ಶಿರೋಮಣಿ ಅಕಾಲಿದಳ ಪಕ್ಷದ ಪ್ರಶ್ನಾತೀತ ನಾಯಕ ಹಾಗೂ ಐದು ಬಾರಿ ಪಂಜಾಬ್ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಪ್ರಕಾಶ್ ಸಿಂಗ್ ಬಾದಲ್ ಮಂಗಳವಾರ ನಿಧನಾರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಚಂಡೀಗಢ (ಏ.25): ಪಂಜಾಬ್ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಮಂಗಳವಾರ 95 ನೇ ವಯಸ್ಸಿನಲ್ಲಿ ನಿಧನರಾದರು. ಶುಕ್ರವಾರ ಬೆಳಿಗ್ಗೆ ಅವರ ಆರೋಗ್ಯ ಹದಗೆಟ್ಟ ಕಾರಣದಿಂದ ಮೊಹಾಲಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಅವರು 5 ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. 2022ರ ಜೂನ್ನಲ್ಲಿ ಅವರು ಎದೆನೋವಿನ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸ್ವಲ್ಪ ಸಮಯದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಸೆಪ್ಟೆಂಬರ್ 2022 ರಲ್ಲಿ, ಅವರ ಆರೋಗ್ಯವು ಮತ್ತೆ ಹದಗೆಟ್ಟ ನಂತರ ಅವರನ್ನು ಪಿಜಿಐ ಚಂಡೀಗಢಕ್ಕೆ ದಾಖಲಿಸಲಾಗಿತ್ತು. 2022ರ ಪಂಜಾಬ್ ವಿಧಾನಸಭೆ ಚುನಾವಣೆಗೆ ನಿಂತು ಸೋತಿದ್ದ ಪ್ರಕಾಶ್ ಸಿಂಗ್ ಬಾದಲ್ ಆ ಬಳಿಕ ರಾಜಕೀಯದಿಂದ ತೆರೆಮರೆಗೆ ಸರಿದಿದ್ದರು. ಇದು ಅವರ ಇಡೀ ರಾಜಕೀಯ ಜೀವನದ ಮೊಟ್ಟಮೊದಲ ಸೋಲು ಎನಿಸಿಕೊಂಡಿತ್ತು. ವಯಸ್ಸಿನ ಕಾರಣದಿಂದಾಗಿ ಅವರು ಚುನಾವಣೆಗೆ ಸ್ಪರ್ಧೆ ಮಾಡದೇ ಇರುವ ನಿರ್ಧಾರ ಮಾಡಿದ್ದರು. ಆದರೆ, ಪುತ್ರ ಸುಖ್ಬೀರ್ ಸಿಂಗ್ ಬಾದಲ್ ಅವರ ಒತ್ತಾಯ ಹಾಗೂ ತಾವೇ ಕಟ್ಟಿಬೆಳೆಸಿದಂತ ಅಕಾಲಿ ದಳ ಪಕ್ಷದ ದಯನೀಯ ಸ್ಥಿತಿಯನ್ನು ನೋಡಿ ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿದ್ದರು. ಆದರೆ, ರಾಜ್ಯದ ಜನರು ಬೇರೆಯದೇ ನಿರ್ಧಾರ ಮಾಡಿದ್ದರಿಂದ ಚುನಾವಣೆಯಲ್ಲಿ ಸೋಲು ಕಂಡಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿಯೇ ಪ್ರಕಾಶ್ ಸಿಂಗ್ ಬಾದಲ್, ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ಅದೇ ವರ್ಷ ಸರ್ಪಂಚ್ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಅವರು ಗೆಲುವು ಸಾಧಿಸಿದ್ದರು. ಆ ಮೂಲಕ ದೇಶದ ಅತ್ಯಂತ ಕಿರಿಯ ಸರ್ಪಂಚ್ ಎನಿಸಿಕೊಂಡಿದ್ದರು. 1957ರಲ್ಲಿ ಮೊಟ್ಟ ಮೊದಲ ಬಾರಿಗೆ ವಿಧಾನಸಭೆಗೆ ಸ್ಒರ್ಧೆ ಮಾಡಿ ಗೆಲುವು ಸಾಧಿಸಿದ್ದರು, ಆ ಬಳಿಕ 1969ರಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ್ದರು. 1969 ರಿಂದ 1970ರವರೆಗೆ ಅವರಉ ಪಂಚಾಯತ್ ರಾಜ್, ಪಶುಸಂಗೋಪನೆ ಹಾಗೂ ಡೈರಿ ಸಚಿವರಾಗಿ ಕೆಲಸ ಮಾಡಿದ್ದರು.
