Loksabha Election 2024: 'ಕೈ' ವಿನ್‌ ಆಗ್ಬೇಕಿತ್ತು, ಅದಾಗೋಲ್ಲ ಎಂದ ಕೈ ಹಿರಿಯ ನಾಯಕ

By Suvarna NewsFirst Published Dec 2, 2021, 6:16 PM IST
Highlights

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರು ಆಗಿರುವ ಗುಲಾಂ ನಬೀ ಆಜಾದ್‌, ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರುವ ಸಾಧ್ಯತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಪಕ್ಷದ ನಾಯಕರೇ ಗೆಲುವಿನ ಬಗ್ಗೆ ಹೀಗೆ ನಕರಾತ್ಮಕ ಹೇಳಿಕೆ ನೀಡಿರುವುದು ಕಾಂಗ್ರೆಸ್‌ಗೆ ಮುಜುಗರವುಂಟು ಮಾಡಿದೆ. 

ಜಮ್ಮು ಕಾಶ್ಮೀರ(ಡಿ.2): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬೇಕಿತ್ತು. ಆದರೆ ಅದು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬೀ ಅಜಾದ್‌(Ghulam Nabi Azad) ಹೇಳಿದ್ದಾರೆ. ಇವರ ಈ ಹೇಳಿಕೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಮುಜುಗರಕ್ಕೀಡು ಮಾಡಿದೆ. ಅವರು ಜಮ್ಮು ಮತ್ತು ಕಾಶ್ಮೀರದ  ಗಡಿ ಜಿಲ್ಲೆ ಪೂಂಚ್‌(Poonch)ನಲ್ಲಿ ಪಕ್ಷದ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದರು. ಮುಂದಿನ ಚುನಾವಣೆಯಲ್ಲಿ 300 ಸಂಸದರೊಂದಿಗೆ ಕಾಂಗ್ರೆಸ್‌  ಸರ್ಕಾರ ರಚಿಸುವ ಸಾಧ್ಯತೆ ಮುಂದೆ ಕಾಣ ಸಿಗಲಾರದು. ನಾವು 300 ಸೀಟುಗಳನ್ನು ಗೆದ್ದು ಅಧಿಕಾರಕ್ಕೇರಬೇಕೆಂದು ಬಯಸುತ್ತೇನೆ. ಆದರೆ ಅದು ಸಾಧ್ಯವಾಗಬಹುದು ಎಂದು ನನಗೆ ಅನಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಅರ್ಟಿಕಲ್‌ 370(Article 370)ಯನ್ನು ರದ್ದುಪಡಿಸಬೇಕೆಂದು ನಾನು ಸಂಸತ್ತಿನಲ್ಲಿ ವರ್ಷದಿಂದಲೂ ಮಾತನಾಡುತ್ತಿದ್ದೇನೆ. ಆದರೆ ಈ ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ನಾನೀಗ ಏನೂ ಹೇಳಲಾರೆ. ಹಾಗಾಗಿ ನಾನು ಏನು ಮಾಡಲಾಗದ ಸ್ಥಿತಿಯಲ್ಲಿದ್ದೇನೆ.  ಅರ್ಟಿಕಲ್‌ 370 ರದ್ಧತಿಯೂ ದೊಡ್ಡ ರಾಜಕೀಯ ವಿವಾದಕ್ಕೀಡಾದ ವಿಚಾರವಾಗಿದೆ. ನಮ್ಮ ಭೂಮಿಯ ರಕ್ಷಣೆ ಮತ್ತು ಉದ್ಯೋಗಗಳನ್ನು ರಕ್ಷಿಸುವ ದೊಡ್ಡ ಸಮಸ್ಯೆ ಇರುವ ಈ ಕ್ಷಣದಲ್ಲಿ ನನ್ನ ಹುದ್ದೆ ಅರ್ಥಹೀನವಾಗಿದೆ. 370 ನೇ ವಿಧಿಗೆ ಸಂಬಂಧಿಸಿದ ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿದೆ ಮತ್ತು ಅದರ ತೀರ್ಪು ಯಾವಾಗ ಬರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಅಲ್ಲಿಯವರೆಗೆ ನಾವು ಕಾಯಲು ಸಾಧ್ಯವಿಲ್ಲ ಮತ್ತು ನಮ್ಮ ಉದ್ಯೋಗ ಮತ್ತು ಭೂಮಿ ಜಮ್ಮು ಮತ್ತು ಕಾಶ್ಮೀರದವರಲ್ಲದ ಜನರಿಗೆ ಹೋಗುವುದನ್ನು ನೋಡುತ್ತಾ ಕೂರಲಾಗುವುದಿಲ್ಲ ಎಂದು ಹೇಳಿದರು. 370  ವಿಧಿ ಬಗ್ಗೆ ಕೇವಲ ಸುಪ್ರೀಂಕೋರ್ಟ್ ಮಾತ್ರ ನಿರ್ಧರಿಸಲು ಸಾಧ್ಯ. ಸುಪ್ರೀಂಕೋರ್ಟ್‌(Suprem court)ನ ಹೊರತಾಗಿ, ಕೇಂದ್ರ ಆಡಳಿತಾರೂಢ ಸರ್ಕಾರ ಮಾತ್ರ ಇದನ್ನು ಮಾಡಬಹುದು. ಪ್ರಸ್ತುತ ಸರ್ಕಾರ ಅದನ್ನು ರದ್ದುಗೊಳಿಸಿದೆ. ಹಾಗಾದರೆ, ಅವರು ಅದನ್ನು ಹೇಗೆ ಮಾಡಲು ಸಾಧ್ಯ ಎಂದರು.

