
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಹಾಡಹಗಲೇ ಇಡೀ ದೇಶವೇ ಆಘಾತಕ್ಕೊಳಗಾಗುವಂತಹ ಕ್ರೂರ ಘಟನೆಯೊಂದು ನಡೆದಿದೆ. ಕೇವಲ ಒಂದೇ ಒಂದು ಗಂಟೆಯ ಅಂತರದಲ್ಲಿ ವಂಚನೆಯ ಶಂಕೆ, ಎರಡು ಭೀಕರ ಕೊಲೆಗಳು ಮತ್ತು ಕೊನೆಗೆ ಆರೋಪಿಯ ಆತ್ಮಹತ್ಯೆಯಿಂದ ಮೂರು ಜೀವಗಳು ಸದಾಕಾಲಕ್ಕೆ ಅಂತ್ಯಗೊಂಡಿವೆ. ಲಕ್ನೋದ ಗೋಮತಿ ನಗರದಲ್ಲಿರುವ ಐಸಿಐಸಿಐ ಬ್ಯಾಂಕ್ ಒಂದರಲ್ಲಿ ರಿಲೇಶನ್ಶಿಪ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ದಿವ್ಯಾ ಮಿಶ್ರಾ, ಅವರ ಪತಿ ಮಾನಸ್ ವಾಜಪೇಯಿ (ಇವರೂ ಬ್ಯಾಂಕ್ ಉದ್ಯೋಗಿ) ಹಾಗೂ ಮಾನಸ್ ಅವರ ತಂಗಿ ಶೀಬಾ ಈ ಘಟನೆಯಲ್ಲಿ ಮೃತಪಟ್ಟವರು.
ಗುರುವಾರ ಮಧ್ಯಾಹ್ನ ಮಾನಸ್ ವಾಜಪೇಯಿ ಆಟೋ ರಿಕ್ಷಾ ಹಿಡಿದುಕೊಂಡು ತನ್ನ ಪತ್ನಿ ದಿವ್ಯಾ ಕೆಲಸ ಮಾಡುತ್ತಿದ್ದ ಗೋಮತಿ ನಗರದ ಐಸಿಐಸಿಐ ಬ್ಯಾಂಕ್ಗೆ ಬಂದಿದ್ದಾನೆ. ದಿವ್ಯಾ ಅವರನ್ನು ಬ್ಯಾಂಕ್ನಿಂದ ಹೊರಗೆ ಕರೆಸಿದ ಆತ, ಯಾವುದೇ ಮುನ್ಸೂಚನೆಯಿಲ್ಲದೆ ದಿಢೀರನೆ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ದಿವ್ಯಾ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹೆಂಡತಿಯನ್ನು ಕೊಲೆ ಮಾಡಿದ ತಕ್ಷಣ ಮಾನಸ್ ಅಲ್ಲಿಂದ ಪರಾರಿಯಾಗಿದ್ದಲ್ಲದೆ, ಗೋಮತಿ ನಗರದಿಂದ ಹುಸಾರಿಯಾ ಪ್ರದೇಶಕ್ಕೆ ಓಡಿಹೋದನು. ಅಲ್ಲಿ ತನ್ನ ಫೋನ್ ತೆಗೆದು ವಾಟ್ಸಾಪ್ನಲ್ಲಿ ಒಂದು ಆಘಾತಕಾರಿ ಸ್ಟೇಟಸ್ ಹಾಕಿದನು. ನನ್ನ ಹೆಂಡತಿ ನನಗೆ ಮೋಸ ಮಾಡಿದ್ದಾಳೆ, ಹಾಗಾಗಿ ನಾನು ಆಕೆಯನ್ನು ಕೊಂದಿದ್ದೇನೆ" ಎಂದು ಬರೆದುಕೊಂಡಿದ್ದ. ಅಷ್ಟೇ ಅಲ್ಲದೆ, ಈಗ ನಾನು ನನ್ನ ತಂಗಿ, ಹಾಗೂ ನಾನು ಶೂಟ್ ಮಾಡಿಕೊಳ್ಳಬೇಕಿದೆ. ಏಕೆಂದರೆ ನನ್ನ ಹೆಂಡತಿಯ ತಂಗಿ ಪ್ರಜ್ಞಾ ಮತ್ತು ಸೋದರ ಮಾವ ಭರತ್ಗೆ ಎಲ್ಲವೂ ಗೊತ್ತು ಎಂದು ಸ್ಟೇಟಸ್ನಲ್ಲಿ ನಮೂದಿಸಿದ್ದ.
