‘’ತರಗತಿಗಳಲ್ಲಿ ಹುಡುಗಿಯರು, ಹುಡುಗರು ಒಟ್ಟಿಗೆ ಕೂರುವುದು ಭಾರತೀಯ ಸಂಸ್ಕೃತಿ ವಿರುದ್ಧ’’!

By BK AshwinFirst Published Aug 29, 2022, 3:03 PM IST
Highlights

ಗಂಡು ಹಾಗೂ ಹೆಣ್ಣು ಮಕ್ಕಳು ಒಟ್ಟಿಗೆ ಶಾಲೆ - ಕಾಲೇಜುಗಳಲ್ಲಿ ಕುಳಿತುಕೊಂಡು, ಅಪ್ಪಿಕೊಂಡು ಶಿಕ್ಷಣ ಪಡೆಯುವುದು ಭಾರತೀಯ ಸಂಸ್ಕೃತಿಗೆ ವಿರುದ್ಧ ಎಂದು ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಲ್ಲಿ ನಟೇಶನ್ ಹೇಳಿದರು.

ಕೇರಳದಲ್ಲಿ ಸಂಖ್ಯೆಯ ಆಧಾರದ ಮೇರೆಗೆ ಬಲಿಷ್ಠವಾಗಿರುವ ಹಿಂದೂ ಈಳವ ಸಮುದಾಯದ ನಾಯಕ ವೆಲ್ಲಪ್ಪಲ್ಲಿ ನಟೇಶನ್ ಅವರು ತರಗತಿಗಳಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತುಕೊಳ್ಳುವುದು "ಭಾರತೀಯ ಸಂಸ್ಕೃತಿಗೆ ವಿರುದ್ಧ" ಮತ್ತು "ಅರಾಜಕತೆಯನ್ನು ಹುಟ್ಟುಹಾಕುತ್ತದೆ" ಎಂದು ಹೇಳಿದ್ದಾರೆ. ಎಲ್‌ಡಿಎಫ್ ಸರ್ಕಾರದ ಲಿಂಗ ತಟಸ್ಥ ನೀತಿಯಡಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಒಂದೇ ಸಮವಸ್ತ್ರ ಮತ್ತು ಹುಡುಗ ಹಾಗೂ ಹುಡುಗಿಯರು ಒಟ್ಟಿಗೆ ಕಲಿಸುವ ಕೋ-ಎಡ್ ಶಾಲೆಗಳ ಬಗ್ಗೆ ಭಾನುವಾರ ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಅತ್ಯಂತ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ವೆಲ್ಲಪ್ಪಲ್ಲಿ ನಟೇಶನ್, "ನಾವು (ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಮ್) (ಎಸ್‌ಎನ್‌ಡಿಪಿ) ತರಗತಿಗಳಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತುಕೊಳ್ಳುವ ಪರವಾಗಿಲ್ಲ, ನಮಗೆ ನಮ್ಮದೇ ಆದ ಸಂಸ್ಕೃತಿ ಇದೆ, ನಾವು ಅಮೆರಿಕ ಅಥವಾ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿಲ್ಲ. "ನಮ್ಮ ಸಂಸ್ಕೃತಿ ಹುಡುಗ - ಹುಡುಗಿಯರನ್ನು ತಬ್ಬಿಕೊಳ್ಳುವುದು ಮತ್ತು ಒಟ್ಟಿಗೆ ಕುಳಿತುಕೊಳ್ಳುವುದನ್ನು ಒಪ್ಪಿಕೊಳ್ಳುವುದಿಲ್ಲ. ಹಾಗೂ,  ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ಶಿಕ್ಷಣ ಸಂಸ್ಥೆಗಳಲ್ಲಿ ಇದು ನಡೆಯುವುದನ್ನು ನೀವು ನೋಡುವುದಿಲ್ಲ" ಎಂದು ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಲ್ಲಿ ನಟೇಶನ್ ಹೇಳಿದರು.

ಆದರೆ, ನಾಯರ್ ಸರ್ವೀಸ್ ಸೊಸೈಟಿ (ಎನ್‌ಎಸ್‌ಎಸ್) ಮತ್ತು ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ (ಎಸ್‌ಎನ್‌ಡಿಪಿ) ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಸಂಗತಿಗಳು ನಡೆಯುತ್ತಿವೆ ಎಂದು ಹೇಳಿದರು. ಎನ್ಎಸ್ಎಸ್ ಮತ್ತು ಎಸ್ಎನ್‌ಡಿಪಿ ಕೇರಳ ರಾಜ್ಯದ 2 ಪ್ರಮುಖ ಹಿಂದೂ ಧರ್ಮಕ್ಕೆ ಸೇರಿದ ಸಮುದಾಯಗಳಾಗಿವೆ. ಇಂತಹ ನಡವಳಿಕೆಯು "ಅರಾಜಕತೆಯನ್ನು ಹುಟ್ಟುಹಾಕುತ್ತದೆ" ಮತ್ತು ಹಿಂದೂ ಸಂಘಟನೆಗಳು ನಿರ್ವಹಿಸುವ ಕಾಲೇಜುಗಳಲ್ಲಿ, ಅಂತಹ ಸಂಸ್ಥೆಗಳು ಉತ್ತಮ ಶ್ರೇಣಿಗಳನ್ನು ಪಡೆಯದಿರಲು ಅಥವಾ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ (ಯುಜಿಸಿ) ಧನಸಹಾಯವನ್ನು ಪಡೆಯದಿರಲು ಇದು ಒಂದು ಕಾರಣ ಎಂದು ವೆಲ್ಲಪ್ಪಲ್ಲಿ ನಟೇಶನ್ ಹೇಳಿದರು. 

