
ಬೆಂಗಳೂರು (ಆ.29): ಕಾಂಗ್ರೆಸ್ ಸೇರಿದಂತೆ ದೇಶದ ಪ್ರಮುಖ ವಿರೋಧ ಪಕ್ಷಗಳು ಸೋಮವಾರ ಬಿಸಿಸಿಐ ಕಾರ್ಯದರ್ಶಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಭಾನುವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್ ಟಿ20ಯ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹಲವು ಸೆಲೆಬ್ರಿಟಿಗಳು ಹಾಗೂ ಬಿಸಿಸಿಐ ಅಧಿಕಾರಿಗಳು ಭಾಗವಹಿಸಿದ್ದರು. ಭಾರತ ತಂಡ ಗೆಲುವು ದಾಖಲು ಮಾಡಿದ ಬಳಿಕ ಇಡೀ ಸ್ಟೇಡಿಯಂನಲ್ಲಿ ಭಾರತೀಯರ ಸಂಭ್ರಮ ಮುಗಿಲುಮುಟ್ಟಿತ್ತು. ಈ ವೇಳೆ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ಭಾರತದ ತ್ರಿವರ್ಣ ಧ್ವಜವನ್ನು ನೀಡಿದ್ದರು. ಅದರೆ, ಜಯ್ ಶಾ ಇದನ್ನು ಸ್ಪಷ್ಟವಾಗಿ ನಿರಾಕರಣೆ ಮಾಡಿದ್ದು ವಿಡಿಯೋದಲ್ಲಿ ಕಾಣಿಸಿತು. ಇದನ್ನೇ ಹಿಡಿದುಕೊಂಡು ವಿರೋಧ ಪಕ್ಷಗಳು ಜಯ್ ಶಾ ಮೇಲೆ ಮುಗಿಬಿದ್ದಿವೆ. ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡ್ನಲ್ಲಿ ಈ ವಿಡಿಯೋವನ್ನು ಪ್ರಕಟಿಸಿದೆ. 'ತ್ರಿವರ್ಣ ಧ್ವಜದಿಂದ ಅಂತರ ಕಾಯ್ದುಕೊಳ್ಳುವ ಅವರ ಅಭ್ಯಾಸವು ಹಲವು ತಲೆಮಾರುಗಳ ಹಿಂದಿನದು. ಇದು ಹೇಗೆ ಹೋಗಲು ಸಾಧ್ಯ?" ಎಂದು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರ ಮಗನನ್ನು ಟೀಕಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಜೈರಾಮ್ ರಮೇಶ್ ಟೀಕೆ: 'ನನ್ನ ಜೊತೆ ಅಪ್ಪ ಇದ್ದಾರೆ. ಈ ತ್ರಿವರ್ಣ ಧ್ವಜವನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ..' ಎಂದು ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥ ಜೈರಾಮ್ ರಮೇಶ್ ಕಟುವಾಗಿ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಅಲ್ಲದೆ, ವಿರೋಧ ಪಕ್ಷಗಳಾದ ಶಿವಸೇನೆ, ತೃಣಮೂಲ ಕಾಂಗ್ರೆಸ್ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಕೂಡ ಬಿಸಿಸಿಐ ಕಾರ್ಯದರ್ಶಿಯ ವರ್ತನೆಯನ್ನು ಟೀಕೆ ಮಾಡಿವೆ.
