
ಧರ್ಮ, ಜಾತಿಯ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳಿಗೆ ಲೆಕ್ಕವೇ ಇಲ್ಲ. ಅಷ್ಟಕ್ಕೂ ಎಲ್ಲರಿಗೂ ತಿಳಿದಿರುವಂತೆ ಬ್ರಹ್ಮನ ಮುಖದಿಂದ (ಜ್ಞಾನ ಮತ್ತು ಬೋಧನೆಗಾಗಿ) ಬಂದವರು ಬ್ರಾಹ್ಮಣರು, ಬ್ರಹ್ಮನ ಬಾಹುಗಳಿಂದ (ರಕ್ಷಣೆ ಮತ್ತು ಆಡಳಿತಕ್ಕಾಗಿ) ಬಂದವರು ಕ್ಷತ್ರಿಯರು, ಬ್ರಹ್ಮನ ತೊಡೆಗಳಿಂದ (ವ್ಯಾಪಾರ, ಕೃಷಿ ಮತ್ತು ಉತ್ಪಾದನೆಗಾಗಿ) ಬಂದವರು ವೈಶ್ಯರು ಹಾಗೂ ಬ್ರಹ್ಮನ ಪಾದಗಳಿಂದ (ಸೇವೆ ಮತ್ತು ಇತರ ವರ್ಣಗಳಿಗೆ ಸಹಾಯ ಮಾಡುವುದಕ್ಕಾಗಿ) ಬಂದವರು ಶೂದ್ರರು ಎನ್ನುವ ಕಲ್ಪನೆಯಿಂದ ನಾಲ್ಕು ವರ್ಣಗಳು ಹುಟ್ಟಿದ್ದು. ಇದರ ಅರ್ಥ ಆರಂಭದಲ್ಲಿ ವರ್ಣ ವ್ಯವಸ್ಥೆಯು ಜನ್ಮದ ಆಧಾರದ ಮೇಲೆ ಇರಲಿಲ್ಲ, ಬದಲಿಗೆ ವ್ಯಕ್ತಿಯ ಗುಣಗಳು, ಕೆಲಸ ಮತ್ತು ಆಸಕ್ತಿಯ ಆಧಾರದ ಮೇಲೆ ನಿರ್ಧಾರವಾಗುತ್ತಿತ್ತು. ಸಮಾಜದ ಸುಗಮ ಸಂಚಲನೆಗಾಗಿ ವೃತ್ತಿ ಆಧರಿತ ವರ್ಗೀಕರಣವನ್ನು ಮಾಡಲಾಗಿತ್ತು. ಜ್ಞಾನಾರ್ಜನೆ, ರಕ್ಷಣೆ, ಆರ್ಥಿಕತೆ ಮತ್ತು ಸೇವಾ ವಲಯಗಳನ್ನು ನಿರ್ವಹಿಸಲು ಈ ನಾಲ್ಕು ವಿಭಾಗಗಳನ್ನು ಸೃಷ್ಟಿಸಲಾಯಿತು.
ಆದರೆ, ಕಾಲಕ್ರಮೇಣ ಪರಿಸ್ಥಿತಿ ಏನಾಗಿದೆ ಎನ್ನುವುದು ಗುಟ್ಟಾಗಿಯೇನೂ ಉಳಿದಿಲ್ಲ. ಅವರು ಶ್ರೇಷ್ಠರು, ಇವರು ಕನಿಷ್ಠರು ಎನ್ನುವ ಮನಸ್ಥಿತಿ ಒಂದೆಡೆಯಾದರೆ, ಇವರೆಲ್ಲ ಒಟ್ಟುಗೂಡಿಬಿಟ್ಟರೆ ರಾಜಕಾರಣಿಗಳಿಗೆ ಅವರ ರಾಜಕಾರಣದ ಮೇಲೆಯೇ ಗಂಭೀರ ಪರಿಣಾಮ ಬೀರುವ ಭಯದಿಂದ ಒಗ್ಗಟ್ಟಾಗಲು ಬಿಡುವುದೇ ಇಲ್ಲ. ಅಷ್ಟಕ್ಕೂ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವವರು ಬ್ರಾಹ್ಮಣರು ಮಾತ್ರ ಎನ್ನುವ ತಪ್ಪು ಕಲ್ಪನೆ ಹಲವರಲ್ಲಿ ಇದೆ. ಕೆಲವೊಂದು ಗ್ರಾಮಗಳಲ್ಲಿ, ಅವರದ್ದೇ ಜಾತಿಯ, ಅವರದ್ದೇ ಜನಾಂಗದ ಜನರೇ ದೇವಿಗೆ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಆದ್ದರಿಂದ ಭಾರತವನ್ನು ಜಾತ್ಯತೀತ ದೇಶ ಎಂದೇ ಕರೆಯಲಾಗುತ್ತದೆ. ಆದರೆ ಜಾತಿಯ ಹೆಸರಿನಲ್ಲಿ ಸಂಘರ್ಷಗಳು ಮಾತ್ರ ನಿರಂತರವಾಗಿ ನಡೆಯುತ್ತಲೇ ಇವೆ.
