
ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಫೇಮಸ್ ಆಗುವ ಹುಚ್ಚಿನಿಂದ ಅನೇಕ ಯುವಕ ಯುವತಿಯರು ಅಪಾಯಕಾರಿ ಸ್ಟಂಟ್ ಮಾಡುವುದಕ್ಕೆ ಹೋಗಿ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಾಗೆಯೇ ಜೀವಕ್ಕೆ ಮಾರಕವಾದ ರೀಲ್ಸ್ ಮಾಡುವುದಕ್ಕೆ ಹೋಗಿ 23ರ ಹರೆಯದ ಯುವಕನೋರ್ವ ಪ್ರಾಣ ಬಿಟ್ಟಿದ್ದು, ಪೋಷಕರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ ಪಲಮನೇರು ಪ್ರದೇಶದ ಸಮೀಪ ಇರುವ ಕೈಗಾಲ್ ಜಲಪಾತದಲ್ಲಿ ಈ ಘಟನೆ ನಡೆದಿದ್ದು, ಯುವಕನ ಕೊನೆಕ್ಷಣ ಕ್ಯಾಮರಾದಲ್ಲಿ ರೆಕಾರ್ಡ್ ಅಗಿದೆ.
ಯುವಕನೋರ್ವ ಸ್ನೇಹಿತರ ಜೊತೆ ಈ ಕೈಗಾಲ್ ಜಲಪಾತಕ್ಕೆ ಭೇಟಿ ನೀಡಿದ್ದಾನೆ. ಈ ವೇಳೆ ಆತ ತಾನು ಜಲಪಾತದಿಂದ ಕೆಳಗೆ ಹಾರುತ್ತೇನೆ ನೀವು ಹಿಂದಿನಿಂದ ರೀಲ್ಸ್ ಮಾಡಬೇಕು ಎಂದು ಹೇಳಿ ಸ್ನೇಹಿತರ ಕೈಗೆ ಮೊಬೈಲ್ ಫೋನ್ ಕೊಟ್ಟು 23ರ ಹರೆಯದ ಯೂನಿಸ್ ಜಲಪಾತದಿಂದ ಕೆಳಗೆ ಹಾರಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಗುರುವಾರ ಆಕ್ಟೋಬರ್ 16ರ ಸಂಜೆಯ ವೇಳೆ ಈ ದುರಂತ ನಡೆದಿದ್ದು, ಇದುವರೆಗಿನ ಮಾಹಿತಿ ಪ್ರಕಾರ ಆ ಯುವಕನ ಶವ ಇನ್ನೂ ಸಿಕ್ಕಿಲ್ಲ, ಯುವಕ ನೀರಿನಲ್ಲಿ ಕೊಚ್ಚಿ ಹೋಗಿರುವ ವಿಚಾರ ತಿಳಿದು ಅಲ್ಲಿನ ಸ್ಥಳೀಯ ಮುಳುಗುತಜ್ಞರು ಆತನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಈ ನಡುವೆ ಯುವಕ ಜಲಪಾತದ ಪಕ್ಕದಿಂದ ನೀರಿಗೆ ಹಾರುತ್ತಿರುವ ದೃಶ್ಯವನ್ನು ಆತನ ಸ್ನೇಹಿತರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಆತನ ಆಸೆಯಂತೆ ವೀಡಿಯೋ ವೈರಲ್ ಆಗಿದೆ. ಆದರೆ ಅದನ್ನು ನೋಡಿ ಖುಷಿಪಡುವುದಕ್ಕೆ ಆತನೇ ಇಲ್ಲಿ ಬದುಕುಳಿದಿಲ್ಲ. ವೀಡಿಯೋ ನೋಡಿದ ಅನೇಕರು ಯೋಚನೆ ಮಾಡದೇ ಜಲಪಾತಕ್ಕೆ ಹಾರಿ ಜೀವ ಕಳೆದುಕೊಂಡ ಯುವಕನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಗುರುವಾರ ಈ ಘಟನೆ ನಡೆದಿದ್ದು, ಇನ್ನೂ ಆತನ ಶವ ಸಿಕ್ಕಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಈ ರೀತಿ ರೀಲ್ಸ್ ಮಾಡಲು ಬಯಸುವವರಿಗೆ ಪಾಠ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈಗಿನ ಕಾಲದಲ್ಲಿ ಯುವಕರಿಗೆ ರೀಲ್ಸ್ ಹಾಗೂ ಬೈಕ್, ಕಾರು ಇವನ್ನೂ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಎಂಬಂತೆ ಬದುಕುತ್ತಿದ್ದಾರೆ ಇದು ಬೇಸರದ ವಿಚಾರ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ರೀತಿ ಮಾಡಲು ಹೋಗಿ ನಿಮ್ಮ ಪ್ರೀತಿಪಾತ್ರರನ್ನು ಜೀವನವಿಡೀ ಕೊರಗುವಂತೆ ಮಾಡಬೇಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಹಾಗಂತ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ, ಇಂತಹದ್ದೆ ಲೆಕ್ಕವಿಲ್ಲದಷ್ಟು ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಆದರೂ ಈ ಮಕ್ಕಳಿಗೆ ಬುದ್ಧಿ ಬರುವುದೇ ಇಲ್ಲ. ಮನೆಯಲ್ಲಿ ನಮಗಾಗಿ ಕಾಯುವ ಜೀವಗಳಿವೆ. ನಮ್ಮ ಮೇಲೆ ಇಡೀ ಜೀವನದ ಶ್ರಮವನ್ನೇ ಧಾರೆ ಎರೆದಿರುವ, ತಮ್ಮ ಉಸಿರಿನಲ್ಲೇ ಜೀವಿಸುವ ಜೀವಕ್ಕೆ ಜೀವ ಕೊಡುವ ಪೋಷಕರಿದ್ದಾರೆ ಎಂಬ ಯಾವ ಯೋಚನೆಯೂ ಈ ಮಕ್ಕಳಿಗೆ ಈ ರೀತಿಯ ಹುಚ್ಚು ಸಾಹಸ ಮಾಡುವ ವೇಳೆ ಮನಸ್ಸಿಗೆ ಬರುವುದೇ ಇಲ್ಲ. ಪರಿಣಾಮ ಒಂದಲ್ಲ ಒಂದು ಇಂತಹದ್ದೇ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇದ್ದು, ಹದಿಹರೆಯದ ಮಕ್ಕಳನ್ನು ಕಳೆದುಕೊಂಡು ಜೀವಮಾನವಿಡಿ ಕಣ್ಣೀರಿಡುವ ಸ್ಥಿತಿ ಪೋಷಕರದ್ದಾಗಿದೆ.
ಪ್ರವಾಸ ಹೋಗಿ ಊರು ಸುತ್ತಿ ಯಾರು ತಡೆಯುವುದಿಲ್ಲ, ಆದರೆ ಕೆಲವು ನೀರಿನ ಮೂಲಗಳಲ್ಲಿ ಯಾರಿಗೂ ಅರಿಯದ ಸುರುಳಿಗಳಿರುತ್ತವೆ. ಸ್ಥಳೀಯ ಜನರಿಗೆ ಇದರ ಬಗ್ಗೆ ಮಾಹಿತಿ ಇರುತ್ತದೆ. ಇಂತಹ ನೀರಿನ ಸುರುಳಿಗೆ ಸಿಕ್ಕರೇ ಈಜು ಬರುವವರಿಗೂ ಬದುಕಲಾಗದು. ಹೀಗಾಗಿ ತಿಳಿಯದ ಸ್ಥಳಗಳಲ್ಲಿ ಸಾಹಸ ಮಾಡುವ ಮೊದಲು ಒಂದು ಕ್ಷಣ ಯೋಚಿಸಿ. ಜೊತೆಗೆ ಹುಚ್ಚು ಸಾಹಸ ಮಾಡುವ ಮೊದಲು ತಮಗಾಗಿ ಮನೆಯಲ್ಲಿ ಕಾಯುವ ಜೀವಗಳಿವೆ ಎಂಬುದು ನಿಮ್ಮ ತಲೆಯಲ್ಲಿ ಇರಲಿ. ತಮ್ಮ ಸುಖವನ್ನೆಲ್ಲಾ ತ್ಯಾಗ ಮಾಡಿ ನಿಮ್ಮನ್ನು ಸಾಕಿರುವ ಪೋಷಕರು ಕಣ್ಣೀರಲ್ಲೇ ಕೈ ತೊಳೆಯುವಂತೆ ಮಾಡಬೇಡಿ.
ಇದನ್ನೂ ಓದಿ: ಅಮ್ಮ ದೀಪಾವಳಿಗೆ ಮನೆ ಕ್ಲೀನ್ ಮಾಡು ಎಂದಿದ್ದಕ್ಕೆ ಮೊಬೈಲ್ ಟವರ್ ಏರಿದ ಬಾಲಕಿ
ಇದನ್ನೂ ಓದಿ: ಗಂಡು ಮಕ್ಕಳೇ ಇಂತಹ ಸ್ನೇಹಿತರಿದ್ದರೆ ಬರ್ತ್ಡೇ ಆಗುತ್ತೆ ಡೆತ್ ಡೇ ಎಚ್ಚರ: ವೀಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