From the India Gate: ಸಿದ್ದರಾಮಯ್ಯ ಪುತ್ರ ವ್ಯಾಮೋಹ; ಬಂಗಾಳದಲ್ಲಿ ಬಡ ಪಕ್ಷ, ಸಿರಿವಂತ ನಾಯಕರು..!

Published : Jan 18, 2023, 11:09 AM ISTUpdated : Jan 19, 2023, 06:56 AM IST
From the India Gate: ಸಿದ್ದರಾಮಯ್ಯ ಪುತ್ರ ವ್ಯಾಮೋಹ; ಬಂಗಾಳದಲ್ಲಿ ಬಡ ಪಕ್ಷ, ಸಿರಿವಂತ ನಾಯಕರು..!

ಸಾರಾಂಶ

ದಿನಾ ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಲೇ ಇರುತ್ತದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ನಿಲ್ತಾರೆ ಅನ್ನೋದು ಹಲವರ ಕುತೂಹಲಕ್ಕೆ ಕಾರಣವಾಗಿತ್ತು. ಈಗ ಅವರು ಕ್ಷೇತ್ರ ಆಯ್ಕೆ ಮಾಡಿಕೊಂಡ ಬಳಿಕ ನಾನಾ ವಿಶ್ಲೇಷಣೆಗಳು ಕೇಳಿಬರುತ್ತಿವೆ. ತಮಿಳುನಾಡಲ್ಲಿ ಡಿಎಂಕೆ ವರ್ಸಸ್‌ ಗವರ್ನರ್‌ ಜಗಳ, ಆಂಧ್ರ ರಾಜಕೀಯ ದೇಶದ ಕುತೂಹಲ ಕೆರಳಿಸುತ್ತಿದೆ. ದೇಶಾದ್ಯಂತ ಇತ್ತೀಚಿನ ರಾಜಕೀಯ ಹಾಗೂ ಅಧಿಕಾರಿಶಾಹಿ ವರ್ಗದ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ ನೋಡಿ.. 

ಪುತ್ರ ವ್ಯಾಮೋಹ: ಇದು ಶಕ್ತಿಯೂ ಹೌದು, ಅತಿ ದೊಡ್ಡ ದೌರ್ಬಲ್ಯವೂ ಹೌದು..!

ರಾಜಕಾರಣದಲ್ಲಿ ಪುತ್ರ ವ್ಯಾಮೋಹ ಅನ್ನೋದು ದೊಡ್ಡ ನಾಯಕರು, ಜನ ನಾಯಕರು, ಮುತ್ಸದ್ದಿಗಳನ್ನ ದಾರಿ ತಪ್ಪಿಸಿದ ಸಾವಿರ ಉದಾಹರಣೆಗಳಿವೆ. ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳದವರು ಪುತ್ರ ವ್ಯಾಮೋಹಕ್ಕೆ ಸಿಲುಕಿ ಎಂತೆಂತಹ ತ್ಯಾಗ ಮಾಡಿದ್ದಾರೆ ಎಂಬುದಕ್ಕೆ ಕರ್ನಾಟಕದಲ್ಲೇ ಹತ್ತಾರು ಉದಾಹರಣೆಗಳಿವೆ. ಅದಕ್ಕೆ ಹೊಸ ಸೇರ್ಪಡೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಮುಂದಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಿಲಿಯನ್ ಡಾಲರ್ ಪ್ರಶ್ನೆ- ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು. ಈ ಪ್ರಶ್ನೆ ಹುಟ್ಟಲು ಕಾರಣ ಎಲ್ಲೇ ಸ್ಪರ್ಧಿಸಿದರೂ ಅವರನ್ನು ಹಣಿಯಲು ಸಜ್ಜಾಗಿರುವ ಅವರ ಶತ್ರು ಪಡೆ. ಹೀಗಾಗಿಯೇ ತಮ್ಮ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ ಸಿಕ್ಕಾಪಟ್ಟೆ ಚ್ಯೂಸಿ. ಸಿದ್ದರಾಮಯ್ಯ ತಮ್ಮ ಹಾಲಿ ಕ್ಷೇತ್ರ ಬಾದಾಮಿ ದೂರ ಎಂಬ ಕಾರಣಕ್ಕೆ ಅಲ್ಲಿಂದ  ಸ್ಪರ್ಧಿಸಲ್ಲ ಎಂದರು. ಕೂಡಲೇ ಎಲ್ಲಿ ಸ್ಪರ್ದಿಸುತ್ತಾರೆ ಎಂಬ ಚರ್ಚೆ ಆರಂಭವಾಯಿತು. ಈಗ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ  ಘೋಷಿಸಿದ್ದಾರೆ. 

