
ಚತ್ತೀಸಗಡ(ಆ.15): ದೇಶದಲ್ಲಿಂದು 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ತ್ರಿವರ್ಣ ಧ್ವಜಕ್ಕೆ ಸಲ್ಯೂಟ್ ಹೊಡೆಯೋ ಮೂಲಕ ಸಮಸ್ತ ಭಾರೀಯರು ಅಮೃತ ಮಹೋತ್ಸವ ಘಳಿಯನ್ನು ಮತ್ತಷ್ಟು ಸ್ಮರಣೀಯವಾಗಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಎಳೂವರೆ ದಶಕಗಳೇ ಕಳೆದರೂ ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಲೇ ಇದ್ದಾರೆ. ಇದಕ್ಕೆ ಚತ್ತೀಸಗಡದ ಜಿಲ್ಲೆ ಹೊರತಾಗಿರಲಿಲ್ಲ. ಆದರೆ ಜಿಲ್ಲಾಧಿಕಾರಿಯ ಸತತ ಪ್ರಯತ್ನ ಹಾಗೂ ಧೈರ್ಯಕ್ಕೆ ಇದೀಗ 16 ವರ್ಷಗಳ ಬಳಿಕ ಶಾಲೆ ಬಾಗಿಲು ತೆರೆದಿದೆ.
ನಕ್ಸಲ್ ದಾಳಿ: ಮಗಳ ಸೀಮಂತಕ್ಕೆ ಬರಬೇಕಿದ್ದ ಯೋಧ ಹೆಣವಾಗಿ ಬಂದ!
ಬಿಜಾಪುರ್ ಜಿಲ್ಲೆ ಈಗಲೂ ನಕ್ಸಲ್ ಪ್ರಾಬಲ್ಯದ ಜಿಲ್ಲೆ. ಇತ್ತೀಚೆಗೆ ಸಿಆರ್ಪಿಎಫ್ ಮೇಲೆ ನಡೆದ ನಕ್ಸಲರ ದಾಳಿಯಲ್ಲಿ ರಾಜ್ಯದ ಯೋಧ ಹುತಾತ್ಮರಾಗಿದ್ದರು. ಈ ಜಿಲ್ಲೆಯ ಪೆಡ್ಡಾ ಜೊಜೆರ್, ಚಿನ್ನಾ ಜೊಜೆರ್ ಹಾಗೂ ಕಮ್ಕಾನರ್ ಗ್ರಾಮಗಳ ಶಾಲೆಗಳನ್ನು ಕಳೆದ 16 ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಇದೀಗ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಶಾಲೆ ಆರಂಭಗೊಂಡಿದೆ. ಮಕ್ಕಳು ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ಶಾಲೆ ಆರಂಭಿಸಿದ್ದಾರೆ.
ಬಿಜಾಪುರ್ ಜಿಲ್ಲೆಯ ಜಿಲ್ಲಾಧಿಕಾರಿ ರಿತೇಶ್ ಅಗರ್ವಾಲ್ ಧೈರ್ಯ ಹಾಗೂ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ರಿತೇಶ್ ಸತತ ಪ್ರಯತ್ನದಿಂದ ಇದೀಗ ಈ ಗ್ರಾಮದ ಮಕ್ಕಳ ಬಾಳು ಬೆಳಕಾಗಿದೆ. ಶಾಲೆಗಳು ಆರಂಭಗೊಂಡಿದೆ. ಮೊದಲ ಹಂತದಲ್ಲಿ 14 ಶಾಲೆಗಳನ್ನು ಪುನರ್ ಆರಂಭಿಸಲಾಗಿದೆ. 900 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಅಮ್ಮನಿಗಾಗಿ ಸಂದೇಶ: ನಕ್ಸಲರಿಂದ ಸುತ್ತುವರಿಯಲ್ಪಟ್ಟ ಕ್ಯಾಮೆರಾಮ್ಯಾನ್ನ ವಿಡಿಯೋ ವೈರಲ್!
