ನಕ್ಷೆ ಉದ್ಯಮಕ್ಕೆ ಖಾಸಗಿಯವರಿಗೂ ಪ್ರವೇಶ: ಕೇಂದ್ರದ ನಿಯಮಾವಳಿ ಸಡಿಲ!

By Suvarna NewsFirst Published Feb 16, 2021, 11:04 AM IST
Highlights

ಭೂ-ಅಂತರಿಕ್ಷ ಮಾಹಿತಿ ಸಂಗ್ರಹಕ್ಕಿನ್ನು ಅನುಮತಿ ಬೇಕಿಲ್ಲ| ಜಿಯೋಸ್ಪೇಷಿಯಲ್‌ ಕ್ಷೇತ್ರದ ನಿಯಮ ಕೇಂದ್ರದಿಂದ ಸಡಿಲ| ನಕ್ಷೆ ಉದ್ಯಮಕ್ಕೆ ಖಾಸಗಿಯವರಿಗೂ ಪ್ರವೇಶ

ನವದೆಹಲಿ(ಫೆ.16): ಭೂ-ಅಂತರಿಕ್ಷ (ಜಿಯೋಸ್ಪೇಷಿಯಲ್‌) ವಲಯದಲ್ಲಿ ಹೊಸ ಆವಿಷ್ಕಾರಗಳಿಗೆ ಕಾರಣವಾಗುವ ಹಾಗೂ ಸ್ಟಾರ್ಟಪ್‌ ಉದ್ದಿಮೆಗಳಿಗೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ಷೇತ್ರದ ನಿಯಮಾವಳಿಗಳನ್ನು ಸರಳಗೊಳಿಸಿದೆ. ಹೊಸ ನಿಯಮದಡಿ ಭಾರತದ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು ನಕ್ಷೆ ರಚನೆ, ಭೂ-ಅಂತರಿಕ್ಷ ದತ್ತಾಂಶ ಸಂಗ್ರಹ ಹಾಗೂ ಬಳಕೆಗೆ ಸಂಬಂಧಿಸಿದಂತೆ ಇನ್ನುಮುಂದೆ ಯಾರ ಅನುಮತಿಯನ್ನೂ ಪಡೆಯಬೇಕಿಲ್ಲ.

ಮ್ಯಾಪ್‌ ಇಂಡಿಯಾ ಜತೆ ಇಸ್ರೋ ಒಪ್ಪಂದ!

ಇದುವರೆಗಿನ ನಿಯಮಗಳ ಅನ್ವಯ ಸಮೀಕ್ಷೆ, ನಕ್ಷೆ ರಚನೆ ಮತ್ತು ಇವುಗಳಿಗೆ ಸಂಬಂಧಿಸಿದ ಅಪ್ಲಿಕೇಷನ್‌ ರಚನೆ ವೇಳೆ ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಿತ್ತು. ಆದರೆ ಹೊಸ ನಿಯಮಗಳ ಅನ್ವಯ ಭಾರತೀಯ ಕಂಪನಿಗಳಿಗೆ ಈ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪೂರ್ವಾನುಮತಿ, ಭದ್ರತಾ ಪರವಾನಗಿ, ಪರವಾನಗಿ, ನಕ್ಷೆ ಮತ್ತು ದತ್ತಾಂಶ ಸಂಗ್ರಹ ಖರೀದಿ, ಮಾರಾಟಕ್ಕೆ ಇದ್ದ ಎಲ್ಲಾ ನಿಯಮಗಳನ್ನು ತೆಗೆದುಹಾಕಲಾಗಿದೆ. ಇದುವರೆಗೆ ಸರ್ವೇ ಆಫ್‌ ಇಂಡಿಯಾದಿಂದ ಇದಕ್ಕೆಲ್ಲಾ ಅನುಮತಿ ಪಡೆಯಬೇಕಿತ್ತು. ಇಂಥ ಪ್ರತಿ ಅನುಮತಿಗೂ 3-6 ತಿಂಗಳ ಕಾಲಾವಕಾಶ ಬೇಕಿತ್ತು.

ಇದೇ ವೇಳೆ - ಪ್ರಾದೇಶಿಕ ಮೊಬೈಲ್‌ ಮ್ಯಾಪಿಂಗ್‌ ಸರ್ವೇ, ಸ್ಟ್ರೀಟ್‌ ವ್ಯೂ, ಪ್ರಾದೇಶಿಕ ಜಲಸಂಪನ್ಮೂಲ ಕುರಿತ ಸಮೀಕ್ಷೆ ನಡೆಸಲು ದೇಶಿ ಕಂಪನಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಲಾಭ ಏನು?

