ಕೊಟ್ಟಾಯಂ(ಫೆ.7): ಹಾವು ಕಡಿತದಿಂದ ಅಸ್ವಸ್ಥರಾಗಿದ್ದ ಕೇರಳದ ಸ್ನೇಕ್ಮ್ಯಾನ್ ವಾವಾ ಸುರೇಶ್ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಅಪಪ್ರಚಾರ ಶುರು ವಾಗಿತ್ತು. ಅವರು ಸರಿಯಾದ ವೈಜ್ಞಾನಿಕ ಕ್ರಮದಿಂದ ಹಾವು ಹಿಡಿಯುತ್ತಿಲ್ಲ. ಹೀಗಾಗಿ ಹಾವು ಹಿಡಿಯಲು ಅವರನ್ನು ಕರೆಯಬೇಡಿ ಎಂದು ಪರ ವಿರೋಧ ಚರ್ಚೆಗಳು ಶುರು ಆಗಿದ್ದವು. ಈ ಆರೋಪದ ಹಿನ್ನೆಲೆಯಲ್ಲಿ ಮಾಧ್ಯಮಗಳು ಸುರೇಶ್ ಅವರನ್ನು ಇನ್ನು ಮುಂದೆ ಹಾವು ಹಿಡಿಯಲು ಬಯಸುತ್ತೀರಾ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಾವಾ ಸುರೇಶ್ ತನ್ನ ಕೊನೆ ಉಸಿರಿರುವರೆಗೂ ಹಾವು ಹಿಡಿಯುವುದಾಗಿ ಹೇಳಿದರು. ನಾಲ್ಕನೇ ದಿನ ನನಗೆ ಪ್ರಜ್ಞೆ ಬಂದಿದ್ದು, ಇಲ್ಲಿ ನನಗೆ ಉತ್ತಮವಾಗಿ ಚಿಕಿತ್ಸೆ ನೀಡಿದ್ದಾರೆ. ಕೇರಳದ ಜನತೆ ನನಗಾಗಿ ಪ್ರಾರ್ಥಿಸಿದರು ಹಾಗೂ ನಾನೀಗ ಆರೋಗ್ಯಪೂರ್ಣವಾಗಿ ಮರಳಿ ಬಂದಿದ್ದೇನೆ ಎಂದರು.
ಕೇರಳದ ಸ್ನೇಕ್ ಮ್ಯಾನ್ ವಾವಾ ಸುರೇಶ್ ಚೇತರಿಕೆ... ಮರಳಿದ ಪ್ರಜ್ಞೆ ವಾರ್ಡ್ಗೆ ಶಿಫ್ಟ್
48 ವರ್ಷದ ವಾವಾ ಸುರೇಶ್ ಅವರಿಗೆ ಕೇರಳದ ಕೊಟ್ಟಾಯಂನಲ್ಲಿ ಜನವರಿ 31ರಂದು ಮಾನವ ವಾಸಸ್ಥಳಕ್ಕೆ ಬಂದಿದ್ದ ನಾಗರಹಾವನ್ನು ಹಿಡಿಯುವ ವೇಳೆ ಅದು ಇವರ ತೊಡೆಗೆ ಕಚ್ಚಿತ್ತು. ಕೂಡಲೇ ಸುರೇಶ್ ಅವರನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗಂತ ವಾವಾ ಸುರೇಶ್ಗೆ ಹಾವು ಕಡಿದಿರುವುದು ಇದೇ ಮೊದಲಲ್ಲ. ಆದರೆ ಅವರು ಹಾವಿನ ರಕ್ಷಣೆ ಮಾಡುವ ಕಾಯಕ ನಿಲ್ಲಿಸಿರಲಿಲ್ಲ. ಸೋಮವಾರ ಕೊಟ್ಟಾಯಂನ ಕುರಿಚಿ ಬಳಿ ನಾಗರಹಾವು ಕಚ್ಚಿದ ಮೇಲೆಯೂ ಅದನ್ನು ಹಿಡಿದು ಚೀಲಕ್ಕೆ ತುಂಬಿ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. 2020ರಲ್ಲಿಯೂ ಇವರಿಗೆ ಹಾವೊಂದು ಕಚ್ಚಿದ ಪರಿಣಾಮ ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.
ಉರಗರಕ್ಷಕ ವಾವಾ ಸುರೇಶ್ಗೆ ಕಚ್ಚಿದ ನಾಗರಹಾವು... ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
ಕೇರಳದಲ್ಲಿ ಸ್ನೇಕ್ ಮ್ಯಾನ್ ಎಂದೇ ಮನೆ ಮಾತಾಗಿದ್ದ ವಾವಾ ಸುರೇಶ್ ಅವರು ಇದುವರೆಗೆ ಅವರು 50,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದರು. ಅಲ್ಲದೇ ಇವರ ಸಾಧನೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಹಾಗೂ ಅನಿಮಲ್ ಪ್ಲಾನೆಟ್ ಚಾನೆಲ್ನಲ್ಲಿಯೂ ಪ್ರಸಾರವಾಗಿತ್ತು. ಸಾಮಾನ್ಯವಾಗಿ ಸ್ನೇಕ್ ಮ್ಯಾನ್ ಅಫ್ ಕೇರಳ ಎಂದು ಕರೆಯಲ್ಪಡುವ ಸುರೇಶ್ ಇದುವರೆಗೆ 190 ನಾಗರಹಾವುಗಳನ್ನು ರಕ್ಷಣೆ ಮಾಡಿದ್ದರು.
ವಾವಾ ಸುರೇಶ್ ಆಸ್ಪತ್ರೆಗೆ ದಾಖಲಾದ ಬಳಿಕ ಅವರು ಹಾವು ಹಿಡಿಯುವ, ಅದು ಅವರಿಗೆ ಕಚ್ಚುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ವಾವಾ ಸುರೇಶ್ಗೆ ಹೆಚ್ಚಿನ ಚಿಕಿತ್ಸೆಗೆ ಕೇರಳ ಸರ್ಕಾರ ಅಗತ್ಯ ವ್ಯವಸ್ಥೆ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿಯೂ ಅಪಾರ ಅಭಿಮಾನಿಗಳನ್ನು ವಾವಾ ಸುರೇಶ್ ಹೊಂದಿದ್ದಾರೆ. ಫೇಸ್ಬುಕ್ನಲ್ಲಿ ಅವರಿಗೆ 2.1 ಮಿಲಿಯನ್ ಫಾಲೋವರ್ಸ್ಗಳಿದ್ದಾರೆ. ಸಾಮಾಜಿಕ ತಾಲತಾಣಗಳಲ್ಲಿ ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದು, ಎಲ್ಲರ ಹಾರೈಕೆಯ ಫಲವಾಗಿ ಸುರೇಶ್ ಚೇತರಿಸಿಕೊಂಡಿದ್ದಾರೆ.
ಈ ಹಿಂದೆ 2014 ರಲ್ಲಿ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಕೂಡ ಇವರ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