ಇವೆಲ್ಲವುಗಳ ನಡುವೆಯೇ, ಉತ್ತರ ಪ್ರದೇಶದಲ್ಲಿ, ಕುತೂಹಲದ ಘಟನೆಯೊಂದು ನಡೆದಿದೆ. ಅದೇನೆಂದರೆ, 10 ಸಾವಿರದಷ್ಟು ದಲಿತರು ಜನಿವಾರವನ್ನು ಧಾರಣೆ ಮಾಡುವ ಮೂಲಕ ಬ್ರಾಹ್ಮಣ್ಯವನ್ನು ಸ್ವೀಕಾರ ಮಾಡಿದ್ದಾರೆ. ಉತ್ತರ ಪ್ರದೇಶದ ಮೇರಠ್ನಲ್ಲಿ ಈ ಘಟನೆ ನಡೆದಿದೆ. ಮೂರು ದಾರಗಳ ಗುಂಪಾಗಿರುವ ಜನಿವಾರವು ಬ್ರಾಹ್ಮಣ ಸಮುದಾಯಕ್ಕೆ ಕೇವಲ ಒಂದು ದಾರವಲ್ಲ. ಈ ಮೂರು ದಾರಗಳು ವೇದಗಳು (ಋಗ್, ಯಜುರ್, ಸಾಮ), ತ್ರಿಗುಣಗಳು (ಸತ್ವ, ರಜಸ್, ತಮಸ್) ಮತ್ತು ತ್ರಿಮೂರ್ತಿಗಳನ್ನು (ಬ್ರಹ್ಮ, ವಿಷ್ಣು, ಮಹೇಶ್ವರ) ಪ್ರತಿನಿಧಿಸುತ್ತವೆ ಎಂದು ನಂಬಲಾಗಿದೆ. ಇದನ್ನು ಸಂಪ್ರದಾಯಬದ್ಧವಾಗಿ ಧರಿಸಿದರೆ ಅವರು ಬ್ರಾಹ್ಮಣರಾಗುತ್ತಾರೆ. ಅಂಥದ್ದೇ ಒಂದು ವಿಧಿ-ವಿಧಾನದ ಮೂಲಕ 10 ಸಾವಿರ ಮಂದಿ ಈಗ ಬ್ರಾಹ್ಮಣ ಸಮುದಾಯಕ್ಕೆ ಸೇರ್ಪಡೆಯಾಗಿದ್ದಾರೆ.
ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪ್ರತಿಯೊಬ್ಬರೂ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅವರಲ್ಲಿ ಹಲವರು ಬ್ರಾಹ್ಮಣ ಸಮುದಾಯದ ಬಗ್ಗೆ ತಿಳಿದಾಗ ತುಂಬಾ ಖುಷಿಯಾಯಿತು. ಅಲ್ಲಿಯ ಆಚಾರ-ವಿಚಾರಗಳು, ಅವರ ಸಂಪ್ರದಾಯ ಎಲ್ಲವೂ ಖುಷಿಕೊಟ್ಟಿತು. ಆದ್ದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದರೆ, ಮತ್ತೆ ಕೆಲವರು, ಭೇದಭಾವದಿಂದ ಬೇಸತ್ತಿರುವ ಕಾರಣ, ಎಲ್ಲರೂ ಒಂದೇ ಎಂದು ಸಮಾನತೆಗಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ತುಂಬಾ ಕುತೂಹಲದವಾದ ಕಾರಣವನ್ನೂ ಕೊಟ್ಟಿದ್ದಾರೆ. ನಾವೆಲ್ಲಾ ಜಾತಿ-ಭೇದ ಮರೆತು ಒಗ್ಗಟ್ಟಾಗಿ ಇರಲು ನೋಡಿದರೂ, ನಮ್ಮ ನಮ್ಮ ನಡುವೆಯೇ ಒಡಕು ತರುವ ಮನಸ್ಥಿತಿಯವರು ಹಲವರು ಇದ್ದಾರೆ. ಕೆಲವು ರಾಜಕೀಯದವರೂ ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ನಡುವೆ ತಂದು ಇಡುತ್ತಿದ್ದಾರೆ. ಈಗ ಏನು ಮಾಡುತ್ತಾರೋ ನೋಡುತ್ತೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