
ನವದೆಹಲಿ (ಜ. 7): ಕೋವಿಡ್-19 ಲಸಿಕಾ ಕಾರ್ಯಕ್ರಮದಲ್ಲಿ ( COVID-19 Vaccination Drive) ಶುಕ್ರವಾರ ಭಾರತ ಮತ್ತೊಂದು ಅದ್ಭುತ ಮೈಲಿಗಲ್ಲು ಸಾಧಿಸಿದೆ. ಒಟ್ಟಾರೆ ದೇಶದಲ್ಲಿ ಹಾಕಿರುವ ಕೋವಿಡ್-19 ಡೋಸ್ ಗಳ ಸಂಖ್ಯೆ 150 ಕೋಟಿಯ ಗಡಿ ದಾಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ (Chittaranjan National Cancer Institute in Kolkata ) 2ನೇ ಕ್ಯಾಂಪಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದ ನರೇಂದ್ರ ಮೋದಿ, ತಮ್ಮ ಭಾಷಣದ ವೇಳೆ ಭಾರತ 150 ಕೋಟಿ ಕೋವಿಡ್-19 ಲಸಿಕೆಗಳ ( COVID-19 vaccine doses) ಮೈಲಿಗಲ್ಲು ಸಾಧಿಸಿದೆ ಎಂದು ಹೇಳಿದ್ದು ಮಾತ್ರವಲ್ಲದೆ, ಈ ಸಾಧನೆ ಇಡೀ ಭಾರತವೇ ಹೆಮ್ಮೆ ಪಡುವಂಥದ್ದು ಎಂದಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(West Bengal CM Mamata Banerjee) ಕೂಡ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು. "ವಿಜ್ಞಾನಿಗಳು, ಲಸಿಕೆ ತಯಾರಕರು ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ ಎಲ್ಲರ ಪ್ರಯತ್ನದಿಂದಾಗಿ ಶೂನ್ಯದಿಂದ ಪ್ರಾರಂಭವಾದ ಪ್ರಯಾಣದಲ್ಲಿ ದೇಶ ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಲು ಸಾಧ್ಯವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು. ಅಂಕಿಗಳಲ್ಲಿ ನೋಡುವುದಾದರೆ ಖಂಡಿತಾ ಇದೊಂದು ದೊಡ್ಡ ಸಂಖ್ಯೆ. ಇದು ಪ್ರಪಂಚದ ಹೆಚ್ಚಿನ ದೊಡ್ಡ ದೇಶಗಳನ್ನೂ ಚಕಿತಗೊಳಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಇದು ಭಾರತದ 130 ಕೋಟಿ ನಾಗರಿಕರ ಸಾಮರ್ಥ್ಯದ ಸಂಕೇತವಾಗಿದೆ. ಇದು ವಿಶ್ವಾಸ ಮತ್ತು ಸ್ವಾವಲಂಬನೆಯ ಸಂಕೇತ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದಾರೆ.
ಲಸಿಕೆಯನ್ನು ಪರೀಕ್ಷೆ ಮಾಡುವ ಹಂತದಿಂದ ಜನರಿಗೆ ನೀಡುವವರೆಗಿನ ಮಾರ್ಗದಲ್ಲಿ ಭಾರತ ತೋರಿದ ಮೂಲಸೌಕರ್ಯವು, ಕೋವಿಡ್ ವಿರುದ್ಧ ಯಾವ ರೀತಿಯಲ್ಲಿ ಹೋರಾಟ ಮಾಡಬೇಕು ಎಂದು ನಾವು ಜಗತ್ತಿಗೆ ತೋರಿಸಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಸುಧಾರಣೆ ಮಾಡಲು ಶ್ರೀಮಂತರು ಮತ್ತು ಬಡವರು ಎನ್ನುವ ಭೇದವಿಲ್ಲದೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ದೇಶದಲ್ಲಿ ಈಗಾಗಲೇ ವಯಸ್ಕ ಜನಸಂಖ್ಯೆಯ ಶೇಕಡಾ 90 ರಷ್ಟು ಜನರು ಕರೋನವೈರಸ್ ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದಾರೆ ಎಂದು ಹೇಳಿದರು. ಈ ವರ್ಷವನ್ನು (ಜನವರಿ 3) 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಭರ್ಜರಿಯಾಗಿ ಆರಂಭಿಸಿದ್ದೇವೆ. ಕಳೆದ ಐದು ದಿನಗಳಲ್ಲಿ1.5 ಕೋಟಿಗೂ ಅಧಿಕ ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಪ್ರಧಾನಿ ತಮ್ಮ ವರ್ಚುವಲ್ ಭಾಷಣದಲ್ಲಿ ಮಾಹಿತಿ ನೀಡಿದರು. ಕೇಂದ್ರವು ಇದುವರೆಗೆ ಸುಮಾರು 11 ಕೋಟಿ ಕೋವಿಡ್-19 ಲಸಿಕೆಯನ್ನು ಪಶ್ಚಿಮ ಬಂಗಾಳಕ್ಕೆ ಉಚಿತವಾಗಿ ನೀಡಿದೆ ಎಂದು ಪ್ರಧಾನಿ ತಿಳಿಸಿದರು. "ಪಶ್ಚಿಮ ಬಂಗಾಳಕ್ಕೆ 1.5 ಸಾವಿರಕ್ಕೂ ಹೆಚ್ಚು ವೆಂಟಿಲೇಟರ್ಗಳು, ಒಂಬತ್ತು ಸಾವಿರಕ್ಕೂ ಹೆಚ್ಚು ಹೊಸ ಆಮ್ಲಜನಕ ಸಿಲಿಂಡರ್ಗಳನ್ನು ಸಹ ಒದಗಿಸಲಾಗಿದೆ, ಜೊತೆಗೆ 49 ಪಿಎಸ್ಎ ಹೊಸ ಆಮ್ಲಜನಕ ಘಟಕಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ" ಎಂದು ಪ್ರಧಾನಿ ಮಾಹಿತಿ ನೀಡಿದರು.
Minister R Ashoka Covid positive: ಸಚಿವ ಆರ್ ಅಶೋಕ್ ಗೆ ಕೊರೊನಾ ದೃಢ, ಆಸ್ಪತ್ರೆಗೆ ದಾಖಲು
ಆಯುಷ್ಮಾನ್ ಭಾರತದಿಂದ 2.60 ಕೋಟಿಗೂ ಅಧಿಕ ಮಂದಿಗೆ ನೆರವು: ಬಡ ಜನರಿಗೂ ಸೂಕ್ತ ಆರೋಗ್ಯ ಸೌಲಭ್ಯಗಳು ಸಿಗಬೇಕು ಎನ್ನುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ (Ayushman Bharat)ಯೋಜನೆ ಜಾರಿಗೆ ತಂದಿದೆ. ಇದರಿಂದಾಗಿ ಒಟ್ಟು 2.60 ಕೋಟಿಗೂ ಅಧಿಕ ಜನಕ್ಕೆ ನೆರವಾಗಿದೆ. 17 ಲಕ್ಷ ಕ್ಯಾನ್ಸರ್ ರೋಗಿಗಳು ಇದರ ಲಾಭ ಪಡೆದಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