ಇಷ್ಟಕ್ಕೂ ಕೋಲಾರ ಏಕೆ ಇದಕ್ಕೆ ಸ್ಪಷ್ಟ ಉತ್ತರ ಪುತ್ರ ವ್ಯಾಮೋಹ. ಏನಾಗಿತ್ತು ಎಂದರೆ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು, ಯಾವ ಕ್ಷೇತ್ರದಲ್ಲಿ ಅವರು ಗೆಲ್ಲುವ ಸಾಧ್ಯತೆ ಹೆಚ್ಚು ಎಂಬ ಬಗ್ಗೆ ಅವರ ಆಪ್ತರೇ ಒಂದು ಸರ್ವೇ ನಡೆಸಿದ್ದರು. ಕೋಲಾರ, ಬಾದಾಮಿ, ವರುಣಾ ಕ್ಷೇತ್ರಗಳಲ್ಲಿ ಈ ಸರ್ವೇ ನಡೆದಿತ್ತು. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲ್ಲುವ ಸಾಧ್ಯತೆ ಉಳಿದ ಕ್ಷೇತ್ರಗಳಿಂತ ಹೆಚ್ಚು ಎಂದು ಈ ಸರ್ವೇ ವರದಿ ನೀಡಿತ್ತು. ಇದಕ್ಕೆ ಹೋಲಿಸಿದರೆ ಕೋಲಾರದಲ್ಲಿ ಗೆಲ್ಲಬಹುದಾದರೂ ಫೈಟ್ ಇದೆ. ಅದು ಸ್ವಲ್ಪ ರಿಸ್ಕಿ ಕ್ಷೇತ್ರ ಎಂದೇ ವರದಿ ಸೂಚಿಸಿತ್ತು. 

ಇದನ್ನು ಓದಿ: From the India Gate: ಸಮಾಜವಾದಿ ಪಕ್ಷಕ್ಕೆ ಮತ್ತಷ್ಟು ಬಲ; ಭಾರತ್‌ ಜೋಡೋ ಯಾತ್ರೆ ಯಶಸ್ಸಿನ ಗುಟ್ಟು..!

ಈ ವರದಿಯ ಶಿಫಾರಸನ್ನು ಸಿದ್ದರಾಮಯ್ಯ ಪಾಲಿಸಿದ್ದರೆ ಅವರು ವರುಣಾದಲ್ಲೇ ಸ್ಪರ್ದಿಸಬೇಕಿತ್ತು. ಆದರೆ, ಅವರು ಆ ರೀತಿ ಮಾಡುತ್ತಿಲ್ಲ, ಕಾರಣ ಪುತ್ರ ಯತೀಂದ್ರ ಸಿದ್ದರಾಮಯ್ಯ. ಹಾಲಿ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರನ್ನು ಎರಡನೇ ಬಾರಿ ಶಾಸಕರಾಗುವುದನ್ನು ತನ್ಮೂಲಕ ರಾಜಕೀಯ ಭವಿಷ್ಯ ಕಟ್ಟಿಕೊಳ್ಳುವುದಕ್ಕೆ ಅಡ್ಡಿಯಾಗಬಾರದು ಎಂಬ ವ್ಯಾಮೋಹ ಈ ನಿರ್ಧಾರಕ್ಕೆ ಕಾರಣ. 

ತಮ್ಮ ಒಂದು ಕಾಲದ ರಾಜಕೀಯ ಗುರು ಹಾಗೂ ಅನಂತರದ ಶತ್ರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಕ್ಕಳು ಮಂತ್ರಿ, ಮುಖ್ಯಮಂತ್ರಿಯಾದರು, ಮೊಮ್ಮಕ್ಕಳು ಸಂಸದರಾಗಿದ್ದಾರೆ. ಈ ಹಿನ್ನಲೆ ಒಬ್ಬನೇ ಮಗನ ರಾಜಕೀಯ ಭವಿಷ್ಯ ಕಟ್ಟಬೇಕು ಎಂಬ ಆಕಾಂಕ್ಷೆ ಸಿದ್ದರಾಮಯ್ಯ ಅವರನ್ನು ಕೋಲಾರದ ರಿಸ್ಕ್ ತೆಗೆದುಕೊಳ್ಳುವಂತೆ ಮಾಡಿದೆ‌ ಎನ್ನುತ್ತಾರೆ ಅವರ ಆಪ್ತರು.

