
ಅಹಮದಾಬಾದ್ (ಸೆ.24): ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಭಾರತದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು ಮತ್ತು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಯಾವುದೇ ನಿರ್ಧಾರಗಳನ್ನೇ ಕೈಗೊಳ್ಳುತ್ತಿರಲಿಲ್ಲ ಎಂದು ಇನ್ಫೋಸಿಸ್ನ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಕಿಡಿಕಾರಿದ್ದಾರೆ.
ಇಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕ್ಯಾಂಪಸ್ನಲ್ಲಿ ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಮೂರ್ತಿ ‘2008-2012ರ ಅವಧಿಯಲ್ಲಿ ನಾನು ಲಂಡನ್ನ ಎಚ್ಎಸ್ಬಿಸಿ ಬ್ಯಾಂಕ್ನ ಮಂಡಳಿ ಸದಸ್ಯನಾಗಿದ್ದೆ. ಆಗ ಮೊದಲಿನ ಕೆಲ ವರ್ಷ, ಸಭೆಗಳಲ್ಲಿ ಚೀನಾದ ಹೆಸರನ್ನು 2-3 ಬಾರಿ ಪ್ರಸ್ತಾಪಿಸಿದರೆ, ಭಾರತದ ಹೆಸರು ಕೇವಲ ಒಂದು ಬಾರಿ ಪ್ರಸ್ತಾಪವಾಗುತ್ತಿತ್ತು. ಆದರೆ ದುರದೃಷ್ಟವಶಾತ್ ನಂತರದ ವರ್ಷದಲ್ಲಿ ಏನಾಯಿತೋ ಗೊತ್ತಿಲ್ಲ. ಮನಮೋಹನ್ಸಿಂಗ್ ಅವಧಿಯಲ್ಲಿ ದೇಶದ ಆರ್ಥಿಕತೆ ಸ್ಥಗಿತಗೊಂಡಿತು. ಯಾವುದೇ ವಿಷಯದ ಬಗ್ಗೆಯೂ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ ಮತ್ತು ಪ್ರತಿಯೊಂದೂ ವಿಳಂಬವಾಗುತ್ತಿತ್ತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎಸ್ಎಂಕೆ, ನಾರಾಯಣ ಮೂರ್ತಿ, ಪ್ರಕಾಶ್ ಪಡುಕೋಣೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ
2012ರಲ್ಲಿ ನಾನು ಎಚ್ಎಸ್ಬಿಸಿಯನ್ನು ಬಿಟ್ಟಾಗ, ಸಭೆಯಲ್ಲಿ ಭಾರತದ ಹೆಸರು ಪ್ರಸ್ತಾಪವಾಗುತ್ತಿದ್ದುದ್ದೇ ಅಪರೂಪ, ಆದರೆ ಚೀನಾದ ಹೆಸರು ಕನಿಷ್ಠ 30 ಬಾರಿ ಪ್ರಸ್ತಾಪವಾಗುತ್ತಿತ್ತು. ಹೀಗಾಗಿ, ಎಲ್ಲೆಲ್ಲಿ ಬೇರೆ ದೇಶಗಳ ಹೆಸರಲ್ಲೂ, ಅದರಲ್ಲೂ ವಿಶೇಷವಾಗಿ ಚೀನಾ ಹೆಸರು ಪ್ರಸ್ತಾಪವಾದಾಗ, ಭಾರತದ ಹೆಸರೂ ಪ್ರಸ್ತಾಪವಾಗುವಂತೆ ಮಾಡುವುದು ಈಗಿನ ಭಾರತದ ಯುವ ಸಮೂಹದ ಹೊಣೆ. ನೀವು ಆ ಕೆಲಸ ಮಾಡುತ್ತೀರಿ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.
Brain Drain : ಪ್ರತಿಭಾ ಪಲಾಯನದ ಬಗ್ಗೆ ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿದ್ದೇನು?
ಹಿಂದೆಲ್ಲಾ ವಿದೇಶಗಳು ನಮ್ಮನ್ನು ನೋಡುತ್ತಿದ್ದ ರೀತಿಯೇ ಬೇರೆ ಇತ್ತು. ಆದರೆ ಇದೀಗ ದೇಶಕ್ಕೆ ಒಂದು ಮಟ್ಟದ ಗೌರವ ಸಿಕ್ಕಿದೆ. ನಾವೀಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ ಎಂದು ಹೇಳಿದರು. ಇದೇ ವೇಳೆ 1991ರಲ್ಲಿ ಮನಮೋಹನ್ಸಿಂಗ್ ಹಣಕಾಸು ಸಚಿವರಾಗಿದ್ದಾಗ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳು ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಜಾರಿಗೊಳಿಸಿದ ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟಪ್ ಇಂಡಿಯ ಯೋಜನೆಗಳು, ದೇಶದ ಆರ್ಥಿಕತೆ ಚೇತರಿಕಗೆ ಕಾರಣವಾಗಿದೆ ಎಂದು ಮೂರ್ತಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