ಘಟನೆಯಲ್ಲಿ ಮೃತಪಟ್ಟ ದಿವ್ಯಾ ಮಿಶ್ರಾ ಅವರು, ಯೂಟ್ಯೂಬ್ನಲ್ಲಿ 'ಉಲ್ಟಾ ಚಶ್ಮಾ ಯುಸಿ' ಹೆಸರಿನ 8.5 ಮಿಲಿಯನ್ಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಪ್ರಸಿದ್ಧ ಇನ್ಫ್ಲುಯೆನ್ಸರ್ ಪ್ರಜ್ಞಾ ಮಿಶ್ರಾ ಅವರ ಸ್ವಂತ ಸಹೋದರಿಯಾಗಿದ್ದಾರೆ. ದಿವ್ಯಾಗೆ ಗುಂಡು ಹಾರಿಸಿದ ತಕ್ಷಣ ಆತಂಕಗೊಂಡ ಪ್ರಜ್ಞಾ ಮಿಶ್ರಾ, ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ "ನನ್ನ ತಂಗಿಗೆ ಗೋಮತಿ ನಗರದಲ್ಲಿ ಯಾರೋ ಗುಂಡು ಹಾರಿಸಿದ್ದಾರೆ, ಆಕೆಯನ್ನು ಉಳಿಸಿಕೊಡಿ ಎಂದು ಪೊಲೀಸರಿಗೆ ಹಾಗೂ ದೇವರಿಗೆ ಕಣ್ಣೀರಿಡುತ್ತಾ ಮನವಿ ಮಾಡಿದ್ದರು.
ವಾಟ್ಸಾಪ್ ಸ್ಟೇಟಸ್ ಹಾಕಿದ ಬಳಿಕ ಹುಸಾರಿಯಾ ತಲುಪಿದ ಮಾನಸ್, ತನ್ನ ತಂಗಿ ಶೀಬಾಳನ್ನು ಭೇಟಿಯಾದನು. ಅಲ್ಲಿಗೆ ತಂಗಿಯ ಮೇಲೂ ಗುಂಡು ಹಾರಿಸಿ ಆಕೆಯನ್ನು ಕೊಲೆ ಮಾಡಿದನು. ಆದರೆ, ತಂಗಿಯನ್ನು ಏಕೆ ಕೊಂದ ಎಂಬ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆ ತಕ್ಷಣವೇ ಅದೇ ಬಂದೂಕಿನಿಂದ ತನಗೂ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಜೀವ ಬಿಟ್ಟಿದ್ದಾನೆ.
ಪ್ರಕರಣದ ತನಿಖೆಗೆ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಪೂರ್ವ) ಅಮೋಲ್ ಮುರ್ಕುಟ್ ಅವರ ನೇತೃತ್ವದಲ್ಲಿ 5 ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ದಿವ್ಯಾ ಮತ್ತು ಮಾನಸ್ ದಂಪತಿ ನಡುವೆ ಕೌಟುಂಬಿಕ ಕಲಹಗಳಿದ್ದವು ಮತ್ತು ಇಬ್ಬರ ವಿಚ್ಛೇದನ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದದ್ದು ತಿಳಿದುಬಂದಿದೆ. ಬ್ಯಾಂಕ್ ಹಾಗೂ ಹುಸಾರಿಯಾ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
(ಗಮನಿಸಿ: ಜೀವನದಲ್ಲಿ ಎಂತಹದೇ ಕಷ್ಟ ಬಂದರೂ ಅಥವಾ ಮಾನಸಿಕ ಒತ್ತಡವಿದ್ದರೂ ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನಿಮಗೆ ಅಥವಾ ನಿಮ್ಮ ಆಪ್ತರಿಗೆ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಅಥವಾ ಉಚಿತ ಹೆಲ್ಪ್ಲೈನ್ ಸಂಖ್ಯೆಯನ್ನು ತಕ್ಷಣವೇ ಸಂಪರ್ಕಿಸಿ).
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