಆತನ ಕಾಲರ್ ಹಿಡಿದು ಹಿಂದೆ ಜಗ್ಗಿ ಆಹಾರ ವೇಸ್ಟ್ ಆಗ್ತಿದೆ ಖರೀದಿಸಿ ಹೋಗುವಂತೆ ಆತನ ಟೀಶರ್ಟ್ನಲ್ಲೇ ಹೋಗಲು ಬಿಡದೇ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ನಂತರ ಆತ ಯುಪಿಐನಲ್ಲಿ ಸಮೋಸಾದ ಹಣ ಪಾವತಿ ಮಾಡುವುದಕ್ಕೆ ಮುಂದಾಗಿದ್ದು, ಈ ವೇಳೆ ಸಮೋಸಾ ಮಾರ್ತಿದ್ದವನ ಯುಪಿಯೂ ಅಲ್ಲಿ ಕೆಲಸ ಮಾಡಿಲ್ಲ, ಇದರಿಂದ ಇತ್ತ ರೈಲು ತಪ್ಪಿಸಿಕೊಳ್ಳುವ ಭಯದಲ್ಲಿದ್ದ ಯುವಕ ಆತನಿಗೆ ಎರಡು ಸಮೋಸಾಗಾಗಿ ತನ್ನ ಕೈನಲ್ಲಿದ್ದ ಡಿಜಿಟಲ್ ವಾಚನ್ನು ಬಿಚ್ಚಿ ಕೊಟ್ಟು ಅಲ್ಲಿಂದ ಹೋಗುತ್ತಾನೆ. ಈ ಸಮೋಸಾ ಮಾರ್ತಿದ್ದವ ಹಿಡಿದು ಎಳೆದಾಡಿದ ರಭಸಕ್ಕೆ ಆತನ ಚಪ್ಪಲಿ ಕೊಡ ಕಳಚಿ ಬೀಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರು ಈ ರೈಲು ನಿಲ್ದಾಣದಲ್ಲಿ ಆಹಾರ ಮಾರುವವರು ಮಾಡುತ್ತಿರುವ ಈ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. NCMIndia Council For Men Affairs(@NCMIndiaa)ಎಂಬ ಪೇಜ್ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಹೀಗೆ ಬರೆದಿದ್ದಾರೆ, ಭಾರತೀಯ ರೈಲ್ವೆಯ ಅಡುಗೆ ಮಾಫಿಯಾ ಮತ್ತೆ ಅದನ್ನೇ ಮಾಡಿತು. ಜಬಲ್ಪುರ ರೈಲು ನಿಲ್ದಾಣದಲ್ಲಿ ಒಬ್ಬ ಪ್ರಯಾಣಿಕ ಸಮೋಸಾ ಖರೀದಿಸಲು ಹೋದ. ಆದರೆ ಅವನ ಯುಪಿಐ ಕೆಲಸ ಮಾಡಲಿಲ್ಲ ಮತ್ತು ಇದ್ದಕ್ಕಿದ್ದಂತೆ ರೈಲು ಚಲಿಸಲು ಪ್ರಾರಂಭಿಸಿತು, ಆದ್ದರಿಂದ ಅವನು ಸಮೋಸಾ ಖರೀದಿಸದೆ ಹೊರಟು ಹೋದನು. ಆದರೆ ಮಾರಾಟಗಾರ ಅವನ ಕಾಲರ್ ಹಿಡಿದುಕೊಂಡು ಅವನಿಗೆ ನೀನು ನನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಲ್ಲದೇ ಸಮೋಸಾ ಖರೀದಿಸಲು ಒತ್ತಾಯಿಸಿದನು ಮತ್ತು ಕೊನೆಗೆ ಪ್ರಯಾಣಿಕ ಸಮೋಸಾದ ಬದಲು ತನ್ನ ವಾಚ್ನ್ನು ಮಾರಾಟಗಾರನಿಗೆ ಕೊಡಬೇಕಾಯ್ತು ಆತ್ಮೀಯ @ಅಶ್ವಿನಿವೈಷ್ಣವ್ ಜೀ, ದಯವಿಟ್ಟು ಪ್ರಯಾಣಿಕರ ಸುರಕ್ಷತೆಯನ್ನು ಅಡುಗೆ ಮಾಫಿಯಾದ ಕೈಗೆ ಬಿಡಬೇಡಿ ಎಂದು ಅವರು ಬರೆದಿದ್ದಾರೆ.