ನಕ್ಸಲ್ ದಾಳಿ ಹಾಗೂ ಶಾಲೆ:
2004 ಹಾಗೂ 2005ರಲ್ಲಿ ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ತಾರಕಕ್ಕೇರಿತ್ತು. ಹಲವರು ಗ್ರಾಮವನ್ನೇ ತೊರೆದಿದ್ದರು. ಶಿಕ್ಷಣ ಪಡೆದರೆ ಗ್ರಾಮದ ಮಕ್ಕಳು ನಕ್ಸಲ್ ವಿರುದ್ಧ ನಿಲ್ಲುತ್ತಾರೆ ಎಂದು ನಕ್ಸಲ್ ಹಾಗೂ ಮಾವೋಮಾದಿಗಳು ಜಿಲ್ಲೆಯ 300 ಶಾಲೆಗಳನ್ನು ಧ್ವಂಸ ಮಾಡಿದರು. ಬಾಂಬ್ ಸ್ಫೋಟಿಸಿ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾದರು.
ಬಿಜಾಪುರ್ ಜಿಲ್ಲೆಯಲ್ಲಿ ಶಾಲೆಗಳು ಸಂಪೂರ್ಣ ಬಂದ್ ಆಯಿತು. ಹಲವು ಮಕ್ಕಳು ಶಾಲೆ ತೊರೆದರು. ಬೆರಳೆಣಿಕೆ ಮಕ್ಕಳು ಮಾತ್ರ ಪಕ್ಕದ ಜಿಲ್ಲೆಗೆ ತೆರಳಿ ಶಿಕ್ಷಣ ಪಡೆದರು. ಇದಾದ ಬಳಿಕ ಶಾಲೆ ತೆರೆಯುವ ಪ್ರಯತ್ನ ಮಾಡಲಾಗಿತ್ತು. ಆದರೆ ರಸ್ತೆ ಕಾಮಾಗಾರಿ, ಶಾಲೆ ಕಾಮಾಗಾರಿ ನಡೆಯತ್ತಿರುವ ವೇಳೆ ನಕ್ಸಲು ದಾಳಿ ಮಾಡಿ ಕಾಮಗಾರಿ ಸ್ಥಗಿತಗೊಳಿಸಿದ್ದರು.
2008ರಿಂದ ಇಲ್ಲಿ ಶಾಲೆ ತೆರೆಯುವ ಪ್ರಯತ್ನಕ್ಕೆ ಸರ್ಕಾರವಾಗಲಿ, ಜಿಲ್ಲಾಧಿಕಾರಿಗಳಾಗಲಿ ಹೆಚ್ಚಿನ ಪ್ರಯತ್ನ ಪಡಲಿಲ್ಲ. ಆದರೆ ಇದೀಗ ರಿತೇಶ್ ಅಗರ್ವಾಲ್ ಸತತ ಹೋರಾಟದಿಂದ ಶಾಲೆ ಆರಂಭಗೊಂಡಿದೆ. ಇಷ್ಟೇ ಅಲ್ಲ ತೆರೆಮ್ ಗ್ರಾಮದಲ್ಲಿ 30 ವರ್ಷಗಳ ಬಳಿಕ ವಿದ್ಯುತ್ ಸಂಪರ್ಕ ಸಿಕ್ಕಿದೆ.
ಬಿಜಾಪುರ್ ಜಿಲ್ಲೆಯ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಹಲವು ಕಾಮಗಾರಿಗಳು ಪ್ರಗತಿಯಲ್ಲಿದೆ. 1980ರಲ್ಲಿ ಇದೇ ತೆರೆಮ್ ಗ್ರಾಮ ನಕ್ಸಲ್ ಹಿಂಸಾಚಾರಕ್ಕೆ ಸಂಪೂರ್ಣ ಹೊತ್ತಿ ಉರಿದಿತ್ತು. ಬಳಿಕ ನಕ್ಸಲ್ ದಾಳಿಗಳು ಸತತವಾಗಿ ನಡೆಯುತ್ತಲೇ ಇದೆ. ಇತ್ತೀಚೆಗೆ ಅಂದರೆ ಎಪ್ರಿಲ್ 2, 2021ರಂದು ತೆರೆಮ್ ಗ್ರಾಮದಿಂದ 10 ರಿಂದ 12 ಕಿಲೋಮೀಟರ್ ದೂರದಲ್ಲಿರುವ ತೆಕುಲಾಗುಡಮ್ ಹಾಗೂ ಜೊನಾಗುಡ ಗ್ರಾಮದಲ್ಲಿ ಯೋಧರ ಮೇಲೆ ನಕ್ಸಲ್ ದಾಳಿ ನಡೆದಿತ್ತು. ಈ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರೆ, 31 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