"ಪ್ರತಿಯೊಬ್ಬರ ಕೈಯಲ್ಲಿರುವ ತ್ರಿವರ್ಣ ಧ್ವಜವು ನಮ್ಮ ಸಂಕಲ್ಪ ಮತ್ತು ದೇಶ ನಿಷ್ಠೆಯ ಸಂಕೇತವಾಗಿದೆ. ಈ ರೀತಿ ತ್ರಿವರ್ಣ ಧ್ವಜವನ್ನು ನಿರಾಕರಿಸುವುದು ದೇಶದ 133 ಕೋಟಿ ಜನಸಂಖ್ಯೆಗೆ ಮಾಡಿದ ಅವಮಾನ" ಎಂದು ಶಿವಸೇನೆಯ ನಾಯಕಿ ಪ್ರಿಯಾಂಕಾ ಚತುರ್ವೇದಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಟಿಆರ್ಎಸ್ ಪಕ್ಷದ ಮುಖಂಡರಾದ ವೈ.ಸತೀಶ್ ರೆಡ್ಡಿ ಮತ್ತು ಕೆ.ಕೃಷ್ಣನ್ ಕೂಡ, ಆರೆಸ್ಸೆಸ್ಸ ಹಾಗೂ ಬಿಜೆಪಿಯನ್ನು ಈ ವಿಚಾರವಾಗಿ ಟೀಕೆ ಮಾಡಿದ್ದಾರೆ. 'ಆರ್ಸ್ಸೆಸ್ನ ತನ್ನ ಪೂರ್ಜರಿಂದ ಜಯ್ ಶಾ ಸ್ಪೂರ್ತಿ ಪಡೆದಿರುವಂತೆ ಕಾಣುತ್ತಿದೆ' ಎಂದು ವೈ.ಸತೀಶ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.
75th Independence Day ತ್ರಿವರ್ಣ ಧ್ವಜದ ರಂಗಿನಲ್ಲಿ ಮುಖೇಶ್ ಅಂಬಾನಿ ಅವರ ಆಂಟಿಲಿಯಾ
'ಹಾಗೇನಾದರೂ ಬಿಜೆಪಿ ಹೊರತಾದ ನಾಯಕರು ಯಾರಾದರೂ ತ್ರಿವರ್ಣ ಧ್ವಜವನ್ನು ಹಿಡಿಯಲು ನಿರಾಕರಿಸಿದ್ದಲ್ಲಿ, ಬಿಜೆಪಿಯ ಐಟಿ ಸೆಲ್ ಆತನನ್ನು ದೇಶ ವಿರೋಧಿ ಎನ್ನುತ್ತಿತ್ತು. ಗೋಧಿ ಮೀಡಿಯಾಗಳು ದಿನಪೂರ್ತಿ ಚರ್ಚೆಗಳನ್ನು ಮಾಡುತ್ತಿದ್ದವು.. ಅದೃಷ್ಟಕ್ಕೆ ಇದು ಶೆಹನ್ಷಾ ಅವರ ಪುತ್ರ ಜಯ್ ಶಾ' ಎಂದು ಕೆ.ಕೃಷ್ಣನ್ ಬರೆದಿದ್ದಾರೆ.
ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಹಾರಾಡಿದ ತ್ರಿವರ್ಣ ಧ್ವಜ
ಜಯ್ ಶಾ ಎಸಿಸಿ ಅಧ್ಯಕ್ಷ: ನಿಜವಾದ ವಿಚಾರವೆಂದರೆ, ಜಯ್ ಶಾ ಬಿಸಿಸಿಐ ಕಾರ್ಯದರ್ಶಿ ಮಾತ್ರವಲ್ಲ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷ ಕೂಡ ಆಗಿದ್ದಾರೆ. ಏಷ್ಯಾಕಪ್ ಟೂರ್ನಿಯ ವೇಳೆ ಯಾವುದೇ ಒಂದು ದೇಶದ ಪರವಾಗಿ ನಿಲ್ಲುವುದು ನಿಯಮಕ್ಕೆ ವಿರುದ್ಧ. ಅವರು ತಟಸ್ಥವಾಗಿರಬೇಕಾಗುತ್ತದೆ. ಆ ಕಾರಣಕ್ಕಾಗಿ ಅವರು ಭಾರತದ ಧ್ವಜವನ್ನು ನಿರಾಕರಿಸಿದ್ದರು. ಇದಕ್ಕೂ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಚತುರ್ವೇದಿ, "ಎಸಿಸಿ ಅಧ್ಯಕ್ಷರಾಗಿ ನೀವು ತಟಸ್ಥವಾಗಿರಬೇಕು ಎಂದು ಮಾತ್ರಕ್ಕೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವಂತಿಲ್ಲ' ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