IED found at Ghazipur : ಗಣರಾಜ್ಯೋತ್ಸವಕ್ಕೂ ಮುನ್ನ  ದೆಹಲಿಯಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು!

By Kannadaprabha NewsFirst Published Jan 15, 2022, 2:20 AM IST
Highlights

* ಗಣರಾಜ್ಯೋತ್ಸವಕ್ಕೂ ಮುನ್ನ ದಿಲ್ಲಿಯಲ್ಲಿ ‘ಟೈಂ ಬಾಂಬ್‌’ ಪತ್ತೆ
* ಎನ್‌ಎಸ್‌ಜಿಯಿಂದ ಬಾಂಬ್‌ ನಿಷ್ಕ್ರಿಯ, ತಪ್ಪಿದ ಭಾರಿ ಅನಾಹುತ
* ಆರ್‌ಡಿಎಕ್ಸ್‌, ಅಮೋನಿಯಂ ನೈಟ್ರೇಟ್‌ ಇದ್ದ 3 ಕೇಜಿಯ ಬಾಂಬ್‌
* ಗಾಜಿಪುರ ಹೂ ಪೇಟೆಯಲ್ಲಿ ಇಟ್ಟಬಾಂಬ್‌ಗೆ ಟೈಮರ್‌ ಅಳವಡಿಸಲಾಗಿತ್ತು

ನವದೆಹಲಿ (ಜ. 15) ಗಣರಾಜ್ಯೋತ್ಸವಕ್ಕೆ (Republic Day) ಇನ್ನೇನು ಕೆಲವೇ ದಿನ ಉಳಿದಿರುವಾಗ ದಿಲ್ಲಿಯ (New Delhi)ಪೇಟೆಯೊಂದರಲ್ಲಿ 3 ಕೇಜಿ ತೂಕದ ‘ಟೈಂ ಬಾಂಬ್‌’ (Time Bomb) ಪತ್ತೆಯಾಗಿದೆ. ದೆಹಲಿಯ ಗಾಜಿಪುರ ಹೂವು ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕಗಳನ್ನು ಒಳಗೊಂಡಿದ್ದ ಬಾಂಬ್‌ ಕಂಡುಬಂದಿತು. ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಅಧಿಕಾರಿಗಳು ಈ ಬಾಂಬ್‌ ಅನ್ನು ನಿಷ್ಕಿ್ರಯಗೊಳಿಸಿದ್ದು, ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚು ಮಾಡಲಾಗಿದೆ.

‘ಪ್ರವೇಶ ದ್ವಾರದ ಬಳಿ ಆರ್‌ಡಿಎಕ್ಸ್‌ ಮತ್ತು ಅಮೋನಿಯಂ ನೈಟ್ರೇಟ್‌ ಮಿಶ್ರಣದ 3 ಕೇಜಿಯ ಬಾಂಬ್‌ ಅನ್ನು ಲೋಹದ ಪೆಟ್ಟಿಗೆಯೊಳಗೆ ಅಳವಡಿಸಿ ಅದನ್ನು ಬ್ಯಾಗ್‌ನಲ್ಲಿ ಇಡಲಾಗಿತ್ತು. ಅನುಮಾನಾಸ್ಪದ ಬ್ಯಾಗ್‌ ಬಗ್ಗೆ ಬೆಳಗ್ಗೆ 11 ಗಂಟೆಗೆ ಮಾಹಿತಿ ಲಭಿಸಿತು. ಮಾಹಿತಿ ಪಡೆದ ಅಧಿಕಾರಿಗಳು ಮತ್ತು ಎನ್‌ಎಸ್‌ಜಿಯ ಬಾಂಬ್‌ ನಿಷ್ಕಿ್ರಯ ದಳ ಸ್ಥಳಕ್ಕೆ ಆಗಮಿಸಿ, 1 ಗಂಟೆ ಸುಮಾರಿಗೆ ಅದನ್ನು ನಿಷ್ಕಿ್ರಯಗೊಳಿಸಿದರು’ ಎಂದು ಎನ್‌ಎಸ್‌ಜಿ ಮುಖ್ಯಸ್ಥ ಎಂ.ಎ.ಗಣಪತಿ ಹೇಳಿದ್ದಾರೆ.

‘ಬಾಂಬ್‌ ಇಟ್ಟವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಇದಕ್ಕೆ ಟೈಮರ್‌ ಅಳವಡಿಸಲಾಗಿತ್ತು. ಭಾರೀ ವಿನಾಶದ ಸಂಚು ರೂಪಿಸಲಾಗಿತ್ತು’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿದೆಹಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಇರುವುದರಿಂದ ಪೊಲೀಸರನ್ನು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಾಂಬ್‌ನ ಮಾದರಿಯನ್ನು ಸಂಗ್ರಹಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

