
ಯಾವುದೇ ವಾಹನಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬಳಕೆ ಮಾಡದಿದ್ದರೆ ಅಥವಾ ಸಾರ್ವಜನಿಕವಾಗಿ ಅವುಗಳನ್ನು ಬಳಸುವ ಸಂಬಂಧ ನಿಲ್ಲಿಸದಿದ್ದರೆ ಮಾಲೀಕರ ಮೇಲೆ ವಾಹನ ತೆರಿಗೆ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರ ಅರ್ಥ ಯಾವುದೇ ಖಾಸಗಿ ಸ್ಥಳಗಳಲ್ಲಿ ವಾಹನವನ್ನು ಬಳಕೆ ಮಾಡುತ್ತಿದ್ದರೆ, ಅಂಥ ವಾಹನಗಳ ಮಾಲೀಕರಿಗೆ ತೆರಿಗೆಯನ್ನು ವಿಧಿಸುವಂತೆ ಇಲ್ಲ. ಸಂಬಂಧಪಟ್ಟ ವ್ಯಕ್ತಿಯು ಸಾರ್ವಜನಿಕ ಮೂಲಸೌಕರ್ಯದಿಂದ ಪ್ರಯೋಜನ ಪಡೆಯುತ್ತಿಲ್ಲ ಮತ್ತು ಅಂತಹ ಅವಧಿಗೆ ಮೋಟಾರು ವಾಹನ ತೆರಿಗೆಯ ಹೊರೆಯನ್ನು ಅವರ ಮೇಲೆ ಹೊರಿಸಬಾರದು ಎಂದು ಕೋರ್ಟ್ ಹೇಳಿದೆ.
ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ ಕಂಪೆನಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ಹೊರಡಿಸಿದೆ. ಈ ಕಂಪೆನಿಯು ಆಂಧ್ರಪ್ರದೇಶದ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ನಲ್ಲಿರುವ ಕೇಂದ್ರ ಡಿಸ್ಪ್ಯಾಚ್ ಯಾರ್ಡ್ನಲ್ಲಿ ಕಬ್ಬಿಣ ಮತ್ತು ಉಕ್ಕಿನ ವಸ್ತುಗಳನ್ನು ನಿರ್ವಹಿಸುವ ಮತ್ತು ಸಂಗ್ರಹಿಸುವ ಒಪ್ಪಂದವನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಈ ಘಟಕದ ಆವರಣದಲ್ಲಿ ಘಟಕಕ್ಕೆ ಸೇರಿದ ಜಾಗದಲ್ಲಿ ಮೋಟಾರು ವಾಹನಗಳನ್ನು ಬಳಸಲಾಗುತ್ತಿದೆ. ಈ ವಾಹನವನ್ನೂ ತೆರಿಗೆ ನೀಡುವಂತೆ ಮೋಟಾರು ವಾಹನ ನಿರೀಕ್ಷಕರು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಕಂಪೆನಿ ಹೈಕೋರ್ಟ್ ಮೊರೆ ಹೋಗಿತ್ತು.
ಅಲ್ಲಿ ಈ ರೀತಿ ತೆರಿಗೆ ವಿಧಿಸಿರುವುದು ಸರಿಯಲ್ಲ ಎಂದು ಕೋರ್ಟ್ ಹೇಳಿತ್ತು. ಅದನ್ನು ಪರಿಶೀಲಿಸುವಂತೆ ಹೇಳಿದರೂ ಮೋಟಾರು ವಾಹನ ನಿರೀಕ್ಷಕರು ತೆರಿಗೆಯ ರೂಪದಲ್ಲಿ 15,33,740 ರೂ.ಗಳ ಬೇಡಿಕೆಯನ್ನು ಇಟ್ಟಿದ್ದರು. ಅದನ್ನು ಪ್ರಶ್ನಿಸಿ ಕಂಪೆನಿ ಈಗ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಈ ವಾಹನಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಳಸಲಾಗುತ್ತಿಲ್ಲ, ಇದು ಘಟಕದ ಆವರಣದಲ್ಲಿ ಮಾತ್ರ ಬಳಕೆ ಆಗುತ್ತಿದೆ. ಆದ್ದರಿಂದ ತೆರಿಗೆ ವಿಧಿಸಿರುವುದು ಸರಿಯಲ್ಲ ಎನ್ನುವುದು ಅವರ ವಾದ.
