
ಚೆನ್ನೈ (ಮಾ.17) ರಾಜ್ಯಸಭಾ ಸದಸ್ಯ, ಎಐಎಡಿಎಂಕೆ ನಾಯಕನ ಹೇಳಿಕೆಯೊಂದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು ಕೋಲಾಹಲ ಸೃಷ್ಟಿಸಿದೆ. ನನಗೆ ನಟಿ ನಯನತಾರ ಬೇಕು, ಕೊಡಿಸ್ತೀರಾ? ನಯನತಾರ ಮದುವೆಯಾಗಬೇಕು ಎಂದು ಕನಸು ಕಟ್ಟಿಕೊಂಡಿರುವವರ ಕನಸು ನನಸು ಮಾಡುತ್ತೀರಾ ಎಂದು ರಾಜ್ಯಸಭಾ ಸಂಸದ ಸವಿ ಶಣ್ಮುಗನ್ ಪ್ರಶ್ನಿಸಿದ್ದಾರೆ. ಶಣ್ಮುಗನ್ ಹೇಳಿಕೆಗೆ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಮಾಜಿ ಸಚಿವ ಶಣ್ಮುಗನ್ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಈ ಮಾತು ಆಡಿದ್ದಾರೆ. ತಮಿಳುನಾಡಿನ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ವಿರುದ್ದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಣ್ಮುಗನ್ ಈ ಮಾತು ಹೇಳಿದ್ದಾರೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಾಗೂ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕೀಳುಮಟ್ಟದ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಮಿಳುನಾಡು ಚುನಾವಣೆ ಕಾವು ಪಡೆದುಕೊಳ್ಳುತ್ತಿದ್ದಂತೆ ಹೇಳಿಕೆಗಳು ಗಂಭೀರ ಸ್ವರೂಪ ಪಡುಕೊಳ್ಳುತ್ತಿದೆ. ಡಿಎಂಕೆ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಈ ಕುರಿತು ಶಣ್ಮುಗನ್ ತವರಿನಲ್ಲಿ ಬೃಹತ್ ಪ್ರತಿಭಟನೆ ವೇಳೆ, ಎಂಕೆ ಸ್ಟಾಲಿನ್ ವಿರುದ್ದ ವಾಗ್ದಾಳಿ ನಡೆಸಿದ್ದರು. ಇತ್ತೀಚೆಗೆ ಎಂಕೆ ಸ್ಟಾಲಿನ್ ವಿಶೇಷ ಅಭಿಯಾನ ಆರಂಭಿಸಿದ್ದರು. ಚುನಾವಣೆ ಪ್ರಯುಕ್ತ ನಿಮ್ಮ ಕನಸು ಹೇಳಿಕೊಳ್ಳಿ ಅನ್ನೋ ಅಭಿಯಾನ ಆರಂಭಿಸಿದ್ದಾರೆ. ಕಾರ್ಯಕರ್ತರು ಮನೆ ಮನೆಗೆ ಬಂದು ನಿಮ್ಮ ಕನಸು ಕೇಳುತ್ತಾರೆ. ಬಳಿಕ ಸರ್ಕಾರಕ್ಕೆ ಮುಟ್ಟಿಸುತ್ತಾರೆ ಎಂದಿದ್ದರು. ಈ ಯೋಜನೆ ಟೀಕಿಸುವ ಭರದಲ್ಲಿ ಶಣ್ಮುಗನ್ ಈ ಮಾತು ಹೇಳಿದ್ದಾರೆ.
ಚುನಾವಣೆ ಗೆಲ್ಲಲು ಎಂಕೆ ಸ್ಟಾಲಿನ ಸರ್ಕಾರ ಮಾಡಿರುವ ಪೊಳ್ಳು ಯೋಜನೆ ಇದು. ನನಗೆ ನಟಿ ನಯನತಾರ ಬೇಕು, ನಾನು ಮದುವೆಯಾಗಬೇಕು ಇದು ನನ್ನ ಕನಸು, ಸರ್ಕಾರ ಈಡೇರಿಸುತ್ತಾ? ಯಾರಿಗೊ ಒಬ್ಬರಿಗೆ ನಟಿ ನಯನತಾರ ಮದುವೆಯಾಗಬೇಕು ಅನ್ನೋ ಕನಸು ಇರುತ್ತೆ. ಸರ್ಕಾರ ಪೂರೈಸುತ್ತಾ ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ಯೋಜನೆ ಟೀಕಿಸುವ ಭರದಲ್ಲಿ ನಟಿಯನ್ನು ಮಾತ್ರವಲ್ಲ ಮಹಿಳೆಯನ್ನೇ ರಾಜ್ಯಸಭಾ ಸಂಸದ ಅವಮಾನಿಸಿದ್ದಾರೆ.
ಎಐಎಡಿಎಂಕೆ ನಾಯಕ ಶಣ್ಮುಗನ್ ಮಾತಿನಿಂದ ಡಿಎಂಕೆ ಕೆರಳಿದೆ. ಈ ಕುರಿತು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ರಾಜಕೀಯವಾಗಿ, ಯೋಜನೆ ವಿರುದ್ಧವಾಗಿ ಮಾತನಾಡುವಾಗ ಮಹಿಳೆಯರನ್ನು ಅಪಮಾನಿಸುವುದು ಸರಿಯಲ್ಲ. ಇದಕ್ಕೆ ತಕ್ಕ ಪ್ರತಿಫಲವನ್ನು ಚುನಾವಣೆಯಲ್ಲಿ ಜನರು ನೀಡಲಿದ್ದಾರೆ ಎಂದು ಡಿಎಂಕೆ ಹೇಳಿದೆ.
ಶಣ್ಮುಗನ್ ಹೇಳಿಕೆಯಿಂದ ಎಐಎಡಿಎಂಕೆ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ. ಇದುವರೆಗೆ ಎಐಎಡಿಎಂಕೆ ಪಕ್ಷ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಇತ್ತ ಪಕ್ಷದ ಇತರ ನಾಯಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಶಣ್ಮುಗನ್ ಹೇಳಿಕೆಯಿಂದ ಹಲವರು ದೂರ ಉಳಿದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