Punjab Elections: ತನ್ನದೇ ಸರ್ಕಾರದ ವಿರುದ್ಧ ಸಿಧು ಉಪವಾಸ ಸತ್ಯಾಗ್ರಹ!

By Suvarna NewsFirst Published Nov 25, 2021, 8:28 PM IST
Highlights

* ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ಹೊಸ ಖ್ಯಾತೆ

* ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಹಾಗೂ ಸಿಧು ಹೊಸ ಸಮರ

* ಡ್ರಗ್ಸ್ ವಿಚಾರ ಮುಂದಿಟ್ಟು, ತನ್ನದೇ ಸರ್ಕಾರದ ವಿರುದ್ಧ ಸಿಧು ಕಿಡಿ

ಚಂಡೀಗಢ(ನ.25): ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ (PCC President) ನವಜೋತ್ ಸಿಂಗ್ ಸಿಧು (Navjot Singh Sidhu) ಮತ್ತು ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ (Charanjit Singh Channi) ನಡುವೆ ಹೊಸ ಸಮರ ಆರಂಭವಾಗಿದೆ. ಈ ವೇಳೆ ಸಿದ್ದು ಡ್ರಗ್ಸ್ ವಿಚಾರವನ್ನೇ ಮುಂದಿಟ್ಟುಕೊಂಡಿದ್ದಾರೆ. ಡ್ರಗ್ಸ್ ವರದಿಯನ್ನು ಬಿಡುಗಡೆ ಮಾಡದಿದ್ದರೆ ತಮ್ಮದೇ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ (Assembly Elections) ಮುನ್ನ, ಇದು ಸರ್ಕಾರಕ್ಕೆ ಹೊಸ ಸಮಸ್ಯೆಯಾಗಬಹುದು. ಗುರುವಾರ, Rallyಯಲ್ಲಿ ಮಾತನಾಡಿದ ಸಿಧು ಪಂಜಾಬ್‌ನ (Punjab) ಲಕ್ಷಾಂತರ ಯುವಕರು ಡ್ರಗ್ಸ್ ಸೇವನೆಯಿಂದ ಸತ್ತರು, ಲಕ್ಷಾಂತರ ಯುವಕರು ಡ್ರಗ್ಸ್ ಸೇವಿಸುತ್ತಿದ್ದಾರೆ ಎಂದಿದ್ದಾರೆ.

Navjot singh sidhu:ಇಮ್ರಾನ್ ಖಾನ್ ನನ್ನ ಅಣ್ಣ, ನಮಗೆ ಗಡಿ ಯಾಕಣ್ಣ; ಸಿಧು ಮತ್ತೊಂದು ವಿವಾದ!

ಇದೇ ವೇಳೆ ಸಿಧು ನಶೆಯಲ್ಲಿ ನನ್ನ ಮೊಮ್ಮಗನ ಸ್ಥಿತಿಯನ್ನು ನೋಡಿ ನಾನು ಅಳುತ್ತೇನೆ ಎಂದಿದ್ದ ಪಟಿಯಾಲದ (Patiala) ಮುದುಕರೊಬ್ಬರ ಮಾತು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಡ್ರಗ್ಸ್ ನಿಂದಾಗಿ ಯುವ ಪೀಳಿಗೆ ಹಾಳಾಗುತ್ತಿದ್ದು, ಜನರು ರಾಜ್ಯ ತೊರೆಯುತ್ತಿದ್ದಾರೆ ಎಂದರು. ಇಂತಹ ಪರಿಸ್ಥಿತಿಯಲ್ಲಿ ಜನರು ಪಂಜಾಬ್ ತೊರೆದರೆ, ಖಜಾನೆಯಲ್ಲಿ ಹಣ ಎಲ್ಲಿಂದ ಬರುತ್ತದೆ ಮತ್ತು ಇಲ್ಲಿ ಹೆಣ್ಣುಮಕ್ಕಳಿಗೆ ದೊಡ್ಡ ಆಸ್ಪತ್ರೆಗಳು ಮತ್ತು ಕಾಲೇಜುಗಳು ಎಲ್ಲಿಂದ ಬರುತ್ತವೆ ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆಯೂ ಸಿಧು ಅಸಮಾಧಾನ

ಚನ್ನಿ ಮೇಲಿನ ಸಿಧು ಅಸಮಾಧಾನ ಬಯಲಿಗೆ ಬರುತ್ತಿರುವುದು ಇದೇ ಮೊದಲಲ್ಲ. ಡಿಜಿಪಿ ನೇಮಕದ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದರು. ಇತ್ತೀಚೆಗೆ ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆ ಬಳಿಕ ನಿಯೋಗದೊಂದಿಗೆ ಚನ್ನಿ ದರ್ಶನಕ್ಕೆ ತೆರಳುತ್ತಿದ್ದಾಗ ಆ ನಿಯೋಗದಲ್ಲಿ ಸಿಧು ಹೆಸರು ಸೇರ್ಪಡೆಯಾಗಿರಲಿಲ್ಲ. ಈ ಬಗ್ಗೆ ಕೂಡಾ ಸಿಧು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.

ನವಜೋತ್‌ ಸಿಂಗ್‌ ಸಿಧು ಹೊಸ ಕ್ಯಾತೆ!