ಸಿಎಂ ಮನೆ ಹೊರಗೆ ಅಕಾಲಿ ದಳದ ಪ್ರತಿಭಟನೆ, ಸುಖ್ಬೀರ್ ಬಾದಲ್ ವಶಕ್ಕೆ!
ಇದಲ್ಲದೆ, ಅವರು 1970-71, 1977-80, 1997-2002 ರಲ್ಲಿ ಪಂಜಾಬ್ ಮುಖ್ಯಮಂತ್ರಿಯಾದರು. 1972, 1980 ಮತ್ತು 2002ರಲ್ಲಿ ವಿರೋಧ ಪಕ್ಷದ ನಾಯಕರೂ ಆದರು.ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಸಂಸದರಾಗಿಯೂ ಆಯ್ಕೆಯಾಗಿದ್ದರು. 2022 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ ಅವರು ಅತ್ಯಂತ ಹಳೆಯ ಅಭ್ಯರ್ಥಿ ಎನಿಸಿಕೊಂಡಿದ್ದರು.
ಕೊರೋನಾ ಬಗ್ಗೆ ಚರ್ಚೆ: ಮೋದಿ ಕರೆದ ಸಭೆಗೆ ಕಾಂಗ್ರೆಸ್, ಅಕಾಲಿ ದಳ ಗೈರು!
ಕ್ಯಾನ್ಸರ್ ವಿರುದ್ಧ ಅಭಿಯಾನ: 2011ರ ಮೇ 24 ರಂದು ಪರ್ಕಾಶ್ ಸಿಂಗ್ ಬಾದಲ್ ಅವರ ಪತ್ನಿ ಸುರೀಂದರ್ ಕೌರ್ ಬಾದಲ್ ಅವರು ಕ್ಯಾನ್ಸರ್ ಜೊತೆಗಿನ ಸುದೀರ್ಘ ಹೋರಾಟದ ನಂತರ ನಿಧನರಾಗಿದ್ದರು. ಆಗ ಸುರಿಂದರ್ ಕೌರ್ ಅವರಿಗೆ 72 ವರ್ಷ. ಸುರೀಂದರ್ ಕೌರ್ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಪತ್ನಿ ನಿಧನದ ನಂತರ ಪ್ರಕಾಶ್ ಸಿಂಗ್ ಬಾದಲ್ ಕ್ಯಾನ್ಸರ್ ವಿರುದ್ಧ ಅಭಿಯಾನವನ್ನು ಆರಂಭಿಸಿದ್ದರು. ಕ್ಯಾನ್ಸರ್ ರೋಗಿಗಳನ್ನು ಮನೆಯಲ್ಲಿ ರೋಗನಿರ್ಣಯ ಮಾಡಲಾಯಿತು. ಅಷ್ಟೇ ಅಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ರೋಗಕ್ಕೆ ಶೀಘ್ರ ಚಿಕಿತ್ಸೆ ನೀಡಲು ಬೇಕಾದಂಥ ಎಲ್ಲಾ ವ್ಯವಸ್ಥೆಗಳನ್ನು ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ್ದರು. ಅದಲ್ಲದೆ, ಕ್ಯಾನ್ಸರ್ಗಾಗಿ ಸಿಎಂ ಪರಿಹಾರ ನಿಧಿಯನ್ನೂ ಪ್ರಕಾಶ್ ಸಿಂಗ್ ಬಾದಲ್ ಆರಂಭಿಸಿದ್ದಾರೆ. ಇದರಲ್ಲಿ ಕ್ಯಾನ್ಸರ್ ರೋಗಿಗಳ ದಾಖಲೆಯನ್ನು ರವಾನಿಸಿದ ನಂತರ, ಅವರಿಗೆ ಆರ್ಥಿಕ ನೆರವು ನೀಡಲಾಗುತ್ತದೆ.