ಗುಲಾಮ್ ನಬಿ ಆಜಾದ್ ಆತ್ಮಕಥೆ: ಕಾಂಗ್ರೆಸ್‌ಗೆ ಮುಜುಗರ ಮಾಡುತ್ತಾ 'ಕಮಿಂಗ್ ಸೂನ್'?

ಈ ಹಿನ್ನೆಲೆಯಲ್ಲಿ ಮುಂದಿನ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕಿತ್ತು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಅದು ಸಾಧ್ಯವಿಲ್ಲವೆಂದೆನಿಸುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಬಹು ವಿಳಂಬವಾಗಿರುವ ವಿಧಾನಸಭೆ ಚುನಾವಣೆಯನ್ನು  ವಾರದೊಳಗೆ ಘೋಷಣೆ ಮಾಡಿ ಚುನಾವಣೆ ನಡೆಸಿ ರಾಜ್ಯಾಡಳಿತವನ್ನು ಮರುಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಎಲ್ಲ ಪಕ್ಷಗಳು ಒಗ್ಗೂಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

| Addressing a rally in J&K's Poonch, former CM & senior Congress leader Ghulam Nabi Azad on Wednesday said he does not see the party winning 300 seats in the next general elections. pic.twitter.com/fsoRuCtnpH

— ANI (@ANI)

 

ನರೇಂದ್ರ ಮೋದಿ ಸರ್ಕಾರವು  2019ರ ಆಗಸ್ಟ್ 5 ರಂದು ಆರ್ಟಿಕಲ್ 370 ಮತ್ತು ಆರ್ಟಿಕಲ್ 35A ಅನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿತು. ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಅವಕಾಶ ಮಾಡಿಕೊಟ್ಟಿತು. ಈ ಹಿಂದೆ ಇದ್ದ ಆರ್ಟಿಕಲ್ 370, ಆರ್ಟಿಕಲ್ 35 ಯು ಭಾರತದ ಸಂವಿಧಾನದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು. 

ಪ್ರಧಾನಿ ಮೋದಿ ಹಾಡಿ ಹೊಗಳಿದ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಅಝಾದ್!

ಈ ಹಿಂದೆಯೂ ಗುಲಾಂ ನಬೀ ಅಜಾದ್‌ ಕಾಂಗ್ರೆಸ್‌ ಪಕ್ಷಕ್ಕೆ ಬದ್ಧ ವೈರಿ ಎನಿಸುವ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿ ಪಕ್ಷವನ್ನು ಮುಜುಗರಕ್ಕೀಡು ಮಾಡಿದ್ದರು. ಕರ್ನಾಟಕವೂ ಸೇರಿದಂತೆ ಭಾರತದ ಯಾವುದೇ ರಾಜ್ಯಕ್ಕೆ ಹೋದರು ಕೂಡ ಕಾಂಗ್ರೆಸ್ ಪಾಳಯದಲ್ಲಿ ಗುಲಾಮ್ ನಬಿ ಆಜಾದ್ ಹೆಸರು ಚಿರಪರಿಚಿತ. ಹೆಚ್ಚು ಕಡಿಮೆ ಪ್ರತಿ ಕಾಂಗ್ರೆಸ್ ಕಾರ್ಯಕರ್ತನೂ ಬಾಯಲ್ಲೂ ಈ ಹೆಸರು ನಲಿಯುತಿತ್ತು. ಜಮ್ಮು-ಕಾಶ್ಮೀರ ಮೂಲದ ಗುಲಾಮ್ ನಬಿ ಆಜಾದ್, ಕಾಂಗ್ರೆಸ್‌ನ ಗಾಂಧಿ ಕುಟುಂಬದ ಮೂರು ತಲೆಮಾರಿನವರ ಜೊತೆ ಕೆಲಸ ಮಾಡಿದ್ದಾರೆ. ನಾಲ್ವರು ಪ್ರಧಾನಿಗಳ ಬಳಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಸಾಲದ್ದಕ್ಕೆ ಹೆಚ್ಚು ಕಡಿಮೆ ಭಾರತದ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಆದರೀಗ ಕಾಂಗ್ರೆಸ್‌ಗೆ ಹಿರಿಯ ನಾಯಕನ ಹೇಳಿಕೆಯಿಂದ ಕಾಂಗ್ರೆಸ್‌ಗೆ ಇರಿಸು ಮುರಿಸು ಉಂಟಾಗುತ್ತಿದೆ.

click me!