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ ಕಾಲೇಜುಗಳಲ್ಲಿ ಯುವಕರು ಇನ್ನೂ ಓದುತ್ತಿರುವಾಗ ಒಟ್ಟಿಗೆ ಕುಳಿತು ಒಬ್ಬರನ್ನೊಬ್ಬರು ಅಪ್ಪಿಕೊಳ್ಳಬಾರದು. ಆದರೆ, ಮಕ್ಕಳು ಬೆಳೆದು ಪ್ರಬುದ್ಧತೆ ಪಡೆದ ನಂತರ ಅವರು ಏನು ಬೇಕಾದರೂ ಮಾಡಬಹುದು ಎಂದು ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹೇಳಿದರು. ಆದರೆ, ಮಕ್ಕಳು ಒಟ್ಟಿಗೆ ಕುಳಿತು ಪರಸ್ಪರ ಅಪ್ಪಿಕೊಳ್ಳುವುದು ಭಾರತದಲ್ಲಿ ಅಪೇಕ್ಷಣೀಯವಲ್ಲ ಮತ್ತು ಇದು ಅಪಾಯಕಾರಿ ಎಂದು ಅವರು ಹೇಳಿದರು.

ತನ್ನನ್ನು ಜಾತ್ಯತೀತ ಸರ್ಕಾರ ಎಂದು ಕರೆದುಕೊಂಡರೂ, ತನ್ನ ಕೆಲವು ನಿರ್ಧಾರಗಳಿಗೆ ಅಂಟಿಕೊಳ್ಳದಿದ್ದರೂ, ಕೇರಳದ ಎಲ್‌ಡಿಎಫ್ ಸರ್ಕಾರ ಧಾರ್ಮಿಕ ಒತ್ತಡಕ್ಕೆ ಮಣಿಯುತ್ತಿರುವುದು ದುರದೃಷ್ಟಕರ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ನಟೇಶನ್ ಹೇಳಿದರು.
 
ತಮ್ಮ ಲಿಂಗ ತಟಸ್ಥ ಶಿಕ್ಷಣ ನೀತಿಯ ಬಗ್ಗೆ ವಿವಿಧ ಮುಸ್ಲಿಂ ಸಂಘಟನೆಗಳಿಂದ ಟೀಕೆಗಳನ್ನು ಎದುರಿಸಿದ ನಂತರ ಮಕ್ಕಳು ಯಾವ ಸಮವಸ್ತ್ರವನ್ನು ಧರಿಸಬೇಕು ಅಥವಾ ಮಿಶ್ರ ಶಾಲೆಗಳಿಗೆ ಹೋಗಬೇಕೇ ಎಂದು ನಿರ್ಧರಿಸಲು ಹೋಗುತ್ತಿಲ್ಲ ಎಂಬ ಇತ್ತೀಚಿನ ಕೇರಳ ಸರ್ಕಾರದ ಪ್ರಕಟಣೆಯನ್ನು ಉಲ್ಲೇಖಿಸಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಮ್ (ಎಸ್‌ಎನ್‌ಡಿಪಿ) ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಲ್ಲಿ ನಟೇಶನ್ ಪ್ರತಿಕ್ರಿಯೆ ನೀಡಿದ್ದಾರೆ.

2020 ರಲ್ಲಿ ಕೋಯಿಕ್ಕೋಡ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಲಿಂಗ-ತಟಸ್ಥ ಸಮವಸ್ತ್ರವನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು. ಇದು ಮುಸ್ಲಿಂ ಹುಡುಗಿಯರಿಗೆ ಅರ್ಧ ತೋಳು ಮತ್ತು ಹೆಡ್ ಸ್ಕಾರ್ಫ್‌ಗಳ ಬದಲಿಗೆ ಪೂರ್ಣ ತೋಳಿನ ಶರ್ಟ್‌ಗಳ ರಿಯಾಯಿತಿಯನ್ನು ಅನುಮತಿಸುತ್ತದೆ. ಕೆಲವು ಮುಸ್ಲಿಂ ಸಂಘಟನೆಗಳ ಪ್ರತಿಭಟನೆಯ ಹೊರತಾಗಿಯೂ ಹೆಚ್ಚಿನ ವಿದ್ಯಾರ್ಥಿಗಳು ಇದನ್ನು ಸ್ವಾಗತಿಸಿದ್ದರು. ಆದರೆ, ರಾಜ್ಯದ ಎಲ್ಲ ಶಾಲೆಗಳಲ್ಲೂ ಈ ಸಮವಸ್ತ್ರವನ್ನು ಜಾರಿಗೆ ತರುತ್ತಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟನೆ ನೀಡಿದೆ. 

click me!