ಸಮೋಸಾ ಮಾರಾಟಗಾರನ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೂಡಲೇ ವೈರಲ್ ಆಗಿದ್ದು, ಅನೇಕರು ಸಮೋಸಾ ಮಾರ್ತಿದ್ದವನ ರೌಡಿಸಂಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಬಲ್ಪುರ ವಿಭಾಗ/ಪಶ್ಚಿಮ ಮಧ್ಯ ರೈಲ್ವೆಯ ಅಧಿಕೃತ ಟ್ವಿಟ್ಟರ್ ಪೇಜ್ @drmjabalpurನಿಂದ ಪ್ರತಿಕ್ರಿಯೆ ಬಂದಿದ್ದು, ಸರ್, ನಿಮಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ದೂರಿನಲ್ಲಿ ರೈಲ್ವೆ ಆಡಳಿತವು ಆ ಮಾರಾಟಗಾರನನ್ನು ಗುರುತಿಸಿದೆ ಮತ್ತು ಆರ್ಪಿಎಫ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ವಶಕ್ಕೆ ಪಡೆದಿದೆ. ಪರವಾನಗಿದಾರರ ಪರವಾನಗಿಯನ್ನು ರದ್ದುಗೊಳಿಸಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಈ ಆಹಾರ ಕೆಟರರ್ಸ್ಗೆ ರೈಲ್ವೆ ಆಡಳಿತದ ಬಗ್ಗೆ ಯಾವುದೇ ಭಯ ಇಲ್ಲ, ಮಾರಾಟಗಾರರು ಆಹಾರಕ್ಕೆ ಅತಿಯಾದ ಶುಲ್ಕ ವಿಧಿಸುತ್ತಾರೆ ಮತ್ತು ಅಸಭ್ಯವಾಗಿ ವರ್ತಿಸುತ್ತಾರೆ, ನಿಮ್ಮ ಜೀವನದುದ್ದಕ್ಕೂ ವಿಷಾದಿಸುವಂತೆ ಮಾಡುತ್ತಾರೆ. ಕ್ರಮ ಕೈಗೊಳ್ಳುವುದಕ್ಕಿಂತ ಇಂತಹ ಘಟನೆಗಳು ಸಂಭವಿಸದಂತೆ ತಡೆಯುವುದು ಉತ್ತಮ ಎಂದು ಒಬ್ಬರು ಘಟನೆಗೆ ಪ್ರತಿಕ್ರಿಯಿಸಿದ್ದಾರೆ. ಆ ಪ್ರಯಾಣಿಕನಿಗೆ ಮತ್ತೆ ಆತನ ವಾಚ್ ಸಿಗುತ್ತಾ ಎಂದು ಕೆಲವರು ಕೇಳಿದ್ದಾರೆ. ಈ ಘಟನೆ ಸಂಭವಿಸುವ ವೇಳೆ ಆರ್ಪಿಎಫ್ ಪೊಲೀಸರು ಎಲ್ಲಿರ್ತಾರೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ರೈಲ್ವೆ ಪ್ರಯಾಣಿಕ ಸುರಕ್ಷತೆಯ ಬಗ್ಗೆ ಆತಂಕ ಪಡುವಂತೆ ಮಾಡಿದೆ.
ಇದನ್ನೂ ಓದಿ: ಕೆಲ ನಿಮಿಷದ ರೀಲ್ಸ್ಗಾಗಿ ದಯವಿಟ್ಟು ಯಾರೂ ಈ ತರ ಮಾಡ್ಬೇಡಿ: ನಿಮ್ಮಗಾಗಿ ಕಾಯುವ ಜೀವಗಳಿವೆ
ಇದನ್ನೂ ಓದಿ: ಅಮ್ಮ ದೀಪಾವಳಿಗೆ ಮನೆ ಕ್ಲೀನ್ ಮಾಡು ಎಂದಿದ್ದಕ್ಕೆ ಮೊಬೈಲ್ ಟವರ್ ಏರಿದ ಬಾಲಕಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