Gyanvapi Case: ಇಂದು 3 ಕೋರ್ಟ್‌ಗಳಲ್ಲಿ ಜ್ಞಾನವಾಪಿಯ 4 ಕೇಸ್‌ ವಿಚಾರಣೆ!

Published : Nov 11, 2022, 02:39 PM ISTUpdated : Nov 11, 2022, 02:46 PM IST
Gyanvapi Case: ಇಂದು 3 ಕೋರ್ಟ್‌ಗಳಲ್ಲಿ ಜ್ಞಾನವಾಪಿಯ 4 ಕೇಸ್‌ ವಿಚಾರಣೆ!

ಸಾರಾಂಶ

ಜ್ಞಾನವಾಪಿ ಮಸೀದಿಯಲ್ಲಿರುವ ಶಿವಲಿಂಗದ ಕುರಿತಾಗಿ ಇಂದು ದೇಶದ ಮೂರು ಕೋರ್ಟ್‌ಗಳಲ್ಲಿ ಒಟ್ಟು ನಾಲ್ಕು ಕೇಸ್‌ನ ವಿಚಾರಣೆ ನಡೆಯಲಿದೆ. ಎಲ್ಲಾ ಕೇಸ್‌ಗಳು ಮಧ್ಯಾಹ್ನದ ನಂತರ ವಿಚಾರಣೆಗೆ ಒಳಪಡಲಿದೆ.  

ನವದೆಹಲಿ (ನ.11): ವಾರಣಾಸಿಯ ಕಾಶಿ ವಿಶ್ವನಾಥ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿರುವ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ವಿಚಾರಣೆ ಶುಕ್ರವಾರ ನಡೆಯಲಿದೆ. ಈ ವಿಚಾರಣೆ ಮೂರು ವಿವಿಧ ನ್ಯಾಯಾಲಯಗಳಲ್ಲಿ ನಡೆಯಲಿದೆ. ಮಸೀದಿಯಲ್ಲಿ ಸಮೀಕ್ಷೆ ವೇಳೆ ಕಂಡುಬಂದ ಶಿವಲಿಂಗದಂತಹ ರಚನೆಯ ರಕ್ಷಣೆ ಮಿತಿಯನ್ನು ಹೆಚ್ಚಿಸುವ ವಿಚಾರವಾಗಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಅದೇ ಸಮಯದಲ್ಲಿ, ಎಎಸ್‌ಐನಿಂದ ಜ್ಞಾನವಾಪಿ ಸಮೀಕ್ಷೆಯ ವಿರುದ್ಧ ಸಲ್ಲಿಸಲಾದ ಅರ್ಜಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಇನ್ನು ವಾರಣಾಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಶಿವಲಿಂಗ ಎಂದು ಹೇಳಲಾಗುವ ಆಕೃತಿಯ ಪೂಜಿಸುವ ಹಕ್ಕು ಮತ್ತು ಮಸೀದಿಯಲ್ಲಿ ಸರ್ವೆ ಪ್ರಕ್ರಿಯೆಗಳನ್ನು ಮುಂದುವರಿಸುವ ಬಗ್ಗೆ ವಿಚಾರಣೆ ನಡೆಯಲಿದೆ. ಜ್ಞಾನವಾಪಿಗೆ ಸಂಬಂಧಿಸಿದ ಯಾವ ಪ್ರಕರಣವನ್ನು ಯಾವ ನ್ಯಾಯಾಲಯ ವಿಚಾರಣೆ ನಡೆಸಲಿದೆ. ಈ ಅರ್ಜಿಗಳ ಬೇಡಿಕೆ ಏನು ಎನ್ನುವುದರ ವಿವರ ಇಲ್ಲಿದೆ.

ಸುಪ್ರೀಂ ಕೋರ್ಟ್‌: ಸಮೀಕ್ಷೆಯಲ್ಲಿ ಕಂಡುಬಂದ ಶಿವಲಿಂಗದ ರಕ್ಷಣೆಗೆ ಕಾಲಮಿತಿ ವಿಸ್ತರಣೆಗೆ ಆಗ್ರಹ 
ನ್ಯಾಯಾಲಯದ ಆಯೋಗದ ಸಮೀಕ್ಷೆಯ ಸಮಯದಲ್ಲಿ ಮೇ 16 ರಂದು ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ಶಿವಲಿಂಗದ ರಚನೆ ಕಂಡುಬಂದಿದೆ. ಹಿಂದೂ ಕಡೆಯವರು ಇದನ್ನು ಶಿವಲಿಂಗ ಎಂದು ಕರೆದಿದ್ದರೆ, ಮುಸ್ಲಿಮರು ಇದನ್ನು ಕಾರಂಜಿ ಎಂದು ಹೇಳಿದ್ದಾರೆ. ಈ ರಚನೆಯನ್ನು ಸಂರಕ್ಷಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಆದೇಶ ನವೆಂಬರ್ 12ರವರೆಗೆ ಇತ್ತು. ನವೆಂಬರ್ 12 ರ ಮೊದಲು ಅದರ ರಕ್ಷಣೆಗಾಗಿ ಸಮಯ ಮಿತಿಯನ್ನು ವಿಸ್ತರಿಸಲು ಹಿಂದೂ ಕಡೆಯವರು ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

