Shinzo Abe Death; ಪ್ರೀತಿಯ ಗೆಳೆಯನನ್ನು ಕಳೆದುಕೊಂಡಿದ್ದೇನೆ, ಮೋದಿ ಭಾವುಕ ಲೇಖನ

By Kannadaprabha NewsFirst Published Jul 9, 2022, 6:01 AM IST
Highlights
  • ಭಾರತ-ಜಪಾನ್‌ ಬಾಂಧವ್ಯದ ಮುಂದಾಳು ಶಿಂಜೋ ಅಬೆ
  •  ನನ್ನ ಪ್ರೀತಿಯ ಗೆಳೆಯನನ್ನು ಕಳೆದುಕೊಂಡಿದ್ದೇನೆ
  • ನರೇಂದ್ರ ಮೋದಿ ಪ್ರಧಾನಿ ವಿಶೇಷ ಲೇಖನ

ಜಪಾನಿನ ಅಸಾಧಾರಣ ನಾಯಕ, ಉನ್ನತ ಜಾಗತಿಕ ಮುತ್ಸದ್ದಿ, ಭಾರತ-ಜಪಾನ್‌ ಆಪತ್ಭಾಂಧವ್ಯದ ಮಹಾನ್‌ ಮುಂದಾಳು ಆದ ಶಿಂಜೋ ಅಬೆ ಇನ್ನು ನಮ್ಮ ನಡುವೆ ಇಲ್ಲ. ಜಪಾನ್‌ ಮತ್ತು ಜಗತ್ತು ಮಹಾನ್‌ ದಾರ್ಶನಿಕನನ್ನು ಕಳೆದುಕೊಂಡಿದೆ. ನಾನು ನನ್ನ ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ.

ನಾನು 2007ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿ ಜಪಾನ್‌ಗೆ ಪ್ರವಾಸ ಕೈಗೊಂಡಿದ್ದಾಗ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಆ ಮೊದಲ ಭೇಟಿಯಿಂದ ನಮ್ಮ ಸ್ನೇಹ ಕಚೇರಿಯ ವಿಚಾರಗಳು ಮತ್ತು ಅಧಿಕೃತ ಶಿಷ್ಟಾಚಾರದ ಸಂಕೋಲೆಗಳನ್ನು ಮೀರಿ ಬೆಳೆದಿತ್ತು.

ಕ್ಯೋಟೋದ ತೋಜಿ ದೇವಾಲಯದ ನಮ್ಮ ಭೇಟಿ, ಶಿಂಕನ್ಸೆನ್‌ನಲ್ಲಿ ನಮ್ಮ ರೈಲು ಪ್ರಯಾಣ, ಅಹಮದಾಬಾದಿನ ಸಾಬರಮತಿ ಆಶ್ರಮಕ್ಕೆ ನಾವು ನೀಡಿದ್ದ ಭೇಟಿ, ಕಾಶಿಯ ಗಂಗಾರತಿ, ಟೋಕಿಯೋದಲ್ಲಿ ವಿಸ್ತೃತವಾದ ಚಹಾ ಸಮಾರಂಭ ಹೀಗೆ ನಮ್ಮ ಸ್ಮರಣೀಯ ಸಂವಾದಗಳ ಪಟ್ಟಿನಿಜವಾಗಿಯೂ ದೀರ್ಘವಾಗಿದೆ.

ಮೌಂಟ್‌ ಫುಜಿಯ ತಪ್ಪಲಿನಲ್ಲಿ ನೆಲೆಗೊಂಡಿರುವ ಯಮನಾಶಿ ಪ್ರಾಂತ್ಯದ ಅವರ ಕುಟುಂಬದ ಗೃಹಕ್ಕೆ ಆಹ್ವಾನಿತನಾದ ಏಕೈಕ ಗೌರವವನ್ನು ನಾನು ಸದಾ ಗೌರವಿಸುತ್ತೇನೆ.

