ಇಂಡಿಯಾ ಹೆಸರು ಬದಲಾವಣೆ ವದಂತಿ ಅಷ್ಟೆ: ಕೇಂದ್ರ ಸ್ಪಷ್ಟನೆ

Published : Sep 07, 2023, 07:07 AM ISTUpdated : Sep 07, 2023, 07:09 AM IST
ಇಂಡಿಯಾ ಹೆಸರು ಬದಲಾವಣೆ ವದಂತಿ ಅಷ್ಟೆ: ಕೇಂದ್ರ ಸ್ಪಷ್ಟನೆ

ಸಾರಾಂಶ

ಕೇಂದ್ರ ಸರ್ಕಾರ ದೇಶದ ಹೆಸರನ್ನು ‘ಇಂಡಿಯಾ’ ಎಂಬುದರ ಬದಲಾಗಿ ಕೇವಲ ‘ಭಾರತ’ ಎಂದು ಬದಲಾವಣೆ ಮಾಡಲು ಮುಂದಾಗಿದೆ ಎಂಬ ವರದಿಗಳೆಲ್ಲಾ ಕೇವಲ ವದಂತಿ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರ ದೇಶದ ಹೆಸರನ್ನು ‘ಇಂಡಿಯಾ’ ಎಂಬುದರ ಬದಲಾಗಿ ಕೇವಲ ‘ಭಾರತ’ ಎಂದು ಬದಲಾವಣೆ ಮಾಡಲು ಮುಂದಾಗಿದೆ ಎಂಬ ವರದಿಗಳೆಲ್ಲಾ ಕೇವಲ ವದಂತಿ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಸ್ಪಷ್ಟಪಡಿಸಿದ್ದಾರೆ. ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾದ, ಬಿಜೆಪಿಯಿಂದ ಸ್ವಾಗತಿಸಲ್ಪಟ್ಟ ವರದಿಯ ಕುರಿತು ಪ್ರತಿಕ್ರಿಯಿಸಿದ ಸಚಿವ ಅನುರಾಗ್‌ ಠಾಕೂರ್‌ ‘ಭಾರತದ ರಾಷ್ಟ್ರಪತಿ ಎಂಬುದನ್ನು ‘ಪ್ರೆಸಿಡೆಂಟ್‌ ಆಫ್‌ ಭಾರತ್‌’ ಎಂದು ಬರೆಯಲಾಗಿದೆ. ಅದರಲ್ಲಿ ತಪ್ಪೇನಿದೆ? ಇದೊಂದು ದೊಡ್ಡ ವಿಷಯವೇ ಅಲ್ಲ. ಈ ಮೊದಲು ಸಹ ಹಲವು ಆಮಂತ್ರಣ ಪತ್ರಿಕೆಗಳನ್ನು ‘ಭಾರತ ಸರ್ಕಾರ್‌’ ಎಂಬ ಹೆಸರಿನಲ್ಲಿ ಕಳುಹಿಸಲಾಗಿದೆ. ಆಗೆಲ್ಲಾ ಎಲ್ಲಿ ಸಮಸ್ಯೆಯಾಗಿತ್ತು? ಎಂದು ಪ್ರಶ್ನಿಸಿದ್ದಾರೆ.

ಜೊತೆಗೆ, ಬಹಳಷ್ಟು ನ್ಯೂಸ್‌ ಚಾನಲ್‌ಗಳು ತಮ್ಮ ಹೆಸರಿನಲ್ಲಿ ಭಾರತ ಎಂಬುದನ್ನು ಅಳವಡಿಸಿಕೊಂಡಿವೆ. ಆದರೆ ಈ ಜನ ಮಾತ್ರ (ವಿಪಕ್ಷಗಳು) ಭಾರತ ಎಂಬ ಹೆಸರಿನೊಂದಿಗೆ ಅಲರ್ಜಿ ಹೊಂದಿದ್ದಾರೆ. ಈಗೀಗ ಕೆಲವರಿಗೆ ಭಾರತ ಎಂಬ ಹೆಸರು ನೋವುಂಟು ಮಾಡುತ್ತಿದೆ. ಇವರು ವಿದೇಶಿ ನೆಲದಲ್ಲಿ ನಿಂತು ಭಾರತಕ್ಕೆ ಅವಮಾನಿಸುತ್ತಿದ್ದಾರೆ. ಇದು ಭಾರತ ಎಂಬ ಹೆಸರನ್ನು ವಿರೋಧಿಸುತ್ತಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.