ಅಲಹಾಬಾದ್ ಹೈಕೋರ್ಟ್: ASI ಮೂಲಕ ಜ್ಞಾನವಾಪಿ ಸರ್ವೇಯ ಅರ್ಜಿಯ ವಿಚಾರಣೆ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಜ್ಞಾನವಾಪಿ ಸಂಕೀರ್ಣದ ಸಮೀಕ್ಷೆಯನ್ನು ನಡೆಸುವ ನಿರ್ಧಾರದ ವಿರುದ್ಧ ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸಲಿದೆ. ಪ್ರಜಾತನಿಯ ಮಸಾಜಿದ್ ಸಮಿತಿ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಹೈಕೋರ್ಟ್‌ನಲ್ಲಿ ಎಎಸ್‌ಐ ಮೂಲಕ ಸಮೀಕ್ಷೆ ನಡೆಸುವಂತೆ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿವೆ. ಹೈಕೋರ್ಟ್‌ನಲ್ಲಿ ಅಕ್ಟೋಬರ್ 31 ರಂದು ನಡೆದ ವಿಚಾರಣೆಯಲ್ಲಿ, ಹೈಕೋರ್ಟ್‌ ಆದೇಶ ನೀಡಿದರೆ ಜ್ಞಾನವಾಪಿ ಕ್ಯಾಂಪಸ್‌ನ ಸಮೀಕ್ಷೆ ನಡೆಸಬಹುದು ಎಂದು ಎಎಸ್‌ಐ ಅಫಿಡವಿಟ್ ಸಲ್ಲಿಕೆ ಮಾಡಿತ್ತು.

Gyanvapi Case: ಹಿಂದುಗಳಿಗೆ ಹಿನ್ನಡೆ, ಶಿವಲಿಂಗದ ಕಾರ್ಬನ್‌ ಡೇಟಿಂಗ್‌ಗೆ ಕೋರ್ಟ್‌ ನಕಾರ

ವಾರಣಾಸಿ ನ್ಯಾಯಾಲಯ: ಶಿವಲಿಂಗಕ್ಕೆ ನಿತ್ಯ ಪೂಜೆಗೆ ವ್ಯವಸ್ಥೆ ಮಾಡುವಂತೆ ಮನವಿ
ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತು ರಾಮಸ್ಜೀವನ್ ಅವರು ವಾರಣಾಸಿ ಸಿವಿಲ್ ನ್ಯಾಯಾಲಯದಲ್ಲಿ ಸಮೀಕ್ಷೆಯಲ್ಲಿ ಕಂಡುಬಂದ ಶಿವಲಿಂಗಕ್ಕೆ ನಿಯಮಿತವಾಗಿ ಪೂಜೆ ಸಲ್ಲಿಸುವಂತೆ ಒತ್ತಾಯಿಸಿದ್ದಾರೆ. ಶಿವಲಿಂಗದ ಪೂಜೆ, ಆರತಿ, ರಾಗ-ಭೋಗಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸ್ಥಳೀಯ ಆಡಳಿತವು ಈವರೆಗೂ ಇದನ್ನು ಮಾಡಿಲ್ಲ ಅಥವಾ ಇದಕ್ಕಾಗಿ ಯಾವುದೇ ಸನಾತನ ಧರ್ಮವನ್ನು ನೇಮಿಸಿಲ್ಲ. ಕಾನೂನುಬದ್ಧವಾಗಿ, ದೇವತೆಯ ಸ್ಥಾನಮಾನವು ಜೀವಂತ ಮಗುವಿಗೆ ಸಮನಾಗಿರುತ್ತದೆ, ದೇವರಿಗೂ ಕೂಡ ಆಹಾರ ಮತ್ತು ನೀರನ್ನು ನೀಡದಿರುವುದು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಶುಕ್ರವಾರವೇ ವಾರಣಾಸಿ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಯಲಿದೆ.

Gyanvapi Mosque Case: ಎಎಸ್‌ಐ ಸಮೀಕ್ಷೆಗೆ ನೀಡಿದ್ದ ತಡೆಯಾಜ್ಞೆ ಅ.31ರವರೆಗೆ ವಿಸ್ತರಿಸಿದ ಅಲಹಾಬಾದ್ ಹೈಕೋರ್ಟ್‌!

ವಾರಣಾಸಿ ನ್ಯಾಯಾಲಯ: ಜ್ಞಾನವಾಪಿಯಲ್ಲಿ ಸರ್ವೆ ಕಾರ್ಯ ಮುಂದುವರಿಸಲು ಅರ್ಜಿ
ವಾರಣಾಸಿಯ ಜಿಲ್ಲಾ ನ್ಯಾಯಾಧೀಶರಾದ ಡಾ. ಅಜಯ್ ಕೃಷ್ಣ ವಿಶ್ವೇಶ್ ಅವರ ನ್ಯಾಯಾಲಯವು ಜ್ಞಾನವಾಪಿ ಕ್ಯಾಂಪಸ್‌ನಲ್ಲಿ ಆಯೋಗದ ಪ್ರಕ್ರಿಯೆಗಳನ್ನು ಮುಂದುವರಿಸಲು ಕೋರ್ಟ್‌ ಕಮಿಷನರ್ ಅವರ ಮನವಿಯನ್ನು ಆಲಿಸಲಿದೆ. ಹಿಂದೂ ಕಡೆಯಿಂದ ಈ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೆ ಮುಸ್ಲಿಂ ಕಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ಇದರ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಹಿಂದೂ ಪಕ್ಷಕ್ಕೆ ನವೆಂಬರ್ 11ರವರೆಗೆ ಕಾಲಾವಕಾಶ ಸಿಕ್ಕಿದೆ. ಕಳೆದ ವರ್ಷ, ವಾರಣಾಸಿ ಸಿವಿಲ್ ನ್ಯಾಯಾಲಯದಲ್ಲಿ ರಾಖಿ ಸಿಂಗ್, ಸೀತಾ ಸಾಹು, ರೇಖಾ ಪಾಠಕ್, ಮಂಜು ವ್ಯಾಸ್ ಮತ್ತು ಲಕ್ಷ್ಮಿ ದೇವಿ ಪರವಾಗಿ ಈ ಪ್ರಕರಣವನ್ನು ದಾಖಲಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!