2007 ಮತ್ತು 2012 ರ ನಡುವೆ ಮತ್ತು ಇತ್ತೀಚೆಗೆ 2020ರ ನಂತರ ಅವರು ಜಪಾನ್‌ ಪ್ರಧಾನಿಯಾಗದಿದ್ದರೂ, ನಮ್ಮ ವೈಯಕ್ತಿಕ ಬಂಧವು ಮೊದಲಿನಂತೆಯೇ ಬಲವಾಗಿತ್ತು. ಅಬೆಸಾನ್‌ ಅವರೊಂದಿಗಿನ ಪ್ರತಿಯೊಂದು ಭೇಟಿಯೂ ಬೌದ್ಧಿಕವಾಗಿ ಉತ್ತೇಜಕವಾಗಿತ್ತು. ಅವರು ಸದಾ ಆಡಳಿತ, ಆರ್ಥಿಕತೆ, ಸಂಸ್ಕೃತಿ, ವಿದೇಶಾಂಗ ನೀತಿ ಮತ್ತು ಇತರ ವಿವಿಧ ವಿಷಯಗಳ ಬಗ್ಗೆ ಹೊಸಕಲ್ಪನೆಗಳು ಮತ್ತು ಅಮೂಲ್ಯ ಒಳನೋಟಗಳಿಂದ ಕೂಡಿರುತ್ತಿದ್ದರು.

ಅವರ ಸಲಹೆಗಳು ಗುಜರಾತ್‌ಗಾಗಿ ನನ್ನ ಆರ್ಥಿಕ ಆಯ್ಕೆಗಳಲ್ಲಿ ನನಗೆ ಸ್ಫೂರ್ತಿ ನೀಡಿದ್ದವು ಹಾಗೂ ಅವರ ಬೆಂಬಲವು ಜಪಾನ್‌ನೊಂದಿಗೆ ಗುಜರಾತಿನ ರೋಮಾಂಚಕ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಜಪಾನ್‌ ಕಂಡ ಅತ್ಯಂತ ಪ್ರಭಾವಿ ಪ್ರಧಾನಿ, ಭಾರತದ ಅತ್ಯಾಪ್ತ ಮಿತ್ರ, ಶಿಂಜೋ ಅಬೆ ಬಗ್ಗೆ ಮಾಹಿತಿ..!

ದ್ವಿಪಕ್ಷೀಯ ಮೈತ್ರಿ: ತರುವಾಯ, ಭಾರತ ಮತ್ತು ಜಪಾನ್‌ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ ಅಭೂತಪೂರ್ವ ಪರಿವರ್ತನೆಯನ್ನು ತರಲು ಅವರೊಂದಿಗೆ ಕೆಲಸ ಮಾಡುವುದು ನನ್ನಸುಯೋಗವಾಗಿತ್ತು. ಬಹುಮಟ್ಟಿಗೆ ಸಂಕುಚಿತ ದ್ವಿಪಕ್ಷೀಯ ಆರ್ಥಿಕ ಸಂಬಂಧದಿಂದ ಅಬೆಸಾನ್‌ ಅದನ್ನು ವಿಶಾಲವಾದ, ಸಮಗ್ರವಾದ ಆರ್ಥಿಕ ಸಂಬಂಧವಾಗಿ ಪರಿವರ್ತಿಸಲು ಸಹಾಯಮಾಡಿದರು. ಇದು ರಾಷ್ಟ್ರೀಯ ಪ್ರಯತ್ನದ ಪ್ರತಿಯೊಂದು ಕ್ಷೇತ್ರವನ್ನು ಒಳಗೊಂಡಿದ್ದಲ್ಲದೆ, ನಮ್ಮ ಎರಡೂ ದೇಶಗಳು ಮತ್ತು ಪ್ರದೇಶದ ಭದ್ರತೆಗೆ ನಿರ್ಣಾಯಕವಾಗಿತ್ತು. ಅವರ ದೃಷ್ಟಿಯಲ್ಲಿ, ಇದು ನಮ್ಮ ಎರಡೂ ದೇಶಗಳು ಮತ್ತು ವಿಶ್ವದ ಜನರಿಗೆ ಅತ್ಯಂತ ಪರಿಣಾಮಾತ್ಮಕ ಸಂಬಂಧಗಳಲ್ಲಿ ಒಂದಾಗಿತ್ತು. ಅವರು ಭಾರತದೊಂದಿಗೆ ನಾಗರಿಕ ಪರಮಾಣು ಒಪ್ಪಂದವನ್ನು ಮುಂದುವರಿಸುವಲ್ಲಿ ದೃಢಸಂಕಲ್ಪವನ್ನು ಹೊಂದಿದ್ದರು. ಇದು ಅವರ ದೇಶಕ್ಕೆ ಅತ್ಯಂತ ಕಷ್ಟಕರವಾಗಿತ್ತು.

