
ನವದೆಹಲಿ: ಆಪರೇಷನ್ ಸಿಂದೂರ್ ಯಶಸ್ವಿ ಕಾರ್ಯಾಚರಣೆ ಮತ್ತು ಪಾಕಿಸ್ತಾನದ ವಾಯುನೆಲೆಗಳ ಮೇಲೆ ಭಾರತದ ದಾಳಿ ಸೇರಿದಂತೆ ಹಲವು ವಿಷಯಗಳು ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತಾಡಿದರು. ಪ್ರಧಾನಿಗಳ ಏನು ಹೇಳಲಿದ್ದಾರೆ ಎಂದು ಕೇಳಲು ಇಡೀ ವಿಶ್ವವೇ ಕಾಯುತ್ತಿತ್ತು.
ಭಾರತೀಯ ಮೂರು ಸೇನೆಗಳು, ತಂತ್ರಜ್ಞರು ಮತ್ತು ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು. ದೇಶದ ಜನರು, ತಾಯಂದಿರಿಗೆ ಆಪರೇಷನ್ ಸಿಂದೂರವನ್ನು ಅರ್ಪಿಸುತ್ತೇನೆ. ರಜೆ ಹಿನ್ನೆಲೆ ಪಹಲ್ಗಾಮ್ ನಲ್ಲಿ ಕುಟುಂಬದೊಂದಿಗೆ ಜನರು ಸಮಯ ಕಳೆಯುತ್ತಿದ್ದರು. ಇಲ್ಲಿಗೆ ಬಂದ ಉಗ್ರರು, ಧರ್ಮ ಕೇಳಿ ಕುಟುಂಬಸ್ಥರ ಮುಂದೆಯೇ ಕೊಂದರು. ಈ ಮೂಲಕ ದೇಶದ ಐಕ್ಯತೆಯನ್ನು ಕದಡುವ ಪ್ರಯತ್ನ ಮಾಡಲಾಯ್ತು. ಈ ಉಗ್ರ ದಾಳಿಗೆ ಪ್ರತೀಕಾರ ಬೇಕೆಂದು ಇಡೀ ದೇಶದ ಜನರು ಒಗ್ಗಟ್ಟಿನಿಂದ ಆಗ್ರಹಿಸಿದ್ದರು. ಭಯೋತ್ಪಾದನೆಯನ್ನು ಮಣ್ಣಿನಲ್ಲಿ ಸೇರಿಸಲಾಗುವುದು ಎಂದು ನಾವು ದೇಶದ ಜನತೆಗೆ ಮಾತು ನೀಡಿದ್ದೇವೆ. ನಮ್ಮ ದೇಶದ ಮಹಿಳೆಯರ ಸಿಂದೂರವನ್ನು ಅಳಿಸಿದ್ರೆ ಏನಾಗುತ್ತೆ ಎಂದು ಆಪರೇಷನ್ ಸಿಂದೂರ ಮೂಲಕ ಉತ್ತರ ನೀಡಲಾಗಿದೆ. ಮೇ 6ರ ರಾತ್ರಿ, ಮೇ 7ರ ಬೆಳಗಿನ ಜಾವ ಆಪರೇಷನ್ ಸಿಂದೂರ ಕಾರ್ಯಚರಣೆ ನಡೆಸಲಾಯ್ತು. ನಾವು ನೇರವಾಗಿ ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಲಾಯ್ತು. ಭಾರತ ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತೆ ಪಾಕಿಸ್ತಾನ ಕಲ್ಪನೆಯೂ ಮಾಡಿಕೊಂಡಿರಲಿಲ್ಲ.
ಇಷ್ಟಾದರೂ ಪಾಕಿಸ್ತಾನ ತನ್ನ ಕ್ಷಿಪಣಿ ಮತ್ತು ಡ್ರೋನ್ಗಳ ಮೂಲಕ ದಾಳಿ ನಡೆಸಿತು. ಇವುಗಳನ್ನು ನಾಶಪಡಿಸುವ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಲಾಗಿದೆ. ಡ್ರೋನ್ ಮತ್ತು ಕ್ಷಿಪಣಿ ದಾಳಿಯೂ ಭಯೋತ್ಪಾದಕ ಚಟುವಟಿಕೆ ಎಂದು ಹೇಳಿದರು. ಭಯೋತ್ಪಾದಕ ಪ್ರಧಾನ ಕಚೇರಿಯನ್ನೇ ಭಾರತ ನೆಲಸಮಗೊಳಿಸಿದೆ. ಉಗ್ರರ ವಿದ್ಯಾಲಯಗಳಾಗಿದ್ದ ತಾಣಗಳನ್ನು ಭಾರತ ಉಡೀಸ್ ಮಾಡಿದೆ. ಭಾರತ ಪ್ರತೀಕಾರದಿಂದ ಪಾಕಿಸ್ತಾನ ಅಕ್ಷರಷಃ ಕಂಗಾಲು ಆಗಿತ್ತು. ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ಭಾರತದ ಶಾಲಾ ಕಾಲೇಜು, ಮಸೀದಿ, ಗುರುದ್ವಾರ, ಚರ್ಚ್, ನಾಗರೀಕರ ನಿವಾಸಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಪಾಕ್ನಿಂದ ಹಾರಿ ಬಂದ ಡ್ರೋನ್ಗಳನ್ನು ಆಕಾಶದಲ್ಲಿಯೇ ಭಾರತ ನಾಶ ಮಾಡಿದೆ.
ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪಾಕ್ ಸೊಕ್ಕನ್ನು ಅಡಗಿಸಲಾಗಿದೆ. ಭಾರತ ಪ್ರತೀಕಾರಕ್ಕೆ ಬೆಚ್ಚಿದ ಪಾಕಿಸ್ತಾನ ಹಲವು ರಾಷ್ಟ್ರಗಳ ಮುಂದೆ ಹೋಗಿತ್ತು. ಭಾರತದ ಡಿಸಿಎಂಒಗೆ ಕರೆ ಮಾಡುವ ಮುನ್ನವೇ ಪಾಕಿಸ್ತಾನದ ಮೇಲೆ ದಾಳಿ ನಡೆಸಲಾಗಿತ್ತು.
ರಣರಂಗದಲ್ಲಿ ಪಾಕಿಸ್ತಾನಕ್ಕೆ ಭಾರತ ಎಂದಿಗೂ ಸೋತಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಜೊತೆಯಾಗಲಾರದು. ನೀರು ಮತ್ತು ರಕ್ತ ಜೊತೆಯಾಗಿ ಹರಿಯಲು ಸಾಧ್ಯವಿಲ್ಲ. ಪಾಕಿಸ್ತಾನದ ಜೊತೆ ಮಾತುಕತೆ ಅಂದ್ರೆ ಅದು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಭಯೋತ್ಪಾದನೆ ನಿರ್ಮೂಲನೆಗೆ ಮಾತ್ರ ಎಂದು ಮಧ್ಯಸ್ಥಿಕೆಗೆ ಬರುತ್ತಿರುವ ರಾಷ್ಟ್ರಗಳಿಗೂ ಪ್ರಧಾನಿ ನರೇಂದ್ರ ಮೋದಿ ಸಂದೇಶ ರವಾನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