ಭಾರತ ಮಾತಾಕಿ ಜೈ ಅಂತೇವೆ, ಆದ್ರೆ ಇಂಡಿಯಾ ಮಾತಾಕಿ ಜೈ ಎನ್ನೊಲ್ಲ: ಕೆ.ಎಸ್. ಈಶ್ವರಪ್ಪ ಆಕ್ರೋಶ

ಜಿ20 ಆಮಂತ್ರಣ ಪತ್ರಿಕೆಯಲ್ಲಿ ಪ್ರೆಸಿಡೆಂಟ್‌ ಆಫ್‌ ಭಾರತ ಎಂದು ನಮೂದಿಸಿರುವುದರಿಂದ ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲಾಗುತ್ತದೆ ಎಂಬ ವದಂತಿಗಳು ಹಬ್ಬಿದ್ದವು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹಾಸ್ಯಭರಿತವಾದ ಚರ್ಚೆಗಳು ಆರಂಭವಾಗಿವೆ. ಒಂದು ವೇಳೆ ಭಾರತ ಎಂದು ಹೆಸರು ಬದಲಾದರೆ ಇಂಡಿಯಾ ಹೆಸರನ್ನು ಹೊಂದಿರುವ ಸಂಸ್ಥೆಗಳು ಬದಲಾಗಲಿವೆ ಎಂದು ಹಲವರು ಪೋಸ್ಟ್‌ ಮಾಡಿದ್ದಾರೆ. ಇಸ್ರೋ ಬಿಸ್ರೋ ಎಂದು ಬದಲಾಗಲಿದೆ. ಐಐಎಂ- ಬಿಐಎಂ ಎಂದು, ಐಐಟಿ- ಬಿಐಟಿ, ಎಐಐಎಂಎಸ್‌- ಎಬಿಐಎಂಸ್‌, ಆರ್‌ಬಿಐ- ಆರ್‌ಬಿಬಿ ಎಂದು ಬದಲಾಗಲಿದೆ ಎಂದು ಪೋಸ್ಟ್‌ಗಳನ್ನು ಮಾಡಲಾಗಿದೆ. ಅದೇ ರೀತಿ ಬಿಸಿಸಿಐ ಎಂಬುದು ‘ಭಾರತ್‌ ಕಂಟ್ರೋಲಿಂಗ್‌ ಕ್ರಿಕೆಟ್‌ ಇಂಟರ್‌ನ್ಯಾಷನಲ್ ಎಂದಾಗಲಿದೆ ಎಂದು ಟ್ವೀಟರ್‌ ಬಳಕೆದಾರರೊಬ್ಬರು ಹೇಳಿದ್ದಾರೆ.

ಬ್ರಿಕ್ಸ್‌ ಕೂಟಕ್ಕೆ (BRICS) ಅರ್ಜೆಂಟೀನಾ (Argentina), ಈಜಿಫ್ಟ್, ಇಥಿಯೋಪಿಯಾ, ಇರಾನ್‌, ಸೌದಿ ಅರೇಬಿಯಾ ಮತ್ತು ಯುಎಇಗಳನ್ನು ಆಹ್ವಾನಿಸಿದರೆ ಅದರ ಹೆಸರು ‘ಬಾರ್ಬಿಕ್ಯೂ’ ಎಂದಾಗುತ್ತದೆ ಎಂದು ಟ್ವೀಟ್‌ ಮಾಡಲಾಗಿದೆ. ಅದೇ ರೀತಿ ‘ಭಾರತ್‌ ಕಾ ರಹನೆ ವಾಲಾ ಹೂ’ ಹಾಡು ವೈರಲ್‌ ಆಗಿದೆ. ಭಾರತ್‌ ಕುಮಾರ್‌ ಎಂದು ಕರೆಯಲ್ಪಡುವ ನಟ ಮನೋಜ್‌ ಕುಮಾರ್‌ ಅವರು ಇಂದು ಎಲ್ಲರಿಗಿಂತ ಹೆಚ್ಚು ಖುಷಿಯಾಗಲಿದ್ದಾರೆ ಎಂಬ ಟ್ವೀಟ್‌ ವೈರಲ್‌ ಅಗಿದೆ.