ಭಾರತದಲ್ಲಿ ಹೈಸ್ಪೀಡ್‌ ರೈಲಿಗೆ ಅತ್ಯಂತ ಉದಾರವಾದ ಷರತ್ತುಗಳನ್ನು ನೀಡುವಲ್ಲಿ ಅವರು ನಿರ್ಣಾಯಕರಾಗಿದ್ದರು. ಸ್ವತಂತ್ರ ಭಾರತದ ಪಯಣದಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲಿನಲ್ಲಿ ನವಭಾರತವು ತನ್ನ ಬೆಳವಣಿಗೆಯನ್ನು ತ್ವರಿತಗೊಳಿಸುತ್ತಿದ್ದಂತೆ ಜಪಾನ್‌ ಜೊತೆಜೊತೆಗೇ ಇರುವುದನ್ನು ಅವರು ಖಚಿತಪಡಿಸಿದ್ದರು. ಭಾರತ-ಜಪಾನ್‌ ಸಂಬಂಧಗಳಿಗೆ ಅವರು ನೀಡಿದ ಕೊಡುಗೆಯನ್ನು ಶ್ರೀಮಂತಿಕೆಯಿಂದ ಗುರುತಿಸಲಾಗಿದ್ದು, 2021ರಲ್ಲಿಅವರಿಗೆ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಗತ್ತಿನಲ್ಲಿ ನಡೆಯುತ್ತಿರುವ ಸಂಕೀರ್ಣ ಮತ್ತು ಬಹು ಸ್ಥಿತ್ಯಂತರಗಳ ಬಗ್ಗೆ ಅಬೆಸಾನ್‌ ಆಳವಾದ ಒಳನೋಟವನ್ನು ಹೊಂದಿದ್ದರು. ರಾಜಕೀಯ, ಸಮಾಜ, ಆರ್ಥಿಕತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ಅದರ ಪರಿಣಾಮವನ್ನು ನೋಡುವ ಅವರ ದೃಷ್ಟಿಕೋನ ಸಮಕಾಲೀನ ಸಮಯಕ್ಕಿಂತ ಮುಂದಿರುತ್ತಿತ್ತು. ಮಾಡಬೇಕಾದ ಆಯ್ಕೆಗಳನ್ನುತಿಳಿದುಕೊಳ್ಳುವ ಬುದ್ಧಿವಂತಿಕೆ, ಸಂಪ್ರದಾಯಗಳ ನಡುವೆಯೂ ಸ್ಪಷ್ಟಮತ್ತುದಿಟ್ಟನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ತನ್ನ ಜನರನ್ನು ಮತ್ತು ಜಗತ್ತನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುವ ಅಪರೂಪದ ಸಾಮರ್ಥ್ಯದ ಬಗ್ಗೆ ಅಬೆಸಾನ್‌ಗೆ ಆಳವಾದ ಒಳನೋಟವಿತ್ತು. ಅವರ ದೂರಗಾಮಿ ನೀತಿಗಳಾದ ಅಬೆನಾಮಿಕ್ಸ್‌ ಜಪಾನಿನ ಅರ್ಥ ವ್ಯವಸ್ಥೆಗೆ ಚೈತನ್ಯ ತುಂಬಿತ್ತು. ಜನರ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಪುನಶ್ಚೇತನಗೊಳಿಸಿತು.

ಅವರು ನಮಗೆ ನೀಡಿದ ಅತ್ಯಂತ ದೊಡ್ಡ ಕೊಡುಗೆಗಳಲ್ಲಿ ಮಹತ್ವದ ಅಂಶವೆಂದರೆ, ದೊಡ್ಡ ಬದಲಾವಣೆಗಳನ್ನು ಗುರುತಿಸುವ ಮತ್ತು ನಮ್ಮ ಸಮಯದ ಸಮಸ್ಯೆಗಳನ್ನು ಕ್ರೋಢೀಕರಿಸಿ ಅದಕ್ಕೆ ಪ್ರತಿಕ್ರಿಯಿಸುವಲ್ಲಿ ಅವರು ನಾಯಕತ್ವ ವಹಿಸುವುದು. 2007ರಲ್ಲಿ ಅವರು ಭಾರತೀಯ ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಇಂಡೋ ಪೆಸಿಫಿಕ್‌ ಪ್ರದೇಶವು ಸಮಕಾಲೀನ ರಾಜಕೀಯ, ವ್ಯೂಹಾತ್ಮಕ ಮತ್ತು ಆರ್ಥಿಕ ವಾಸ್ತವತೆಯಾಗಿ ಹೊರಹೊಮ್ಮಲು ಅಡಿಪಾಯ ಹಾಕಿದರು. ಈ ಪ್ರದೇಶ ಈ ಶತಮಾನದಲ್ಲಿ ಜಗತ್ತನ್ನು ರೂಪಿಸುವ ಪ್ರದೇಶವೂ ಆಗಿದೆ.

