
ನವದೆಹಲಿ(ಏ.30): ಬೇಸಿಗೆಯ(Summer) ಪ್ರತಾಪ ಹೆಚ್ಚಾಗುತ್ತಿದ್ದಂತೆ ದೇಶಾದ್ಯಂತ ವಿದ್ಯುತ್ತಿಗೆ ಭಾರಿ ಬೇಡಿಕೆ ವ್ಯಕ್ತವಾಗತೊಡಗಿದೆ. ಬೇಡಿಕೆಯಷ್ಟು ವಿದ್ಯುತ್ ಪೂರೈಸಲು ಪರದಾಡುತ್ತಿರುವ ರಾಜ್ಯ ಸರ್ಕಾರಗಳು ತಾಸುಗಟ್ಟಲೆ ಲೋಡ್ಶೆಡ್ಡಿಂಗ್ ಘೋಷಣೆ ಮಾಡಿವೆ. ಜಮ್ಮು-ಕಾಶ್ಮೀರದಿಂದ(Jammu Kashmir) ತಮಿಳುನಾಡಿನವರೆಗೆ(Talin Nadu) ಬಹುತೇಕ ರಾಜ್ಯಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದೆ. 2ರಿಂದ 8 ತಾಸಿನವರೆಗೆ ವಿದ್ಯುತ್ ಕೈಕೊಡುತ್ತಿದೆ. ಗುಜರಾತ್, ಆಂಧ್ರಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬೇಡಿಕೆಯಷ್ಟು ವಿದ್ಯುತ್ ಸಿಗದ ಕಾರಣ ಕೈಗಾರಿಕೆಗಳಿಗೂ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಕಲ್ಲಿದ್ದಲು(Coal) ಸರಬರಾಜಿನಲ್ಲಿ ಆಗುತ್ತಿರುವ ವ್ಯತ್ಯಯದಿಂದಲೂ ವಿದ್ಯುತ್(Electricity) ಉತ್ಪಾದನೆಗೆ ಸಮಸ್ಯೆಯಾಗಿದೆ. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ.70ರಷ್ಟಕ್ಕೆ ಕಲ್ಲಿದ್ದಲು ಬೇಕು. ಕಲ್ಲಿದ್ದಲಿನ ಪೂರೈಕೆಯಿಂದ ಸಮಸ್ಯೆಯಾಗಿದೆ ಎಂದು ರಾಜ್ಯಗಳು ಹೇಳುತ್ತಿವೆಯಾದರೂ, ಬೇಡಿಕೆಗೆ ತಕ್ಕಷ್ಟುಕಲ್ಲಿದ್ದಲು ಅಗತ್ಯವಿದೆ ಎಂದು ಸರ್ಕಾರ ಹೇಳುತ್ತಿದೆ. ಕಲ್ಲಿದ್ದಲು ಸಾಗಣೆಗೆ ಅಗತ್ಯವಿರುವ ರೈಲು ಬೋಗಿಗಳ ಕೊರತೆಯಿಂದಾಗಿ ಸಮಸ್ಯೆ ಉಲ್ಬಣಿಸಿದೆ ಎನ್ನಲಾಗಿದೆ. ಇದರ ಜತೆಗೆ ಉಕ್ರೇನ್ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ದುಬಾರಿಯಾಗಿ, ಕಲ್ಲಿದ್ದಲು ಆಮದು ಕೂಡ ಕುಸಿದಿರುವುದು ಸಮಸ್ಯೆಗೆ ಕೊಡುಗೆ ನೀಡಿದೆ.
Power crisis : ಕಲ್ಲಿದ್ದಲು ಸಾಗಾಟಕ್ಕಾಗಿ 240 ಪ್ರಯಾಣಿಕ ರೈಲು ರದ್ದು!
ಎಲ್ಲಿ ಎಷ್ಟು ಕಡಿತ?:
ಉತ್ತರ ಪ್ರದೇಶದಲ್ಲಿ 3000 ಮೆಗಾವ್ಯಾಟ್ ವಿದ್ಯುತ್ ಕೊರತೆ ಎದುರಾಗಿದೆ. ಹೀಗಾಗಿ ಗ್ರಾಮೀಣ ಭಾಗಗಳಿಗೆ(Rural Area) 3 ತಾಸು ಹೆಚ್ಚುವರಿಯಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಪರಿಣಾಮವಾಗಿ 15.7 ತಾಸು ಮಾತ್ರ ಹಳ್ಳಿಗಳಲ್ಲಿ ವಿದ್ಯುತ್ ಲಭಿಸುತ್ತಿದೆ. ಕಾಶ್ಮೀರದಲ್ಲಿ ರಂಜಾನ್ ಮಾಸದಲ್ಲೇ ವಿದ್ಯುತ್ ಬವಣೆಯಿಂದ ಜನರು ತತ್ತರಿಸಿದ್ದಾರೆ. ತಮಿಳುನಾಡಿನಲ್ಲಿ ಕೈಗಾರಿಕೆಗಳಿಗೆ ವಿದ್ಯುತ್ ಕಡಿತ ಮಾಡಿರುವುದರಿಂದ ಬೆಂಕಿ ಪೊಟ್ಟಣ ಕಾರ್ಖಾನೆಗಳಿಗೆ ಭಾರಿ ಸಮಸ್ಯೆಯಾಗಿದೆ. ತಮಿಳುನಾಡು 750 ಮೆಗಾವ್ಯಾಟ್ ವಿದ್ಯುತ್ ಕೊರತೆ ಎದುರಿಸುತ್ತಿದೆ.
ಕಲ್ಲಿದ್ದಲು ಕೊರತೆಯಿಲ್ಲ, ಸರಬರಾಜಿನಲ್ಲಿ ವ್ಯತ್ಯಯ: ಸಚಿವ ಪ್ರಹ್ಲಾದ ಜೋಶಿ
ಆಂಧ್ರಪ್ರದೇಶದಲ್ಲಿ 50 ದಶಲಕ್ಷ ಯುನಿಟ್ಗೆ ಕೊರತೆ ಇದೆ. ಪಂಜಾಬ್ನಲ್ಲಿ ವಿದ್ಯುತ್ ಕಡಿತ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ. ಬೇಡಿಕೆಯಷ್ಟುವಿದ್ಯುತ್ ಸಿಗುತ್ತಿಲ್ಲ ಎಂದು ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಪ್ರಕಟಿಸಿದ್ದಾರೆ. ಮಿಗತೆ ವಿದ್ಯುತ್ ರಾಜ್ಯ ಎಂದು ಘೋಷಿಸಿಕೊಂಡಿದ್ದ ಒಡಿಶಾದಲ್ಲಿ ಲೋಡ್ ಶೆಡ್ಡಿಂಗ್ ಅನ್ನು ಜನರು ಎದುರಿಸುತ್ತಿದ್ದಾರೆ.
ಬಿಹಾರ, ಉತ್ತರಾಖಂಡ, ಗುಜರಾತ್, ರಾಜಸ್ಥಾನ, ಹರಾರಯಣ, ಮಹಾರಾಷ್ಟ್ರ, ತ್ರಿಪುರದಲ್ಲೂ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ. ಆದರೆ ಪಶ್ಚಿಮ ಬಂಗಾಳ ಹಾಗೂ ಛತ್ತೀಸ್ಗಢ ರಾಜ್ಯಗಳು ತಮಗೆ ವಿದ್ಯುತ್ ಕೊರತೆಯಾಗಿಲ್ಲ ಎಂದು ಹೇಳಿಕೊಂಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