ಇದನ್ನೂ ಓದಿ: India Gate ಸುಂದರಿ ಹುಡುಕಾಟದಲ್ಲಿ ಬಿಜೆಪಿ, ಜೈಲು ಪ್ರವಾಸದಲ್ಲಿ ಚೋಟಾ ನೇತಾಜಿ!

ಅನೇಕತೆಯಲ್ಲಿ ಏಕತೆ
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ಸದನ ಒಂದಾಗಿ ನಿಂತಿತ್ತು. ಈ ಪ್ರತಿಭಟನೆಯ ಮೂಲಕ ಡಿಎಂಕೆ ದಕ್ಷಿಣ ಭಾರತದಲ್ಲಿ ಅಸಾಧಾರಣ ಶಕ್ತಿಯಾಗಿ ಅದನ್ನು ಬಲಪಡಿಸುವ ದೃಷ್ಟಿಯಿಂದ, ಎಲ್ಲಾ ವಿರೋಧ ಪಕ್ಷಗಳನ್ನು ತನ್ನ ಕವಚದಲ್ಲಿ ಇಟ್ಟುಕೊಳ್ಳುವ ಗುರಿ ಹೊಂದಿದೆ.

2024 ರ ಲೋಕಸಭಾ ಚುನಾವಣೆಯಲ್ಲಿ ಶೇ. 55 ರಷ್ಟು ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸುವುದಾಗಿ ಪಕ್ಷ ಈಗಾಗಲೇ ಘೋಷಿಸಿದೆ. ಈ ಹಿನ್ನೆಲೆ, ಬೆಂಬಲಿಗ ಪಕ್ಷಗಳಾದ ಡಿಎಂಡಿಕೆ ಮತ್ತು ಪಿಎಂಕೆ ಸೇರಿದಂತೆ ಇತರ ವಿರೋಧ ಪಕ್ಷಗಳಿಗೆ ಅನೇಕ ಸ್ಥಾನಗಳನ್ನು ತೆರೆಯುತ್ತದೆ. ಇದಲ್ಲದೆ, ಖಾಲಿ ಬೀಳುವ ನಾಲ್ಕು ರಾಜ್ಯಸಭಾ ಸ್ಥಾನಗಳು ಸಹ ಹಲವು ಬೆಂಬಲಿಗ ಪಕ್ಷಗಳಿಗೆ ಹಿತಕರವಾಗಬಹುದು.

ಇದನ್ನೂ ಓದಿ: India Gate ಸೊಸೆಯಂದಿರ ಪೈಪೋಟಿಗೆ ದೇವೇಗೌಡರು ಸುಸ್ತು, ಕಾಂಗ್ರೆಸ್‌ಗೆ ತಲೆನೋವಾದ ಗೆಹ್ಲೋಟ್ ಮಾತು!

ನೆರೆಹೊರೆಯವರ ಅಸೂಯೆ

ಇನ್ನು, ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ನೆರೆಯ ಆಂಧ್ರದಲ್ಲಿ ಸ್ಪರ್ದೆಗೆ ಕಾರಣವೇನು ಗೊತ್ತಾ..? ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವನ್ನು ದುರ್ಬಲಗೊಳಿಸಲು ಆಂಧ್ರ ಸಿಎಂ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರ ಸೂಚನೆಯ ಮೇರೆಗೆ ಅವರು ಹೀಗೆ ಮಾಡುತ್ತಿದ್ದಾರೆ ಎಂದು ಪಕ್ಷದ ಒಳಗಿನವರು ಸುಳಿವು ನೀಡಿದ್ದಾರೆ. ಇತ್ತೀಚೆಗೆ ಬಿಆರ್‌ಎಸ್ ಪ್ರವೇಶಿಸಿದ ರಾವೆಲ ಕಿಶೋರ್ ಬಾಬು ಮತ್ತು ಥೋಟ ಚಂದ್ರಶೇಖರ್ ಜನಸೇನಾ ಪಕ್ಷದಿಂದ ಬಂದವರು. 