ಶಿಂಜೋ ಅಬೆ to ಇಂದಿರಾ ಗಾಂಧಿ, ಗುಂಡೇಟಿಗೆ ಬಲಿಯಾದ ಜನಪ್ರಿಯ ನಾಯಕರು!

ಕ್ವಾಡ್‌, ಆಸಿಯಾನ್‌ ನೇತೃತ್ವ:  ಅವರು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಗೌರವ, ಅಂತಾರಾಷ್ಟ್ರೀಯ ಕಾನೂನು ಮತ್ತು ನಿಯಮಗಳ ಅನುಸರಣೆ, ಸಮಾನತೆಯ ಮನೋಭಾವದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಶಾಂತಿಯುತ ನಡವಳಿಕೆ ಮತ್ತು ಆಳವಾದ ಆರ್ಥಿಕ ತೊಡಗಿಸಿಕೊಳ್ಳುವಿಕೆಯ ಮೂಲಕ ಹಂಚಿಕೆಯ ಸಮೃದ್ಧಿಯ ಮನೋಭಾವ ಹೊಂದಿದ್ದರು. ಅಂತಾರಾಷ್ಟ್ರೀಯ ಸಂಬಂಧಗಳ ಶಾಂತಿಯುತ ನಡವಳಿಕೆಗೆ ಸ್ಥಿರ ಮತ್ತು ಸುಭದ್ರ, ಶಾಂತಿಯುತ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಚೌಕಟ್ಟು ಮತ್ತು ವಾಸ್ತುಶಿಲ್ಪವನ್ನು ಅವರು ಮುಂಚೂಣಿಯಲ್ಲಿ ನಿಂತು ನಿರ್ಮಿಸಿ, ಅದನ್ನು ಮುನ್ನಡೆಸಿದರು.

ಕ್ವಾಡ್‌, ಆಸಿಯಾನ್‌ ನೇತೃತ್ವದ ವೇದಿಕೆಗಳು, ಇಂಡೋ ಪೆಸಿಫಿಕ್‌ ಸಾಗರಗಳ ಉಪಕ್ರಮ, ಏಷ್ಯಾ-ಆಫ್ರಿಕಾ ಬೆಳವಣಿಗೆ ಕಾರಿಡಾರ್‌ ಮತ್ತು ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯಕ್ಕಾಗಿ ಒಕ್ಕೂಟ ಇವೆಲ್ಲವೂ ಅವರ ಕೊಡುಗೆಗಳಿಂದ ಪ್ರಯೋಜನ ಪಡೆದಿವೆ. ಸದ್ದಿಲ್ಲದೆ ಮತ್ತು ಯಾವುದೇ ಅಬ್ಬರವಿಲ್ಲದೆ, ಸ್ವದೇಶದಲ್ಲಿ ಹಿಂಜರಿಕೆ ಮತ್ತು ವಿದೇಶಗಳಲ್ಲಿನ ಸಂದೇಹಗಳನ್ನು ಅವರು ನಿವಾರಿಸಿದರು. ಇಂಡೋ-ಪೆಸಿಫಿಕ್‌ ಪ್ರದೇಶದಾದ್ಯಂತ ರಕ್ಷಣೆ, ಸಂಪರ್ಕ, ಮೂಲಸೌಕರ್ಯ ಮತ್ತು ಸುಸ್ಥಿರತೆ ಸೇರಿದಂತೆ ಜಪಾನಿನ ವ್ಯೂಹಾತ್ಮಕ ಪಾಲ್ಗೊಳ್ಳುವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅದಕ್ಕಾಗಿ ಈ ಪ್ರದೇಶವು ತನ್ನ ಭವಿಷ್ಯದ ಬಗ್ಗೆ ಹೆಚ್ಚು ಆಶಾವಾದಿಯಾಗಿದೆ ಹಾಗೂ ಜಗತ್ತು ತನ್ನ ಭವಿಷ್ಯದ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಹೊಂದಿದೆ.

ಅಂತಿಮ ಭೇಟಿ: ಈ ವರ್ಷದ ಮೇ ತಿಂಗಳಲ್ಲಿ ನಾನು ಜಪಾನ್‌ಗೆ ಭೇಟಿ ನೀಡಿದ್ದಾಗ, ಆಗ ತಾನೆ ಜಪಾನ್‌-ಭಾರತ ಸಂಘಟನೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಅಬೆಸಾನ್‌ ಅವರನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತು. ಅವರು ತಮ್ಮ ಎಂದಿನಂತೆ ಸ್ಫೂರ್ತಿ- ಶಕ್ತಿಯುತ, ಮನಮೋಹಕ, ವರ್ಚಸ್ವಿ ಮತ್ತು ತುಂಬಾ ಹಾಸ್ಯಭರಿತ ಮನೋಭಾವದಲ್ಲಿದ್ದರು. ಭಾರತ-ಜಪಾನ್‌ ಸ್ನೇಹವನ್ನು ಮತ್ತಷ್ಟುಬಲಪಡಿಸುವುದು ಹೇಗೆ ಎಂಬುದರ ಬಗ್ಗೆ ಅವರು ನಾವೀನ್ಯ ಪೂರ್ಣ ಆಲೋಚನೆಗಳನ್ನು ಹೊಂದಿದ್ದರು. ಆ ದಿನ ನಾನು ಅವರಿಗೆ ಶುಭ ವಿದಾಯ ಹೇಳಿದಾಗ, ಅದು ನಮ್ಮ ಅಂತಿಮ ಭೇಟಿಯಾಗುತ್ತದೆ ಎಂದು ನಾನು ಊಹಿಸಿರಲಿಲ್ಲ.

ಅವರ ಆತ್ಮೀಯತೆ ಮತ್ತು ಬುದ್ಧಿವಂತಿಕೆ, ಕೃಪೆ ಮತ್ತು ಔದಾರ್ಯ, ಸ್ನೇಹ ಮತ್ತು ಮಾರ್ಗದರ್ಶನಕ್ಕಾಗಿ ನಾನು ಸದಾಋುಣಿಯಾಗಿರುತ್ತೇನೆ. ನಾನು ಅವರನ್ನು ಕಳೆದುಕೊಂಡಿದ್ದೇನೆ. ಅವರು ನಮ್ಮನ್ನು ಮುಕ್ತ ಹೃದಯದಿಂದ ಆಲಂಗಿಸಿಕೊಂಡಂತೆ ಅವರ ನಿಧನಕ್ಕೆ ಭಾರತದಲ್ಲಿರುವ ನಾವು ಶೋಕಿಸುತ್ತೇವೆ. ಅವರು ತಮ್ಮ ಜನರನ್ನು ಪ್ರೇರೇಪಿಸಿ, ತಾವು ಹೆಚ್ಚು ಪ್ರೀತಿಸಿದ ಕೆಲಸವನ್ನು ಮಾಡಿ ಅಗಲಿದ್ದಾರೆ. ಅವರ ಜೀವನವು ದುರಂತದಲ್ಲಿ ಕೊನೆಗೊಂಡಿರಬಹುದು. ಆದರೆ ಅವರ ಪರಂಪರೆಯು ಶಾಶ್ವತವಾಗಿ ಉಳಿಯುತ್ತದೆ.

ನಾನು ಭಾರತದ ಜನತೆಯ ಪರವಾಗಿ ಜಪಾನಿನ ಜನತೆಗೆ, ವಿಶೇಷವಾಗಿ ಶ್ರೀಮತಿ ಅಕಿ ಅಬೆ ಮತ್ತು ಅವರ ಕುಟುಂಬಕ್ಕೆ ನನ್ನ ಪರವಾಗಿ ಹೃದಯಾಂತರಾಳದ ಸಂತಾಪಗಳನ್ನುಸಲ್ಲಿಸುತ್ತೇನೆ. ಓಂ ಶಾಂತಿ.

click me!