ಇಷ್ಟೇ ಅಲ್ಲದೇ 2015ರ ಕೋಟ್ಕಾಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿಯನ್ನು ಯಾಕೆ ಸಲ್ಲಿಸಿಲ್ಲ ಎಂದು ತಮ್ಮದೇ ಪಕ್ಷದ ಸರ್ಕಾರವನ್ನು ಪ್ರಶ್ನಿಸಿದ್ದರು. 'ಕೋಟ್ಕಾಪುರದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿಸಲ್ಲಿಸಲು ಪಂಜಾಬ್‌- ಹರ್ಯಾಣ (Punjab-Haryana) ಹೈಕೋರ್ಟ್‌ 6 ತಿಂಗಳ ಗಡುವು ನೀಡಿತ್ತು. ಈಗ ಆ ಗಡುವು ಮುಗಿದು ಒಂದು ದಿನವಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜಿ ಡಿಜಿಪಿ ಸುಮೇಧ್‌ ಸಿಂಗ್‌ ಸೈನಿ ಅವರಿಗೆ ನೀಡಿದ ಜಾಮೀನಿನ ವಿರುದ್ದ ಯಾಕೆ ವಿಶೇಷ ಅರ್ಜಿ ಸಲ್ಲಿಸಲಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು. ಈ ಬೆಳವಣಿಗೆ ನಡುವೆಯೂ ಅವರು ಸೋಮವಾರ ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚೆನ್ನಿ ಅವರನ್ನು ಭೇಟಿ ಮಾಡಿದ ಸಿಧು, ಅಡ್ವೊಕೇಟ್‌ ಜನರಲ್‌ ಎ.ಪಿ.ಎಸ್‌. ಡಿಯೋಲ್‌ ಮತ್ತು ಡಿಜಿಪಿ ಇಕ್ಬಾಲ್‌ ಪ್ರೀತ್‌ ಸಿಂಗ್‌ ಸಹೋತ್ರ ಅವರ ನೇಮಕಾತಿಯನ್ನು ಪ್ರಶ್ನಿಸಿದ್ದರು.

ಇಮ್ರಾನ್‌ ಖಾನ್‌ ‘ನನ್ನ ಅಣ್ಣ’: ಸಿಧು ವಿಡಿಯೋ ವೈರಲ್‌

‘ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ತಮ್ಮ ಹಿರಿಯ ಅಣ್ಣ’ ಎಂದು ಹೊಗಳಿರುವ ವಿಡಿಯೋವನ್ನು ಬಿಜೆಪಿ ಮುಖಂಡ ಅಮಿತ್‌ ಮಾಳವೀಯ ಅವರು ಪೋಸ್ಟ್‌ ಮಾಡಿದ್ದಾರೆ. ಪಂಜಾಬ್‌ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ, ಬಿಡುಗಡೆಯಾದ ಈ ವಿಡಿಯೋ ಹೆಚ್ಚಿನ ಮಹತ್ವ ಪಡೆದಿದೆ.

ಶನಿವಾರ ಕರ್ತಾರ್‌ಪುರಕ್ಕೆ ಭೇಟಿ ನೀಡಿದ್ದ ಸಿಧು ಅವರನ್ನು ಕರ್ತಾರ್‌ಪುರ ಅಧಿಕಾರಿಗಳು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಅವರ ಪರವಾಗಿ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಪಾಕ್‌ ಅಧಿಕಾರಿಗಳನ್ನು ಆಲಂಗಿಸಿಕೊಂಡ ಸಿಧು ಅವರು, ಇಮ್ರಾನ್‌ ಅವರನ್ನು ‘ನಮ್ಮ ಹಿರಿಯ ಅಣ್ಣ ಇದ್ದಂತೆ’ ಎಂದು ಬಣ್ಣಿಸಿದರು.

ಈ ವಿಡಿಯೋ ಹಂಚಿಕೊಂಡ ಮಾಳವೀಯ, ‘ರಾಹುಲ್‌ ಗಾಂಧಿ ಅವರಿಗೆ ಅಚ್ಚುಮೆಚ್ಚಾದ ಸಿಧು 2018ರಲ್ಲಿ ಇಮ್ರಾನ್‌ ಖಾನ್‌ ಅವರ ಪ್ರಧಾನಿ ಪದಗ್ರಹಣಕ್ಕೆ ಹೋಗಿದ್ದಾಗ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜ| ಬಜ್ವಾ ಅವರನ್ನು ತಬ್ಬಿಕೊಂಡಿದ್ದರು. ಇದೀಗ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ತಮ್ಮ ದೊಡ್ಡಣ್ಣ ಎಂದಿದ್ದಾರೆ. ರಾಹುಲ್‌ ಮತ್ತು ಪ್ರಿಯಾಂಕಾ ಅವರು ಅಮರೀಂದರ್‌ಗಿಂತ ಪಾಕಿಸ್ತಾನ ಪ್ರೀತಿಸುವ ಸಿಧು ಅವರಿಗೆ ಹೆಚ್ಚಿನ ಮಾನ್ಯತೆ ಏಕೆ ನೀಡಿದ್ದಾರೆ? ಎಂದು ಕಾಲೆಳೆದಿದ್ದಾರೆ.

ಈ ಹಿಂದೆ ಸಿಧು ಅವರು ಪಾಕಿಸ್ತಾನಕ್ಕೆ ಹೋಗಿ ಐಎಸ್‌ಐ ಮುಖ್ಯಸ್ಥ ಸೇರಿದಂತೆ ಅಲ್ಲಿನ ನಾಯಕರನ್ನು ಬಿಗಿದಪ್ಪಿಕೊಂಡು ವಿವಾದಕ್ಕೀಡಾಗಿದ್ದರು.

click me!