ಜನಸೇನಾ, ಟಿಡಿಪಿ ಮತ್ತು ಬಿಜೆಪಿ ಕೈಜೋಡಿಸಿದರೆ ಜಗನ್‌ ಜತೆ ಜಂಟಿ ಹೋರಾಟ ನಡೆಸಬಹುದು ಎಂಬುದು ಕೆಸಿಆರ್ ಯೋಜನೆಯಾಗಿದೆ. ಇದರಲ್ಲಿ ಕೆಸಿಆರ್ ಯಶಸ್ವಿಯಾದರೆ ಅದು ಮತ್ತೊಮ್ಮೆ ಜಗನ್ ಗೆಲುವನ್ನು ಖಚಿತಪಡಿಸುತ್ತದೆ. ಆದರೆ ಎದುರಾಳಿ ದೋಣಿಯನ್ನು ಅಲುಗಾಡಿಸಿ ಅವರು ಮುಳುಗುತ್ತಾರೆಯೇ ಅಥವಾ ಈಜುತ್ತಾರೆಯೇ ಎಂಬುದು ಚರ್ಚೆಯ ವಿಷಯವಾಗಿದೆ.

ಇದನ್ನು ಓದಿ: ದೀದಿ ನಾಡಲ್ಲಿ ಧನ್ಕರ್ ತಿಕ್ಕಾಟವಿಲ್ಲ ಎಲ್ಲವೂ ಆನಂದಮಯ, ಪಿಣರಾಯಿಗೆ ರಿಲೀಫ್ ಸಮಯ!

ಬಡ ಪಕ್ಷ, ಶ್ರೀಮಂತ ಕಾರ್ಯಕರ್ತರು

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಮ್ಮೆ ತಮ್ಮ ಪಕ್ಷದ ಬ್ಯಾಂಕ್‌ನಲ್ಲಿ ಕೇವಲ 47,000 ರೂ. ಇದೆ ಎಂದಿದ್ದರು. ಆದರೆ ಅವರ ಕೆಲವು ಹಿರಿಯ ಪಕ್ಷದ ಸಹೋದ್ಯೋಗಿಗಳು ಕೇಂದ್ರ ಗುಪ್ತಚರ ಸಂಸ್ಥೆಗಳ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಹೊರಕ್ಕೆ ಬಂದಿರುವುದು ವಿರೋಧಾಭಾಸವಾಗಿದೆ. ಇತ್ತೀಚಿನ ಐಟಿ ದಾಳಿಯಲ್ಲಿ ಟಿಎಂಸಿ ಶಾಸಕ ಜಾಕೀರ್ ಹುಸೇನ್ ಬಳಿ 15 ಕೋಟಿ ರೂ. ಸಿಕ್ಕಿದೆ. ಸರಿಯಾದ ಆದಾಯದ ಮೂಲಗಳನ್ನು ಒದಗಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಈ ಮಧ್ಯೆ, ಪಕ್ಷದ ವಕ್ತಾರ ಕುನಾಲ್ ಘೋಷ್ ಅವರು ಈ ದಾಳಿಯನ್ನು ಟಿಎಂಸಿಯ ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶಪೂರ್ವಕ ಪ್ರಯತ್ನ ಎಂದು ಆರೋಪಿಸಿದ್ದು, ಹುಸೇನ್ ತಮ್ಮ ಕಾರ್ಮಿಕರಿಗೆ ಕೂಲಿ ನೀಡಲು ಹಣವನ್ನು ಇಟ್ಟುಕೊಂಡಿದ್ದರು ಎಂದೂ ಸಮರ್ಥಿಸಿಕೊಂಡಿದ್ದಾರೆ. 

ಇದನ್ನೂ ಓದಿ: FROM THE INDIA GATE: ಸಂಸದ್‌ ಟಿವಿಯಲ್ಲಿ ಪಟ್ಟು, ದೇವೇಗೌಡ-ಮೋದಿ ಭೇಟಿ ಹಿಂದಿನ ಗುಟ್ಟು!

ಕಳೆದ ವರ್ಷ, ಶಿಕ್ಷಣ ಹಗರಣದ ನಂತರ ನಡೆದ ದಾಳಿಗಳ ಸಂದರ್ಭದಲ್ಲಿ ಮಮತಾ ಕ್ಯಾಬಿನೆಟ್‌ನಲ್ಲಿದ್ದ ಪಾರ್ಥ ಚಟರ್ಜಿ ಅವರ ಬಳಿ ಇಡಿ 50 ಕೋಟಿ ರೂ. ಗೂ ಹೆಚ್ಚು ಹಣ ವಶಪಡಿಸಿಕೊಂಡಿತ್ತು. ಅಂತಹ ಶ್ರೀಮಂತ ಸದಸ್ಯರಿದ್ದರೂ ಪಕ್ಷವು ಏಕೆ ಬಡವಾಗಿದೆ ಎಂಬುದು ಆರ್ಥಿಕ ಒಗಟು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..