ಇದನ್ನೂ ಓದಿ: ಸ್ವಾತಂತ್ರ್ಯ ಮತ್ತು ಮದುವೆ ಒಟ್ಟಿಗೇ ಇರೋದು ಅಸಾಧ್ಯ: ಆಯ್ಕೆ ನಿಮ್ಮದು- ಸುಪ್ರೀಂಕೋರ್ಟ್ ಕಿವಿಮಾತು!
ಸುಪ್ರೀಂಕೋರ್ಟ್ ಹೇಳಿದ್ದೇನು?
ಈ ವಾದವನ್ನು ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭೂಯಾನ್ ಅವರ ವಿಭಾಗೀಯ ಪೀಠವು ಮಾನ್ಯ ಮಾಡಿದೆ. ಮೋಟಾರು ವಾಹನ ತೆರಿಗೆ ವಿಧಿಸುವ ಕಾರಣ ಹೇಳಿರುವ ಕೋರ್ಟ್, ರಸ್ತೆಗಳು, ಹೆದ್ದಾರಿಗಳು ಮುಂತಾದ ಸಾರ್ವಜನಿಕ ಮೂಲಸೌಕರ್ಯಗಳನ್ನು ಬಳಸುತ್ತಿರುವ ವ್ಯಕ್ತಿಯು ಅಂತಹ ಬಳಕೆಗೆ ಪಾವತಿಸಬೇಕಾಗುತ್ತದೆ. ಆದ್ದರಿಂದಲೇ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 3 ರಲ್ಲಿ 'ಸಾರ್ವಜನಿಕ ಸ್ಥಳ' ಎಂದು ಬಳಸಲಾಗಿದೆ. ಮೋಟಾರು ವಾಹನವನ್ನು 'ಸಾರ್ವಜನಿಕ ಸ್ಥಳದಲ್ಲಿ' ಬಳಸದಿದ್ದರೆ ಅಥವಾ 'ಸಾರ್ವಜನಿಕ ಸ್ಥಳದಲ್ಲಿ' ಬಳಸಲು ಇಡದಿದ್ದರೆ, ಅದರ ಅರ್ಥ ಅಂಥವರು ಸಾರ್ವಜನಿಕ ಮೂಲಸೌಕರ್ಯದಿಂದ ಪ್ರಯೋಜನವನ್ನು ಪಡೆಯುತ್ತಿಲ್ಲ ಎನ್ನುವುದು. ಆದ್ದರಿಂದ ತೆರಿಗೆ ವಿಧಿಸುವುದು ಸರಿಯಲ್ಲ ಎಂದಿದೆ.
ಈ ಐತಿಹಾಸಿಕ ತೀರ್ಪಿನಲ್ಲಿ ಇಂಥ ಘಟಕಗಳ ವ್ಯಾಪ್ತಿಯಲ್ಲಿ ವಾಹನ ಬಳಕೆ ಮಾಡುತ್ತಿರುವವರಿಗೆ ಅನುಕೂಲ ಆಗಿದೆ. ಅದರಂತೆಯೇ ಇದಾಗಲೇ ತೆರಿಗೆ ರೂಪದಲ್ಲಿ ಹಣ ಪಡೆದಿರುವ ಮೋಟಾರು ವಾಹನ ನಿರೀಕ್ಷಕರು ಹಣವನ್ನು ವಾಪಸ್ ನೀಡಬೇಕಿದೆ.
ಇದನ್ನೂ ಓದಿ: ಆ್ಯಕ್ಸಿಡೆಂಟ್ ಪರಿಹಾರದ ಕುರಿತು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು: ಅಸಂಖ್ಯ ನೌಕರರು ನಿರಾಳ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