ಇಂಡಿಯಾ ಇನ್ಮುಂದೆ ಭಾರತ: ವಿಪಕ್ಷಗಳ ತೀವ್ರ ಆಕ್ರೋಶ: ಬಿಜೆಪಿ ನಾಯಕರ ಸಮರ್ಥನೆ

ನವದೆಹಲಿ:  ಜಿ20 ಶೃಂಗಸಭೆ ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಸಿದ್ಧಪಡಿಸಿರುವ ಆಮಂತ್ರಣ ಪತ್ರಿಕೆಯಲ್ಲಿ ಅವರ ಹುದ್ದೆಯನ್ನು ‘ಪ್ರೆಸಿಡೆಂಟ್‌ ಆಫ್‌ ಭಾರತ್‌’ (ಭಾರತದ ಅಧ್ಯಕ್ಷೆ) ಎಂದು ಬರೆಯಲಾಗಿದೆ. ಇದರಲ್ಲಿ ಈವರೆಗೆ ಬಳಸುತ್ತಿದ್ದ ‘ಇಂಡಿಯಾ’ ಪದ ಕಾಣೆಯಾಗಿದೆ. ಅಲ್ಲದೆ, ‘ಇಂಡಿಯಾ’ ಪದ ಅಳಿಸಿ ದೇಶದ ಹೆಸರನ್ನು ‘ಭಾರತ’ ಎಂದು ಬದಲಿಸುವ ಯತ್ನದ ಭಾಗ ಇದು ಎಂಬ ಊಹಾಪೋಹ ಆರಂಭವಾಗಿದೆ. ಇದು ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು, ಜಿ20 ಔತಣಕೂಟದ ಆಮಂತ್ರಣ ಪತ್ರಿಕೆ ಟ್ವೀಟ್‌ ಮಾಡಿದ್ದು, ಇದರಲ್ಲಿ ಈವರೆಗೆ ಬರೆಯಲಾಗುತ್ತಿದ್ದ ‘ಪ್ರೆಸಿಡೆಂಟ್‌ ಆಫ್‌ ಇಂಡಿಯಾ’ ಬದಲು ‘ಪ್ರೆಸಿಡೆಂಟ್‌ ಆಫ್‌ ಭಾರತ್‌’ ಎಂದು ಬರೆಯಲಾಗಿದೆ. ಅದಕ್ಕೆ ಅವರು ‘ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿಧಾತಾ’ ಎಂದು ಟ್ವೀಟರ್‌ನಲ್ಲಿ ಟಿಪ್ಪಣಿ ಬರೆದಿದು, ‘ಜೈ ಹೋ’ ಎಂದಿದ್ದಾರೆ. ‘ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರುವ ಯತ್ನ ಇದು. ಯಾವತ್ತೋ ಆಗಬೇಕಿತ್ತು. ಇಂದು ಕೈಗೂಡಿದೆ’ ಎಂದಿದ್ದಾರೆ.

ಭಾರತ್ ಮಾತಾ ಕಿ ಜೈ ಎಂದ ಬಿಗ್ ಬಿ ಅಮಿತಾಬ್ ಬಚ್ಚನ್; ಬಾಲಿವುಡ್ ಸೆಲೆಬ್ರಿಟಿಗಳ ರಿಯಾಕ್ಷನ್ ಇಲ್ಲಿದೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?