- ಸರ್ಕಾರಿ ಸಂಸ್ಥೆಗಳ ಜೊತೆಗೆ ಖಾಸಗಿ ಸಂಸ್ಥೆಗಳಿಗೂ ಈ ವಲಯದಲ್ಲಿ ಸ್ಪರ್ಧೆಯ ಸಮಾನ ಅವಕಾಶ.

- ಗುಣಮಟ್ಟದ ಸಮೀಕ್ಷೆ, ನಕ್ಷೆ ಲಭ್ಯತೆ. ಈ ಕ್ಷೇತ್ರದಲ್ಲಿ ನಾವೀನ್ಯತೆಗೆ ಅವಕಾಶ.

- ಸಮಗ್ರ, ಅತ್ಯಂತ ನಿಖರ, ಅತ್ಯಂತ ಸೂಕ್ಷ್ಮ ಮತ್ತು ಕಾಲಕಾಲಕ್ಕೆ ನವೀಕರಣಗೊಂಡಿರುವ ಮಾಹಿತಿ ಲಭ್ಯ.

- ಹೊಸ ಉದ್ಯೋಗ ಸೃಷ್ಟಿ. ಆರ್ಥಿಕತೆಗೆ ಮತ್ತಷ್ಟುಉತ್ತೇಜನ.

- ಕೃಷಿ, ಆರ್ಥಿಕ, ರಕ್ಷಣಾ ವಲಯಗಳಲ್ಲಿ ಹೊಸ ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ನೆರವು

ಜೂನ್‌ಗೆ ಬರಲಿದೆ 100 ಪಟ್ಟು ಹೆಚ್ಚು ನಿಖರ ಕರ್ನಾಟಕ ಮ್ಯಾಪ್: ದೇಶದ ಪ್ರತಿ ಮನೆ, ಕಚೇರಿಗಳು ಲಭ್ಯ!

ಡಿಜಿಟಲ್‌ ಇಂಡಿಯಾಕ್ಕೆ ಪೂರಕ ನಿರ್ಧಾರ: ಮೋದಿ

ಡಿಜಿಟಲ್‌ ಇಂಡಿಯಾಕ್ಕೆ ಪೂರಕವಾಗುವ ದೊಡ್ಡ ನಿರ್ಧಾರವೊಂದನ್ನು ನಮ್ಮ ಸರ್ಕಾರ ಕೈಗೊಂಡಿದೆ. ಜಿಯೋಸ್ಪೇಷಿಯಲ್‌ ಡೇಟಾ ಸಂಗ್ರಹ ಹಾಗೂ ಉತ್ಪಾದನೆಗೆ ಸಂಬಂಧಿಸಿದ ನೀತಿಗಳನ್ನು ಸರಳಗೊಳಿಸಿದ್ದೇವೆ. ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ಈ ಕ್ರಮ ಕೈಗೊಂಡಿದ್ದು, ದೇಶದ ಸ್ಟಾರ್ಟಪ್‌ಗಳು, ಖಾಸಗಿ ಕಂಪನಿಗಳು, ಸರ್ಕಾರಿ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳಿಗೆ ಇದರಿಂದ ಅನುಕೂಲವಾಗಲಿದೆ. ಈ ನಿರ್ಧಾರದಿಂದ ಉದ್ಯೋಗಾವಕಾಶಗಳು ಹೆಚ್ಚಲಿದ್ದು, ಆರ್ಥಿಕ ಪ್ರಗತಿಗೆ ವೇಗ ಸಿಗಲಿದೆ. ದೇಶದ ರೈತರಿಗೂ ಇದರಿಂದ ಪ್ರಯೋಜನವಿದ್ದು. ಕೃಷಿ ಮತ್ತು ತತ್ಸಂಬಂಧಿ ಕ್ಷೇತ್ರಗಳಿಗೆ ಹೊಸ ತಂತ್ರಜ್ಞಾನಗಳು ಮತ್ತು ವೇದಿಕೆಗಳು ಸಿಗಲಿವೆ. ಉದ್ದಿಮೆಗಳನ್ನು ಸ್ಥಾಪಿಸುವುದು ಕೂಡ ಇದರಿಂದ ಸುಲಭವಾಗಲಿದೆ.

ನರೇಂದ್ರ ಮೋದಿ, ಪ್ರಧಾನಿ

click me!