Terrorist Attack Alert: ನಾಗ್ಪುರದ ಆರೆಸ್ಸೆಸ್‌ ಕಚೇರಿ ಮೇಲೆ ಉಗ್ರರ ಕೆಂಗಣ್ಣು

ಗಣರಾಜ್ಯೋತ್ಸವ ಸಂಭ್ರಮಕ್ಕೆ ಇನ್ನೂ 15ಕ್ಕೂ ಕಡಿಮೆ ದಿನಗಳಿರುವ ಹೊತ್ತಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ  ಭಯೋತ್ಪಾದಕ ಕೃತ್ಯದ ಆತಂಕ ಶುರುವಾಗಿದೆ. ಶುಕ್ರವಾರ ಬೆಳಗ್ಗೆ ದೆಹಲಿಯ ಗಡಿಗೆ ಹೊಂದಿಕೊಂಡಿರು ಉತ್ತರಪ್ರದೇಶದ ಗಾಜಿಪುರ (Ghazipur) ಹೂವಿನ ಮಾರುಕಟ್ಟೆಯಲ್ಲಿ (flower market) ಭಾರೀ ಪ್ರಮಾಣದ ಆರ್ ಡಿಎಕ್ಸ್ ಅನ್ನು(RDX) ಹೊಂದಿದ್ದ ಬ್ಯಾಗ್ ಪತ್ತೆಯಾಗಿದ್ದು, ದೆಹಲಿ ಪೊಲೀಸ್ (Delhi Police)ಯಶಸ್ವಿಯಾಗಿ ನಿಷ್ಕ್ರೀಯಗೊಳಿಸಿದ್ದಾರೆ. ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲು ರಾಷ್ಟ್ರ ರಾಜಧಾನಿ ಸಿದ್ಧವಾಗುತ್ತಿದ್ದಂತೆ, ನಗರದ ಭದ್ರತಾ ವ್ಯವಸ್ಥೆಯಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಬೆಳಗ್ಗೆ 10.20ರ ವೇಳೆಗೆ ದೆಹಲಿ ಗಡಿಗೆ ತಾಗಿಕೊಂಡಿರುವ ಉತ್ತರ ಪ್ರದೇಶದ ನಗರ ಗಾಜಿಪುರದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿರುವ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ದೂರು ಸ್ವೀಕರಿಸಿದ್ದರು. ಕಪ್ಪು ಬಣ್ಣದ ಬ್ಯಾಕ್ ಪ್ಯಾಕ್ ನಲ್ಲಿ ಅಮೋನಿಯಂ ನೈಟ್ರೇಟ್ ಮಿಶ್ರಣವಿರುವ ಆರ್ ಡಿಎಕ್ಸ್  ಸ್ಫೋಟಕವನ್ನು ಇದರಲ್ಲಿ ಇಡಲಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಇದನ್ನು ನಿಷ್ಕ್ರೀಯಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪತ್ತೆಯಾದ ಬಾಂಬ್​ ಇದ್ದ ಚೀಲವನ್ನು ನೆಲದಲ್ಲಿ ಗುಂಡಿ ತೋಡಿ 8 ಅಡಿಗಳಷ್ಟು ಆಳದಲ್ಲಿ ಹೂತು ಹಾಕಲಾಯಿತು. ಇನ್ನೂ ಬಾಂಬ್​ ಪತ್ತೆಯಾದ ಪ್ರದೇಶವನ್ನು ಎನ್​ಎಸ್​ಜಿ ತಂಡವು  ಸುತ್ತುವರಿಯಿತು. ಮತ್ತೆ ಎಲ್ಲಾದರೂ ಬಾಂಬ್​ ಇಟ್ಟಿರಬಹುದಾ ಎಂದು ಹುಡುಕಾಟ ನಡೆಸಿತ್ತು.  ಐಇಡಿಯನ್ನು ತೆರೆದ ಮೈದಾನದಲ್ಲಿ ಸ್ಫೋಟಿಸಲಾಗಿದೆ. ಆ ಚೀಲವನ್ನು ಮಾತ್ರ ಹೂತು ಹಾಕಲಾಗಿದೆ ಎನ್ನಲಾಗಿದೆ. 

ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರೆಸ್ಸೆಸ್‌ ಕೇಂದ್ರ ಕಚೇರಿ (RSS Headquarters) ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳ ಬಗ್ಗೆ ಜೈಷ್‌-ಎ-ಮೊಹಮ್ಮದ್‌ (Jaish e Mohammed) ಉಗ್ರರು ಭೂ ಸರ್ವೇಕ್ಷಣೆ ನಡೆಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿತ್ತು. . ತನ್ಮೂಲಕ ಆರೆಸ್ಸೆಸ್‌ ಕಚೇರಿ ಸೇರಿದಂತೆ ನಾಗ್ಪುರದಲ್ಲಿರುವ ಮುಖ್ಯ ಸ್ಥಳಗಳು ಉಗ್ರರ ಕೆಂಗಣ್ಣಿಗೆ ಗುರಿಯಾದ ಮಾಹಿತಿ ಲಭ್ಯವಾಗಿತ್ತು. 

 

click me!