
ಜಮ್ಮು (ಜನವರಿ 21, 2023) : ಗಣರಾಜ್ಯೋತ್ಸವ (ಜನವರಿ 26) ಹತ್ತಿರಕ್ಕೆ ಬರುತ್ತಿದ್ದಂತೆಯೇ ಜಮ್ಮುವಿನಲ್ಲಿ 2 ಕಡೆ ಸ್ಫೋಟವಾಗಿರುವ ವರದಿಯಾಗಿದೆ. ಶನಿವಾರ ಬೆಳಗ್ಗೆ ಈ ಸ್ಫೋಟವಾಗಿದ್ದು, ಸ್ಫೋಟಗಳಲ್ಲಿ 6 ಜನರಿಗೆ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಈ ಸ್ಫೋಟಗಳಾಗಿವೆ ಎಂದು ಜಮ್ಮು ವಲಯದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಮುಖೇಶ್ ಸಿಂಗ್ ಹೇಳಿದ್ದಾರೆ. ಇನ್ನು, 2 ಸ್ಫೋಟಗಳು ನಡೆದಿರುವ ಬೆನ್ನಲ್ಲೇ ಸಂಪೂರ್ಣ ಪ್ರದೆಶವನ್ನು ಸುತ್ತುವರಿಯಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಮತ್ತೊಬ್ಬರು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಬಾಂಬ್ ಸ್ಕ್ವಾಡ್ ಹಾಗೂ ಫೋರೆನ್ಸಿಟ್ ತಂಡಗಳು ಸಹ ನರ್ವಾಲ್ ಪ್ರದೇಶಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಐಇಡಿ ಬಾಂಬ್ ಬ್ಲಾಸ್ಟ್ ಆಗಿರಬಹುದು ಎಂದು ಮೂಲಗಳು ತಿಳಿಸಿವೆ. ಇನ್ನು, ಸ್ಥಳಕ್ಕೆ ಭಾರತೀಯ ಸೇನೆ, ಜಮ್ಮು ವಲಯದ ಎಡಿಜಿಪಿ ಸಹ ಭೇಟಿ ಕೊಟ್ಟಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಳ್ಳಂಬೆಳಗ್ಗೆ ಸ್ಫೋಟವುಂಟಾಗಿರುವ ಹಿನ್ನೆಲೆ ಸ್ಥಳೀಯ ಜನರು ಆತಂಕಕ್ಕೊಳಗಾಗಿದ್ದಾರೆ.
ಇದನ್ನು ಓದಿ: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ದಾಳಿ: 3 ನಾಗರಿಕರು ಬಲಿ, 9 ಮಂದಿಗೆ ತೀವ್ರ ಗಾಯ
ಅಲ್ಲದೆ, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಬೆನ್ನಲ್ಲೇ ಈ ಸ್ಫೋಟಗಳು ಉಂಟಾಗಿರುವುದು ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಬಗ್ಗೆ ಆತಂಕ ಉಂಟಾಗುತ್ತದೆ. ಶನಿವಾರ ಬೆಳಗ್ಗೆ 2 ಸ್ಫೋಟಗಳು ಉಂಟಾಗಿರುವ ಬೆನ್ನಲ್ಲೇ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಹಾಗೂ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ: ಶ್ರೀನಗರಕ್ಕೆ ಹೊರಟಿದ್ದ 4 ಪಾಕ್ ಉಗ್ರರ ಹತ್ಯೆ: ಅಪಾರ ಶಸ್ತ್ರಾಸ್ತ್ರ ವಶ; ಸೇಡಿಗಾಗಿ ಕಾದಿದ್ದ ಉಗ್ರರು..?
ಪೂಂಚ್ನಲ್ಲಿ ಮಾಜಿ ಶಾಸಕರ ಮನೆಯಲ್ಲಿ ಸ್ಫೋಟ
ಇನ್ನೊಂದೆಡೆ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮಾಜಿ ಶಾಸಕರೊಬ್ಬರ ಮನೆಯಲ್ಲಿ ಸಹ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಸಂಜೆ 7.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಲಸ್ಸಾನ ಗ್ರಾಮದ ಅವರ ಮನೆಯ ಹಲವು ಕೊಠಡಿಗಳ ಸೀಲಿಂಗ್ ಛಿದ್ರ ಛಿದ್ರಗೊಂಡಿದ್ದು, ಆದರೂ ಅವರ ಕುಟುಂಬ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಸುರನ್ಕೋಟೆ ಮಾಜಿ ಶಾಸಕ ಮತ್ತು ಪ್ರಮುಖ ಗುಜ್ಜರ್ ನಾಯಕ ಚೌಧರಿ ಮೊಹಮ್ಮದ್ ಅಕ್ರಮ್ ಹೇಳಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ನಾನು ಮನೆಯಲ್ಲಿ ಇರಲಿಲ್ಲ. ಆದರೆ, ಶಕ್ತಿಯುತವಾದ ಸ್ಫೋಟ ಸಂಭವಿಸಿದ್ದು, ನಂತರ ಕೆಲವು ಗುಂಡುಗಳು ಹಾರಿದವು ಎಂದು ನನಗೆ ತಿಳಿಯಿತು. ಘಟನೆ ನಡೆದ ತಕ್ಷಣ ಪೊಲೀಸರು ಮತ್ತು ಸೇನಾ ಅಧಿಕಾರಿಗಳು ನನ್ನ ಮನೆಗೆ ಭೇಟಿ ನೀಡಿದ್ದು, ಅವರು ವಿವರಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರೊಂದಿಗೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಮೊಹಮ್ಮದ್ ಅಕ್ರಮ್, ನಂತರ ಗುಲಾಂ ನಬಿ ಆಜಾದ್ನ ಡೆಮಾಕ್ರಟಿಕ್ ಆಜಾದ್ ಪಕ್ಷದಿಂದ ದೂರವಾಗಿದ್ದಾರೆ. ಈ, ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಮಾಜಿ ಶಾಸಕ ಮೊಹಮ್ಮದ್ ಅಕ್ರಮ್ ಒತ್ತಾಯಿಸಿದ್ದಾರೆ.
ಘಟನೆಯ ಸ್ಥಳದಿಂದ 12-ಬೋರ್ ಗನ್ನ ಖಾಲಿ ಕಾರ್ಟ್ರಿಡ್ಜ್ಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಮಾಜಿ ಶಾಸಕರ ಮನೆಯ ಬಳಿ ಸ್ಫೋಟ ಸಂಭವಿಸಿದ ಬಗ್ಗೆ ನಮಗೆ ತಿಳಿದುಬಂದಿತು ಮತ್ತು ತಕ್ಷಣ ಸ್ಥಳಕ್ಕೆ ಧಾವಿಸಿದ್ದೇವೆ. ಹ್ಯಾಲೊಜೆನ್ ಲೈಟ್ ಹಾಳಾಗಿರುವುದು ಕಂಡುಬಂದಿದೆ ಮತ್ತು 12 ಬೋರ್ ಗನ್ನ ಖಾಲಿ ಕಾಟ್ರಿಡ್ಜ್ಗಳು ಸ್ಥಳದಲ್ಲಿ ಕಂಡುಬಂದಿವೆ", ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದೂ ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